Wednesday, September 24, 2008

ಲೂಸ್ಪದ್ಯ ೨ --೩


ಹುಡುಗ ಹೇಳಿದನು ಮಾತಲ್ಲಿ ಮಧು ತುಂಬಿ
ಹುಡುಗೀ ನಾ ನಿನ್ನ ನಲ್ಲ!.. ನಲ್ಲ!!
ಹುಡುಗಿ ಹೇಳಿದಳು ಕಣ್ಣಂಚಲ್ಲಿ ನಗೆ ಚೆಲ್ಲಿ
ಹುಡುಗಾ ನೀ ನನ್ನ ನಲ್ಲನಲ್ಲ !!

ಭಟ್ಟರ ಮಂತ್ರವು ಕೇಳಿತು ಮೈಕಲಿ ಚೌತಿಯ ದಿನದಂದು.
ಗಣೇಶಾಏನ್ಮಹಾ..ವಿನಾಯಕಾಏನ್ಮಹಾ..ಗಜಾನನಾಏನ್ಮಹಾ
ಕೇಳಿದ ಗಣಪನು ಮೌನದಿ ಕೂತನು ಅರ್ಥವು ಇದಕೇನೆಂದು.!

Tuesday, September 23, 2008

ಸಾವೆಂಬುದು

ನಮಗುಳಿಯುವುದು ಅಗ್ನಿಯುಂಡುಳಿವ ಉಚ್ಚಿಷ್ಟ ಬೂದಿ.
ಸತ್ತವಗೆ ತೆರೆದುಕೊಳ್ಳುವುದು ಊರ್ಧ್ವಲೋಕದ ಹಾದಿ.

ಲೂಸ್ಪದ್ಯ

ಮದುವೆಗೆ ಮೊದಲು ಕನಸನು ಕಾಣುತ
ಕೈ ಕೈ ಹಿಡಿದು ನಡೆದಾಡುವ ಜೋಡಿ!
ಮುಗಿಯಿತು ಮದುವೆ ಕಳೆಯಿತು ವರುಷ
ಕೈ ಕೈ ಹಿಡಿದರು ಹೊಡೆದಾಡಲು ನೋಡಿ!

Thursday, September 11, 2008

ಮಾತು ಮುತ್ತು.


ಆನೆಗೆ ನಡೆದದ್ದೇ ದಾರಿ . ಇರುವೆಗೂ ಕೂಡ..

ಪಾಪ ಕಳೆವಾತುರದಿ ಭಕ್ತ ಜನ ಗುಡಿಯಲ್ಲಿ ! ಲಕ್ಷ್ಮಿ ಕುಣಿಯುತ್ತಾಳೆ ಅರ್ಚಕರ ಮನೆಯಲ್ಲಿ !

ರಾತ್ರಿ ಕಳೆಯಿತು. ಚಂದ್ರ ತೆರಳಿದ. ವಿರಹ ನಿಶೆಗೆ .
ಉಮ್ಮಳದ ಅವಳ ಕಂಬನಿ.
ಇಬ್ಬನಿ !

ಸೂರ್ಯ ಮುಳುಗಿದ.
ಸಿಟ್ಟಲ್ಲಿ ಸಂಧ್ಯೆ ಎಸೆದಳು ಮಲ್ಲಿಗೆಯ ಮಾಲೆ !
ನಭದ ತುಂಬೆಲ್ಲ ಮಿನುಗು ತಾರೆ !

ಕೊರಡೊಣಗಿದರೆ ಕಿಡಿಯೊಂದೇ ಸಾಕದರ
ದಹಿಸಲಿಕೆ !
ಹಸಿ ಕಾಷ್ಠ . ಅಗ್ನಿಯೂ ಭಗ್ನ. ಮಾಯವಾಗುವನು
ಧೂಮದೊಳಗೆ !

Sunday, September 7, 2008

ಕಾವ್ಯ ಹುಟ್ಟುವುದೇ ಹೀಗೆ ....

ಮನಸ್ಸಿನಾಗಸದಲ್ಲಿ ಭಾವಗಳು ಮಿಂಚಾಗಿ ಮಾತು ಹೊಳೆಯುವುದು ರನ್ನದಂತೆ .
ಭಾನುವಿನ ಬೆಳಕಲ್ಲಿ ಉಕ್ಕುವನು ಚಂದಿರನು ಮಾತು ಅರಳುವುದು ಆಗ ಜೊನ್ನದಂತೆ !
ಕವನ ಬೆಳೆಯುವುದು ಭಾಷೆಯೊಡಲೊಳಗೆ ಅದಕನ್ನ ನನ್ನ ಭಾವದ ರಕ್ತಮಾಂಸ .
ಹೊಕ್ಕುಳಿನ ಬಳ್ಳಿ ಕತ್ತರಿಸದಿರೆ ಎಲ್ಲ ಜೀವಕ್ಕೂ ಸಾವು ಕವನಕ್ಕೂ ಬೇಕದರ ತಾವು !
ಕವನ ಮಾತಾಡುವುದಿನ್ನೆನ್ನ ದನಿಯಾಗಿ ನಾನು ಹೊಗುವೆನು ಮತ್ತೆ ಮೌನದೊಳಗೆ
ಪಟ್ಟ ಪಾಡುಗಳೆಲ್ಲ ಎಂದು ಹಾಡಾಗುವುವು? ಕಾಯುವೆನು ನಾನು ನನ್ನ ಜೊತೆಗೆ!