Tuesday, September 28, 2010

ಅಕ್ಷೋಹಿಣಿ.

ಕಪಿಗಳ ಸೈನ್ಯದ ಎಣಿಕೆ ಮುಗಿದ ಅನಂತರ ನನಗೆ ಮಹಾಭಾರತದ ಕಾಲದ ಸೈನ್ಯದ ಎಣಿಕೆಯ ಬಗ್ಗೆ ಕುತೂಹಲ ಹುಟ್ಟಿತು. ದ್ವಾಪರ ಯುಗದಲ್ಲಿ ಸೈನ್ಯವನ್ನು  ಅಕ್ಷೋಹಿಣಿಯ ಲೆಕ್ಕದಲ್ಲಿ ಎಣಿಸುತ್ತಿದ್ದರು. ಕುರುಕ್ಷೇತ್ರದ ಯುದ್ಧದಲ್ಲಿ ಒಟ್ಟು ೧೮ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತಂತೆ.  ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಕಾಲಾಳುಗಳು ಸೇರಿದರೆ ಒಂದು ಅಕ್ಷೋಹಿಣಿ ಆಗುತ್ತದೆ. ಇಂತಹ ೧೮ ಅಕ್ಷೋಹಿಣಿ ಅಂದರೆ ೩೯೩೬೬೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು,೧೧೮೦೯೮೦ ಕುದುರೆಗಳು ಮತ್ತು ೧೯೬೮೩೦೦ ಕಾಲಾಳುಗಳು ಆದಂತಾಯಿತು. ಇದ್ದರೂ ಇರಬಹುದು.ಕಪಿಗಳ ಸಂಖ್ಯೆಗೆ ಹೋಲಿಸಿದರೆ ಇದು ತೀರ ಹೆಚ್ಚಲ್ಲ.

Thursday, September 16, 2010

ಕಪಿಸೇನೆ.

ಸೀತಾದೇವಿಯನ್ನು ಬಿಡಿಸಲು ರಾಮನಿಗೆ ರಾವಣನ ಜೊತೆ ಯುದ್ಧ ಅನಿವಾರ್ಯವಾಯಿತು. ಈ ಯುದ್ಧಕ್ಕೆ ರಾಮನ ಸಹಾಯಕ್ಕೆ ಬಂದದ್ದು ಸುಗ್ರೀವನ ಕಪಿಸೇನೆ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಎಷ್ಟು? ಮಾಡಲೇನೂ ಮಹತ್ಕಾರ್ಯ ಇಲ್ಲದ ನನಗೆ ಉತ್ತರ ಹುಡುಕುವ ಕುತೂಹಲ ಹುಟ್ಟಿತು. ಉತ್ತರ ಸಿಕ್ಕಿತು ಕೂಡ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಒಂದು ಕೋಟಿ ಮಹೌಘ. ಸರಿ..ಒಂದು ಮಹೌಘ ಎಂದರೆಷ್ಟು? ಅದನ್ನೂ ಹುಡುಕಿದ್ದಾಯಿತು. ಎಣಿಸಿಕೊಳ್ಳಿ.
೧ ಲಕ್ಷ ಕೋಟಿ= ೧ ಶಂಖ.                 ೧೦೦೦೦೦೦೦೦೦೦೦೦
೧ ಲಕ್ಷ ಶಂಖ.=೧ ಮಹಾಶಂಖ.          *೧೦೦೦೦೦೦೦೦೦೦೦೦
೧ ಲಕ್ಷಮಹಾಶಂಖ=೧ ಬೃಂದ            *೧೦೦೦೦೦೦೦೦೦೦೦೦
೧ ಲಕ್ಷ ಬೃಂದ= ೧ ಮಹಾ ಬೃಂದ        *೧೦೦೦೦೦೦೦೦೦೦೦೦
೧ ಲಕ್ಷ ಮಹಾ ಬೃಂದ=ಒಂದು ಪದ್ಮ     *೧೦೦೦೦೦೦೦೦೦೦೦೦
೧ ಲಕ್ಷ ಪದ್ಮ= ೧ ಮಹಾಪದ್ಮ             *೧೦೦೦೦೦೦೦೦೦೦೦೦
೧ ಲಕ್ಷ ಮಹಾಪದ್ಮ= ೧ ಖರ್ವ            *೧೦೦೦೦೦೦೦೦೦೦೦೦
೧ ಲಕ್ಷ ಖರ್ವ= ೧ ಮಹಾಖರ್ವ           *೧೦೦೦೦೦೦೦೦೦೦೦೦
೧ ಲಕ್ಷ ಮಹಾಖರ್ವ=೧ ಸಮುದ್ರ         *೧೦೦೦೦೦೦೦೦೦೦೦೦
೧ ಲಕ್ಷ ಸಮುದ್ರ=೧ ಔಘ                 *೧೦೦೦೦೦೦೦೦೦೦೦೦
೧ ಲಕ್ಷ ಔಘ= ೧ ಮಹೌಘ.               *೧೦೦೦೦೦೦೦೦೦೦೦೦
ಅಂದರೆ ಒಂದರ ಮುಂದೆ ೧೩೨ ಸೊನ್ನೆಗಳನ್ನು ಹಾಕಿದರೆ ಒಂದು ಮಹೌಘ ಆಗುತ್ತದೆ. ಇಂತಹ ಒಂದು ಕೋಟಿಯಷ್ಟು ಸಂಖ್ಯೆಯ ಕಪಿಗಳು ಸೈನ್ಯದಲ್ಲಿದ್ದುವಂತೆ. ಒಂದು ಕೋಟಿ ಮಹೌಘವೆಂದರೆ ಇನ್ನೆಷ್ಟು ಸೊನ್ನೆಗಳು ಬೇಕು? ನಿಮಗೇ ಬಿಟ್ಟಿದ್ದೇನೆ.
(ವಿ.ಸೂ. ಅಕಸ್ಮಾತ್ ಮೊದಲಿನ ಸಂಖ್ಯೆಯಲ್ಲಿ ಸೊನ್ನೆಗಳ ಲೆಕ್ಕ ತಪ್ಪಿದ್ದರೆ ತಿದ್ದಿಕೊಳ್ಳಿ. ನನಗೆ ಶೂನ್ಯವೆಂದರೆ ಬಲು ಪ್ರೀತಿ! ಗಣಿತದಲ್ಲಿ ನನ್ನ ಮೇಷ್ಟ್ರು ಅದನ್ನೇ ನನಗೆ ಪ್ರೀತಿಯಿಂದ ಕೊಡುತ್ತಿದ್ದರು!)

Wednesday, September 8, 2010

ಸರಿ-ತಪ್ಪು,ಲಾಭ-ನಷ್ಟ

.
ಸರಿ -ತಪ್ಪು ಮತ್ತು ಲಾಭ- ನಷ್ಟ ಇವು ನಮ್ಮ ಯೋಚನೆ,ಕ್ರಿಯೆಗಳನ್ನು ಸದಾ ನಿಯಂತ್ರಿಸುವ,ಪ್ರಚೋದಿಸುವ ತತ್ವಗಳು. ಸರಿ ಮತ್ತು ತಪ್ಪು ನೀತಿಯ ವಲಯಕ್ಕೆ ಸಂಬಂಧಿಸಿದ್ದು. ಲಾಭ, ನಷ್ಟ  ವ್ಯಾವಹಾರಿಕ ವಲಯಕ್ಕೆ ಸಂಬಂಧಿಸಿದ್ದು.  ಲಾಭವೂ ಆಗಬೇಕು ಮತ್ತು ಅದು ಸರಿಯಾದ ಮಾರ್ಗವೂ ಆಗಿರಬೇಕು ಎಂದು ಅಪೇಕ್ಷೆಪಟ್ಟು ಅದನ್ನು ಪಾಲಿಸುವವರು ನೈತಿಕವಾಗಿ ಹಾಗೂ ವ್ಯಾವಹಾರಿಕವಾಗಿ ಉತ್ತಮರು.  ನಷ್ಟವಾದರೂ ಚಿಂತೆಯಿಲ್ಲ ಸರಿಯಾದದ್ದನ್ನು ಮಾಡುತ್ತೇನೆ ಎನ್ನುವವರು ನೈತಿಕವಾಗಿ ಉತ್ತಮರು,ವ್ಯಾವಹಾರಿಕವಾಗಿ ದಡ್ಡರು. ಇವರ ಜೊತೆ  ತುಂಬ ಭರವಸೆಯಿಂದ ವ್ಯವಹರಿಸಬಹುದು. ತಪ್ಪು ಎಂದು ಗೊತ್ತಿದ್ದೂ ಕೇವಲ ಲಾಭಕ್ಕಾಗಿ ಮಾಡುವುದು ನಯವಂಚನೆ.ಇವರು ನೈತಿಕವಾಗಿ ಅಧಮರು,ವ್ಯಾವಹಾರಿಕವಾಗಿ ಪರಮ ಸ್ವಾರ್ಥಿಗಳು ಮತ್ತು ಬುದ್ಧಿವಂತರು. ಇವರ ಜೊತೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು. ಇವರು ಯಾವಾಗ ಹೇಗೆ ಎಂಬುದು ತಿಳಿಯುವುದಿಲ್ಲ. ಇನ್ನು ತಪ್ಪನ್ನೂ ಮಾಡುತ್ತಾ ನಷ್ಟ ಅನುಭವಿಸುವವರು ಮೂರ್ಖರು.ಒಂದೋ ಇವರಿಗೆ ತಿಳಿ ಹೇಳಬೇಕು ಅಥವಾ ಇವರಿಂದ ದೂರವಿರಬೇಕು.
*****
ಸಾಮಾನ್ಯವಾಗಿ, ಯಾವುದೇ ಸಂಗತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆ ಸಂಗತಿ ನಮಗೆ ಸಂಬಂಧಿಸಿದ್ದು ಅಲ್ಲವಾದರೆ ನಾವು ಸರಿ-ತಪ್ಪುಗಳ ತತ್ತ್ವವನ್ನು ಬಳಸುತ್ತೇವೆ. ನಮಗೆ ಸಂಬಂಧಿಸಿದ ಸಂಗತಿಯಾದರೆ ಸರಿ-ತಪ್ಪುಗಳ ಬದಲು ಲಾಭ-ನಷ್ಟದ ತತ್ವ ಬಳಸುತ್ತೇವೆ. ಉದಾಹರಣೆಗೆ ವಿದ್ಯುತ್ ನಿಗಮದ ನೌಕರರು ಮುಷ್ಕರ ಮಾಡಿದರೆ ಬ್ಯಾಂಕ್ ನೌಕರರು "ಇವರಿಗೆ ಎಷ್ಟು ಸವಲತ್ತು ಕೊಟ್ಟರೂ ಸಾಲಲ್ಲ!ಹೀಗಾದರೆ ದೇಶ ಉದ್ಧಾರವಾದಂತಯೇ!" ಎಂದು ಟೀಕಿಸುತ್ತಾರೆ. ಆದರೆ ಅದೇ ಉದ್ದೇಶಕ್ಕಾಗಿ ಅವರೂ ಮುಷ್ಕರ ಮಾಡುತ್ತಾರೆ. ಆವಾಗ ಮೇಲಿನಂತೆ ಟೀಕೆ ಮಾಡುವ ಸರದಿ ವಿದ್ಯುತ್ ನೌಕರರದು.ನಮ್ಮೆಲ್ಲ ತೀರ್ಮಾನಗಳು ವ್ಯಕ್ತಿನಿಷ್ಟತೆಯಲ್ಲಿ ತೀರ್ಮಾನವಾಗುತ್ತದೆಯೇ ಹೊರತು ವಸ್ತುನಿಷ್ಠತೆಯಲ್ಲಿ ಅಲ್ಲ. ನೈತಿಕ ನಷ್ಟಕ್ಕಿಂತ ಆರ್ಥಿಕ ಲಾಭವೇ ಹೆಚ್ಚು ಮುಖ್ಯವಾದದ್ದು ಅಥವಾ/ಹಾಗೂ ಈ ವ್ಯವಸ್ಥೆ ಹಾಳಾಗಿದೆ ಮತ್ತು ಹೀಗೆ ಹಾಳಾಗಲು ನನ್ನೊಬ್ಬನನ್ನು ಬಿಟ್ಟು ಉಳಿದೆಲ್ಲರು/ಉಳಿದೆಲ್ಲವೂ ಕಾರಣ ಎಂಬ ಒಳನಂಬಿಕೆಯೇ ಈ ಪ್ರವೃತ್ತಿಯ ಕಾರಣವಿರಬಹುದೇ?

Saturday, September 4, 2010

ಕೌರವಶತನಾಮಾವಳಿ


 ತುಂಬಾ ವರ್ಷಗಳ ಹಿಂದಿನ ಘಟನೆ.ಸಾಗರದ ಸಮೀಪದ ಶಿರುವಂತೆಯಲ್ಲಿ ಒಂದು ತಾಳಮದ್ದಲೆ. ಶೇಣಿ,ಆನಂದ ಮಾಸ್ತರ,ದೇರಾಜೆ,ಸಾಮಗ ಮೊದಲಾದ ಆಗಿನ ಕಾಲದ ಘಟಾನುಘಟಿ ಅರ್ಥಧಾರಿಗಳು. ಪ್ರಸಂಗ ಸರಿಯಾಗಿ ನೆನಪಿಗೆ ಬರುತ್ತಿಲ್ಲ.ಶೇಣಿಯವರಿಗೆ ಪ್ರಶ್ನೆ ಕೇಳಿ ಎಲ್ಲರನ್ನೂ ಸೋಲಿಸುವ ತವಕ.  ಯಾವುದೋ ಸಂದರ್ಭದ ಸಂವಾದದಲ್ಲಿ ಅನಂದಮಾಸ್ತರರು "ನೂರು ಜನ ಕೌರವರು.."ಎಂದು ಹೇಳಿದ್ದೇ ತಡ ಶೇಣಿಯವರು,ಅನಂದಮಾಸ್ತರರನ್ನು ಸಿಕ್ಕಿಸಲು "ಯಾವ ನೂರು ಜನ? ಹೆಸರು ಗೊತ್ತ?"ಎಂಬ ಕೊಂಕು ಪ್ರಶ್ನೆಯನ್ನು ಎಸೆದರು.ಸಭೆ ಸ್ತಬ್ಧವಾಯಿತು. ಸ್ವತಃ ಧೃತರಾಷ್ಟ್ರನಿಗೂ,ಗಾಂಧಾರಿಗೂ ಬಹುಷಃ ತಮ್ಮ ನೂರು ಮಕ್ಕಳ ಹೆಸರು ಗೊತ್ತಿತ್ತೋ ಇಲ್ಲವೋ! ಅನಂದ ಮಾಸ್ತರರು ಅಳುಕಲಿಲ್ಲ.ಒಮ್ಮೆ ನಕ್ಕರು."ನೂರುಜನರ ಹೆಸರು ಬೇಕಾ? ಕೇಳಿ"ಎಂದವರೇ ದುರ್ಯೊಧನ,ಯುಯುತ್ಸು,ದುಶ್ಯಾಸನ....ಇತ್ಯಾದಿ ಶತ ನಾಮ ಪಠಿಸಿದರು.ಅನಂದಮಾಸ್ತರರ ಮಾತು ಬಲು ಚುರುಕು. ಅವರು ಮಾತನಾಡುವಾಗ ಒಂದು ಪದಕ್ಕೂ ಮತ್ತೊಂದು ಪದಕ್ಕೂ ಅಂತರ ತುಂಬಾ ಕಡಿಮೆ.ನೂರು ಕೌರವರ ಹೆಸರನ್ನು ಯಾವ ರಭಸದಲ್ಲಿ ಹೇಳಿದರೆಂದರೆ ಡಬ್ಬದಲ್ಲಿ ಕಲ್ಲು ಹಾಕಿ ಗಡಗಡ ಅಲ್ಲಾಡಿಸಿದಂತಾಯಿತು! ಶೇಣಿಯವರನ್ನೂ ಸೇರಿದಂತೆ ಯಾರಿಗೂ ಮೊದಲ ನಾಲ್ಕಾರು ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಏನು ಎಂಬುದು ತಿಳಿಯಲಿಲ್ಲ."ತಿಳಿಯತಲ್ಲ   ನೂರುಜನರ ಹೆಸರು" ಎಂದು ಶೇಣಿಯವರನ್ನು ಕೇಳಿ ತಮ್ಮ ಅರ್ಥ ಮುಂದುವರೆಸಿದರು.
ಯಾಕೋ ಇವತ್ತು ಆ ಘಟನೆ ನೆನಪಾಯಿತು.ನನಗೂ ಕುತೂಹಲ. ನೂರು ಕೌರವರ ಹೆಸರು ಏನಿರಬಹುದು?ನಮ್ಮ ಸ್ಥಳೀಯ ತಾಳಮದ್ದಲೆ ಕಲಾವಿದ ಗೊರಮನೆ ಮಂಜುನಾಥ ಅವರನ್ನು ವಿಚಾರಿಸಿದೆ. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸಿದ್ದೇನೆ.ನಮ್ಮ ತಲೆಯಲ್ಲಿ ನಾವು ತುಂಬಿಕೊಂಡಿರುವ,ನಮಗೆ ಬೇಕಿಲ್ಲದ ಮಾಹಿತಿಗಳ ಗುಂಡಿಗೆ ಇದನ್ನೂ ತುಂಬಿಸಿಕೊಳ್ಳೋಣ.
೧.ದುರ್ಯೋಧನ ೨.ಯುಯುತ್ಸು ೩.ದುಶ್ಯಾಸನ ೪.ದುಸ್ಸಹ ೫.ದುಶ್ಯಲ ೬.ಜಲಸಂಧ ೭.ಸಮ ೮.ಸಹ ೯.ವಿಂದ ೧೦.ಅನುವಿಂದ ೧೧.ದುರ್ಧರ್ಷ ೧೨.ಸುಬಾಹು ೧೩.ದುಷ್ಟ್ರಧರ್ಷಣ ೧೪.ದುರ್ಮರ್ಷಣ ೧೫.ದುರ್ಮುಖ ೧೬.ದುಷ್ಕರ್ಣ ೧೭.ಕರ್ಣ ೧೮.ವಿವಿಶಂತಿ ೧೯.ವಿಕರ್ಣ ೨೦.ಶಲ ೨೧.ಸತ್ವ ೨೨.ಸುಲೋಚನ ೨೩.ಚಿತ್ರ ೨೪.ಉಪಚಿತ್ರ ೨೫.ಚಿತ್ರಾಕ್ಷ ೨೬.ಚಾರುಚಿತ್ರ ಶರಾಸನ ೨೭.ದುರ್ಮದ ೨೮.ದುರ್ವಿಗಾಹ ೨೯.ವಿವಿತ್ಸು ೩೦.ವಿಕಟಾನನ ೩೧.ಊರ್ಣನಾಭ ೩೨.ಸುನಾಭ ೩೩.ನಂದ ೩೪.ಉಪನಂದ ೩೫.ಚಿತ್ರಬಾಣ ೩೬.ಚಿತ್ರವರ್ಮ ೩೭.ಸುವರ್ಮ ೩೮.ದುರ್ವಿರೋಚನ ೩೯.ಅಯೋಬಾಹು ೪೦.ಚಿತ್ರಾಂಗ ೪೧.ಚಿತ್ರಕುಂಡಲ ೪೨.ಭೀಮವೇಗ ೪೩.ಭೀಮಬಲ ೪೪.ಬಲಾಕಿ ೪೫.ಬಲವರ್ಧನ ೪೬.ಉಗ್ರಾಯುಧ ೪೭.ಸುಷೇಣ ೪೮.ಕುಂಡೋದರ ೪೯.ಮಹೋದರ ೫೦.ಚಿತ್ರಾಯುಧ ೫೧.ನಿಷಂಗೀ ೫೨.ಪಾಶೀ ೫೩.ವೃಂದಾರಕ ೫೪.ದೃಢವರ್ಮ ೫೫.ದೃಢಕ್ಷತ್ರ ೫೬. ಸೋಮಕೀರ್ತಿ ೫೭.ಅನೂದರ ೫೮. ದೃಢಸಂಧ ೫೯. ಜರಾಸಂಧ ೬೦. ಸತ್ಯಸಂಧ ೬೧.ಸದಃಸುವಾಕ್ ೬೨.ಉಗ್ರಶ್ರವಸ ೬೩.ಉಗ್ರಸೇನ ೬೪.ಸೇನಾನೀ ೬೫.ದುಷ್ಪರಾಜಯ ೬೬.ಅಪರಾಜಿತ ೬೭.ಪಂಡಿತಕ ೬೮.ವಿಶಾಲಾಕ್ಷ ೬೯.ದುರಾಧರ ೭೦.ದೃಢಹಸ್ತ ೭೧.ಸುಹಸ್ತ ೭೨.ವಾತವೇಗ ೭೩.ಸುವರ್ಚಸ ೭೪.ಆದಿತ್ಯಕೇತು ೭೫.ಬಹ್ವಾಶೀ ೭೬.ನಾಗದತ್ತ ೭೭.ಅಗ್ರಯಾಯೀ ೭೮.ಕವಚೀ ೭೯.ಕ್ರಥನ ೮೦.ದಂಡೀ ೮೧.ದಂಡಧಾರ ೮೨.ಧನುರ್ಗ್ರಹ ೮೩.ಉಗ್ರ ೮೪.ಭೀಮರಥ ೮೫.ವೀರಬಾಹು ೮೬.ಅಲೋಲುಪ ೮೭.ಅಭಯ ೮೮.ರೌದ್ರಕರ್ಮಾ ೮೯.ದ್ರುಢರಥಾಶ್ರಯ ೯೦.ಅನಾಧೃಷ್ಯ ೯೧.ಕುಂಡಭೇದೀ ೯೨.ವಿರಾವೀ ೯೩.ಪ್ರಮಥ ೯೪.ಪ್ರಮಾಥೀ ೯೫.ದೀರ್ಘರೋಮ ೯೬.ದೀರ್ಘಬಾಹು ೯೭.ವ್ಯೂಢೋರು ೯೮.ಕನಕಧ್ವಜ ೯೯.ಕುಂಡಾಶೀ ೧೦೦.ವಿರಸಜ .
ನೂರೊಂದನೆಯವಳು ದುಶ್ಯಲಾ. 
(ನೋಡಿ:ವ್ಯಾಸಭಾರತದ ಆದಿಪರ್ವ-೧೧೭ನೆಯ ಅಧ್ಯಾಯ.)