Tuesday, January 4, 2011

ಒಂದು ತುತ್ತು ಅನ್ನ.

        ಅಲ್ಲಿಯವರೆಗೂ ಸಣ್ಣದಾಗಿ ಹನಕುತ್ತಿದ್ದ ಮಳೆ ಶ್ರೀಧರನ ಅಂಗಡಿ ಹೊಗುವ ಹೊತ್ತಿಗೆ ಜೋರಾಗಿ ರಪರಪ ಬಾರಿಸತೊಡಗಿತು.  ಸಾಯಂಕಾಲ ಇಳಿವ ಹೊತ್ತಿಗೇ ಮಳೆಯ ಮೋಡಗಳು ದಟ್ಟೈಸಿದ್ದ ಕಾರಣದಿಂದಾಗಿ ಅಂಗಡಿಯ ಬದಿ ಯಾರೂ ತಲೆ ಹಾಕಿರಲಿಲ್ಲ. ಏನೂ ಮಾಡಲು ತೋಚದೆ ಬೆಳಗಿಂದ ಓದುತ್ತಿದ್ದ ಪೇಪರನ್ನೇ ಮತ್ತೆ ಮಗುಚುತ್ತಿದ್ದ ಶ್ರೀಧರ ಬಾ ಮಾರಾಯ ಬಾ ಕತೆ ಹೊಡೆಯುವಾ.. ಮಳೆ ಜೋರೇ ಹೊಡೀತದೆ ಕಾಣ್ಸ್ತದೆ..ಅಂದ. ಒಳಹೊಕ್ಕು ಅದೂ ಇದೂ ಮಾತಾಡುತ್ತಾ ಕೂತೆವು. ಎಲ್ಲೆಲ್ಲೋ ಹೊರಳಾಡುತ್ತಾ ಮಾತು ಈರುಳ್ಳಿ, ತರಕಾರಿಯ ಏರುತ್ತಿರುವ ದರಗಳ ಬಳಿ ಬಂದು ನಿಂತಿತು. ಪುಣ್ಯಕ್ಕೆ ಅಕ್ಕಿ ದರ ಈ ರಭಸದಲ್ಲಿ ಏರಿಲ್ಲ ನೋಡು..ಇಲ್ದಿದ್ರೆ ಒಂದು ತುತ್ತು ಊಟಕ್ಕೂ ಒದ್ದಾಟ ಆಗ್ತಿತ್ತು ಅಲ್ವಾ? ಅಂದ. ತಟ್ಟನೆ ಏನೋ ಹೊಳೆಯಿತು. ಏ ! ೫ ಗ್ರಾಂ ಅಕ್ಕಿ ತೂಗೋ ಅಂದೆ. ಏನೋ ಬಂಗಾರ ತೂಗ್ಸೋ ಹಾಗೆ ಅಕ್ಕಿ ತೂಕ ಮಾಡು ಅಂತೀಯಲ್ಲ ಅಂದ. ತೂಗು ಅಂದೆ. ಎಲ್ಲೋ ಮೂಲೆಯಲ್ಲಿ ಬೆಲೆ ಕಳಕೊಂಡು ಬಿದ್ದಿದ್ದ ೫ ಗ್ರಾಂ.ಕಲ್ಲನ್ನು ಹುಡುಕಿ ತೆಗೆದ. ತೂಗಿದ.
      ಈಗ ಕಾಳುಗಳನ್ನು ಎಣಿಸಿದೆವು. ೫ ಗ್ರಾಂ ಅಭಿಲಾಷಾ ಅಕ್ಕಿಯಲ್ಲಿ ನುಚ್ಚು ಕಳೆದು ೧೩೨ ಕಾಳುಗಳಿದ್ದವು. ಇದು ಒಂದು ತುತ್ತು ಆಗಬಹುದು ಎಂದು ನಾವು ತೀರ್ಮಾನಿಸಿದೆವು. ಲೆಕ್ಕ ಶುರುವಾಯಿತು. ಭಾರತದ ಜನಸಂಖ್ಯೆ ೧೧೫ ಕೋಟಿ. ದಿನಕ್ಕೊಂದು ಊಟದಂತೆ ಲೆಕ್ಕ ಹಿಡಿದರೂ ೧೧೫ ಕೋಟಿ ಊಟವಾಯಿತು. ಪ್ರತಿ ಊಟಕ್ಕೆ ಒಂದು ತುತ್ತು ಅಂದರೆ ಗ್ರಾಂ ಲೆಕ್ಕದಲ್ಲಿ ೧೧೫೦೦೦೦೦೦೦*೫=೫೭೫೦೦೦೦೦೦೦ ಗ್ರಾಂ=೫೭೫೦೦೦೦ ಕಿ.ಗ್ರಾಂ ಆದಂತಾಯಿತು. ಅಂದರೆ ೫೭೫೦೦ ಕ್ವಿಂಟಾಲ್. ಅಭಿಲಾಷಾ ಅಕ್ಕಿ ಒಂದು ಕ್ವಿಂಟಾಲ್ ಗೆ ರೂ.೧೮೫೦/-.೫೭೫೦೦ ಕ್ವಿಂ.ಗೆ ರೂ.೧೦,೬೩,೭೫,೦೦೦/- ಆದಂತಾಯಿತು.  ಪ್ರತಿಯೊಬ್ಬರೂ ಒಂದು ತುತ್ತು ಅನ್ನವನ್ನು ವ್ಯರ್ಥಮಾಡಿದರೆ ಆಗುವ ನಷ್ಟ ಇದು.
     ಸುರಿವ ಮಳೆ ನೋಡುತ್ತಾ ಈಗಷ್ಟೆ ಮುಗಿಸಿದ ಲೆಕ್ಕ ಹುಟ್ಟಿಸಿದ ಗಾಬರಿಯನ್ನು ಗ್ರಹಿಸುತ್ತಾ ಕೂತೆವು. ಮಾತು ಹಿಂಚಿತು.