Friday, October 7, 2016

ಚಕ್ರವ್ಯೂಹ.

ವ್ಯಾಸರಲ್ಲಿ:
ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ.ಈ ಚಕ್ರವ್ಯೂಹವನ್ನು ಭೇದಿಸುವ ತಂತ್ರವನ್ನು ಬಲ್ಲವರು ಆ ಕಾಲದಲ್ಲಿ ಕೃಷ್ಣ, ಅರ್ಜುನ,ಪ್ರದ್ಯುಮ್ನ ಮತ್ತು ಅಭಿಮನ್ಯು ಮಾತ್ರ. ಈ ನಾಲ್ವರಲ್ಲಿ ಅಭಿಮನ್ಯುವಿಗೆ ವ್ಯೂಹವನ್ನು ಪ್ರವೇಶಿಸುವ ತಂತ್ರ ಗೊತ್ತಿದೆ,ಅಲ್ಲಿಂದ ಪಾರಾಗಿ ಹೊರಬರುವ ತಂತ್ರ ತಿಳಿದಿಲ್ಲ.ಅದರ ಕಾರಣ, ಅಭಿಮನ್ಯು ಹೇಳುವ ಪ್ರಕಾರ, ಆತನಿಗೆ ಅರ್ಜುನ ಪ್ರವೇಶಿಸುವ ರೀತಿಯನ್ನು ಮಾತ್ರ ಕಲಿಸಿದ್ದು.(ಮೂಲಮಹಾಭಾರತ-ದ್ರೋಣಪರ್ವ-೩೫ನೆಯ ಅಧ್ಯಾಯ).
ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣರು ಯುದ್ಧಕ್ಕೆ ಆಹ್ವಾನಿಸುತ್ತಾರೆ.ಸಂಸಪ್ತಕರೊಡನೆ ಅರ್ಜುನ ಯುದ್ಧನಿರತನಾಗಿರುವ ಕಾರಣದಿಂದ ಧರ್ಮರಾಯ ಚಕ್ರವ್ಯೂಹವನ್ನು ಭೇದಿಸು ಎಂದು ಅಭಿಮನ್ಯುವನ್ನು ಕೇಳಿಕೊಳ್ಳುತ್ತಾನೆ. ಆತ ಅಭಿಮನ್ಯುವಿಗೆ ಹೇಳುವ ಮಾತು: “ಈ ವ್ಯೂಹವನ್ನು ಭೇದಿಸಿ ನೀವು ಪಾಂಡವಸೇನೆಯನ್ನು ನಾಶ ಮಾಡುತ್ತಿದ್ದ ದ್ರೋಣರನ್ನು ತಡೆಯಲಿಲ್ಲ ಎಂದು ಅರ್ಜುನ ವಾಪಸಾದ ಅನಂತರ ದೂಷಿಸಬಾರದು. ನಮಗ್ಯಾರಿಗೂ ಈ ವ್ಯೂಹವನ್ನು ಭೇದಿಸುವ ತಂತ್ರ ತಿಳಿದಿಲ್ಲ. ಆದ್ದರಿಂದ ನೀನು ಈ ದಿನ ಆ ವ್ಯೂಹವನ್ನು ಭೇದಿಸಬೇಕು.”
ತಾನು ಆ ವ್ಯೂಹವನ್ನು ಭೇದಿಸಬಲ್ಲೆ. ಚಕ್ರವ್ಯೂಹದ ಒಳಹೊಗುವ ತಂತ್ರವನ್ನು ತನ್ನ ತಂದೆ ಕಲಿಸಿದ್ದಾನೆ.ಆದರೆ ಅಲ್ಲಿ ಆಪತ್ತಿಗೆ ಸಿಲುಕಿದರೆ ಹೊರಬರುವ ತಂತ್ರ ನನಗೆ ಗೊತ್ತಿಲ್ಲವಾದುದರಿಂದ ಹೊರಬರುವುದು ನನಗೆ ಅಸಾಧ್ಯ ಎಂದು ಅಭಿಮನ್ಯು ಹೇಳುತ್ತಾನೆ. ಅವನು ಒಳಹೋಗಲು ಹಿಂಜರಿಕೆ ತೋರದಿದ್ದರೂ ಮುಂದಿನ ಅಪಾಯವನ್ನು ಸೂಕ್ಷ್ಮವಾಗಿ ಧರ್ಮರಾಯನಿಗೆ ಸೂಚಿಸುತ್ತಿದ್ದಾನೆ.
ಅದಕ್ಕೆ ಧರ್ಮರಾಯ ಸಮಾಧಾನ ನೀಡುತ್ತಾನೆ. “ನೀನು ಅದನ್ನು ಭೇದಿಸಿದಾಗ ನಿನ್ನ ಹಿಂದೆ ನಾವೂ ಬರುತ್ತೇವೆ.ಹಾಗೆ ಬಂದು ವ್ಯೂಹವನ್ನು ದ್ವಂಸಮಾಡುತ್ತೇವೆ.”ಭೀಮನೂ ಈ ಮಾತನ್ನು ಅನುಮೋದಿಸುತ್ತಾನೆ.
ಹಾಗೆ ಧರ್ಮರಾಯನಂದರೂ ಅಭಿಮನ್ಯುವಿಗೆ ಅವರು ತನ್ನ ಜೊತೆ ಪ್ರವೇಶಿಸಿಯಾರು ಎಂಬ ನಂಬಿಕೆ ಇಲ್ಲ. “ಕೋಪಗೊಂಡ ಪತಂಗ ಬೆಂಕಿಯತ್ತ ನುಗ್ಗುವಂತೆ ನಾನು ನುಗ್ಗುತ್ತೇನೆ” ಎಂಬ ಮಾತನ್ನಾಡುತ್ತಾನೆ. ಈ ಮಾತಲ್ಲಿ ತಾನು ಬದುಕುವುದಿಲ್ಲ ಎಂಬ ಅರ್ಥವನ್ನು ಆತ ಧ್ವನಿಸುತ್ತಾನೆ.ಆದರೆ ಧರ್ಮರಾಯ ಈ ಧ್ವನಿಯನ್ನು ಗ್ರಹಿಸುವುದಿಲ್ಲ ಅಥವ ಗ್ರಹಿಸಿದರೂ, ಆ ಸನ್ನಿವೇಶ ನಿರ್ಮಿಸಿದ್ದ ಅನಿವಾರ್ಯತೆಯಿಂದಾಗಿ ಅವನ ಅಭಿಪ್ರಾಯವನ್ನು ಕಡೆಗಣಿಸುತ್ತಾನೆ.ಯುದ್ಧಕ್ಕೆ ತೆರಳಲು ಅನುಮತಿ ನೀಡುತ್ತಾನೆ.
ಚಕ್ರವ್ಯೂಹದತ್ತ ರಥ ನಡೆಸು ಎಂದು ಸಾರಥಿಗೆ ಅಭಿಮನ್ಯು ಅದೇಶಿಸುತ್ತಾನೆ.ಸಾರಥಿ ವ್ಯಾವಹಾರಿಕವಾದ ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ.೧) ಅಸ್ತ್ರವಿದ್ಯೆಯಲ್ಲಿ ಶ್ರೇಷ್ಠರಾದ ದ್ರೋಣರ ಜೊತೆ ಯುದ್ಧಮಾಡುವುದರ ಬಗ್ಗೆ ಇನ್ನೊಮ್ಮೆ ವಿಚಾರಮಾಡು.೨) ನಿನಗೆ ಯುದ್ಧರಂಗದ ಅನುಭವ ಇಲ್ಲ.
“ದ್ರೋಣರು ತಮಗೆ ಸಮನಲ್ಲ, ಅಷ್ಟೇಕೆ ಇಂದ್ರ,ರುದ್ರ,ಶ್ರೀಕೃಷ್ಣ ಅಥವ ಅರ್ಜುನ ಯುದ್ಧಕ್ಕೆ ಬಂದರೂ ಮಣಿಸುತ್ತೇನೆ.ನೀನು ರಥ ಹರಿಸು” ಎಂದು ಮತ್ತೆ ಅದೇಶಿಸಿದಾಗ ಮನಸ್ಸಿಲ್ಲದಿದ್ದರೂ ಸಾರಥಿ ವ್ಯೂಹದತ್ತ ಒಯ್ಯುತ್ತಾನೆ.ಅಭಿಮನ್ಯು ಒಳಪ್ರವೇಶಿಸುತ್ತಾನೆ.ಆದರೆ ಪಾಂಡವಸೇನೆಯ ಉಳಿದ ಯಾರಿಗೂ ಅದನ್ನು ಪ್ರವೇಶಿಸಲು ಆಗುವುದಿಲ್ಲ.ಅಭಿಮನ್ಯು ಒಂಟಿಯಾಗುತ್ತಾನೆ.
ಕುಮಾರವ್ಯಾಸನಲ್ಲಿ:
(ದ್ರೋಣಪರ್ವ-ಸಂಧಿ ೪ )
೧]ಅರ್ಜುನನನ್ನು ಏಕಕಾಲಕ್ಕೆ ಸಮಸಪ್ತಕರು ಮತ್ತು ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣ ಇಬ್ಬರೂ ಯುದ್ಧಕ್ಕೆ ಆಹ್ವಾನಿಸುತ್ತಾರೆ.ಅರ್ಜುನ ನಾನು ಯಾರ ಜತೆ ಯುದ್ಧ ಮಾಡಲಿ ಎಂದು ಕೃಷ್ಣನನ್ನು ಕೇಳುತ್ತಾನೆ.ನಿನ್ನ ಮಗ ದ್ರೋಣರನ್ನೆದುರಿಸುತ್ತಾನೆ,ನೀನು ಸಮಸಪ್ತಕರನ್ನೆದುರಿಸು ಎಂಬ ಸಲಹೆಯನ್ನು ಕೃಷ್ಣ ನೀಡುತ್ತಾನೆ. ಹೀಗೆ ಸಲಹೆ ನೀಡಲು ಕೃಷ್ಣನಿಗೆ ಕಾರಣವಿದೆ.
ಅಳಿಯನೀ ಮೋಹರದೊಳಗಲ್ಲದೆ ಫಲುಗುಣನ ಮಗನಿವನು ಬಲುಗೈಯುಳುಹಬಾರದು ಕಾಯಿದರೆ ಕಲಿಯುಗಕೆ ಗತಿಯಿಲ್ಲ…(-೨೭)
ಮಹಾಬಲಶಾಲಿಯಾದ ಅಭಿಮನ್ಯು ಈ ಯುದ್ಧದಲ್ಲಿ ಅಳಿಯಬೇಕು. ಅಭಿಮನ್ಯು ಬದುಕಿದರೆ ಕಲಿಯುಗ ಪ್ರಾರಂಭವಾಗುವುದಿಲ್ಲ.(ಯಾಕೆ ಪ್ರಾರಂಭವಾಗುವುದಿಲ್ಲ ಎಂಬುದು ಗೊತ್ತಿಲ್ಲ).ಅಭಿಮನ್ಯುವಿನ ಸಾವನ್ನು ಇಲ್ಲಿ ಕೃಷ್ಣ ನಿಶ್ಚೈಸುತ್ತಾನೆ.
೨] ಭೀಮನನ್ನೂ ಸೇರಿದಂತೆ ಪಾಂಡವಸೇನೆಗೆ ವ್ಯೂಹಭೇದನ ಅಸಾಧ್ಯವಾಗುತ್ತದೆ.(ಕಾದಲೆನ್ನಳವಲ್ಲ ಬಲ ದುರ್ಭೇದವಿದು ಶಿವಶಿವಯೆನುತ್ತ ವೃಕೋದರನು ಮರಳಿದನು...ಸಂ-೪,ಪ-೩೨.) ಚಕ್ರವ್ಯೂಹವನ್ನು ಹೇಗೆ ಭೇದಿಸುವುದು ಎಂಬ ಚಿಂತೆಯಲ್ಲಿರುವ ಧರ್ಮರಾಯನನ್ನು ಕಂಡ ಅಭಿಮನ್ಯು ತನಗೆ ಅಪ್ಪಣೆ ಕೊಡು ಎಂದು ಕೇಳುತ್ತಾನೆ.ಬಾಲಕನಾದ ಅವನನ್ನು ಕಳಿಸಲು ಧರ್ಮರಾಯನ ಮನಸ್ಸು ಒಪ್ಪುವುದಿಲ್ಲ. ವ್ಯೂಹಭೇದನದಲ್ಲಿ ಎದುರಾಗುವ ಕಷ್ಟವನ್ನು ವಿವರಿಸುತ್ತಾನೆ.ಆದರೆ ಅಭಿಮನ್ಯು ತನ್ನ ಪೌರುಷಕ್ಕೆ ಅದು ಸಮವಲ್ಲ ಎಂದು ಸಾಧಿಸಿದಾಗ ಧರ್ಮರಾಯ ಒಪ್ಪುತ್ತಾನೆ.ತಾವು ಅವನನ್ನು ಹಿಂಬಾಲಿಸುವ ಭರವಸೆ ನೀಡುತ್ತಾನೆ.ಇಲ್ಲಿಯೂ ಸಾರಥಿಯ ಸಂದೇಹವನ್ನು ತಳ್ಳಿಹಾಕಿದ ಅಭಿಮನ್ಯು ವ್ಯೂಹವನ್ನು ಪ್ರವೇಶಿಸುತ್ತಾನೆ.ಉಳಿದವರಿಗೆ ಪ್ರವೇಶಿಸಲು ಆಗದೆ ಅಭಿಮನ್ಯು ಒಂಟಿಯಾಗುತ್ತಾನೆ.
ಮೂಲದಲ್ಲಿ ಕೃಷ್ಣನ ತಂತ್ರದ ಸೂಚನೆ ಇಲ್ಲ.ಇದನ್ನು ಕುಮಾರವ್ಯಾಸ ಯಾಕೆ ತಂದ ಎಂಬುದು ತಿಳಿಯುವುದಿಲ್ಲ.ಅದರಿಂದ ಕಾವ್ಯದ ಅರ್ಥವ್ಯಾಪ್ತಿಯ ವಿಸ್ತಾರವಂತೂ ಆಗಿಲ್ಲ.ಮಹಾಭಾರತದ ಎಲ್ಲ ಮುಖ್ಯ ಘಟನೆಗಳಲ್ಲೂ ಕೃಷ್ಣನ ಕೈವಾಡವಿದೆ ಎಂಬುದನ್ನು ತೋರಿಸಲು ತಂದಿರಬಹುದು ಎಂದು ಊಹಿಸಬಹುದು.
ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ್ದಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳುತ್ತಾನೆ.ತಾವು ಉಳಿದ ಸೇನೆಯ ಜತೆ ಅವನನ್ನು ಹಿಂಬಾಲಿಸಿ ಕಾಪಾಡುತ್ತೇವೆ ಎಂಬ ಭರವಸೆಯನ್ನು ಧರ್ಮರಾಯ ಮತ್ತು ಭೀಮ ನೀಡುತ್ತಾರೆ. ಮೂಲದಲ್ಲಿ ಅಭಿಮನ್ಯುವಿನ  ಈ ವ್ಯಾವಹಾರಿಕ ಎಚ್ಚರ,ಅವನ ಪೌರುಷದ ಜೊತೆಗೇ ನಿರೂಪಿತವಾಗಿದೆ.
ಕುಮಾರವ್ಯಾಸನಲ್ಲಿ ತನ್ನ ವೀರತ್ವವನ್ನು ಘೋಷಿಸಿ ಅಭಿಮನ್ಯುವೇ ಧರ್ಮರಾಯನನ್ನು ವಿನಂತಿಸುತ್ತಾನೆ. ಮೊದಲಿಗೆ ಧರ್ಮರಾಯ ವಿರೋಧಿಸಿದರೂ ಅಭಿಮನ್ಯುವಿನ ಒತ್ತಾಯಕ್ಕೆ ಒಪ್ಪುತ್ತಾನೆ.ಮೂಲಕ್ಕಿಂತ ಹೆಚ್ಚಿನ ವಿವರದಲ್ಲಿ ಅಭಿಮನ್ಯುವಿನ ಶೌರ್ಯ ಚಿತ್ರಿತವಾಗಿದ್ದರೂ, ಮೂಲದಲ್ಲಿ ವ್ಯಕ್ತವಾಗುವ ವ್ಯಾವಹಾರಿಕ ಎಚ್ಚರ ಇಲ್ಲಿ ಕಂಡು ಬರುವುದಿಲ್ಲ. ಆ ಎಚ್ಚರ ಧರ್ಮರಾಯನಲ್ಲಿ ಇದೆ. ಆದರೆ ಅಷ್ಟೆಲ್ಲ ವಿರೋಧಿಸಿದ ಧರ್ಮರಾಯ ಕೊನೆಗೆ ಒಪ್ಪಲು ಏನು ಕಾರಣ ಎಂಬುದು ತಿಳಿಯುವುದಿಲ್ಲ.ವ್ಯೂಹಭೇದನ ಅನಿವಾರ್ಯವಾಗಿತ್ತು ಎಂಬುದು ಆತ ಒಪ್ಪಲು ಕಾರಣವಾದರೆ ಆ ಅನಿವಾರ್ಯತೆ ಅಭಿಮನ್ಯುವನ್ನು ಮೊದಲು ವಿರೋಧಿಸುವಾಗಲೂ ಇತ್ತು.
      ಮೊದಲು ಒಪ್ಪದ, ಅನಂತರ ಒಪ್ಪುವ ಧರ್ಮರಾಯನ ವರ್ತನೆಯ ನಡುವೆ ಅವನ ಅಭಿಪ್ರಾಯ ಬದಲಾಗಲು ಯಾವುದು ಕಾರಣ ಎಂಬ ಅಂಶ ಕುಮಾರವ್ಯಾಸನಲ್ಲಿ ಸ್ಪಷ್ಟವಾಗಿಲ್ಲ.ಈ ರೀತಿಯ ಗೊಂದಲ ಮೂಲದಲ್ಲಿ ಇಲ್ಲ.ಅಲ್ಲಿ ಧರ್ಮರಾಯ ವಿನಂತಿಸುತ್ತಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳಿ,ತನಗೊದಗಬಹುದಾದ ಆಪತ್ತಿನ ಬಗ್ಗೆ ಹೇಳಿದಾಗ ಧರ್ಮರಾಯ ಮತ್ತು ಭೀಮ ತಾವು ಬೆಂಬಲಕ್ಕೆ ಬರುವ ಭರವಸೆ ನೀಡುತ್ತಾರೆ.ಅಂದರೆ ಮೂಲದಲ್ಲಿ ಅಭಿಮನ್ಯುವಿಗೆ ತನ್ನ ಶಕ್ತಿ ಮತ್ತು ಮಿತಿ ಎರಡರ ಬಗ್ಗೆಯೂ ತಿಳಿವಳಿಕೆ ಇದೆ.ಹಾಗಾಗಿಯೇ ಧರ್ಮರಾಯ,ಭೀಮ ಇಬ್ಬರೂ ಬೆಂಬಲಿಸುವ ಭರವಸೆ ನೀಡಿದ ಅನಂತರ ವ್ಯೂಹಭೇದನಕ್ಕೆ ಒಪ್ಪುತ್ತಾನೆ.ಕುಮಾರವ್ಯಾಸನ ಅಭಿಮನ್ಯು ಅದರ ಅಗತ್ಯವೇ ಇಲ್ಲ ಎಂಬಂತೆ ಮಾತಾಡಿದ್ದಾನೆ.ಅಭಿಮನ್ಯು ವ್ಯಾಸರಲ್ಲಿ ವೀರ ಮತ್ತು ವಿವೇಕಿ ಎಂಬಂತೆ ಚಿತ್ರಿತವಾಗಿದ್ದರೆ ಕುಮಾರವ್ಯಾಸನಲ್ಲಿ ವೀರ ಎಂಬಂತೆ ಮಾತ್ರ ಚಿತ್ರಿತವಾಗಿದೆ.ಕುಮಾರವ್ಯಾಸನ ಅಭಿಮನ್ಯು ಒಂದು ಮಗ್ಗುಲನ್ನು ಕಳೆದುಕೊಂಡಿದ್ದಾನೆ.
ಇನ್ನೊಂದು ಅಂಶವನ್ನೂ ಗಮನಿಸಬಹುದು. ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ ಕಾರಣ ಅವನ ಮರಣದ ಜವಾಬ್ದಾರಿಯನ್ನು ಧರ್ಮರಾಯ ಹೊರಬೇಕಾಗಿದೆ. ಕುಮಾರವ್ಯಾಸನಲ್ಲಿ ಅಭಿಮನ್ಯುವೇ ತನ್ನ ಮರಣಕ್ಕೆ ಜವಾಬ್ದಾರನಾಗುತ್ತಾನೆ.ಹಾಗಾಗಿ ವ್ಯಾಸರಲ್ಲಿ ಧರ್ಮರಾಯನನ್ನು ಕಾಡುವಪಾಪಪ್ರಜ್ಞೆಕುಮಾರವ್ಯಾಸನಲ್ಲಿ ಕಾಡಬೇಕಿಲ್ಲ.
ವ್ಯಾಸರಲ್ಲಿ ಚಕ್ರವ್ಯೂಹದೊಳಗೆ..
೧] ಅಭಿಮನ್ಯುವಿನ ಯುದ್ಧದ ಬಿರುಸಿನಿಂದ ಎಲ್ಲರೂ ಬಸವಳಿದಾಗ ಕರ್ಣ ದ್ರೋಣರ ಬಳಿ ಹೋಗಿ ತನಗೆ ಇವನ ಜೊತೆ ಯುದ್ಧ ಮಾಡಲು ಆಗುತ್ತಿಲ್ಲ, ಇವನನ್ನು ನಿಯಂತ್ರಿಸುವುದು ಹೇಗೆ ಎಂದು ಕೇಳುತ್ತಾನೆ. ಕೈಯಲ್ಲಿ ಬಿಲ್ಲು ಇರುವವರೆಗೆ ಅವನನ್ನು ನಿಯಂತ್ರಿಸಲು ಆಗದು.ಸಾಧ್ಯವಾದರೆ ಬಿಲ್ಲನ್ನು ಕತ್ತರಿಸು.ಬೇಕಿದ್ದರೆ ಹಿಂದಿನಿಂದ ಅವನ ಮೇಲೆ ದಾಳಿ ಮಾಡು ಎಂದು ದ್ರೋಣರು ಅನ್ನುತ್ತಾರೆ. ಕುಮಾರವ್ಯಾಸಲ್ಲಿ ಇರುವಂತೆ ನಾವೆಲ್ಲಾ ಸೇರಿ ಅವನ ಮೇಲೆ ಒಟ್ಟಿಗೇ ಯುದ್ಧ ಮಾಡುವ ಎಂದು ದ್ರೋಣರು ಹೇಳಿಲ್ಲ.ಕರ್ಣ ಬಿಲ್ಲನ್ನು ಕತ್ತರಿಸುತ್ತಾನೆ. ಆದರೆ ಆತ ಹಿಂದಿನಿಂದ ಕತ್ತರಿಸಿದ ಎಂಬ ಸೂಚನೆ ವ್ಯಾಸರಲ್ಲಿ ಇಲ್ಲ.ಆದ್ದರಿಂದ ಕರ್ಣ ಎದುರಿಗೆ ನಿಂತೇ ಬಿಲ್ಲು ಕತ್ತರಿಸಿದ್ದಾನೆ ಎಂದು ಭಾವಿಸಬೇಕಾಗುತ್ತದೆ.
(ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಗಮನಿಸಬಹುದು.೧] ಅಭಿಮನ್ಯು ’ಹಿಂದಿನಿಂದ ಕತ್ತರಿಸಿದೆಯಲ್ಲ ಕರ್ಣ’  ಎಂಬ ಮಾತನ್ನು ಆಡಿಲ್ಲ.೨] ಕರ್ಣವಧೆಯ ಸಂದರ್ಭದಲ್ಲಿ, ಕರ್ಣ ಮಾಡಿದ ಅನ್ಯಾಯವನ್ನು ಪಟ್ಟಿ ಮಾಡುವಾಗ ಹಿಂದಿನಿಂದ ಬಿಲ್ಲು ಕತ್ತರಿಸಿದೆ ಎಂದು ಕೃಷ್ಣ ಆಪಾದಿಸಿಲ್ಲ,ಬದಲಿಗೆ ನೀವು ಆರು ಜನ ಒಬ್ಬನನ್ನು ಕೊಂದದ್ದು ಧರ್ಮವೇ ಎಂದು ಕೇಳುತ್ತಾನೆ.
ಯದಾಭಿಮನ್ಯುಂ ಬಹವೋ ಯುದ್ಧೇ ಜಘ್ನುರ್ಮಹಾರಥಾಃ|
ಪರಿವಾರ್ಯ ರಣೇ ಬಾಲಂ ಕ್ವ ತೇ ಧರ್ಮಸ್ತದಾ ಗತಃ || ಕ.ಪ-ಅಧ್ಯಾಯ ೧೯,ಶ್ಲೋ-೧೧. ಯುದ್ಧದಲ್ಲಿ ಏಕಾಕಿಯಾಗಿದ್ದ ಬಾಲನಾದ ಅಭಿಮನ್ಯುವನ್ನು ಅನೇಕ ಮಹಾರಥರು ಸುತ್ತುವರಿದು ಸಂಹಾರಮಾಡಿದರು.ಆ ಸಮಯದಲ್ಲಿ ನಿನ್ನ ಧರ್ಮವು ಎಲ್ಲಿ ಹೋಗಿತ್ತು?)
೩] ಕರ್ಣ ಅಭಿಮನ್ಯುವಿನ ಕೈಯನ್ನು ಕತ್ತರಿಸುವುದು ವ್ಯಾಸರಲ್ಲಿ ಇಲ್ಲ.ಇದು ವಾಸ್ತವಿಕವಾದ ಚಿತ್ರಣ ಅನಿಸುತ್ತದೆ. ಕೈ ಇಲ್ಲದ ಅಭಿಮನ್ಯು ರಥದ ಚಕ್ರ ಹಿಡಿದು ಯುದ್ಧ ಮಾಡುವುದು ಅವಾಸ್ತವಿಕ ಅನಿಸುತ್ತದೆ. ವ್ಯಾಸರಲ್ಲಿ ಕೊನೆಗೆ ಅಭಿಮನ್ಯು ಮತ್ತು ದುಶ್ಯಾಸನನ ಮಗ ಗದಾಯುದ್ಧ ಮಾಡುತ್ತಾರೆ.ಇಬ್ಬರೂ ಪೆಟ್ಟಾಗಿ ನೆಲಕ್ಕುರುಳುತ್ತಾರೆ. ದುಶ್ಯಾಸನನ ಮಗ ಅಭಿಮನ್ಯುವಿಗಿಂತ ಮೊದಲು ಮೇಲೆದ್ದು ಅಭಿಮನ್ಯುವಿನ ತಲೆಗೆ ಗದೆಯಿಂದ ಪೆಟ್ಟು ಕೊಡುತ್ತಾನೆ.ಅಭಿಮನ್ಯು ಸಾಯುತ್ತಾನೆ. (ದುಶ್ಯಾಸನನ ಮಗನೂ ಸತ್ತದ್ದು ವ್ಯಾಸರಲ್ಲಿ ಇಲ್ಲ.)ಈ ವಿವರಣೆ ಸಹಜವಾಗಿದೆ.ಕುಮಾರವ್ಯಾಸನ ಚಿತ್ರಣದಂತೆ ಅತಿ ರಂಜಿತವಾಗಿಲ್ಲ.

ಕುಮಾರವ್ಯಾಸನಲ್ಲಿ ಚಕ್ರವ್ಯೂಹದೊಳಗೆ....
ಒಳಹೊಕ್ಕ ಅಭಿಮನ್ಯು ಭೀಕರವಾಗಿ ಯುದ್ಧಮಾಡಿ ಕೌರವ ಪಕ್ಷದ ಎಲ್ಲ ಅತಿರಥ,ಮಹಾರಥರನ್ನು ಸೋಲಿಸುತ್ತಾನೆ.ದ್ರೋಣ, ಶಲ್ಯ,ಕರ್ಣ,ಅಶ್ವತ್ಥಾಮ,ದುರ್ಯೋಧನ ಇತ್ಯಾದಿಯಾಗಿ ಯಾರಿಗೂ ಅವನ ಸಮನಾಗಿ ಯುದ್ಧ ಮಾಡಲು ಆಗುವುದಿಲ್ಲ.ಹತಾಶನಾದ ದುರ್ಯೋಧನ ಎಲ್ಲರನ್ನು ಹೀಯಾಳಿಸುತ್ತಾನೆ. ಆಗ ದ್ರೋಣರು ಒಬ್ಬರಿಂದ ಇವನನ್ನು ಸಂಹರಿಸಲು ಆಗುವುದಿಲ್ಲ.ನಾವು ಆರು ಜನಸೇರಿ ಏಕಕಾಲದಲ್ಲಿ ಯುದ್ಧ ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹಾಗಿದ್ದೂ ಅಭಿಮನ್ಯುವನ್ನು ಸೋಲಿಸಲು ಆಗುವುದಿಲ್ಲ.ಆಗ ಕರ್ಣನನ್ನು ಕರೆದು ನೀನು ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸು ಎಂದು ಸೂಚಿಸುತ್ತಾರೆ.(.........ಇದಿರೊಳಾನಿಹೆ ಶಲ್ಯನೆಡವಂಕದಲಿ ಬಲದಲಿ ಕೃಪನಪರಭಾಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ||ದ್ರೋ.ಪ.ಸಂ-೬,ಪ-೨೮).ಇದು ಯುದ್ಧನೀತಿಯಲ್ಲ ಎಂಬುದು ದ್ರೋಣನಿಗೆ ಗೊತ್ತು.ಕರ್ಣನೂ ಈ ಸಲಹೆಯನ್ನು ಒಪ್ಪದಿರಬಹುದು ಎಂಬ ಅನುಮಾನವಿದೆ. ಇದು ಸ್ವಾಮಿಕಾರ್ಯ,ಕೌರವನ ಉಳಿವಿಗೆ ಅನಿವಾರ್ಯ ಎಂಬ ಮಾತನಾಡಿ ಕರ್ಣನನ್ನು ಭಾವನಾತ್ಮಕವಾಗಿ ಬಂಧಿಸುತ್ತಾನೆ.(.....ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು ರೂಪುದೋರದೆ ಬಂದು ಸುಭಟನ ಚಾಪವನು ಖಂಡಿಸುವುದಿದು ಕುರುಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ||ಪ-೨೯).
    
***
ದ್ರೋಣ ಅಪರಭಾಗದಿಂದ ಬಂದು ಬಿಲ್ಲನ್ನು ಖಂಡಿಸಲು ಕರ್ಣನನ್ನು ಆಯಲು ಈ ಕಾರಣಗಳು ಇವೆ ಎಂದು ಊಹಿಸಬಹುದು.
೧] ಕ್ಷತ್ರಿಯ ಶಲ್ಯ ಮತ್ತು ಬ್ರಾಹ್ಮಣ ಕೃಪ ದ್ರೋಣರ ಸಲಹೆಯನ್ನು ಅನೀತಿ ಎಂದು ತಿರಸ್ಕರಿಸಬಹುದು. ಉಚ್ಚಕುಲದ ಅವರಿಗೆ ನೀತಿಯಲ್ಲದ ಕೆಲಸ ಸೂಚಿಸುವುದು ಸರಿಯಲ್ಲ.  ಮತ್ತು ಅವರು ಯಾರೂ ಮನಃಪೂರ್ವಕವಾಗಿ ದುರ್ಯೋಧನನ ಪಕ್ಷದಲ್ಲಿ ಇದ್ದವರಲ್ಲ.
೨] ಸ್ವಾಮಿನಿಷ್ಠೆ ಮತ್ತು ಕೌರವನ ಉಳಿವಿನ ಬಗ್ಗೆ ಕರ್ಣನಿಗೆ ಇರುವ ಭಾವನೆ ಉಳಿದವರಿಗೆ ಇಲ್ಲ.ಅವರಿಗೆ ಇರುವುದು ಋಣಪ್ರಜ್ಞೆ ಮಾತ್ರ.ಹಾಗಾಗಿ ನಾವು ಯುದ್ಧ ಮಾಡುತ್ತೇವೆ,ಆದರೆ ನೀತಿ ರಹಿತವಾಗಿ ಅಲ್ಲ ಎಂದು ಅವರು ಹೇಳಿದರೆ ಅದನ್ನು ತಪ್ಪು ಅನ್ನುವಂತಿಲ್ಲ.ಅದಲ್ಲದೆ ಅವರನ್ನು ಸ್ವಾಮಿನಿಷ್ಠತೆಯ ಹೆಸರಲ್ಲಿ ಪ್ರೇರೇಪಿಸಲು ಆಗುವುದಿಲ್ಲ.
೩] ಕರ್ಣನ ಜಾತಿಯ ಹಿನ್ನೆಲೆಯೂ ದ್ರೋಣರ ಮನಸ್ಸಲ್ಲಿ ಇತ್ತೇ?ತಾವು ಮತ್ತು ಕೃಪ ಬ್ರಾಹ್ಮಣರು,ಶಲ್ಯ ಕ್ಷತ್ರಿಯ.ತಾವು ಅನೀತಿಯ ಮಾರ್ಗ ಅವಲಂಬಿಸುವುದು ತಪ್ಪು,ಆದರೆ ಸೂತಕುಲಜನಾದ ಕರ್ಣ ಹಾಗೆ ಮಾಡುವುದು ತಪ್ಪಲ್ಲ ಎಂಬ ಭಾವನೆಯೂ ಇರಬಹುದು.
೪] ಹಿಂದಿನಿಂದ ಬಿಲ್ಲನ್ನು ಕಾತರಿಸುವುದೂ ಕೂಡ ಸಾಮಾನ್ಯ ಯೋಧರಿಗೆ ಅಸಾಧ್ಯವಾದುದರಿಂದ ದ್ರೋಣರು ಕರ್ಣನನ್ನು ಆಯ್ಕೆ ಮಾಡಿದರು ಎಂಬ ಮಾತೂ ಇದೆ. ಇದನ್ನು ಒಪ್ಪುವುದು ಕಷ್ಟ.ಕೃಪ,ಶಲ್ಯರು ಮಹಾ ಯೋಧರೇ.ಸ್ವತಃ ದ್ರೋಣರೂ ಮಹಾ ಯೋಧರೇ. ಹಾಗಿರುವಾಗ ಕರ್ಣನ್ನು ಆಯ್ಕೆ ಮಾಡಲು ಅವನ ಕುಲವೇ ಕಾರಣವಾಗಿರಬಹುದು ಎಂಬುದು ಹೆಚ್ಚು ಸಹಜವಾಗಿದೆ.
***
ಕರ್ಣ ಹಿಂಜರಿಯುತ್ತಾನೆ. ಅವನು ಬಿಲ್ಲನ್ನು ಖಂಡಿಸುತ್ತಾನೆ ಎಂಬ ಭರವಸೆಯಿಂದ ಎದುರಾದ ಶಲ್ಯ,ಕೃಪರು ಮತ್ತೆ ಪೆಟ್ಟು ತಿಂದು ಕರ್ಣನನ್ನು ದೂಷಿಸುತ್ತಾರೆ. ಕರ್ಣನ ದ್ವಂದ್ವ ಮನಸ್ಥಿತಿ ಹಿಂಜರಿಕೆಗೆ ಕಾರಣ. ಅಭಿಮನ್ಯು ತನ್ನ ಮಗನ ಸಮಾನ ಎಂಬ ಭಾವ ಇದೆ.ಹಾಗಂತ ಈತನನ್ನು ಕೊಲ್ಲದಿದ್ದರೆ ಒಡೆಯ ಕೌರವನಿಗೆ ಉಳಿವಿಲ್ಲ.ಹಿಂದಿನಿಂದ ಬಿಲ್ಲನ್ನು ಕತ್ತರಿಸುವ ಅನೀತಿಗೆ ಕರ್ಣನ ಮನಸ್ಸು ಇಲ್ಲಿ ಅಳುಕುತ್ತಿಲ್ಲ, ಮಗ ಎಂಬ ಮಮಕಾರ ಬಲಿತರೆ ಕೌರವ ಉಳಿಯಲಾರ ಎಂಬ ಬೌದ್ಧಿಕ ತಿಳಿವಳಿಕೆಯೇ ಭಾವಕ್ಕಿಂತ ಪ್ರಬಲವಾಗಿ ಆತ ಅಪರಭಾಗದಿಂದ ಬಿಲ್ಲನ್ನು ಕತ್ತರಿಸುತ್ತಾನೆ. ಮಗನ ಉಳಿವಿಗಿಂತ ಮಿತ್ರನ ಉಳಿವಿಗೆ ಮನಸ್ಸು ಮಾಡುತ್ತಾನೆ.ಅಭಿಮನ್ಯು ಅವನನ್ನು ವ್ಯಂಗ್ಯವಾಗಿ ಚುಚ್ಚುತ್ತಾನೆ.(ಆವ ಶರಸಂಧಾನ ಲಾಘವದಾವ ಪರಿ......ಸಂ-೬,ಪ-೩೪)
ಅಭಿಮನ್ಯು ಖಡ್ಗದಿಂದ ಯುದ್ಧ ಶುರುಮಾಡುತ್ತಾನೆ.ಕರ್ಣ ಆಗ ಅವನ ಕರವೆರಡನ್ನು ಕತ್ತರಿಸುತ್ತಾನೆ. ಮೊಂಡುಕೈಯಿಂದ ಚಕ್ರವನ್ನು ಹಿಡಿದು ಅಭಿಮನ್ಯು ಯುದ್ಧವನ್ನು ಮುಂದುವರಿಸುತ್ತಾನೆ.ದುಶ್ಯಾಸನನ ಮಗ ಎದುರಾಗುತ್ತಾನೆ.ಇಬ್ಬರೂ ಯುದ್ಧದಲ್ಲಿ ಮಡಿಯುತ್ತಾರೆ.
ನೀತಿಯುದ್ಧದ ನಿಯಮ ಇಲ್ಲಿ ಮೀರಿದಂತೆ ಕುಮಾರವ್ಯಾಸ ಚಿತ್ರಿಸಿದ್ದಾನೆ.ಆರುಜನ ರಥಿಕರು ಒಬ್ಬನ ಬಳಿ ಯುದ್ಧ ಮಾಡುವುದು,ಕರ್ಣ ಹಿಂದಿನಿಂದ ಬಾಣ ಬಿಡುವುದು ಇವು ನಿಯಮಗಳಲ್ಲ.ಅಭಿಮನ್ಯುವಿನ ವೀರತ್ವವನ್ನು ಅತಿಕರಿಸುವ ಉತ್ಸಾಹದಲ್ಲಿ ಕುಮಾರವ್ಯಾಸ ಕರ್ಣನ ಘನತೆಯನ್ನು ಕುಗ್ಗಿಸಿದ್ದಾನೆ. ಈ ಮಾತು ವ್ಯಾಸರು ಚಿತ್ರಿಸಿದ ರೀತಿಯನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ.
***
***
ಕುಮಾರವ್ಯಾಸ ಅಭಿಮನ್ಯುವಿನ ವೀರತ್ವ ಚಿತ್ರಿಸುತ್ತಾನೆ,ಅವನ ವಿವೇಕವನ್ನು ಚಿತ್ರಿಸಿಲ್ಲ. ಅವನ ವೀರತ್ವ ಚಿತ್ರಿಸುವಾಗ ತನ್ನನ್ನು ತಾನೇ ಮರೆತಂತೆ ತೋರುತ್ತದೆ.ವ್ಯಾಸರು ಆ ರೀತಿಯಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ.ಅವರ ಅಭಿಮನ್ಯು ವೀರ ಮತ್ತು ವಿವೇಕಿ.ವ್ಯಾಸರಲ್ಲಿ ಅಭಿಮನ್ಯುವಿನ ಸಾವಲ್ಲಿ ಧರ್ಮರಾಯ ಮತ್ತು ಭೀಮರ ಪಾಲೂ ಇದೆ. ಕುಮಾರವ್ಯಾಸನಲ್ಲಿ ಅಭಿಮನ್ಯು ತನ್ನ ಸಾವಿಗೆ ತಾನೇ ಜವಾಬ್ದಾರ.
***
ಇಲ್ಲಿ ವ್ಯಾಸರ ಚಿತ್ರಣವನ್ನು ವಿವರಿಸಲು ಭಾರತ ದರ್ಶನ ಮುದ್ರಣಾಲಯದವರ ಅನುವಾದವನ್ನು ಆಧರಿಸಲಾಗಿದೆ.
ದ್ರೋಣ ಪರ್ವ,೩೩ ನೆಯ ಅಧ್ಯಾಯದಿಂದ ೪೯ನೆಯ ಅಧ್ಯಾಯದವರೆಗೆ.

Wednesday, August 31, 2016

ಒಂದು ಪದ್ಯ.


ಕುಮಾರವ್ಯಾಸ ಮಹಾಕವಿ ರೂಪಕ ಚಕ್ರವರ್ತಿ.ರೂಪಕ,ಹೋಲಿಕೆಗಳ ಮೂಲಕ ಕಾವ್ಯವನ್ನು ಕಟ್ಟುವ ಅವನ ಸಾಮರ್ಥ್ಯ ಬೆರಗು ಹುಟ್ಟಿಸುತ್ತದೆ.ಕವಿಯೊಬ್ಬನ ಕಾವ್ಯಶಕ್ತಿಯನ್ನು ರೂಪಕ ನಿರ್ಮಾಣದಲ್ಲಿ ಮಾತ್ರ ಅಳೆಯದೆ ರೂಪಕರಹಿತವಾದ,ಹೋಲಿಕೆರಹಿತವಾದ ಚಿತ್ರಣಗಳಲ್ಲೂ ಗಮನಿಸಬೇಕು.ಅಲ್ಲಿ ಯಶಸ್ವಿಯಾಗುವ ಕವಿಯದು ನಿಜವಾದ ಸಾಧನೆ.
ಅಂತಹ ಒಂದು ಪದ್ಯದ ವಿಶ್ಲೇಷಣೆ ಈ ಲೇಖನದ ಆಶಯ.
ದ್ರೋಣ ಪರ್ವ,ಸಂಧಿ ೧೮,ಪದ್ಯ ೩೫
ಮುಂದೆಹೋಗುವತಿಬಳರು ಹಾರಿತು
ಹಿಂದಣವರನು ಹಿಂದೆ ನಿಲುವರು
ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ
ಅಂದು ಪಾರ್ಥನು ಕೃಷ್ಣಬಲದಲಿ
ನಿಂದನೇವೇಳುವೆನುನಿನ್ನವ
ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ
ದ್ರೋಣಪರ್ವದ ಕೊನೆಯ ದಿನದ ಯುದ್ಧದಲ್ಲಿ ಭೀಮಾರ್ಜುನಸಹಿತ ಪಾಂಡವಸೇನೆ ದ್ರೋಣರನ್ನು ಮುತ್ತಿದಾಗ, ದ್ರೋಣರು ಮಾಡಿದ ಯುದ್ಧದ ಪರಿಣಾಮ ಇಲ್ಲಿ ಚಿತ್ರಿತವಾಗಿದೆ.
ಮುಂದೆಹೋಗುವತಿಬಳರು ಹಾರಿತು ಹಿಂದಣವರನು:ಎಲ್ಲರಿಗಿಂತ ಮುಂದೆ ಇದ್ದ ಯೋಧರು ದ್ರೋಣರ ಬಾಣದ ಘಾತದಿಂದ ಪಾರಾಗಲು ಅವರ ಹಿಂದೆ ಬರುತ್ತಿದ್ದವರ ಹಿಂದೆ ಹಾರಿದರು. ಹಾರಿದರು ಎಂಬ ಪದಪ್ರಯೋಗವನ್ನು ಗಮನಿಸಬೇಕು.ಅವರು ನಡೆದು ಅಥವ ಓಡಿ ಹಿಂದಾಗಲಿಲ್ಲ.ಅದಕ್ಕೆ ಅವಕಾಶವಿರಲಿಲ್ಲ.ಆದ್ದರಿಂದ ಹಾರಿ ಹಿಂದೆ ನಿಂತರು.
ಹಿಂದೆ ನಿಲುವರು ಮುಂದಣವರಾಸೆಯಲಿ:ಇಲ್ಲಿಯವರೆಗೂ ಹಿಂದೆ ಇದ್ದವರು ಈಗ ನೋಡಿದರೆ ದ್ರೋಣರ ಎದುರೇ ಬಂದುಬಿಟ್ಟಿದ್ದಾರೆ.ಹಾಗೆ ಮುಂದಾದವರು ಭಯಪಟ್ಟು ತಾವು ಹಿಂದೆ ಹೋದರೆ ಉಳಿಯಬಹುದು ಎಂಬಾಸೆಯಿಂದ ತಮ್ಮ ಹಿಂದೆ ಇದ್ದವರ ಹಿಂದೆ ಹೋಗಿ ನಿಂತರು.
ನಿಂದುದು ಪಾರ್ಥಪರಿಯಂತ: ಹೀಗೆ ಹಿಂದೆ ಹಿಂದೆ ಹೋಗುತ್ತ ಪಾರ್ಥ ನಿಂತಲ್ಲಿಯವರೆಗೂ ಹೋಗಿ,ಅವನ ಹಿಂದೆ ನಿಂತರು.ಹೀಗೆ ಇಡೀ ಸೈನ್ಯ ಪಾರ್ಥನ ಹಿಂದೆ ಅವನ ರಕ್ಷಣೆಯನ್ನು ನಿರೀಕ್ಷಿಸಿ ನಿಂತಿತು.ಆದರೆ...
ಅಂದು ಪಾರ್ಥನು ಕೃಷ್ಣಬಲದಲಿ ನಿಂದನು: ಅವತ್ತು ಪಾರ್ಥನು ಕೃಷ್ಣನ ಬಲವಿರುವ ಕಾರಣದಿಂದ ಅಲ್ಲಿ ನಿಂತನು.ಪಾರ್ಥನೂ ಕೂಡ ದ್ರೋಣರರೆದುರು ನಿಂತಿದ್ದು ಕೃಷ್ಣನ ಬಲದಿಂದ.ಇಲ್ಲವಾದರೆ ಅವನಿಗೂ ನಿಲ್ಲಲು ಆಗುತ್ತಿರಲಿಲ್ಲ.
ಈ ಪದ್ಯದ ಸೂಕ್ಷ್ಮವಾದ ಧ್ವನಿಯನ್ನು ಗುರುತಿಸಬೇಕು.ಪಾಂಡವ ಸೇನೆಯ ಯೋಧರಿಗೆ ಅರ್ಜುನ ತಮಗೆ ಆಶ್ರಯ ನೀಡಬಲ್ಲವ ಎಂಬ ನಂಬಿಕೆ ಇದೆ. ಅದರೆ ಅರ್ಜುನನಿಗೆ ಆ ಶಕ್ತಿ ಇರುವುದು ಕೃಷ್ಣನ ಅಭಯ,ರಕ್ಷಣೆ ಇರುವುದರಿಂದ. ಶಸ್ತ್ರಧಾರಿಗಳಾದವರು ಶಸ್ತ್ರಧಾರಿಯಾದವನ ಎದುರು ನಿಲ್ಲಲಾರದೆ,ಶಸ್ತ್ರವನ್ನು ಹಿಡಿಯದವನ ರಕ್ಷಣೆಯಲ್ಲಿ ನಿಲ್ಲುತ್ತಿದ್ದಾರೆ ಎಂಬುದನ್ನು ಚಿತ್ರಿಸುವ ಮೂಲಕ,ಕುಮಾರವ್ಯಾಸ ಕೃಷ್ಣನ ಸಾಮರ್ಥ್ಯವನ್ನು,ಯುದ್ಧರಂಗದಲ್ಲಿ ನಡೆದ ಸಹಜವಾದ ಒಂದು ಕ್ರಿಯೆಯ ವರ್ಣನೆಯ ಮೂಲಕ ಧ್ವನಿಸುತ್ತಿದ್ದಾನೆ.ಜೊತೆಗೆ ದ್ರೋಣನ ಅವತ್ತಿನ ಶೌರ್ಯ, ಅರ್ಜುನನನ್ನೂ ಸೇರಿದಂತೆ ಪಾಂಡವಸೈನ್ಯದ ಭೀತಿ, ಮತ್ತು ಅರ್ಜುನ ಸಹಿತ ಪಾಂಡವಸೇನೆಗಿರುವ ಕೃಷ್ಣನ ರಕ್ಷಣೆ ಈ ಮೂರೂ ಅಂಶಗಳು ಇಲ್ಲಿ  ವ್ಯಕ್ತವಾಗಿವೆ.ಇಲ್ಲಿ ಕುಮಾರವ್ಯಾಸ ತನ್ನ ಪ್ರಬಲ ಅಸ್ತ್ರವಾದ ರೂಪಕವನ್ನು ಬಳಸಿಲ್ಲ ಎಂಬುದೂ ಗಮನಾರ್ಹ.ಒಂದೂ ರೂಪಕ ಬಳಸದೆ ಆತ ಹುಟ್ಟಿಸುವ ಧ್ವನಿಶಕ್ತಿ ಅಪೂರ್ವವಾದದ್ದು.  

Monday, August 15, 2016

ಸುಪ್ರತೀಕ.


ಸುಪ್ರತೀಕ ಗಜ ಯುದ್ಧಕ್ಕೈದಿದ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.ಆ ಸೊಗಸನ್ನು ಈ ಲೇಖನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.(ದ್ರೋಣ ಪರ್ವ,ಸಂಧಿ-೩)
ಸುಪ್ರತೀಕ ಎಂಬುದು ಭಗದತ್ತನ ಆನೆಯ ಹೆಸರು. ಭಗದತ್ತ ಪ್ರಾಗ್ಜ್ಯೋತಿಷಪುರದ ರಾಜ. ನರಕಾಸುರನ ಮಗ. ಮಹಾಭಾರತದ ಯುದ್ಧದಲ್ಲಿ ಈತ ಕೌರವನ ಪರವಾಗಿದ್ದ.
ಇವನ ಆನೆ ಹೇಗಿತ್ತು ಎಂಬ ಚಿತ್ರಣದೊಂದಿಗೆ ವಿವರಣೆಯನ್ನು ಶುರುಮಾಡಬಹುದು.
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಲ ಕುಲ
ದಿಗಿಭವೆಂಟೊಂದಾಯ್ತೋ ಕೈಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ|| (ದ್ರೋ.ಪ, ಸಂ೩, ಪ-೯)
ಯುದ್ಧಕ್ಕೆ ತಯಾರಾದ ಆನೆ ಹೇಗೆ ಕಾಣುತ್ತಿತ್ತು?
೧]ಜಗತ್ತಿನ ನಿದ್ರೆ ಅಂದರೆ ಪ್ರಳಯವಾಗಿ ಇನ್ನೂ ಯಾವುದೇ ಸೃಷ್ಟಿ ಆಗಿರದಿದ್ದ ಕಾಲ.ಅಂತಹ ಸಮಯದಲ್ಲಿ ದಂಡುಗಟ್ಟಿದ ಮೋಡಗಳಂತೆ.
೨] ಅಷ್ಟದಿಗ್ಗಜಗಳು ಒಂದಾದಂತೆ
(ಐರಾವತ,ಪುಂಡರೀಕ,ವಾಮನ,ಕುಮುದ,ಅಂಜನ,ಪುಷ್ಪದಂತ,ಸಾರ್ವಭೌಮ,ಸುಪ್ರತೀಕ.)
೩] ಆಕಾಶಕ್ಕೆ ಕೈ ಮತ್ತು ಕಾಲು ಹುಟ್ಟಿದಂತೆ.
ಇಲ್ಲಿ ಕುಮಾರವ್ಯಾಸನ ಹೋಲಿಕೆಯ ಶಕ್ತಿಯನ್ನು ಗಮನಿಸಬೇಕು.ಮೊದಲಿಗೆ ಮೋಡದ ಹೋಲಿಕೆ. ಆದರೆ ಮೋಡಕ್ಕೆ ನಿಖರವಾದ ಆಕಾರವಿಲ್ಲ.ಆದ್ದರಿಂದ ಮೋಡ ಮೂರ್ತವಾದ,ನಿಖರ ಆಕಾರವಿರುವ ಆನೆಯನ್ನು ಸಮೀಕರಿಸಲಾರದು ಎಂಬ ಕಾರಣದಿಂದ ಎಂಟು ಆನೆಗಳೂ ಸೇರಿದಂತೆ ಎಂಬ ಮತ್ತೊಂದು ಹೋಲಿಕೆ ಕೊಡುತ್ತಾನೆ. ಈ ಆನೆಗಳು ಒಗ್ಗೂಡಿದರೆ ಬರುವ ಗಾತ್ರ ಸುಪ್ರತೀಕ ಒಂದರಲ್ಲಿಯೇ ಇತ್ತು. ಆದರೆ ಸುಪ್ರತೀಕದ ಗಾತ್ರಕ್ಕೆ ಆ ಹೋಲಿಕೆಯೂ ಸಾಕಾಗದು ಅನಿಸಿ ಆಕಾಶಕ್ಕೆ ಕೈಕಾಲ್ ಮೂಡಿದೆ ಎಂದು ಹೇಳಿದ್ದಾನೆ. ಗಾತ್ರದಲ್ಲಿ ಆಕಾಶವನ್ನು ಮೀರಿಸುವ ಏನೂ ಇರಲು ಸಾಧ್ಯವಿಲ್ಲ.ಈ ಗಜ ಅಂತಹ ಗಾತ್ರವನ್ನು ಹೊಂದಿದೆ.
***ಜಲಪ್ರಳಯ ಕಾಲದ ಮೋಡಕ್ಕೆ ಹೋಲಿಸುವ ಮೂಲಕ ಈ ಗಜ ಮುಂದೆ ಯುದ್ಧದಲ್ಲಿ ಪ್ರಳಯಕಾಲದಲ್ಲಿ ಆಗುವ ನಾಶಕ್ಕೆ ಸಮನಾದುದನ್ನೂ ಮಾಡುತ್ತದೆ ಎಂಬುದೂ ಸೂಚಿತವಾಗುತ್ತದೆ.***
ಇದು ಆನೆಯ ಭೌತಿಕ ರೂಪದ ಚಿತ್ರಣ.ಇಲ್ಲಿ ಆನೆಯ ದೈಹಿಕ ಗಾತ್ರದ ಚಿತ್ರಣ ಮಾತ್ರ ಆಗಿದೆ.ಆದರೆ ಅದರ ಬಲ ಯಾವ ಪ್ರಮಾಣದ್ದು ಎಂಬುದು ಸೂಚಿತವಾಗಿಲ್ಲ.ಎಂಟು ಆನೆಗಳು ಸೇರಿದಂತೆ ಕಾಣುವುದು ಗಾತ್ರಕ್ಕೆ ಮಾತ್ರ ಹೋಲಿಕೆಯಲ್ಲ,ಬಲಕ್ಕೂ ಹೌದು ಎಂಬುದನ್ನು,ಎರಡನೆಯ ಭಾಗದಲ್ಲಿ, ಈ ಬಲ ಉಂಟುಮಾಡಿದ ಪರಿಣಾಮವನ್ನು ಚಿತ್ರಿಸುವ ಮೂಲಕ ವ್ಯಕ್ತಪಡಿಸಿದ್ದಾನೆ.ಪೂರ್ವ ದಿಕ್ಕಿನ ಕಾಲನ್ನು ನೆಲಕ್ಕಿಟ್ಟಾಗ ಅದರ ಪದಹತಿಗೆ ಭೂಮಿ ಪಶ್ಚಿಮದಿಕ್ಕಿನಲ್ಲಿ ಮೇಲೆದ್ದಿತು.(ತಕ್ಕಡಿಯನ್ನು ಕಲ್ಪಿಸಿಕೊಳ್ಳಬಹುದು).ಪಶ್ಚಿಮದಿಕ್ಕಿನ ಪಾದವನ್ನೂರಿದಾಗ ಪೂರ್ವ ದಿಕ್ಕಿನ ಭೂಮಿ ಮೇಲೆದ್ದಿತು.ಒಂದು ಹೆಜ್ಜೆಯನ್ನು ಸುಮ್ಮನೆ ಇಟ್ಟರೆ, ಈ ಆನೆಯನ್ನೂ ಸೇರಿದಂತೆ ಅಪಾರ ಚರಾಚರಗಳನ್ನು ಹೊತ್ತ ಭೂಮಿಯ ಮೇಲೆ ಈ ಪರಿಣಾಮ ಆಗಬೇಕಿದ್ದರೆ ಆ ಬಲ ಯಾವ ಮಟ್ಟದ್ದಿರಬಹುದು ಎಂದು ನಾವು ಊಹಿಸಬಹುದು.
ಇಂತಹ ಆನೆ ಯುದ್ಧಕ್ಕೆ ಹೊರಟಿತು. ಇದರ ಯುದ್ಧ ತುಂಬಾ ಭೀಕರ ವಾದದ್ದು.ಪಾಂಡವಸೇನೆಯಲ್ಲಿ ಯಾರಿಗೂ ಅದನ್ನು ನಿಯಂತ್ರಿಸಲು ಆಗುವುದಿಲ್ಲ.ಭೀಮ ತನ್ನ ಗದೆ ಹಿಡಿದು ಎದುರಾಗುತ್ತಾನೆ. ಆನೆ ಯುದ್ಧ ಮಾಡುವ ಪರಿಯ ವರ್ಣನೆ ನೋಡಿ.
“ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರ
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ || ದ್ರೋ.ಪ,ಸಂ ೩,ಪ-೧೭||
ಶತ್ರುಬಲವನ್ನು ಅರೆಯಿತು.ಸಾವಿನ ಒಡೆಯನಾದ ಯಮನನ್ನು ಸಾಕಿತು.(ಯಮನನ್ನು ಸಾಕುವುದು ಎಂದರೆ ಆತನಿಗೆ ಕೆಲಸ ನೀಡುವುದು.ಅಂದರೆ ಜನರನ್ನು ಕೊಂದು ಆತನ ಆಲಯಕ್ಕೆ ಕಳಿಸುವುದು.)ಮಹಾಸಂಹಾರದ ಮಂತ್ರವನ್ನು ಬರೆಯಿತು. ಯುದ್ಧಕ್ಕೆ ಬರಲು ಒಪ್ಪದ ವೀರರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯಿತು. ಪರಬಲದವರು ಬೆವರಿ ನೆನೆದರು. ಎದುರು ಬಂದ ವೀರರು ದಿಕ್ಕಾಪಾಲಾಗಿ ಓಡಿದರು.ದ್ರುಪದನು ಓಡಿಯೇ ಹೋದ.ಭೀಮ ಪಕ್ಕಕ್ಕೆ ಹಾರಿಕೊಂಡ.ಹಾಗೆ ಮಾಡಲಾಗದೆ ಅದಕ್ಕೆ ಸಿಕ್ಕಿದವರ ದೇಹ ಮತ್ತು ಉಸಿರಿನ ಸಂಬಂಧ ಅಳಿಯಿತು.(“ಹಿಡಿಹಿಡಿಯಲೋಡಿದನು ದ್ರುಪದನು ಸಿಡಿದು ಕೆಲಸಾರಿದನು ಪವನಜನೊಡಲುಸರ ಸಂಬಂಧವಳಿದುದು ಸಿಲುಕಿದನಿಬರಿಗೆ” ಪ-೨೫.)
ಮತ್ತೆ ಭೀಮ ಅದಕ್ಕೆದುರಾಗುತ್ತಾನೆ.ಆನೆಯ ಅಕ್ಕಪಕ್ಕ ,ಹಿಂದೆ ಮುಂದೆ ಸಂಚರಿಸುತ್ತ ಭೀಮ ಅದರ ಜತೆ ಕಾದುತ್ತಾನೆ.ಆಗ ಆನೆಯ ಪ್ರತಿಕ್ರಿಯೆಯ ವರ್ಣನೆ:
“ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡುಹಿಂಗೆ ಲಾಗಿಸುತಿರ್ದುದಾ ದಂತಿ ||ಪ-೩೭||
(ಬಲುಕಣಿ=ಬಲ್ಕಣಿ=ಮಹಾ ಪರಾಕ್ರಮಿ)
ಭೀಮ ಪಕ್ಕಕ್ಕೆ ಬಂದಾಗ ಅವನ ನೆರಳು ಕಂಡು ಅದರ ಅಧಾರದಲ್ಲಿ ಭೀಮ ಎಲ್ಲಿರಬಹುದೆಂದು ಊಹಿಸಿ ಅಪ್ಪಳಿಸುವುದು. ಭೀಮ ಸಿಕ್ಕಬಹುದು ಎಂಬಾಸೆಯಲ್ಲಿ ಸೊಂಡಿಲನ್ನು ತೂಗಾಡಿಸುವುದು.ಹಾಗೆ ಮಾಡಿ ಬಳಲುವುದು. ಮುಖವನ್ನೆತ್ತಿ ಭೀಮನ ಮಾತು ಆಲಿಸುವುದು. ತನಗೆ ಹಾಕಿರುವ ಆಭರಣಗಳನ್ನು ಅಲ್ಲಾಡಿಸದೆ,ಕಿವಿಯನ್ನು ಜೋಲಿಸಿ(ಭೀಮನ ಹಜ್ಜೆಯ ಸದ್ದು ಗ್ರಹಿಸಲು) ಮಹಾಪರಾಕ್ರಮಿಯಾದ ಭೀಮನನ್ನು ಹಿಡಿಯಲು ಯೋಜನೆ ರೂಪಿಸುವುದು.
ರುದ್ರಭೀಕರವಾಗಿ ಯುದ್ಧಪ್ರವೃತ್ತವಾದ ಆನೆಯನ್ನು ಗೆಲ್ಲಲು ಭೀಮನಿಗೂ ಆಗುವುದಿಲ್ಲ. ಪಾಂಡವಸೇನೆ ಪರಾಜಿತಗೊಳ್ಳುತ್ತಿರುವುದನ್ನು ಕಂಡ ಕೃಷ್ಣನು ಅರ್ಜುನನನ್ನು ಭಗದತ್ತನೆದುರು ಕರೆತರುತ್ತಾನೆ.ಭೀಮನ ಯುದ್ಧ ಆನೆಯ ಜೊತೆಯಾದರೆ ಅರ್ಜುನ ಆನೆಯ ಮೇಲೆ ಕುಳಿತಿದ್ದ ಭಗದತ್ತನ ಜೊತೆ ಯುದ್ಧಕ್ಕಿಳಿಯುತ್ತಾನೆ.ಅವರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕಡೆಗೆ ಭಗದತ್ತ, “ಕುಡಿ ಕಿರೀಟಿಯ ರಕುತವನು ಹಗೆ ಕೆಡಲಿ ಕೌರವನಾಳಲಿ ಪೊಡವಿಯನು” ಎಂದು ಘೋಷಿಸಿ ವೈಷ್ಣವಾಸ್ತ್ರವನ್ನು ಪ್ರಯೋಗಿಸುತ್ತಾನೆ.
ಆ ಅಸ್ತ್ರ ಹೇಗಿತ್ತು? “ದಿನಪಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ...(ಪ-೫೫), “ಕಾಳೋರಗನ ಕುಡಿನಾಲಗೆ...(ಪ-೫೬),
ಆಗ ಕೃಷ್ಣನು ಆ ಅಸ್ತ್ರ ಮತ್ತು ಅರ್ಜುನನ ನಡುವೆ ನಿಂತು ತನ್ನ ಎದೆಯೊಡ್ಡಿ ಅಸ್ತ್ರವನ್ನು ಸ್ವೀಕರಿಸುತ್ತಾನೆ. ಅಸ್ತ್ರ “ಕೌಸ್ತುಭದ ಮಣಿ ಮರಿಯನಿಳುಹಿದವೊಲು” ಕೃಷ್ಣನ ಕೊರಳಲ್ಲಿ ತೂಗಾಡುತ್ತದೆ.
ಇಲ್ಲಿಗೆ ಸುಖಾಂತ್ಯವಾಗಬೇಕಿತ್ತು.ಆದರೆ  ಘಟನೆಗಳು ವ್ಯಕ್ತಿಗಳನ್ನು ಪ್ರಚೋದಿಸುವ ಸಾಧ್ಯತೆಗಳು ಅನಂತ.
ಅಂತಹ ಒಂದು ವಿಕ್ಷಿಪ್ತವಾದ ಘಟನೆ ನಡೆಯುತ್ತದೆ.
“ಕೌತುಕವನಿದಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ||(ಸಂ ೩,ಪ-೬೨)
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾ ಎನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ ||ಪ-೬೪||
ಮಹಾಸ್ತ್ರ ಕೌಸ್ತುಭಮಣಿಯ ಮರಿಯಂತೆ ಕೃಷ್ಣನ ಕೊರಳಲ್ಲಿ ಶೋಭಿತವಾದ ಕೌತುಕ ಕಂಡರೂ ಅರ್ಜುನನಿಗೆ ಕೃಷ್ಣ ಹಾಗೆ ಯಾಕೆ ಮಾಡಿದ,ಆ ಅಸ್ತ್ರದ ಶಕ್ತಿ ಎಂಥದು ಎಂಬುದು ಅರ್ಥವಾಗಲಿಲ್ಲ.ಆತನಿಗೆ ದುಗುಡವಾಯಿತು.ಆತ ಯೋಚಿಸಿದ್ದು ಕೃಷ್ಣನಿಗೆ ಸಾರಥಿತನದ ಬಗ್ಗೆ ಆಲಸ್ಯವಾಯಿತೇ ಎಂದು. ಸಾರಥಿಯಾಗಿ ಮಾತ್ರ ನಾನು ಭಾಗವಹಿಸುವೆ ಎಂದ ಕೃಷ್ಣ ಹೀಗೆ ಮಾಡುವುದಾದರೆ ಕೌರವನ ಬಳಿ ಅವನೇ ಯುದ್ಧ ಮಾಡಲಿ, ತಾನವನ ಸಾರಥಿಯಾಗುತ್ತೇನೆ ಎಂದು ಅರ್ಜುನ ಧನುವನ್ನು ಬಿಸಾಡುತ್ತಾನೆ.ನಾನಿನ್ನು ಯುದ್ಧ ಮಾಡುವವನಲ್ಲ,ನೀನೇ ಆಯುಧ ಹಿಡಿ,ತನಗೆ ವಾಘೆಯನ್ನು ಕೊಡು ಎಂದು ಅರ್ಜುನ ಹೇಳುತ್ತಾನೆ.
ಅರ್ಜುನನ ಈ ಪ್ರತಿಕ್ರಿಯೆ ಕುತೂಹಲಕಾರಿಯಾದದ್ದು.ಅವನಿಗೆ ಕೃಷ್ಣನ ಈ ವರ್ತನೆ ಹಿಡಿಸಿಲ್ಲ ಎಂಬುದು ಮೊದಲನೆಯದು. ಹಿಡಿಸದಿರುವ ಕಾರಣ ತನ್ನ ಶೌರ್ಯದ ಬಗ್ಗೆ ಕೃಷ್ಣನಿಗೆ ಅನುಮಾನವಿದೆ ಮತ್ತು ಅವನ ಈ ವರ್ತನೆ ತನಗೆ ಅವಮಾನಕಾರಿಯಾದದ್ದು ಎಂಬ ಭಾವನೆ.(...ವೈರಿಯ ಕೈದುವನು ನೀ ಗೆಲಿದೆಯಿನ್ನುರೆ ಕಾದುವವರಾವಲ್ಲ.....)
ಅರ್ಜುನನ ಸ್ವಾಭಿಮಾನ, ಕೃಷ್ಣ ಹೀಗೆ ಮಾಡಲು ಏನೋ ಕಾರಣವಿರಬೇಕು ಎಂಬುದನ್ನು ಊಹಿಸಲಾರದಷ್ಟು ಪ್ರಬಲವಾಗಿ ಅಹಂಕಾರರೂಪಿಯಾಗಿತ್ತು ಎಂಬುದು ಎರಡನೆಯದು.(ಈ ಯುದ್ಧದಲ್ಲಿ ಕೃಷ್ಣ ತಾನೇ ನೇರವಾಗಿ ಅಸ್ತ್ರದೆದುರು ನಿಂತ ಸಂದರ್ಭ ಇದೊಂದೇ.ಬೇರೆ ಎಲ್ಲ ಸನ್ನಿವೇಶಗಳಲ್ಲೂ ತಂತ್ರ ಮಾಡಿ ಸಮಸ್ಯೆಯನ್ನು ಪರಿಹರಿಸಿದ್ದಾನೆಯೇ ಹೊರತು ನೇರವಾಗಿ ಭಾಗಿಯಾಗಿ ಅಲ್ಲ.ಉದಾಹರಣೆಗೆ ಜಯದ್ರಥ ವಧೆ,ದ್ರೋಣವಧೆ,ಸರ್ಪಾಸ್ತ್ರ ಪ್ರಸಂಗ ಇತ್ಯಾದಿಗಳನ್ನು ಗಮನಿಸಬಹುದು.)
ಆಗ ಕೃಷ್ಣ ಆ ಅಸ್ತ್ರದ ಶಕ್ತಿಯನ್ನು ಅವನಿಗೆ ವಿವರಿಸುತ್ತಾನೆ.ತಾನಲ್ಲದೆ ಬೇರೆ ಯಾರಿಗೂ ಆ ಅಸ್ತ್ರವನ್ನು ನಿಷೇಧಿಸಲು ಆಗದು,ಆ ಕಾರಣದಿಂದ ತಾನು ಹಾಗೆ ಮಾಡಿದ್ದು ಎಂಬ ಅವನ ವಿವರಣೆ ಅರ್ಜುನನಿಗೆ ಸಮಾಧಾನ ನೀಡುತ್ತದೆ.
ಈ ಚಿತ್ರಣ ಆನೆಯ ಯುದ್ಧದ ವೈಖರಿಯ ಚಿತ್ರಣ ಮಾತ್ರವಾಗದೆ, ಮನುಷ್ಯನ ಅಭಿಮಾನ ಅವನ ವಿವೇಕವನ್ನು ಕ್ಷಣಿಕ ಕಾಲವಾದರೂ ಕುಂಠಿತಗೊಳಿಸಬಹುದು ಎಂಬುದರ ಸೂಚಕವಾಗಿದೆ.
***
ಈ ಪ್ರಸಂಗದಲ್ಲಿ ಕುಮಾರವ್ಯಾಸನ ಕಾವ್ಯಶಕ್ತಿ ಪ್ರಕಟವಾದ ಕೆಲವು ಸಾಲುಗಳು:
೧] ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದವು-ಪ ೨೬
೨] ಹಾವಿನ ಕೊಡನು ದೋಷಿಗೆ ಸುಲಭವೇ-- ಪ ೨೮
೩] ಬೆತ್ತ ಬೆಳದದ್ರಿಯವೊಲಿದ್ದುದು ಮತ್ತಗಜ—ಪ ೩೯
೪] ಸದರವೇ ಉರಿಗೆಂಡವೊರಲೆಯ ಬಾಯ್ಗೆ—ಪ ೬೦
೫] ಚಾಪದ ನಾರಿ ಬೆಸಲಾಗಲಿ—ಪ ೭೩
೬] ಅಪರಜಲಧಿಯೊಳುರಿವ ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗ ಮಂಡಲವಿಳಿದುದಂಬರವ—ಪ ೮೦