Monday, August 15, 2016

ಸುಪ್ರತೀಕ.


ಸುಪ್ರತೀಕ ಗಜ ಯುದ್ಧಕ್ಕೈದಿದ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.ಆ ಸೊಗಸನ್ನು ಈ ಲೇಖನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.(ದ್ರೋಣ ಪರ್ವ,ಸಂಧಿ-೩)
ಸುಪ್ರತೀಕ ಎಂಬುದು ಭಗದತ್ತನ ಆನೆಯ ಹೆಸರು. ಭಗದತ್ತ ಪ್ರಾಗ್ಜ್ಯೋತಿಷಪುರದ ರಾಜ. ನರಕಾಸುರನ ಮಗ. ಮಹಾಭಾರತದ ಯುದ್ಧದಲ್ಲಿ ಈತ ಕೌರವನ ಪರವಾಗಿದ್ದ.
ಇವನ ಆನೆ ಹೇಗಿತ್ತು ಎಂಬ ಚಿತ್ರಣದೊಂದಿಗೆ ವಿವರಣೆಯನ್ನು ಶುರುಮಾಡಬಹುದು.
ಜಗದ ನಿಡುನಿದ್ರೆಯಲಿ ಮೋಹರ
ದೆಗೆದ ಮುಗಿಲೋ ಮೇಣಖಿಲ ಕುಲ
ದಿಗಿಭವೆಂಟೊಂದಾಯ್ತೋ ಕೈಕಾಲ್ ಮೂಡಿತೋ ನಭಕೆ
ಅಗಿದು ಮೆಟ್ಟಿದಡವನಿ ಪಡುವಲು
ನೆಗೆದುದಡರಿದು ಮುಂದೆ ಮೆಟ್ಟಲು
ಚಿಗಿದುದಿಳೆ ಮೂಡಲು ಮಹಾಗಜವೈದಿತಾಹವವ|| (ದ್ರೋ.ಪ, ಸಂ೩, ಪ-೯)
ಯುದ್ಧಕ್ಕೆ ತಯಾರಾದ ಆನೆ ಹೇಗೆ ಕಾಣುತ್ತಿತ್ತು?
೧]ಜಗತ್ತಿನ ನಿದ್ರೆ ಅಂದರೆ ಪ್ರಳಯವಾಗಿ ಇನ್ನೂ ಯಾವುದೇ ಸೃಷ್ಟಿ ಆಗಿರದಿದ್ದ ಕಾಲ.ಅಂತಹ ಸಮಯದಲ್ಲಿ ದಂಡುಗಟ್ಟಿದ ಮೋಡಗಳಂತೆ.
೨] ಅಷ್ಟದಿಗ್ಗಜಗಳು ಒಂದಾದಂತೆ
(ಐರಾವತ,ಪುಂಡರೀಕ,ವಾಮನ,ಕುಮುದ,ಅಂಜನ,ಪುಷ್ಪದಂತ,ಸಾರ್ವಭೌಮ,ಸುಪ್ರತೀಕ.)
೩] ಆಕಾಶಕ್ಕೆ ಕೈ ಮತ್ತು ಕಾಲು ಹುಟ್ಟಿದಂತೆ.
ಇಲ್ಲಿ ಕುಮಾರವ್ಯಾಸನ ಹೋಲಿಕೆಯ ಶಕ್ತಿಯನ್ನು ಗಮನಿಸಬೇಕು.ಮೊದಲಿಗೆ ಮೋಡದ ಹೋಲಿಕೆ. ಆದರೆ ಮೋಡಕ್ಕೆ ನಿಖರವಾದ ಆಕಾರವಿಲ್ಲ.ಆದ್ದರಿಂದ ಮೋಡ ಮೂರ್ತವಾದ,ನಿಖರ ಆಕಾರವಿರುವ ಆನೆಯನ್ನು ಸಮೀಕರಿಸಲಾರದು ಎಂಬ ಕಾರಣದಿಂದ ಎಂಟು ಆನೆಗಳೂ ಸೇರಿದಂತೆ ಎಂಬ ಮತ್ತೊಂದು ಹೋಲಿಕೆ ಕೊಡುತ್ತಾನೆ. ಈ ಆನೆಗಳು ಒಗ್ಗೂಡಿದರೆ ಬರುವ ಗಾತ್ರ ಸುಪ್ರತೀಕ ಒಂದರಲ್ಲಿಯೇ ಇತ್ತು. ಆದರೆ ಸುಪ್ರತೀಕದ ಗಾತ್ರಕ್ಕೆ ಆ ಹೋಲಿಕೆಯೂ ಸಾಕಾಗದು ಅನಿಸಿ ಆಕಾಶಕ್ಕೆ ಕೈಕಾಲ್ ಮೂಡಿದೆ ಎಂದು ಹೇಳಿದ್ದಾನೆ. ಗಾತ್ರದಲ್ಲಿ ಆಕಾಶವನ್ನು ಮೀರಿಸುವ ಏನೂ ಇರಲು ಸಾಧ್ಯವಿಲ್ಲ.ಈ ಗಜ ಅಂತಹ ಗಾತ್ರವನ್ನು ಹೊಂದಿದೆ.
***ಜಲಪ್ರಳಯ ಕಾಲದ ಮೋಡಕ್ಕೆ ಹೋಲಿಸುವ ಮೂಲಕ ಈ ಗಜ ಮುಂದೆ ಯುದ್ಧದಲ್ಲಿ ಪ್ರಳಯಕಾಲದಲ್ಲಿ ಆಗುವ ನಾಶಕ್ಕೆ ಸಮನಾದುದನ್ನೂ ಮಾಡುತ್ತದೆ ಎಂಬುದೂ ಸೂಚಿತವಾಗುತ್ತದೆ.***
ಇದು ಆನೆಯ ಭೌತಿಕ ರೂಪದ ಚಿತ್ರಣ.ಇಲ್ಲಿ ಆನೆಯ ದೈಹಿಕ ಗಾತ್ರದ ಚಿತ್ರಣ ಮಾತ್ರ ಆಗಿದೆ.ಆದರೆ ಅದರ ಬಲ ಯಾವ ಪ್ರಮಾಣದ್ದು ಎಂಬುದು ಸೂಚಿತವಾಗಿಲ್ಲ.ಎಂಟು ಆನೆಗಳು ಸೇರಿದಂತೆ ಕಾಣುವುದು ಗಾತ್ರಕ್ಕೆ ಮಾತ್ರ ಹೋಲಿಕೆಯಲ್ಲ,ಬಲಕ್ಕೂ ಹೌದು ಎಂಬುದನ್ನು,ಎರಡನೆಯ ಭಾಗದಲ್ಲಿ, ಈ ಬಲ ಉಂಟುಮಾಡಿದ ಪರಿಣಾಮವನ್ನು ಚಿತ್ರಿಸುವ ಮೂಲಕ ವ್ಯಕ್ತಪಡಿಸಿದ್ದಾನೆ.ಪೂರ್ವ ದಿಕ್ಕಿನ ಕಾಲನ್ನು ನೆಲಕ್ಕಿಟ್ಟಾಗ ಅದರ ಪದಹತಿಗೆ ಭೂಮಿ ಪಶ್ಚಿಮದಿಕ್ಕಿನಲ್ಲಿ ಮೇಲೆದ್ದಿತು.(ತಕ್ಕಡಿಯನ್ನು ಕಲ್ಪಿಸಿಕೊಳ್ಳಬಹುದು).ಪಶ್ಚಿಮದಿಕ್ಕಿನ ಪಾದವನ್ನೂರಿದಾಗ ಪೂರ್ವ ದಿಕ್ಕಿನ ಭೂಮಿ ಮೇಲೆದ್ದಿತು.ಒಂದು ಹೆಜ್ಜೆಯನ್ನು ಸುಮ್ಮನೆ ಇಟ್ಟರೆ, ಈ ಆನೆಯನ್ನೂ ಸೇರಿದಂತೆ ಅಪಾರ ಚರಾಚರಗಳನ್ನು ಹೊತ್ತ ಭೂಮಿಯ ಮೇಲೆ ಈ ಪರಿಣಾಮ ಆಗಬೇಕಿದ್ದರೆ ಆ ಬಲ ಯಾವ ಮಟ್ಟದ್ದಿರಬಹುದು ಎಂದು ನಾವು ಊಹಿಸಬಹುದು.
ಇಂತಹ ಆನೆ ಯುದ್ಧಕ್ಕೆ ಹೊರಟಿತು. ಇದರ ಯುದ್ಧ ತುಂಬಾ ಭೀಕರ ವಾದದ್ದು.ಪಾಂಡವಸೇನೆಯಲ್ಲಿ ಯಾರಿಗೂ ಅದನ್ನು ನಿಯಂತ್ರಿಸಲು ಆಗುವುದಿಲ್ಲ.ಭೀಮ ತನ್ನ ಗದೆ ಹಿಡಿದು ಎದುರಾಗುತ್ತಾನೆ. ಆನೆ ಯುದ್ಧ ಮಾಡುವ ಪರಿಯ ವರ್ಣನೆ ನೋಡಿ.
“ಅರೆದುದೋ ಪರಬಲವ ಕಾಲನ
ಹೊರೆದುದೋ ಮಾರಣದ ಮಂತ್ರವ
ಬರೆದುದೋ ಬವರಕ್ಕೆ ಬಲುಗೈಗಳನು ಕೈ ನೆಗಹಿ
ಕರೆದುದೋ ಬಲವೆಲ್ಲ ನೀರಲಿ
ನೆರೆದುದೋ ಮಾರ್ಬಲದ ವೀರರ
ಹರೆದುದೋ ಹವಣಿಲ್ಲ ದಂತಿಯ ಸಮರಸೌರಂಭ || ದ್ರೋ.ಪ,ಸಂ ೩,ಪ-೧೭||
ಶತ್ರುಬಲವನ್ನು ಅರೆಯಿತು.ಸಾವಿನ ಒಡೆಯನಾದ ಯಮನನ್ನು ಸಾಕಿತು.(ಯಮನನ್ನು ಸಾಕುವುದು ಎಂದರೆ ಆತನಿಗೆ ಕೆಲಸ ನೀಡುವುದು.ಅಂದರೆ ಜನರನ್ನು ಕೊಂದು ಆತನ ಆಲಯಕ್ಕೆ ಕಳಿಸುವುದು.)ಮಹಾಸಂಹಾರದ ಮಂತ್ರವನ್ನು ಬರೆಯಿತು. ಯುದ್ಧಕ್ಕೆ ಬರಲು ಒಪ್ಪದ ವೀರರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯಿತು. ಪರಬಲದವರು ಬೆವರಿ ನೆನೆದರು. ಎದುರು ಬಂದ ವೀರರು ದಿಕ್ಕಾಪಾಲಾಗಿ ಓಡಿದರು.ದ್ರುಪದನು ಓಡಿಯೇ ಹೋದ.ಭೀಮ ಪಕ್ಕಕ್ಕೆ ಹಾರಿಕೊಂಡ.ಹಾಗೆ ಮಾಡಲಾಗದೆ ಅದಕ್ಕೆ ಸಿಕ್ಕಿದವರ ದೇಹ ಮತ್ತು ಉಸಿರಿನ ಸಂಬಂಧ ಅಳಿಯಿತು.(“ಹಿಡಿಹಿಡಿಯಲೋಡಿದನು ದ್ರುಪದನು ಸಿಡಿದು ಕೆಲಸಾರಿದನು ಪವನಜನೊಡಲುಸರ ಸಂಬಂಧವಳಿದುದು ಸಿಲುಕಿದನಿಬರಿಗೆ” ಪ-೨೫.)
ಮತ್ತೆ ಭೀಮ ಅದಕ್ಕೆದುರಾಗುತ್ತಾನೆ.ಆನೆಯ ಅಕ್ಕಪಕ್ಕ ,ಹಿಂದೆ ಮುಂದೆ ಸಂಚರಿಸುತ್ತ ಭೀಮ ಅದರ ಜತೆ ಕಾದುತ್ತಾನೆ.ಆಗ ಆನೆಯ ಪ್ರತಿಕ್ರಿಯೆಯ ವರ್ಣನೆ:
“ನೆಳಲುಗಂಡವ್ವಳಿಸುವುದು ಸುಂ
ಡಿಲನು ತೂಗಾಡುವುದು ಹೋರಿದು
ಬಳಲುವುದು ಮೊಗನೆಗಹಿ ಭೀಮನ ದನಿಯನಾಲಿಪುದು
ಅಳಿಯ ಮುತ್ತಿಗೆಗಳನು ಬೀಸದೆ
ನೆಲಕೆ ಕಿವಿಯನು ಜೋಲುಬಿಡುವುದು
ಬಲುಕಣಿಯ ಹಿಡುಹಿಂಗೆ ಲಾಗಿಸುತಿರ್ದುದಾ ದಂತಿ ||ಪ-೩೭||
(ಬಲುಕಣಿ=ಬಲ್ಕಣಿ=ಮಹಾ ಪರಾಕ್ರಮಿ)
ಭೀಮ ಪಕ್ಕಕ್ಕೆ ಬಂದಾಗ ಅವನ ನೆರಳು ಕಂಡು ಅದರ ಅಧಾರದಲ್ಲಿ ಭೀಮ ಎಲ್ಲಿರಬಹುದೆಂದು ಊಹಿಸಿ ಅಪ್ಪಳಿಸುವುದು. ಭೀಮ ಸಿಕ್ಕಬಹುದು ಎಂಬಾಸೆಯಲ್ಲಿ ಸೊಂಡಿಲನ್ನು ತೂಗಾಡಿಸುವುದು.ಹಾಗೆ ಮಾಡಿ ಬಳಲುವುದು. ಮುಖವನ್ನೆತ್ತಿ ಭೀಮನ ಮಾತು ಆಲಿಸುವುದು. ತನಗೆ ಹಾಕಿರುವ ಆಭರಣಗಳನ್ನು ಅಲ್ಲಾಡಿಸದೆ,ಕಿವಿಯನ್ನು ಜೋಲಿಸಿ(ಭೀಮನ ಹಜ್ಜೆಯ ಸದ್ದು ಗ್ರಹಿಸಲು) ಮಹಾಪರಾಕ್ರಮಿಯಾದ ಭೀಮನನ್ನು ಹಿಡಿಯಲು ಯೋಜನೆ ರೂಪಿಸುವುದು.
ರುದ್ರಭೀಕರವಾಗಿ ಯುದ್ಧಪ್ರವೃತ್ತವಾದ ಆನೆಯನ್ನು ಗೆಲ್ಲಲು ಭೀಮನಿಗೂ ಆಗುವುದಿಲ್ಲ. ಪಾಂಡವಸೇನೆ ಪರಾಜಿತಗೊಳ್ಳುತ್ತಿರುವುದನ್ನು ಕಂಡ ಕೃಷ್ಣನು ಅರ್ಜುನನನ್ನು ಭಗದತ್ತನೆದುರು ಕರೆತರುತ್ತಾನೆ.ಭೀಮನ ಯುದ್ಧ ಆನೆಯ ಜೊತೆಯಾದರೆ ಅರ್ಜುನ ಆನೆಯ ಮೇಲೆ ಕುಳಿತಿದ್ದ ಭಗದತ್ತನ ಜೊತೆ ಯುದ್ಧಕ್ಕಿಳಿಯುತ್ತಾನೆ.ಅವರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕಡೆಗೆ ಭಗದತ್ತ, “ಕುಡಿ ಕಿರೀಟಿಯ ರಕುತವನು ಹಗೆ ಕೆಡಲಿ ಕೌರವನಾಳಲಿ ಪೊಡವಿಯನು” ಎಂದು ಘೋಷಿಸಿ ವೈಷ್ಣವಾಸ್ತ್ರವನ್ನು ಪ್ರಯೋಗಿಸುತ್ತಾನೆ.
ಆ ಅಸ್ತ್ರ ಹೇಗಿತ್ತು? “ದಿನಪಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ...(ಪ-೫೫), “ಕಾಳೋರಗನ ಕುಡಿನಾಲಗೆ...(ಪ-೫೬),
ಆಗ ಕೃಷ್ಣನು ಆ ಅಸ್ತ್ರ ಮತ್ತು ಅರ್ಜುನನ ನಡುವೆ ನಿಂತು ತನ್ನ ಎದೆಯೊಡ್ಡಿ ಅಸ್ತ್ರವನ್ನು ಸ್ವೀಕರಿಸುತ್ತಾನೆ. ಅಸ್ತ್ರ “ಕೌಸ್ತುಭದ ಮಣಿ ಮರಿಯನಿಳುಹಿದವೊಲು” ಕೃಷ್ಣನ ಕೊರಳಲ್ಲಿ ತೂಗಾಡುತ್ತದೆ.
ಇಲ್ಲಿಗೆ ಸುಖಾಂತ್ಯವಾಗಬೇಕಿತ್ತು.ಆದರೆ  ಘಟನೆಗಳು ವ್ಯಕ್ತಿಗಳನ್ನು ಪ್ರಚೋದಿಸುವ ಸಾಧ್ಯತೆಗಳು ಅನಂತ.
ಅಂತಹ ಒಂದು ವಿಕ್ಷಿಪ್ತವಾದ ಘಟನೆ ನಡೆಯುತ್ತದೆ.
“ಕೌತುಕವನಿದಕಂಡು ಫಲುಗುಣ
ಕಾತರಿಸಿ ನುಡಿದನು ಮುರಾಂತಕ
ಸೂತತನಕಲಸಿದನ ಕಾದಲಿ ಕೌರವನ ಕೂಡೆ
ಸೂತತನವೇ ಸಾಕು ತನಗೆನು
ತಾ ತತುಕ್ಷಣ ಧನುವ ಬಿಸುಟು ವಿ
ಧೂತ ರಿಪುಬಲ ಪಾರ್ಥನಿದ್ದನು ಹೊತ್ತ ದುಗುಡದಲಿ ||(ಸಂ ೩,ಪ-೬೨)
ಕಾದುವಾತನು ನೀನು ವೈರಿಯ
ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ ಸಾರಥಿತನವೆ ಸಾಕೆಮಗೆ
ಕೈದುವಿದೆಕೋ ಕೃಷ್ಣ ನೀನೇ
ಕಾದು ವಾಘೆಯ ತಾ ಎನಲು ಮರು
ಳಾದನೈ ನರನೆನುತ ಮುರಾರಿಯಿಂತೆಂದ ||ಪ-೬೪||
ಮಹಾಸ್ತ್ರ ಕೌಸ್ತುಭಮಣಿಯ ಮರಿಯಂತೆ ಕೃಷ್ಣನ ಕೊರಳಲ್ಲಿ ಶೋಭಿತವಾದ ಕೌತುಕ ಕಂಡರೂ ಅರ್ಜುನನಿಗೆ ಕೃಷ್ಣ ಹಾಗೆ ಯಾಕೆ ಮಾಡಿದ,ಆ ಅಸ್ತ್ರದ ಶಕ್ತಿ ಎಂಥದು ಎಂಬುದು ಅರ್ಥವಾಗಲಿಲ್ಲ.ಆತನಿಗೆ ದುಗುಡವಾಯಿತು.ಆತ ಯೋಚಿಸಿದ್ದು ಕೃಷ್ಣನಿಗೆ ಸಾರಥಿತನದ ಬಗ್ಗೆ ಆಲಸ್ಯವಾಯಿತೇ ಎಂದು. ಸಾರಥಿಯಾಗಿ ಮಾತ್ರ ನಾನು ಭಾಗವಹಿಸುವೆ ಎಂದ ಕೃಷ್ಣ ಹೀಗೆ ಮಾಡುವುದಾದರೆ ಕೌರವನ ಬಳಿ ಅವನೇ ಯುದ್ಧ ಮಾಡಲಿ, ತಾನವನ ಸಾರಥಿಯಾಗುತ್ತೇನೆ ಎಂದು ಅರ್ಜುನ ಧನುವನ್ನು ಬಿಸಾಡುತ್ತಾನೆ.ನಾನಿನ್ನು ಯುದ್ಧ ಮಾಡುವವನಲ್ಲ,ನೀನೇ ಆಯುಧ ಹಿಡಿ,ತನಗೆ ವಾಘೆಯನ್ನು ಕೊಡು ಎಂದು ಅರ್ಜುನ ಹೇಳುತ್ತಾನೆ.
ಅರ್ಜುನನ ಈ ಪ್ರತಿಕ್ರಿಯೆ ಕುತೂಹಲಕಾರಿಯಾದದ್ದು.ಅವನಿಗೆ ಕೃಷ್ಣನ ಈ ವರ್ತನೆ ಹಿಡಿಸಿಲ್ಲ ಎಂಬುದು ಮೊದಲನೆಯದು. ಹಿಡಿಸದಿರುವ ಕಾರಣ ತನ್ನ ಶೌರ್ಯದ ಬಗ್ಗೆ ಕೃಷ್ಣನಿಗೆ ಅನುಮಾನವಿದೆ ಮತ್ತು ಅವನ ಈ ವರ್ತನೆ ತನಗೆ ಅವಮಾನಕಾರಿಯಾದದ್ದು ಎಂಬ ಭಾವನೆ.(...ವೈರಿಯ ಕೈದುವನು ನೀ ಗೆಲಿದೆಯಿನ್ನುರೆ ಕಾದುವವರಾವಲ್ಲ.....)
ಅರ್ಜುನನ ಸ್ವಾಭಿಮಾನ, ಕೃಷ್ಣ ಹೀಗೆ ಮಾಡಲು ಏನೋ ಕಾರಣವಿರಬೇಕು ಎಂಬುದನ್ನು ಊಹಿಸಲಾರದಷ್ಟು ಪ್ರಬಲವಾಗಿ ಅಹಂಕಾರರೂಪಿಯಾಗಿತ್ತು ಎಂಬುದು ಎರಡನೆಯದು.(ಈ ಯುದ್ಧದಲ್ಲಿ ಕೃಷ್ಣ ತಾನೇ ನೇರವಾಗಿ ಅಸ್ತ್ರದೆದುರು ನಿಂತ ಸಂದರ್ಭ ಇದೊಂದೇ.ಬೇರೆ ಎಲ್ಲ ಸನ್ನಿವೇಶಗಳಲ್ಲೂ ತಂತ್ರ ಮಾಡಿ ಸಮಸ್ಯೆಯನ್ನು ಪರಿಹರಿಸಿದ್ದಾನೆಯೇ ಹೊರತು ನೇರವಾಗಿ ಭಾಗಿಯಾಗಿ ಅಲ್ಲ.ಉದಾಹರಣೆಗೆ ಜಯದ್ರಥ ವಧೆ,ದ್ರೋಣವಧೆ,ಸರ್ಪಾಸ್ತ್ರ ಪ್ರಸಂಗ ಇತ್ಯಾದಿಗಳನ್ನು ಗಮನಿಸಬಹುದು.)
ಆಗ ಕೃಷ್ಣ ಆ ಅಸ್ತ್ರದ ಶಕ್ತಿಯನ್ನು ಅವನಿಗೆ ವಿವರಿಸುತ್ತಾನೆ.ತಾನಲ್ಲದೆ ಬೇರೆ ಯಾರಿಗೂ ಆ ಅಸ್ತ್ರವನ್ನು ನಿಷೇಧಿಸಲು ಆಗದು,ಆ ಕಾರಣದಿಂದ ತಾನು ಹಾಗೆ ಮಾಡಿದ್ದು ಎಂಬ ಅವನ ವಿವರಣೆ ಅರ್ಜುನನಿಗೆ ಸಮಾಧಾನ ನೀಡುತ್ತದೆ.
ಈ ಚಿತ್ರಣ ಆನೆಯ ಯುದ್ಧದ ವೈಖರಿಯ ಚಿತ್ರಣ ಮಾತ್ರವಾಗದೆ, ಮನುಷ್ಯನ ಅಭಿಮಾನ ಅವನ ವಿವೇಕವನ್ನು ಕ್ಷಣಿಕ ಕಾಲವಾದರೂ ಕುಂಠಿತಗೊಳಿಸಬಹುದು ಎಂಬುದರ ಸೂಚಕವಾಗಿದೆ.
***
ಈ ಪ್ರಸಂಗದಲ್ಲಿ ಕುಮಾರವ್ಯಾಸನ ಕಾವ್ಯಶಕ್ತಿ ಪ್ರಕಟವಾದ ಕೆಲವು ಸಾಲುಗಳು:
೧] ಗಿರಿಯ ಮುತ್ತಿದ ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದವು-ಪ ೨೬
೨] ಹಾವಿನ ಕೊಡನು ದೋಷಿಗೆ ಸುಲಭವೇ-- ಪ ೨೮
೩] ಬೆತ್ತ ಬೆಳದದ್ರಿಯವೊಲಿದ್ದುದು ಮತ್ತಗಜ—ಪ ೩೯
೪] ಸದರವೇ ಉರಿಗೆಂಡವೊರಲೆಯ ಬಾಯ್ಗೆ—ಪ ೬೦
೫] ಚಾಪದ ನಾರಿ ಬೆಸಲಾಗಲಿ—ಪ ೭೩
೬] ಅಪರಜಲಧಿಯೊಳುರಿವ ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗ ಮಂಡಲವಿಳಿದುದಂಬರವ—ಪ ೮೦














Tuesday, September 15, 2015

ಒಂದು ಪ್ರತಿಮೆ


ಅಡಿಗರು ತಮ್ಮ ಭೂಮಿಗೀತ ಕವನದಲ್ಲಿ ಬಳಸಿರುವ ಒಂದು ಪ್ರತಿಮೆಯ ವಿವರಣೆ ಈ ಲೇಖನದ ಆಶಯ. ಈ ಪ್ರತಿಮೆಯ ಧ್ವನಿಗ್ರಹಿಕೆ ಮಾತ್ರ ನನ್ನ ಉದ್ದೇಶವೇ ಹೊರತು ಇವು ಕವನದಲ್ಲಿ ಹೇಗೆ ಸಂಗತವಾಗಿವೆ ಎಂಬುದಲ್ಲ. ಕವನವನ್ನು ಒಟ್ಟಂದದಲ್ಲಿ ಗ್ರಹಿಸುವಲ್ಲಿ ಆ ಸಾಂಗತ್ಯ ಹೊಳೆಯುತ್ತದೆ. 
************
"ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ, ಸಾಯಿಸಲಿಕಲ್ಲದೇ ಬರಳು ಕುಂತಿ."( ಭೂಮಿಗೀತ-೮೨ನೆಯ ಸಾಲು)
ಅಡಿಗರು ಪೂರ್ವಕೃತಿಗಳ ಘಟನೆಗಳನ್ನು ಪ್ರತಿಮೆಯಾಗಿ ಕೆಲವು ಕಡೆ ಬಳಸಿದ್ದಾರೆ. ಈ ವಿಧಾನ ತುಂಬಾ ವಿವರವಾಗಿ ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ,ಧ್ವನಿಪೂರ್ವಕವಾಗಿ ಹೇಳುತ್ತದೆ. ಅದರೆ ಪ್ರತಿಮೆಯ ಧ್ವನಿಯನ್ನು ಗ್ರಹಿಸಲು ನಮಗೆ ಮುಂಚಿತವಾಗಿಯೇ  ಘಟನೆಯ ವಿವರ ತಿಳಿದಿರಬೇಕಾಗುತ್ತದೆ. ಇದು ಅಂತಹ ಪ್ರತಿಮೆಗಳಲ್ಲಿ ಒಂದು. ಮಹಾಭಾರತದ ಎರಡು ಘಟನೆಗಳನ್ನುಇಲ್ಲಿ ಪ್ರತಿಮೆಯಾಗಿ ಬಳಸಿಕೊಳ್ಳಲಾಗಿದೆ.
೧.ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ
೨.ಸಾಯಿಸಲಿಕಲ್ಲದೇ ಬರಳು ಕುಂತಿ.
ಮಂತ್ರಪರೀಕ್ಷೆಯ ತವಕದಲ್ಲಿ  ಕನ್ಯೆಯಾಗಿರುವ ಕುಂತಿ ಕರ್ಣನಿಗೆ ಜನ್ಮ ನೀಡುತ್ತಾಳೆ. ಅಪವಾದ ಬರುತ್ತದೆ ಎಂಬ ಭಯದಿಂದ ಮಗುವನ್ನು ಗಂಗೆಯಲ್ಲಿ ತೇಲಿಬಿಡುತ್ತಾಳೆ. ಈ ಮಗು,ಕರ್ಣ,ಸೂತನಾದ ಅಧಿರಥನಿಗೆ ಸಿಗುತ್ತದೆ. ಅವನ ಪತ್ನಿ ರಾಧೆ ಈ ಮಗುವನ್ನು ಸಾಕುತ್ತಾಳೆ. ರಾಧೆಯ ಮಗ ರಾಧೇಯ ಆಗಿ ಬೆಳೆಯುತ್ತದೆ.
ಇಲ್ಲಿ ಅಡಿಗರು ಉದ್ದೇಶಪೂರ್ವಕವಾಗಿ ಕುಂತಿ ಮಗುವನ್ನು ತ್ಯಜಿಸಿದ ಸೂಚನೆ ಕೊಡುವುದಿಲ್ಲ. ಬರಿದೇ ಗಂಗೆಯಲಿ ತೇಲಿಬಂದನು ಎಂದು ಹೇಳುತ್ತಾರೆ. ಅಡಿಗರು ಅದನ್ನು ಹೇಳಿದ್ದರೆ ಕರ್ಣ ಈ ಸನ್ನಿವೇಶದ ಮಟ್ಟಿಗೆ ಕೌಂತೇಯ ಆಗುತ್ತಿದ್ದ. ಅವನು ಕುಂತಿಯಮಗನಾದರೂ ಕೌಂತೇಯನಾಗಲಿಲ್ಲ,ರಾಧೇಯನಾದ ಎಂಬುದನ್ನು ಧ್ವನಿಸಲು ಕುಂತಿ ತೇಲಿಬಿಟ್ಟ ಸೂಚನೆ ನೀಡದೆ ಬರಿದೆ ತೇಲಿಬಂದನು ಎಂಬ ಪ್ರಯೋಗ ಬಳಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಒಂದುವೇಳೆ ಕೌಂತೇಯ ಎಂಬ ಪ್ರಯೋಗ ಮಾಡಿದ್ದರೆ ಸಾಯಿಸಲಿಕಲ್ಲದೇ ಬರಳು ಕುಂತಿ ಎಂಬ ಮುಂದಿನ ಹೇಳಿಕೆ ದುರ್ಬಲವಾಗುತ್ತಿತ್ತು. ಸಾಯಿಸಲಿಕಲ್ಲದೇ ಬರಳು ಎಂಬ ಹೇಳಿಕೆಯನ್ನು ಬಲಪಡಿಸುವ ಕಾರ್ಯವನ್ನು ಮೊದಲ ಸಾಲಿನಲ್ಲಿ ಅಡಿಗರು ಮಾಡುತ್ತಾರೆ. ಇದು ಪ್ರಭಾವಶಾಲಿ ಅನಿಸುವುದು ಎರಡನೆಯ ಭಾಗವನ್ನು ನಾವು ಗ್ರಹಿಸಿದಾಗ.
ಕೃಷ್ಣನ ಸೂಚನೆಯಂತೆ ಕುಂತಿ ಕರ್ಣನನ್ನು ಮೊದಲ ಭಾರಿ ಭೇಟಿಯಾಗುವುದು ಅವನಿಂದ ತೊಟ್ಟ ಬಾಣವನ್ನು ಮರಳಿ ತೊಡಬಾರದು ಮತ್ತು ತನ್ನ ಐವರು ಮಕ್ಕಳನ್ನು ಕೊಲ್ಲದೆ ಕಾಯಬೇಕು ಎಂಬೆರಡು ಮಾತು ಪಡೆಯಲು. ಮೊದಲ ಮಾತೇ ಮುಂದೆ ಕರ್ಣನ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಕುಂತಿ ಬರುವುದು ಕರ್ಣನ ಸಾವನ್ನು ಬೇಡಿ ಎಂಬ ಎರಡನೆಯ ಸಾಲಿನ ಅರ್ಥವಿವರ ಸ್ಪಷ್ಟವಾಗುತ್ತದೆ.
ಇವೆರಡೂ ಹೇಳಿಕೆಗಳನ್ನು ಒಟ್ಟಿನಲ್ಲಿ ಗ್ರಹಿಸಿದರೆ ಒಂದಕ್ಕೊಂದು ಸಂಗತವಾಗುವ ಸಂಬಂಧ ಸ್ಪಷ್ಟವಾಗುತ್ತದೆ. ಕರ್ಣ ರಾಧೇಯನಾಗಿದ್ದರಿಂದಲೇ ಕುಂತಿಗೆ ಮಾತು ಕೊಡು ಎಂದು ಕೇಳಲು ಸಾಧ್ಯವಾಯಿತು. ಅವನು ಕೌಂತೇಯನಾಗಿದ್ದರೆ ಅವಳಿಗೆ ಈ ಮಾತನ್ನು ಕೇಳಲು ಆಗುತ್ತಿರಲಿಲ್ಲ. ಇಡೀ ಕವನದ ಅರ್ಥವ್ಯಾಪ್ತಿಯನ್ನು ಆವರಿಸುವ ಎರಡನೆಯ ವಾಕ್ಯದ ಧ್ವನಿಯನ್ನು ಬಲಪಡಿಸವುದೇ ಮೊದಲ ವಾಕ್ಯ.  ರಾಧೇಯ ಎಂಬುದರ ಬಳಕೆಯ ಉದ್ದೇಶ ಎರಡನೆಯ ವಾಕ್ಯದ ತೀವ್ರತೆಯನ್ನು ಹೆಚ್ಚಿಸುವುದು.( ಇವು ಇವಳ ಸಹಜ ಸಂತಾನ ಎಂಬ ಕವನದ ಸಾಲಿನ ಹಿನ್ನೆಲೆಯಲ್ಲಿ ಗಮನಿಸಬಹುದು.)

Monday, March 24, 2014

ಏಕದಂತ.

                                                               


ಕೆಲವು ಸಲ ನನ್ನಲ್ಲಿ ಹುಟ್ಟುವ ಕುತೂಹಲಕ್ಕೆ ಕಾರಣವೇನು ಎಂಬುದು ನನಗೂ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಕಾರಣ ನಿಮಿತ್ತವಾಗುತ್ತದೆ. ನಿನ್ನೆ ಹಾಗೇ ಆಯಿತು. ಎಲ್ಲೋ ಹಾಕಿದ್ದ ಮೈಕಲ್ಲಿ ನಮ್ಮ ಗಣಪತಿಯ ಸ್ತೋತ್ರ. ಅದರಲ್ಲಿ ಬರುವ "ಏಕದಂತಾಯ" ಎಂಬುದನ್ನು ಕೇಳಿ ಎಲಾ! ಈ ಗಣಪ ಯಾಕೆ ಏಕದಂತನಾದ ಎಂಬ ಕುತೂಹಲ ಹುಟ್ಟಿತು. ಇಲ್ಲಿಯವರೆಗೂ ಗಣಪನ ಈ ಹೆಸರು ಕೇಳಿದ್ದರೂ ಈ ಕುತೂಹಲ ಬಂದಿರಲಿಲ್ಲ. ಗಣಪನಿಗೆ  ಆನೆಯ ತಲೆ ತರುವವರು ಒಂದೇ ದಂತ ಇರುವುದನ್ನು ಗಮನಿಸದೆ ತಂದರೇ? ಪಾರ್ವತಿಯಿಂದ ಬೈಸಿಕೊಳ್ಳುತ್ತಿದ್ದ ಈಶ್ವರ ಗಡಿಬಿಡಿಯಲ್ಲಿ ಗಮನಿಸದಿದ್ದರೂ ತಾಯಿ ಪಾರ್ವತಿ ಅದನ್ನು ಗಮನಿಸಿ ಈ ಮುಖ ಬೇಡ ಎಂದು ತಕರಾರು ಎತ್ತಬಹುದಿತ್ತಲ್ಲ. ಯಾಕೆ ಹೀಗಾಯಿತು? ಇದರ ಮೂಲ ಪತ್ತೆ ಹಚ್ಚಬೇಕು ಎಂಬ ಉತ್ಸಾಹ ಹುಟ್ಟಿತು. ನಮ್ಮ ಸ್ತೋತ್ರಮಾಲಿಕೆಗಳಲ್ಲಿ ಸಾಲಾಗಿ ನಾಮಾವಳಿ ಇರುತ್ತದೆಯೇ ಹೊರತು ವಿವರ ಇರುವುದು ಕಡಿಮೆ. ಸ್ಥಳೀಯ ಪಂಡಿತರೊಬ್ಬರನ್ನು ಕೇಳಿದಾಗ ಗಣಪ ಒಮ್ಮೆ ಬಿದ್ದಿದ್ದನಲ್ಲ..ನೋಡು ಚಂದ್ರ ನಕ್ಕು ಶಾಪ ಬಂತಲ್ಲ..ಆಗ ಮುರಿಯಿತು ಎಂದು ನಿಖರವಾಗಿ ಹೇಳಿದರು. ಇದ್ದರೂ ಇರಬಹುದು..ಬಿದ್ದು ಹಲ್ಲು ಮುರಿದುಕೊಂಡರೆ ನೋಡುವವರು ನಕ್ಕರದು ತಪ್ಪಲ್ಲ. ಅಂತೂ ಅವತ್ತಿಂದ ಗಣಪನಿಗೆ ಮತ್ತೊಂದು ಹೆಸರು ಬಂದಂತಾಯಿತು
(ಅಲ್ಲಿಯವರೆಗೆ ಅವನ ನಾಮಾವಳಿಯಲ್ಲಿ ೯೯೯ "ನಾಮ"ಗಳು ಮಾತ್ರ ಇದ್ದವೇ?)

ಆದರೆ ನಮ್ಮ ಪಂಡಿತರು ಸುಮ್ಮನೆ ಬುರುಡೆ ಬಿಟ್ಟರು ಎಂಬುದು ಮೊನ್ನೆ ಬ್ರಹ್ಮಾಂಡ ಪುರಾಣ ಓದುತ್ತಿದ್ದಾಗ ತಿಳಿಯಿತು. ಅಲ್ಲಿದೆ ಗಣಪ ಏಕದಂತನಾದ ಕಾರಣ.  ನೀವೂ ತಿಳಿದುಕೊಳ್ಳಿ.
ಈಶ್ವರನಿಂದ ವರಪಡೆದು ಕ್ಷತ್ರಿಯ ಕುಲ ಸಂಹರಿದ ಪರಶುರಾಮ ಒಮ್ಮೆ ಈಶ್ವರನ ದರ್ಶನಕ್ಕೆಂದು ಕೈಲಾಸಕ್ಕೆ ಆಗಮಿಸಿದ. ಅವೇಳೆ. ಈಶ್ವರ ಆ ಸಮಯದಲ್ಲಿ ಪಾರ್ವತಿಯೊಂದಿಗೆ ಸಲ್ಲಾಪದಲ್ಲಿದ್ದ. ತಾಯಿ ಸ್ನಾನಕ್ಕೆ ಹೋದಾಗ ಕಾಯುತ್ತ ನಿಂತಂತೆ ಗಣಪ ಈಗಲೂ ಹೊರಗೆ ಕಾವಲು ನಿಂತಿದ್ದ.(ಭಕ್ತರನ್ನು ಕಾಯುವುದು ಇಲ್ಲಿಂದಲೇ ಕಲಿತಿರಬೇಕು.) ತನ್ನ ಕರ್ತವ್ಯಪರತೆಯನ್ನು ಮೆರೆದು ಪರಶುರಾಮನನ್ನು ತಡೆದ. ಈಗ ಈಶ್ವರನ ಭೇಟಿ ಸಾಧ್ಯವಿಲ್ಲ.ನಿಮಗೆ ಬೇರೆ ಸಮಯ ನಿಗದಿ ಮಾಡಿಕೊಡಲಾಗುವುದು.ಕಾಯಿರಿ. ಎಂದು ಪರಶುರಾಮನ ಕೋರಿಕೆಯನ್ನು ನಿರಾಕರಿಸಿದ. ಪರಶುರಾಮ ಪದೇಪದೇ ವಿನಂತಿಸಿದರೂ ಗಣಪ ತಲೆ(ಸೊಂಡಿಲು?) ಅಲ್ಲಾಡಿಸಿ ನಿರಾಕರಿಸಿದ. ಬಂತು ನೋಡಿ ಪರಶುರಾಮನಿಗೆ ಭಯಂಕರ ಸಿಟ್ಟು! ಆತ ತನ್ನ ಆಯುಧವಾದ ಪರಶುವನ್ನು ಗಣಪನ ಮೇಲೆ ಪ್ರಯೋಗಿಸಲು ತಯಾರಾದ. ಅವನು ಪ್ರಯೋಗಿಸುತ್ತಾನೆ ಎಂಬುದು ಗಣಪನಿಗೆ ಮುಂಚೆಯೇ ತಿಳಿದು ಗಣಪನನ್ನು ಅನಾಮತ್ತಾಗಿ ಸೊಂಡಿಲಿಂದ ಎತ್ತಿ ಮೇಲಿನ ಏಳು+ವೈಕುಂಠ+ಗೋಲೋಕವನ್ನೂ ಮತ್ತು ಕೆಳಗಿನ ಏಳು ಲೋಕವನ್ನೂ ತೋರಿಸಿಬಿಟ್ಟ. ಪರಶುರಾಮನಿಗೆ ಒಂದೆಡೆ ಖುಷಿ ಮತ್ತೊಂದೆಡೆ ದುಃಖ. ನಿರಾಯಾಸವಾಗಿ ಎಲ್ಲ ಲೋಕಗಳನ್ನೂ ನೋಡಿದ ಖುಷಿ. ಆಯುಧ ಪ್ರಯೋಗಕ್ಕಿಂತ ಮುಂಚೆಯೇ ಸೋತದ್ದಕ್ಕೆ ಬೇಸರ. ಆದರೂ ಬುದ್ಧಿ ಕಲಿಯದ ಪರಶುರಾಮ ಆತ ಸೊಂಡಿಲಿಂದ ಇಳಿಸಿದ ಕೂಡಲೇ ಪರಶುವನ್ನು ಪ್ರಯೋಗಿಸಿಯೇ ಬಿಟ್ಟ. ಈಶ್ವರನಿಂದ ಪ್ರಾಸಾದಿತವಾದ ಈ ಪರಶುವನ್ನು ನಿರಾಕರಿಸುವುದು ಅಥವಾ ಗೆಲ್ಲುವುದು ಈಶ್ವರನಿಗೆ(ಅಪ್ಪನಿಗೆ) ಮಾಡುವ ಅವಮಾನ ಎಂಬ ವಿನೀತ ಭಾವದಿಂದ ಗಣಪ ಅದನ್ನು ತನ್ನ ಕುಂಭದ ಎಡಭಾಗದಿಂದ ತಡೆದ. ಘಾತವಾಯಿತು ನೋಡಿ. ಗಣಪನ ಎಡದಂತ ಮುರಿದುಬಿತ್ತು. ಹೀಗೆ ಗಣಪ ಏಕದಂತನಾದ.
(ಈ ಕತೆ ಇನ್ನೂ ಇದೆ. ಆದರೆ ಗಣಪ ಹೊಸದಂತ ಕಟ್ಟಿಸಿಕೊಳ್ಳಲಿಲ್ಲವಾದ್ದರಿಂದ ಕತೆಯನ್ನು ವಿಸ್ತರಿಸುವ ಅಗತ್ಯವಿಲ್ಲ.)
(ಆಸಕ್ತರ ಗಮನಕ್ಕೆ:ಮೇಲಿನ ಏಳು ಲೋಕಗಳು-ಭೂ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ
                         ಕೆಳಗಿನ ಏಳು ಲೋಕಗಳು-ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ.)                                                                       

Thursday, July 25, 2013

ಭೂಮಿಗೀತ ಕವನದ ನಾಲ್ಕು ಸಾಲುಗಳು.


ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ.
ಅವರ ಬೆನ್ನಿಗೆ ಸದಾ ನಾಲ್ಕುಮಂದಿ;
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.
(ಗೋಪಲಕೃಷ್ಣ ಅಡಿಗ-ಸಮಗ್ರ ಕಾವ್ಯ-ಪುಟ ೨೬೪)
    ಇತ್ತೀಚೆಗೆ ಕೊಂಡ ಅಡಿಗರ ಸಮಗ್ರ ಕಾವ್ಯ ಓದುತ್ತಿದ್ದೆ. ಅವರ ಕವನಗಳನ್ನು ನಾನು ಬಿ.ಎ. ಓದುತ್ತಿದ್ದ ಕಾಲದಿಂದಲೂ ಓದುತ್ತಿದ್ದೆ.ಅವರ ಧೋರಣೆಗಳು ಏನೇ ಇರಲಿ ಅವರ ಕವನಕಟ್ಟುವ ರೀತಿ ಒಂದು ವಿಸ್ಮಯ. ಕಲ್ಲು ಕೆತ್ತಿ ವಿಗ್ರಹ ನಿರ್ಮಿಸಿದಂತೆ. ಈಗ ಮತ್ತೆ ಅವರ ಭೂಮಿಗೀತ ಕವನದ ಈ ಸಾಲುಗಳನ್ನು ಓದುವಾಗ ಓಂದಿಷ್ಟು ಹೊಳೆಯಿತು. ಮುಂಚೆ ಏನು ಹೊಳೆದಿತ್ತು ಎಂದು ನನಗೇ ಕುತೂಹಲವಾಗಿ ನನ್ನ ಸಂಗ್ರಹದಲ್ಲಿದ್ದ ಅವರ ಭೂಮಿಗೀತ ಸಂಕಲನ ಹುಡುಕಿ ತೆಗೆದು ನೋಡಿದೆ. ಪುಣ್ಯಕ್ಕೆ ಅದರಲ್ಲಿ ನಾನು ಬರಕೊಂಡ ಟಿಪ್ಪಣಿಗಳಿದ್ದವು. ಅವನ್ನು ಮತ್ತೆ ಈಗಿನ ಒಂದಿಷ್ಟನ್ನು ಸೇರಿಸಿ ಬರೆಯುವ ಹುಮ್ಮಸ್ಸು ಬಂತು. ನಾನಿಲ್ಲಿ ಇಡೀ ಕವನದ ಬಗ್ಗೆ ಬರೆಯುತ್ತಿಲ್ಲ. ಬದಲಿಗೆ ಮೇಲಿನ ನಾಲ್ಕು ಸಾಲುಗಳನ್ನು ಓದಿದಾಗ ನನಗೆ ಅನಿಸಿದ್ದನ್ನು ಮಾತ್ರ ಬರೆಯುತ್ತಿದ್ದೇನೆ.
    ಇಲ್ಲಿ ಮೂರು ಬಿಡಿ ನೋಟಗಳಿವೆ.1)"ನರ್ಸುಗಳು.........ಸದಾ ನಾಲ್ಕು ಮಂದಿ" 2)"ತೊಟ್ಟಿಲಂಗಡಿಯಲ್ಲಿ.........ಅಗ್ಗ" 3)"ಜಾತಕರ್ಮದಿ......ಪಾರಂಗತ" ಮೊದಲನೆಯದು ಕ್ರಿಯಾತ್ಮಕವಾಗಿರುವ ಒಂದು ಸನ್ನಿವೇಶ. ಇಲ್ಲಿ "ಒಳಹೊರಗೆ" ಎಂಬ ಪದ ಡಾಕ್ಟರ್ ಮತ್ತು ನರ್ಸುಗಳ ಓಡಾಟವನ್ನು ಸೂಚಿಸುತ್ತಿದೆ. ಹೆರಿಗೆಯ ಸಂದರ್ಭದಲ್ಲಿ ಓಡಾಟ ಅಂದರೆ ಒಂದು ಜೀವ ಹುಟ್ಟುತ್ತಿರುವ ಸೂಚನೆ. ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ಎಂಬುದು ಅವರ ಸಹಾಯಕರನ್ನು ಸೂಚಿಸುತ್ತದೆ.
ಎರಡನೆಯ ಸಾಲು ಹುಟ್ಟಿನ ಅನಂತರ ಮಗುವನ್ನು ತೊಟ್ಟಿಲಲ್ಲಿ ಇಟ್ಟ ಸ್ಥಿತಿಯನ್ನು ಸೂಚಿಸುತ್ತದೆ. ಹಿಂದೆ ತೊಟ್ಟಿಲನ್ನು ಬೊಂಬಿನಿಂದ ಮಾಡುತ್ತಿದ್ದ ಕಾರಣ ಆ ಪದವನ್ನು ಬಳಸಲಾಗಿದೆ. ತೊಟ್ಟಿಲು ತಯಾರಿಸಲು ಬೊಂಬು ಬೇಕಾದ ಕಾರಣ ಅದರ ಸಂಗ್ರಹ ಸಾಕಷ್ಟು ತೊಟ್ಟಿಲಂಗಡಿಯಲ್ಲಿ ಇರುತ್ತದೆ.ಹಾಗಾಗಿ ಅಲ್ಲಿ ಅದು ಅಗ್ಗ. ಅಂದರೆ ಮಗುವಿಗೆ ಒಂದು ಗುರುತನ್ನು(identity) ಕೊಡುತ್ತಿರುವ ಸೂಚನೆ.
    ಮೂರನೆಯ ಸಾಲು ನಾಮಕರಣದ ಕ್ರಿಯೆಯನ್ನು ಸೂಚಿಸುತ್ತಿದೆ. ಸಧ್ಯಕ್ಕೆ ನಾಮಕರಣ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಜಾತಕರ್ಮದಿ ನಿರತ ಎಂಬ ಹೇಳಿಕೆ ಸೂಚಿಸುತ್ತದೆ.ಇದು ವರ್ತಮಾನಕಾಲದ ಸೂಚಕ. ಹೀಗೆ ನಿರತನಾಗಿರುವ ಭಟ್ಟ ಸಾವಿನ ಅನಂತರದ ಕ್ರಿಯೆಯಲ್ಲೂ ಪಾರಂಗತನಿದ್ದಾನೆ ಎಂಬುದು ಹೇಳಿಕೆ.ಇದು ಮುಂದೆ ಬರುವ ಕಾಲದ ಅಥವಾ ಕ್ರಿಯೆಯ ಸೂಚಕ.
    ಇದಷ್ಟೇ ಈ ಸಾಲುಗಳ ಧ್ವನಿಯಾಗಿದ್ದರೆ ತುಂಬಾ ಸರಳವಾದ ಹೇಳಿಕೆಯ ರೂಪದಲ್ಲೇ ಉಳಿದುಬಿಡುತ್ತಿತ್ತು. ಹುಟ್ಟನ್ನು ಸೂಚಿಸುವ ಹೆರಿಗೆಮನೆಯೊಳಹೊರಗಿನ ಡಾಕ್ಟರರ ಬೆನ್ನ ಹಿಂದಿನ ನಾಲ್ಕು ಮಂದಿ ಹೆಣಹೊರುವ ನಾಲ್ಕು ಮಂದಿಯ ಸಂಕೇತವಾಗುತ್ತಾರೆ. ಈ ಧ್ವನಿಯನ್ನು ಮುಂದಿನ ಸಾಲುಗಳು ಪುಷ್ಟೀಕರಿಸುತ್ತವೆ. ತೊಟ್ಟಿಲಂಗಡಿಯಲ್ಲಿ ಸಿಗುವ ಬೊಂಬು ಚಟ್ಟಕಟ್ಟಲೂ ಬಳಕೆಯಾಗುತ್ತದೆ. ನಾಮಕರಣ ಮಾಡುತ್ತಿರುವ ಭಟ್ಟ ಅಪರಕ್ರಿಯೆಯಲ್ಲೂ ಪಾರಂಗತ ಎಂದರೆ ಸಾವಿನ ಅನಂತರ ಗುರುತನ್ನು ಅಳಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಮೂರು ಸಾಲುಗಳು ಹುಟ್ಟು ಮತ್ತು ಸಾವಿನ ಸಂಬಂಧವನ್ನು ಅನಿವಾರ್ಯತೆಯನ್ನು ವಿವರಿಸುತ್ತವೆ.
    ಇನ್ನೂ ಗಮನಿಸಬೇಕಾದ ಅಂಶವೆಂದರೆ ಈ ಮೂರೂಸಾಲುಗಳು ಹುಟ್ಟುಸಾವಿನ ಅನಿವಾರ್ಯತೆಯನ್ನು ಕವನದಲ್ಲಿ ಬೆಳೆಸುವರೀತಿ. ಮೊದಲ ಸಾಲಿನಲ್ಲಿ ಮಗು ಹುಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಹುಟ್ಟಿದ ಅಥವಾ ಇನ್ನೀಗ ಹುಟ್ಟಲಿರುವ ಸೂಚನೆ ಇದೆ. ಹಾಗೆ "ನಾಲ್ಕು ಮಂದಿ" ಎಂಬ ಪದಬಳಕೆ ಈಗಾಗಲೆ ಸತ್ತಿರುವ ಅಥವಾ ಇನ್ನೀಗ ಸಾಯಲಿರುವ ವ್ಯಕ್ತಿಯ ಸೂಚನೆ ನೀಡುತ್ತದೆ. ಮುಂದಿನ ಸಾಲು ಮಗು ಹುಟ್ಟಿದೆ ಎಂಬುದನ್ನು ಸೂಚಿಸುತ್ತದೆ. ತೊಟ್ಟಿಲು ಬಂದಿದೆ. ಹಾಗೆಯೇ ಚಟ್ಟ ಕಟ್ಟಲು ಬಳಸುವ ಬೊಂಬು ವ್ಯಕ್ತಿ ಸತ್ತ ಸಂಕೇತ. "ತೊಟ್ಟಿಲ" ಪದ ಬಳಕೆಯ ಮೂಲಕ ಹುಟ್ಟಿದ್ದು ನಿಖರವಾದಂತೆ ಸತ್ತಿದ್ದು ಕೂಡ ನಿಖರವಾಗಿದೆ. ಇಲ್ಲವಾದರೆ ಬೊಂಬಿನ ಅಗತ್ಯವಿಲ್ಲ. ಮೂರನೆಯ ಸಾಲಿನಲ್ಲಿ ನಾಮಕರಣ. ಇದು ಇನ್ನೂ ತುಸು ಮುಂದಿನ ಹಂತ. ಹಾಗೆಯೇ ಸಾವಿನ ಅನಂತರದ ಮುಂದಿನ ಕ್ರಿಯೆಯಾದ ಅಪರ ಕ್ರಿಯೆಯ ಸೂಚನೆ "ಅಪರ ಕ್ರಿಯೆಯಲ್ಲೂ ಪಾರಂಗತ" ಎಂಬ ಹೇಳಿಕೆಯಲ್ಲಿದೆ. ಅಂದರೆ ಹುಟ್ಟಿನ ಅನಂತರದ ಮೂರು ಘಟನೆಗಳು ಮತ್ತು ಸಾವಿಗೆ ಸಂಬಧಿಸಿದ ಮೂರು ಘಟನೆಗಳನ್ನು ಒಟ್ಟಿಗಿಡುವ ಮೂಲಕ ಹುಟ್ಟಿನಿಂದ ಸಾವಿನತ್ತದ ಚಲನೆಯನ್ನು ಸೂಚಿಸುವ ಪರಿ ಸಮರ್ಥವಾಗಿ ಮೂಡಿಬಂದಿದೆ.
    ಅಡಿಗರ ಬಹಳಷ್ಟು ಕವನಗಳು ಒಂದು ಸ್ಥಿತಿಯ ಚಿತ್ರಣವಷ್ಟೇ ಅಲ್ಲ.ಅವು ತಮ್ಮೊಳಗೇ ಬೆಳೆಯುವ ಕುಸುರಿ ಕೆಲಸ. ಕ್ಷಣವನ್ನು ಕ್ಯಾಮರದಲ್ಲಿ ಸೆರೆಹಿಡಿವ ರೀತಿಯದಲ್ಲ. ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿಯನ್ನು ಮಾಡುವ ಅಥವಾ ಚಿತ್ರಕಾರ ಒಂದೊಂದೇ ಗೆರೆಗಳನ್ನು ಎಳೆಯುತ್ತ ಬಣ್ಣ ತುಂಬತ್ತಾ ಚಿತ್ರವಾಗಿಸುವ ರೀತಿ. ಕವನದ ಈ ಚಲನಶೀಲತೆಯನ್ನು ಗ್ರಹಿಸದಿದ್ದಲ್ಲಿ ಕವನದ ಧ್ವನಿಯನ್ನು ಗ್ರಹಿಸುವುದೂ ಕಷ್ಟವಾಗುತ್ತದೆ.

Thursday, November 1, 2012



ಮತ್ತೆ ಬರೆಯುವತ್ತ....


ಜನವರಿ ತಿಂಗಳ ಅನಂತರ ಏನನ್ನೂ ಬರೆಯಲಿಲ್ಲ. ನನ್ನ ಕಾವ್ಯಾರ್ಥ ಲೇಖನಕ್ಕೆ ಶ್ರೀಪಾದು ಬರೆದ ಪ್ರತಿಕ್ರಿಯೆಗೆ ಉತ್ತರ ಕೊಡುವುದು ಉಳಿದಿದೆ. ತುಸು ದೀರ್ಘವಾದ ಉತ್ತರವೇ ಆಗುತ್ತದೆ. ಅದಕ್ಕೂ ಮುಂಚೆ ಯಾಕೆ ಏನನ್ನೂ ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಸೂಕ್ತ.

ನಿವೃತ್ತಿಯ ಅನಂತರ ನನ್ನ ಜೀವನದ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧವಾಗಿದ್ದವು. ಬೇರೆಯವರಿಗೆ ನನ್ನ ಕಾಲವನ್ನು ನ್ಯಾಸವಾಗಿ ಇಟ್ಟಿರದ ಕಾರಣದಿಂದ ನನಗೆ ಅನಿಸಿದಂತೆ ಇರಲು ಸಾಧ್ಯವಾಗಿತ್ತು.ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟವಾದ ಚಟುವಟಿಕೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದ ಸ್ವಂತದ ಬದುಕು. ನನ್ನ ಪ್ರೀತಿಯ ಮಡದಿಯೂ ನನ್ನ ಈ ಶಿಸ್ತಿನ ಜೀವನಕ್ಕೆ ಭಂಗ ಬರದಂತೆ ಕಾಳಜಿ ವಹಿಸಿದ್ದರು.

ಆದರೆ ಇವೆಲ್ಲ ಇದ್ದಕ್ಕಿದ್ದಂತೆ ಬದಲಾಗಿಹೋಯಿತು. ಯಾವುದೋ ಹೊತ್ತಿಗೆ ಏಳಬೇಕಾದ, ನಿದ್ದಿಸಬೇಕಾದ,ಊಟ ಸ್ನಾನ ಮಾಡಬೇಕಾದ ಅನಿವಾರ್ಯತೆ ಬಂತು. ನಮ್ಮೆಲ್ಲರ ಚಟುವಟಿಕೆಗಳನ್ನು ನಿಯಂತ್ರಿಸುವ ಮೊಮ್ಮಗಳು ಬಂದಳು. ತನ್ನಿಷ್ಟದಂತೆ ತಾನು ಇದ್ದಿದ್ದಲ್ಲದೆ ತನ್ನಿಷ್ಟದಂತೆ ನಾವೂ ಇರುವಂತೆ ಮಾಡಿದಳು. ನಮಗೆ ಪ್ರೀತಿಯ ಸಿಟ್ಟು ತರಿಸಿದಳು. ಸಂಭ್ರಮ ಉಕ್ಕಿಸಿದಳು. ನಿಸ್ಸಹಾಯಕತೆಯಲ್ಲಿ ನಾವು ಗೊಂದಲಗೊಳ್ಳುವಂತೆ ಮಾಡಿದಳು. ನಮ್ಮನ್ನು ಬೆರಗಿಗಿಕ್ಕಿದಳು.ಸಾಹಿತ್ಯ, ತತ್ವ ಇವೆಲ್ಲ ಅವಳ ಶುದ್ಧ ಮುಗ್ಧತೆಯೆದುರು ಅಡಗಿ ಕೂತವು. ಇವೆಲ್ಲ ಈಗ ನೆನಪು. ಮೊನ್ನೆ ಬೆಂಗಳೂರಿಗೆ ಹೋದಳು.

ಈಗ ಮನೆಯಲ್ಲಿ ಮೌನ. ಕುತೂಹಲ, ಸಂಭ್ರಮ ತರಿಸುವ ಸ್ವಾರಸ್ಯದ ಹೊಸ ಸಂಗತಿಗಳೂ ಇಲ್ಲ. ಮತ್ತೆ ನನ್ನ ಓದಿಗೆ ಮರಳಬೇಕು. ಮೌನದಲ್ಲಿ ನನ್ನ ದನಿಗೆ ನಾನೇ ಕಿವಿಯಾಗಬೇಕು. ಆಗ ಮತ್ತೆ ಬರೆಯಲು ಏನಾದರೂ ತೋಚಬಹುದು.