Saturday, July 31, 2010

ಹೀಗೊಂದು ಕಥಾನಕ.......

ಮಹಾರಾಜರು ತಮ್ಮ ಕೈಗಳನ್ನು ಹಿಂದೆ ಕಟ್ಟಿಕೊಂಡು ಅರಮನೆಯ ಮೊಗಸಾಲೆಯಲ್ಲಿ ಚಿಂತಾಕ್ರಾಂತರಾಗಿ ಅಡ್ಡಾಡುತ್ತಿದ್ದರು. ಅವರ ಹಿಂದೆ, ಕೈಗಳನ್ನು ಮುಂದೆ ಕಟ್ಟಿಕೊಂಡು, ತುಸು ಬಾಗಿ, ವಿಧೇಯತೆಯಿಂದ ಮುಖ್ಯಮಂತ್ರಿಯೂ ಅಡ್ಡಾಡುತ್ತಿದ್ದರು. ಮಹಾರಾಜರು ಯಾಕೆ ಈ ರೀತಿ ಹಿಂದೆ-ಮುಂದೆ ಅಡ್ಡಾಡುತ್ತಿದ್ದಾರೆ ಎಂಬುದು ಅವರ ಚಿಂತೆಯಾಗಿತ್ತು. ಕೊನೆಗೂ ತಡೆಯಲಾಗದೆ "ಮಹಾರಾಜರು ಏನೋ ಮಹತ್ತರವಾದ ಚಿಂತೆಯಲ್ಲಿರುವಂತಿದೆ.ವಿಷಯ ಏನೆಂದು ಹೇಳಿದರೆ ನಾನೂ ಅದರ ಬಗ್ಗೆ ಚಿಂತೆ ಮಾಡಬಹುದು" ಎಂದು ವಿನಂತಿಸಿದರು. ಹ್ಮಂ..ಹ್ಮಂ.."ಎಂದು ಮಹಾರಾಜರು ಹೊರಡಿಸಿದ ಧ್ವನಿಯ ಅರ್ಥ ಏನಿರಬಹುದು ಎಂಬುದು ಮಂತ್ರಿಗಳಿಗೆ ತಿಳಿಯಲಿಲ್ಲ. ಚಿಂತೆ ಮಾಡುತ್ತಿರುವಾಗ ಮಧ್ಯೆ ಯಾರಾದರೂ ಮಾತಾಡುವುದು ಮಹಾರಾಜರಿಗೆ ಹಿಡಿಸುತ್ತಿರಲಿಲ್ಲ. ಆದರೆ ಇವ ಬರೀ ಮುಖ್ಯ ಮಂತ್ರಿಯಲ್ಲ,ಖಾಸ ಹೆಂಡತಿಯ ತಮ್ಮ. ಹಾಗಾಗಿ ಗದರದೆ ಸುಮ್ಮನಾದರು.

"ಅಲ್ಲಯ್ಯಾ..ಹೀಗಾದರೆ ಏನು ಗತಿ?" ಇನ್ನೂ ಎರಡು ಬಾರಿ ಅತ್ತಿತ್ತ ಓಡಾಡಿದ ಅನಂತರ ಮಹಾರಾಜರು ಉದ್ಗರಿಸಿದರು. ಮಂತ್ರಿಗೆ ಏನು ವಿಷಯ ಎಂಬುದು ತಿಳಿಯಲಿಲ್ಲ. ವಿಷಯವನ್ನು ಸಂಪೂರ್ಣ ತಿಳಿಯುವ ಆಸೆಯಿಂದ "ಯಾವುದು ಹೇಗಾದರೆ ಯಾವ ಗತಿ?" ಎಂದು ಕೇಳಿದರು.

"ಬೆಲೆಗಳೆಲ್ಲ ಏರುತ್ತಿವೆಯಂತೆ.."

"ಯಾವುದರ ಬೆಲೆ?"

"ಇನ್ನ್ಯಾವುದಯ್ಯಾ..ದವಸ ಧಾನ್ಯ, ಬೇಳೆ ಕಾಳುಗಳು,ತರಕಾರಿ..."

ಮಂತ್ರಿಗಳಿಗೆ ವಿಷಯ ಇಷ್ಟೇನಾ ಅನಿಸಿತು. ವಾಸ್ತವದಲ್ಲಿ ಅವಕ್ಕೆಲ್ಲ "ಬೆಲೆ" ಎಂಬುದೊಂದು ಇರುತ್ತದೆ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವೆಲ್ಲವೂ ಸಹಜವಾಗಿ,ಸುಲಭವಾಗಿ, ಸುಮ್ಮನೆ ಸಿಗುವ ವಸ್ತುಗಳು ಎಂದು ಭಾವಿಸಿದ್ದರು.ಬೆಲೆ ಏರಿದರೆ ಮಹಾರಾಜರಿಗೆ ಯಾಕೆ ಚಿಂತೆಯಾಗಬೇಕು? ಅದು ಸರಿ,ಮಹಾರಾಜರಿಗೆ ಅದರ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು? ಮಂತ್ರಿಯಾದ ತನಗೆ ತಾನೇ ಎಲ್ಲವೂ ಮೊದಲು ತಿಳಿಯಬೇಕಾದದ್ದು? ಮಂತ್ರಿಗೆ ಈ ಚಿಂತೆ ಶುರುವಾಯಿತು.

"ಯಾರು ನಿಮಗೆ ಈ ವಿಷಯ ಹೇಳಿ ತೊಂದರೆ ಕೊಟ್ಟವರು? ಈ ಕ್ಷಣದಲ್ಲಿ ಅವರ ಶಿರಚ್ಛೇದನ ಮಾಡಿಸುತ್ತೇನೆ"

"ಮಹಾರಾಣಿ"

ಉತ್ತರ ಕೇಳಿ ಮಂತ್ರಿಗಳು ತಣ್ಣಗಾದರು. ಮಹಾರಾಣಿಯವರ ಶಿರಚ್ಛೇದ ಮಾಡಿಸುವುದೇ?ಮಾಡಿದರೆ ತನ್ನ ಕತ್ತಿನ ಮೇಲೆ ಏನುಳಿಯುತ್ತದೆ?

"ಅವರಿಗೆ ಹೇಗೆ ಗೊತ್ತಾಯಿತು?"

"ಅಡುಗೆ ಮಾಡುವವಳು"

"ಸರಿ.ಸಮಸ್ಯೆ ಬಗೆಹರಿಯಿತಲ್ಲ..ಅವಳ ಶಿರಚ್ಛೇದ ಮಾಡಿದರಾಯಿತು ಅನಂತರ ಬೆಲೆಗಳು ಏರಿದರೆ ಯಾರಿಗೂ ತಿಳಿಯುವುದಿಲ್ಲ ತಾನೇ?" ಅಂದರು.

ಮಹಾರಾಜರಿಗೆ ಕನಿಕರ ಬಂತು.ಮಂತ್ರಿಯಿಂದ ಬೇರೇನು ಉತ್ತರ ಸಾಧ್ಯ?ಬೆಳಗಿಂದ ಚಿಂತಿಸುತ್ತಿದ್ದ ಅವರಿಗೇ ಇನ್ನೂ ಉತ್ತರ ಹೊಳೆದಿರಲಿಲ್ಲ.

"ಹಾಗಲ್ಲಯ್ಯಾ..ಬೆಲೆಗಳು ಏರಿ ಬಡವರಿಗೆ ತುಂಬಾ ತೊಂದರೆ ಆಗುತ್ತಿದೆಯಂತೆ.ಅವರಿಗೆಲ್ಲ ಒಬ್ಬ ನಾಯಕ ಹುಟ್ಟಿಕೊಂಡಿದ್ದಾನಂತೆ.ಅವರು ಧರಣಿ,ರಾಸ್ತಾ ರೋಕೋ ಮಾಡುತ್ತಾರಂತೆ..ಅವರೆಲ್ಲ ಒಂದಾಗಿ ನಿಂತರೆ ನನ್ನ ಮಗನ ಪಟ್ಟಾಭಿಷೇಕಕ್ಕೆ ಜನರೆಲ್ಲಯ್ಯಾ ಇರುತ್ತಾರೆ?"

ಸಮಸ್ಯೆ ನಿಜವಾಗಲೂ ಗಂಭೀರವಾಗಿದೆ. ಎಷ್ಟು ಯೋಚಿಸಿದರೂ ಮಂತ್ರಿಗಳಿಗೆ ಬೆಲೆ ಏರಿದ್ದು, ಅಡುಗೆಯವಳು ಮಹಾರಾಣಿಗೆ ಯಾಕೆ ಹೇಳಿದ್ದು..ಮಹಾರಾಣಿಯವರು ಮಹಾರಾಜರಿಗೆ ಯಾಕೆ ಹೇಳಿದ್ದು..ಬೆಲೆ ಏರಿದರೆ ಜನರು ಯಾಕೆ ಒಟ್ಟಾಗಬೇಕು ಎಂಬುದು ತಿಳಿಯಲಿಲ್ಲ. ಒಂದು ಉಪಾಯ ಹೊಳೆಯಿತು.

"ಸ್ವಾಮೀ, ಇದರ ಕಾರಣ ತಿಳಿಯಲು ನಾವೊಂದು ಸಮಿತಿ ಮಾಡುವಾ.ಅವರು ಅದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ಕೊಟ್ಟ ಕೂಡಲೇ ಮುಂದಿನ ಕ್ರಮ ತೆಗೆದುಕೊಂಡರಾಯಿತು."

ಮಹಾರಾಜರಿಗೂ ಇದು ಒಳ್ಳೇ ಉಪಾಯ ಅನಿಸಿತು. ಅಷ್ಟಕ್ಕೂ ಎಲ್ಲ ಸಮಸ್ಯೆಗಳಿಗೂ ತಾವೇ ಚಿಂತಿಸುತ್ತ ಕೂತರೆ ರಾಜ್ಯಭಾರ ಮಾಡುವುದು ಹೇಗೆ?ಕೂಡಲೇ ಒಂದು ಸಮಿತಿ ಮಾಡುವ ಜವಾಬ್ದಾರಿಯನ್ನು ಮಂತ್ರಿಗೇ ವಹಿಸಿ,ಬೆಲೆ ಏರಿಕೆಯ ಕಾರಣವನ್ನು ಒಂದು ವಾರದಲ್ಲಿ ತಮಗೆ ತಿಳಿಸಲು ಸೂಚಿಸಿದರು.

ಅದರಂತೆ ಒಂದು ಸಮಿತಿ ರಚನೆಯಾಯಿತು. ಸಮಿತಿಗೆ ಈ ಕೆಳಕಂಡ ವಿಚಾರಗಳ ಬಗ್ಗೆ ವರದಿ ಕೊಡಲು ಸೂಚಿಸಲಾಯಿತು.

೧.ಅಡುಗೆಯವಳಿಗೆ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು?

೨.ಅವಳು ಅದನ್ನು ಮಹಾರಾಣಿಯವರಿಗೆ ತಿಳಿಸಲು ಕಾರಣಗಳೇನು?

೩.ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?

3 comments:

ಮನಸ್ವಿ said...

ಇದೆಲ್ಲಾ ಕಥೆಯನ್ನು ನಿಮಗೆ ತಲೆಯಲ್ಲಿ ತುಂಬಿದವರು ಯಾರು? ಕಥೆ ಹೊಳೆಯಲು ಕಾರಣರಾದವರು ಯಾರು ತಿಳಿಸಿ, ಇನ್ನು ಕೆಲವೇ ನಿಮಿಷಗಳಲ್ಲಿ ಅವರ ಶಿರಚ್ಛೇದನ ಮಾಡಿಸುವ ಪ್ರಯತ್ನ ಮಾಡಲಾಗುತ್ತದೆ!

ಮನಸಿನಮನೆಯವನು said...

ಹಾಗೆನೋ..

ಸೀತಾರಾಮ. ಕೆ. / SITARAM.K said...

ಅ೦ಧೇರಿ ರಾಜ್ ಚೌಪಾಟ ರಾಜಾ -ಒಳ್ಳೆ ವಿಡಂಬನೆ!