Wednesday, June 29, 2011

ಕಾವ್ಯ ಧ್ವನಿ



ಒಂದು ಪದ ಅಥವಾ ಒಂದು ಪದಗುಚ್ಛ ಕಾವ್ಯದ ಧ್ವನಿಶಕ್ತಿಯನ್ನು ವಿಸ್ತರಿಸುವ ಅನೇಕ ಉದಾಹರಣೆಗಳು ಇವೆ. ಕಾವ್ಯ ಅರ್ಥವಾಗುವುದು ಅಂದರೆ ನಿರ್ದಿಷ್ಟ ಸನ್ನಿವೇಶದಲ್ಲಿ ಉಪಯೋಗಿಸಿದ ಪದಗಳ ಅರ್ಥವಾಗುವುದು ಮತ್ತು ಆ ಸನ್ನಿವೇಶದ ವಾಚ್ಯಾರ್ಥವಾಗುವುದು ಮಾತ್ರವಲ್ಲ. ಜೊತೆಗೇ  ಪದಗಳ ಬಳಕೆಯಲ್ಲಿ, ಸಂಯೋಜನೆಯಲ್ಲಿ ವಾಚ್ಯಾರ್ಥವನ್ನು ಮೀರುವ,ಸನ್ನಿವೇಶದ ಸೂಕ್ಷ್ಮತೆಯನ್ನು ವಿಸ್ತರಿಸುವ ಒಂದು ಹೊಳಹನ್ನು ಗ್ರಹಿಸುವುದು. ಈ ಹೊಳಹು ಆ ಸನ್ನಿವೇಶಕ್ಕೆ ಪೂರಕವಾಗಿದ್ದು ಕಾವ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದೆರಡು ಸನ್ನಿವೇಶಗಳನ್ನು ಕುರಿತು ನಾನು ಬರೆಯುತ್ತಿದ್ದೇನೆ.  ಪ್ರತಿ ಬಾರಿ ಓದಿದಾಗಲೂ ಕುಮಾರವ್ಯಾಸನ ಭಾರತ ಮತ್ತು ಅಡಿಗರ ಕಾವ್ಯ ನನಗೆ ಹೊಸದೆಂಬಂತೆ ಕಾಣುತ್ತವೆ.ಅಲ್ಲಿಂದ ಆರಿಸಿದ ಉದಾಹರಣೆಗಳಿವು. ನಾನು ಕಾವ್ಯವನ್ನು ಗ್ರಹಿಸಿದ ರೀತಿ ತಪ್ಪೂ ಇರಬಹುದು ಎಂಬ ಎಚ್ಚರವೂ ನನಗಿದೆ. ಇದರ ನಿರ್ಧಾರ ಓದುಗರದ್ದು.
*****
ಅಭಿಮನ್ಯು ಚಕ್ರವ್ಯೂಹ ಭೇದನಕ್ಕಾಗಿ ಹೊರಟು ನಿಂತಾಗ, ಆತನ ಸಾರಥಿಯು ಕರ್ಣ, ದ್ರೋಣ,ಕೃಪ, ಜಯದ್ರಥ ಮುಂತಾದವರ ಜೊತೆ ಸಂಗರ ಅಭಿಮನ್ಯುವಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಾನೆ.ಸಾರಥಿ ಆಡುವ ಮಾತು:"ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು" (ಬಲುಹು=ಸಾಮರ್ಥ್ಯ, ಅಂಘೈಸು=ಒಪ್ಪು,ಸಮ್ಮತಿಸು). ಇದಕ್ಕೆ ಪ್ರತಿಯಾಗಿ ಅಭಿಮನ್ಯು ಕೊಡುವ ಉತ್ತರ:
"ಬವರವಾದರೆ ಹರನ ವದನಕೆ
ಬೆವರ ತಹೆನವಗೆಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ" (ಕು.ವ್ಯಾ.-ದ್ರೋ.ಪ.-೪-೫೬)
(ಇದರ ಸರಳ ರೂಪಾಂತರ ಹೀಗೆ: ಬವರವಾದರೆ ಹರನ ವದನಕೆ ಬೆವರ ತಹೆ, ಅವಗೆಡಿಸಿದರೆ ವಾಸವನ ಸದೆವೆ, ಹೊಕ್ಕಡೆ ಅಹುದು ಎನಿಸುವೆನು ಭಾರ್ಗವನ, ಜವನ ಜವಗೆಡಿಸುವೆನು, ಸಾಕಿನ್ನು ಅವರು ಇವರಲಿ ಏನು ಅರ್ಜುನನು ಮಾಧವನು ಮುನಿದೊಡೆ ಗೆಲುವೆನು ಅಂಜದೆ ರಥವ ಹರಿಸೆಂದ)(ಬವರ=ಯುದ್ಧ,ವಾಸವ=ಇಂದ್ರ,ಭಾರ್ಗವ= ಪರಶುರಾಮ,ಜವ=ಯಮ)
ಅಭಿಮನ್ಯುವಂತಹ ಬಿಸಿರಕ್ತದವೀರ ಆಡಬಹುದಾದ ಸಹಜವಾದ ಮಾತಿದು. ನನಗೆ ಅದ್ಭುತವೆನಿಸಿದ್ದು ಬವರವಾದರೆ ಹರನ ವದನಕೆ ಬೆವರ ತಹೆ ಎಂಬ ಹೇಳಿಕೆ.ಇದನ್ನು ವಿಶ್ಲೇಷಿಸುವಾ.

ಹರನ ವದನಕ್ಕೂ ಉಳಿದವರ ವದನಕ್ಕೂ ಒಂದು ಅಂತರವಿದೆ. ಹರನ ವದನದಲ್ಲಿ ಮೂರನೆಯ ಕಣ್ಣುಂಟು ಮತ್ತು ಈ ಕಣ್ಣಿನಲ್ಲಿ ಶಕ್ತಿ ಕಾವಿನ ರೂಪದಲ್ಲಿದೆ. ಈ ಕಾವು ಕ್ಷಣಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನು ಸುಡಬಲ್ಲದು. ಉಳಿದ ಯಾರ ವದನದಲ್ಲೂ ಇಂತಹ ವಿಶೇಷತೆ ಇಲ್ಲ. ಜವನ ವದನದಲ್ಲೂ ಇಲ್ಲ. ಇಡೀ ಜಗತ್ತನ್ನು ಕ್ಷಣದಲ್ಲಿ ದಹಿಸಬಲ್ಲ ಕಾವಿರುವ ಕಣ್ಣು ವದನದಲ್ಲಿ ಇರುವಾಗಲೂ ಶಿವನ ಮುಖ ಬೆವರುವುದಿಲ್ಲ.ಕಾವು ಅತಿಯಾದಾಗ ಮುಖ ಬೆವರುವುದು ಸಹಜ.ಅಂತಹ ಕಾವಿಗೂ ಬೆವರದ ಮುಖವನ್ನು ತನ್ನ ಯುದ್ಧದ ಕಾವಿನಲ್ಲಿ  ಬೆವರುವಂತೆ ಮಾಡುತ್ತೇನೆ ಎಂಬ ಮಾತನ್ನು ಅಭಿಮನ್ಯು ಆಡಿದಾಗ ವ್ಯಕ್ತವಾಗುವುದು ಕವಿಯ ಪ್ರತಿಭೆ.ಬವರವಾದರೆ ಜವನ ವದನಕೆ ಬೆವರ ತಹೆನು...............ಶಿವನ ಜವಗೆಡಿಸುವೆನು ಎಂದು ಹೇಳಿದ್ದರೂ ಛಂದಸ್ಸು ತಪ್ಪುತ್ತಿರಲಿಲ್ಲ,ವಾಚ್ಯಾರ್ಥ ಬದಲಾಗುತ್ತಿರಲಿಲ್ಲ,ಆದರೆ ಈ ಧ್ವನಿ ಮಾತ್ರ ಇರುತ್ತಿರಲಿಲ್ಲ.

ಈ ರೀತಿ ಪದಗಳ ಬಳಕೆಯಲ್ಲಿಯೇ ವಿಶೇಷತೆಯನ್ನು ವ್ಯಕ್ತಪಡಿಸಿದ ಕೆಲವು ಉದಾಹರಣೆಗಳನ್ನು ಗಮನಿಸಿ.

ಭೀಷ್ಮ ಶರಶಯ್ಯಾಗತನಾದ ದಿನದ ಸೂರ್ಯಾಸ್ತವನ್ನು ಕುಮಾರವ್ಯಾಸ ವರ್ಣಿಸುವುದು ಹೀಗೆ: "ಪಡುವಣ ಶೈಲ ವಿಪುಲಸ್ತಂಭದೀಪಿಕೆಯಂತೆ ರವಿ ಮೆರೆದ"(ಭೀ.ಪ-೧೦-೪೨).   ("ಪಡುವಣ ಶೈಲ ವಿಪುಲಸ್ತಂಭದೀಪಿಕೆ"ಎಂಬುದೇ  ಒಂದು ಅದ್ಭುತ ರೂಪಕ). ಇಲ್ಲಿ ಮೆರೆದ ಎಂಬ ಪ್ರಯೋಗವನ್ನು ಗಮನಿಸಿ. ಸೂರ್ಯ ಅಸ್ತಮಿಸಲಿಲ್ಲ,ಮೆರೆಯುತ್ತಾನೆ. ಭೀಷ್ಮ ಸಾಯಲಿಲ್ಲ,ಶರಮಂಚದಲ್ಲಿ ಮೆರೆಯುತ್ತಿದ್ದಾನೆ.ಭೀಷ್ಮನ ಇಡೀ ಬದುಕಿನ ವೈಭವವನ್ನು ಈ ಒಂದು ಪದದ ಮೂಲಕ ಕುಮಾರವ್ಯಾಸ ಚಿತ್ರಿಸುತ್ತಾನೆ.ಮೆರೆದ ಎಂಬ ಪದದ ಬದಲು ಬೇರೆ ಯಾವ ಪದಪ್ರಯೋಗವಾಗಿದ್ದರೂ ಇಂತಹ ಧ್ವನಿ ಹೊರಡುತ್ತಿರಲಿಲ್ಲ.

ಭೀಷ್ಮ ಶರಶಯ್ಯೆ ಸೇರಿದ ದಿನದ ರವಿಯನ್ನು ಕುಮಾರವ್ಯಾಸ ಮೆರೆಸಿದರೆ ದ್ರೋಣನ ಮರಣದ ದಿನದ ಸೂರ್ಯಾಸ್ತವನ್ನು ಚಿತ್ರಿಸಿದ ರೀತಿಯನ್ನು ಗಮನಿಸಿ."ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ"(ದ್ರೊ.ಪ.-೧೯-೫೫).ದ್ರೋಣನ ಸಾವಿನ ಚಿತ್ರಣದ ಹಿನ್ನೆಲೆಯಲ್ಲಿ (ಆಸಕ್ತರು ದ್ರೋಣಪರ್ವದ ಹದಿನೆಂಟನೆಯ ಸಂಧಿಯ ೬೬ ಮತ್ತು ೬೭ ನೆಯ ಪದ್ಯಗಳನ್ನು ಓದಬಹುದು). ಈ ವರ್ಣನೆಯನ್ನು ಗ್ರಹಿಸಿ. ಮಗ ಸತ್ತ ಸುದ್ದಿ ಕೇಳಿಯೂ ಯುದ್ಧ ಮಾಡುತ್ತಿರುವ ದ್ರೋಣ ತನ್ನ ಬಗೆಗಿನ ಭೀಮನ ವ್ಯಂಗಭರಿತ ಟೀಕೆಯಿಂದ ನೊಂದು ಸಾಕೀ ದೇಹವೆಂದು ವಿರಾಗದಲ್ಲಿ  ಯುದ್ಧವಿಮುಖನಾಗುತ್ತಾನೆ. ರವಿ ಕೂಡ ವಿರಾಗದಲ್ಲಿ ಮುಸುಡ(=ಮುಖ) ತಿರುಹುತ್ತಾನೆ. ರವಿ ಅಂಬರವನ್ನು ಬೀಳ್ಕೊಡುತ್ತಾನೆ. ಅಂಬರ ಎಂಬ ಪದಕ್ಕೆ ಆಕಾಶ ಎಂಬ ಜನಜನಿತ ಅರ್ಥವಲ್ಲದೆ ಬಟ್ಟೆ,ಅರಿವೆ ಎಂಬ ಅರ್ಥವೂ ಉಂಟು. ದೇಹವನ್ನು ಅತ್ಮದ ಬಟ್ಟೆ ಎನ್ನುತ್ತಾರೆ. ರವಿ ಆಕಾಶವನ್ನು ಬೀಳ್ಕೊಟ್ಟರೆ ದ್ರೋಣ ದೇಹವನ್ನು ಬೀಳ್ಕೊಡುತ್ತಾನೆ. ಸೂರ್ಯಾಸ್ತವನ್ನು ವಾಚ್ಯಾರ್ಥದಲ್ಲಿ ವರ್ಣಿಸುತ್ತಲೇ  ದ್ರೋಣನ ಸಾವಿನ ಸನ್ನಿವೇಶಕ್ಕೆ ಹೊಸ ಹೊಳಹನ್ನು ಕುಮಾರವ್ಯಾಸ ಕೊಡುತ್ತಾನೆ.

ಇನ್ನು ಕರ್ಣನ ಸಾವಿನ ದಿನದ ಸೂರ್ಯಾಸ್ತವನ್ನು ಗಮನಿಸಿ.
.........ಬಿಸುಟನಂಬುಜ ಮಿತ್ರನಂಬರವ|| (ಕ.ಪ-೨೭-೩೦)
ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ|
ಅಮಳ ಚಕ್ರಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ||(ಕ.ಪ.-೨೭-೩೧)

ಇಲ್ಲಿ ಸೂರ್ಯನನ್ನು ಅಂಬುಜ ಮಿತ್ರ ಎಂದು ಸೂಚಿಸಿರುವುದನ್ನು ಗಮನಿಸಿ. ಅಂಬುಜಮಿತ್ರನಾದ ರವಿ ಅಂಬುಜವನ್ನು ಬಿಟ್ಟು ಅಸ್ತಮಿಸುತ್ತಾನೆ. ಕರ್ಣ ಮತ್ತು ಸುಯೋಧನನ ಸ್ನೇಹದ ಹಿನ್ನೆಲೆಯಲ್ಲಿ ಈ ಹೋಲಿಕೆ ನೀಡುವ ಧ್ವನಿಯ ಬಗ್ಗೆ ಮತ್ತೆ ವಿಸ್ತಾರವಾಗಿ ಬರೆಯುವುದು ಅನಗತ್ಯ. ೩೧ನೆಯ ಪದ್ಯದಲ್ಲಿ ಒಂದರ ಜತೆ ಮತ್ತೊಂದನ್ನು ಜೋಡಿಯಾಗಿಸುವ ಮೂಲಕ ಕರ್ಣ ಸುಯೋಧನರ ಜೋಡಿತನದ ಚಿತ್ರಣವನ್ನು ಸೂಚಿಸುವ ಪರಿ ಬೆರಗು ಹುಟ್ಟಿಸುತ್ತದೆ.

ಅಡಿಗರ ಕಾವ್ಯದಲ್ಲಿ ಬರುವ ಇಂತಹ ಕೆಲವು ಚಿತ್ರಣಗಳ ಬಗೆಗೂ ಬರೆವ ಯೋಚನೆಯಿತ್ತು. ಈ ಲೇಖನವೇ ಸಾಕಷ್ಟು ಉದ್ದವಾಯಿತು. ಅಡಿಗರ ಬಗ್ಗೆ ಇನ್ನೊಮ್ಮೆ..ಎಂದಾದರೂ.                                                                              

























5 comments:

sunaath said...

ಹೊಸಮನೆಯವರೆ,
ಕುಮಾರವ್ಯಾಸನು ಚಿತ್ರಿಸಿದ ಮರಣಸನ್ನಿವೇಶಗಳನ್ನು ನೀವು ಒಂದೆಡೆಗೆ ತಂದು, ವಿವರಣೆ ನೀಡಿದ್ದು ತುಂಬ ಚೆನ್ನಾಗಿದೆ. ಪ್ರತ್ಯೇಕವಾಗಿ ಓದಿದಾಗ ಹೊಳೆಯದೆ ಇದ್ದದ್ದು ಈಗ ತಿಳಿದಂತಾಯ್ತು. ನಿಮಗೆ ಧನ್ಯವಾದಗಳು. ಅಡಿಗರ ಕವನಗಳ ವಿಶ್ಲೇಷಣೆಯನ್ನು ಬೇಗನೆ ಮಾಡಿರಿ. ನಿರೀಕ್ಷಿಸುತ್ತಿರುವೆ.

Subrahmanya said...

ತುಂಬಾ ಚೆನ್ನಾಗಿದೆ.

prabhamani nagaraja said...

'ಬವರವಾದರೆ ಹರನ ವದನಕೆ ಬೆವರ ತಹೆ' ಎಂಬ ಹೇಳಿಕೆಯನ್ನು ಬಹಳ ಚೆನ್ನಾಗಿ ಅರ್ಥೈಸಿದ್ದೀರಿ. ನಿಮ್ಮ ಲೇಖನಗಳನ್ನು ಓದುವುದರಿ೦ದ ಉತ್ತಮ ವಿಚಾರ ತಿಳಿಯುತ್ತದೆ. ಧನ್ಯವಾದಗಳು.

Manjunatha Kollegala said...

"ಬವರವಾದರೆ ಹರನ ವದನಕೆ..." ಉತ್ತಮ ವಿವರಣೆ; ಅದು ಕುಮಾರವ್ಯಾಸನ ಪ್ರತಿಭೆಯ ಪುಟ್ಟ ಅಂಶ ಮಾತ್ರ.

ವಿವಿಧ ಸೂರ್ಯಾಸ್ತಗಳ ಜೊತೆ ವಿವಿಧ ಮರಣಗಳ ಸಮೀಕರಣವನ್ನು ಒಟ್ಟಿಗೇ ಓದಿದ್ದು ಹೊಸ ಹೊಳಹು ತಂದಿತು. ಕಾವ್ಯದ ಸೂಕ್ಷ್ಮಗಳನ್ನು ತೋರಿಸುವ ಇಂಥ ಬರಹಗಳು ನಿಮ್ಮಿಂದ ಹೆಚ್ಚು ಹೆಚ್ಚು ಬರಲಿ. ಅಂದಹಾಗೆ ಕೆಲ ದಿನ ಬ್ಲಾಗ್ಮಂಡಲದಿಂದ ಕಾಣೆಯಾಗಿದ್ದಿರಿ :) ಎಲ್ಲ ಕ್ಷೇಮವಷ್ಟೆ?

prabhamani nagaraja said...

ಹೊಸ ಲೇಖನವನ್ನು ನಿರೀಕ್ಷಿಸಿ ನಿಮ್ಮ ಬ್ಲಾಗ್ ಗೆ ಬ೦ದಿದ್ದೆ. ನಿರಾಶೆಯಾಯಿತು. ಬರೆಯಿರಿ ಸರ್, ನಿರೀಕ್ಷೆಯಲ್ಲಿರುವೆ.