Monday, March 24, 2014

ಏಕದಂತ.

                                                               


ಕೆಲವು ಸಲ ನನ್ನಲ್ಲಿ ಹುಟ್ಟುವ ಕುತೂಹಲಕ್ಕೆ ಕಾರಣವೇನು ಎಂಬುದು ನನಗೂ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಕಾರಣ ನಿಮಿತ್ತವಾಗುತ್ತದೆ. ನಿನ್ನೆ ಹಾಗೇ ಆಯಿತು. ಎಲ್ಲೋ ಹಾಕಿದ್ದ ಮೈಕಲ್ಲಿ ನಮ್ಮ ಗಣಪತಿಯ ಸ್ತೋತ್ರ. ಅದರಲ್ಲಿ ಬರುವ "ಏಕದಂತಾಯ" ಎಂಬುದನ್ನು ಕೇಳಿ ಎಲಾ! ಈ ಗಣಪ ಯಾಕೆ ಏಕದಂತನಾದ ಎಂಬ ಕುತೂಹಲ ಹುಟ್ಟಿತು. ಇಲ್ಲಿಯವರೆಗೂ ಗಣಪನ ಈ ಹೆಸರು ಕೇಳಿದ್ದರೂ ಈ ಕುತೂಹಲ ಬಂದಿರಲಿಲ್ಲ. ಗಣಪನಿಗೆ  ಆನೆಯ ತಲೆ ತರುವವರು ಒಂದೇ ದಂತ ಇರುವುದನ್ನು ಗಮನಿಸದೆ ತಂದರೇ? ಪಾರ್ವತಿಯಿಂದ ಬೈಸಿಕೊಳ್ಳುತ್ತಿದ್ದ ಈಶ್ವರ ಗಡಿಬಿಡಿಯಲ್ಲಿ ಗಮನಿಸದಿದ್ದರೂ ತಾಯಿ ಪಾರ್ವತಿ ಅದನ್ನು ಗಮನಿಸಿ ಈ ಮುಖ ಬೇಡ ಎಂದು ತಕರಾರು ಎತ್ತಬಹುದಿತ್ತಲ್ಲ. ಯಾಕೆ ಹೀಗಾಯಿತು? ಇದರ ಮೂಲ ಪತ್ತೆ ಹಚ್ಚಬೇಕು ಎಂಬ ಉತ್ಸಾಹ ಹುಟ್ಟಿತು. ನಮ್ಮ ಸ್ತೋತ್ರಮಾಲಿಕೆಗಳಲ್ಲಿ ಸಾಲಾಗಿ ನಾಮಾವಳಿ ಇರುತ್ತದೆಯೇ ಹೊರತು ವಿವರ ಇರುವುದು ಕಡಿಮೆ. ಸ್ಥಳೀಯ ಪಂಡಿತರೊಬ್ಬರನ್ನು ಕೇಳಿದಾಗ ಗಣಪ ಒಮ್ಮೆ ಬಿದ್ದಿದ್ದನಲ್ಲ..ನೋಡು ಚಂದ್ರ ನಕ್ಕು ಶಾಪ ಬಂತಲ್ಲ..ಆಗ ಮುರಿಯಿತು ಎಂದು ನಿಖರವಾಗಿ ಹೇಳಿದರು. ಇದ್ದರೂ ಇರಬಹುದು..ಬಿದ್ದು ಹಲ್ಲು ಮುರಿದುಕೊಂಡರೆ ನೋಡುವವರು ನಕ್ಕರದು ತಪ್ಪಲ್ಲ. ಅಂತೂ ಅವತ್ತಿಂದ ಗಣಪನಿಗೆ ಮತ್ತೊಂದು ಹೆಸರು ಬಂದಂತಾಯಿತು
(ಅಲ್ಲಿಯವರೆಗೆ ಅವನ ನಾಮಾವಳಿಯಲ್ಲಿ ೯೯೯ "ನಾಮ"ಗಳು ಮಾತ್ರ ಇದ್ದವೇ?)

ಆದರೆ ನಮ್ಮ ಪಂಡಿತರು ಸುಮ್ಮನೆ ಬುರುಡೆ ಬಿಟ್ಟರು ಎಂಬುದು ಮೊನ್ನೆ ಬ್ರಹ್ಮಾಂಡ ಪುರಾಣ ಓದುತ್ತಿದ್ದಾಗ ತಿಳಿಯಿತು. ಅಲ್ಲಿದೆ ಗಣಪ ಏಕದಂತನಾದ ಕಾರಣ.  ನೀವೂ ತಿಳಿದುಕೊಳ್ಳಿ.
ಈಶ್ವರನಿಂದ ವರಪಡೆದು ಕ್ಷತ್ರಿಯ ಕುಲ ಸಂಹರಿದ ಪರಶುರಾಮ ಒಮ್ಮೆ ಈಶ್ವರನ ದರ್ಶನಕ್ಕೆಂದು ಕೈಲಾಸಕ್ಕೆ ಆಗಮಿಸಿದ. ಅವೇಳೆ. ಈಶ್ವರ ಆ ಸಮಯದಲ್ಲಿ ಪಾರ್ವತಿಯೊಂದಿಗೆ ಸಲ್ಲಾಪದಲ್ಲಿದ್ದ. ತಾಯಿ ಸ್ನಾನಕ್ಕೆ ಹೋದಾಗ ಕಾಯುತ್ತ ನಿಂತಂತೆ ಗಣಪ ಈಗಲೂ ಹೊರಗೆ ಕಾವಲು ನಿಂತಿದ್ದ.(ಭಕ್ತರನ್ನು ಕಾಯುವುದು ಇಲ್ಲಿಂದಲೇ ಕಲಿತಿರಬೇಕು.) ತನ್ನ ಕರ್ತವ್ಯಪರತೆಯನ್ನು ಮೆರೆದು ಪರಶುರಾಮನನ್ನು ತಡೆದ. ಈಗ ಈಶ್ವರನ ಭೇಟಿ ಸಾಧ್ಯವಿಲ್ಲ.ನಿಮಗೆ ಬೇರೆ ಸಮಯ ನಿಗದಿ ಮಾಡಿಕೊಡಲಾಗುವುದು.ಕಾಯಿರಿ. ಎಂದು ಪರಶುರಾಮನ ಕೋರಿಕೆಯನ್ನು ನಿರಾಕರಿಸಿದ. ಪರಶುರಾಮ ಪದೇಪದೇ ವಿನಂತಿಸಿದರೂ ಗಣಪ ತಲೆ(ಸೊಂಡಿಲು?) ಅಲ್ಲಾಡಿಸಿ ನಿರಾಕರಿಸಿದ. ಬಂತು ನೋಡಿ ಪರಶುರಾಮನಿಗೆ ಭಯಂಕರ ಸಿಟ್ಟು! ಆತ ತನ್ನ ಆಯುಧವಾದ ಪರಶುವನ್ನು ಗಣಪನ ಮೇಲೆ ಪ್ರಯೋಗಿಸಲು ತಯಾರಾದ. ಅವನು ಪ್ರಯೋಗಿಸುತ್ತಾನೆ ಎಂಬುದು ಗಣಪನಿಗೆ ಮುಂಚೆಯೇ ತಿಳಿದು ಗಣಪನನ್ನು ಅನಾಮತ್ತಾಗಿ ಸೊಂಡಿಲಿಂದ ಎತ್ತಿ ಮೇಲಿನ ಏಳು+ವೈಕುಂಠ+ಗೋಲೋಕವನ್ನೂ ಮತ್ತು ಕೆಳಗಿನ ಏಳು ಲೋಕವನ್ನೂ ತೋರಿಸಿಬಿಟ್ಟ. ಪರಶುರಾಮನಿಗೆ ಒಂದೆಡೆ ಖುಷಿ ಮತ್ತೊಂದೆಡೆ ದುಃಖ. ನಿರಾಯಾಸವಾಗಿ ಎಲ್ಲ ಲೋಕಗಳನ್ನೂ ನೋಡಿದ ಖುಷಿ. ಆಯುಧ ಪ್ರಯೋಗಕ್ಕಿಂತ ಮುಂಚೆಯೇ ಸೋತದ್ದಕ್ಕೆ ಬೇಸರ. ಆದರೂ ಬುದ್ಧಿ ಕಲಿಯದ ಪರಶುರಾಮ ಆತ ಸೊಂಡಿಲಿಂದ ಇಳಿಸಿದ ಕೂಡಲೇ ಪರಶುವನ್ನು ಪ್ರಯೋಗಿಸಿಯೇ ಬಿಟ್ಟ. ಈಶ್ವರನಿಂದ ಪ್ರಾಸಾದಿತವಾದ ಈ ಪರಶುವನ್ನು ನಿರಾಕರಿಸುವುದು ಅಥವಾ ಗೆಲ್ಲುವುದು ಈಶ್ವರನಿಗೆ(ಅಪ್ಪನಿಗೆ) ಮಾಡುವ ಅವಮಾನ ಎಂಬ ವಿನೀತ ಭಾವದಿಂದ ಗಣಪ ಅದನ್ನು ತನ್ನ ಕುಂಭದ ಎಡಭಾಗದಿಂದ ತಡೆದ. ಘಾತವಾಯಿತು ನೋಡಿ. ಗಣಪನ ಎಡದಂತ ಮುರಿದುಬಿತ್ತು. ಹೀಗೆ ಗಣಪ ಏಕದಂತನಾದ.
(ಈ ಕತೆ ಇನ್ನೂ ಇದೆ. ಆದರೆ ಗಣಪ ಹೊಸದಂತ ಕಟ್ಟಿಸಿಕೊಳ್ಳಲಿಲ್ಲವಾದ್ದರಿಂದ ಕತೆಯನ್ನು ವಿಸ್ತರಿಸುವ ಅಗತ್ಯವಿಲ್ಲ.)
(ಆಸಕ್ತರ ಗಮನಕ್ಕೆ:ಮೇಲಿನ ಏಳು ಲೋಕಗಳು-ಭೂ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ
                         ಕೆಳಗಿನ ಏಳು ಲೋಕಗಳು-ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ.)                                                                       

Thursday, July 25, 2013

ಭೂಮಿಗೀತ ಕವನದ ನಾಲ್ಕು ಸಾಲುಗಳು.


ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ.
ಅವರ ಬೆನ್ನಿಗೆ ಸದಾ ನಾಲ್ಕುಮಂದಿ;
ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;
ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.
(ಗೋಪಲಕೃಷ್ಣ ಅಡಿಗ-ಸಮಗ್ರ ಕಾವ್ಯ-ಪುಟ ೨೬೪)
    ಇತ್ತೀಚೆಗೆ ಕೊಂಡ ಅಡಿಗರ ಸಮಗ್ರ ಕಾವ್ಯ ಓದುತ್ತಿದ್ದೆ. ಅವರ ಕವನಗಳನ್ನು ನಾನು ಬಿ.ಎ. ಓದುತ್ತಿದ್ದ ಕಾಲದಿಂದಲೂ ಓದುತ್ತಿದ್ದೆ.ಅವರ ಧೋರಣೆಗಳು ಏನೇ ಇರಲಿ ಅವರ ಕವನಕಟ್ಟುವ ರೀತಿ ಒಂದು ವಿಸ್ಮಯ. ಕಲ್ಲು ಕೆತ್ತಿ ವಿಗ್ರಹ ನಿರ್ಮಿಸಿದಂತೆ. ಈಗ ಮತ್ತೆ ಅವರ ಭೂಮಿಗೀತ ಕವನದ ಈ ಸಾಲುಗಳನ್ನು ಓದುವಾಗ ಓಂದಿಷ್ಟು ಹೊಳೆಯಿತು. ಮುಂಚೆ ಏನು ಹೊಳೆದಿತ್ತು ಎಂದು ನನಗೇ ಕುತೂಹಲವಾಗಿ ನನ್ನ ಸಂಗ್ರಹದಲ್ಲಿದ್ದ ಅವರ ಭೂಮಿಗೀತ ಸಂಕಲನ ಹುಡುಕಿ ತೆಗೆದು ನೋಡಿದೆ. ಪುಣ್ಯಕ್ಕೆ ಅದರಲ್ಲಿ ನಾನು ಬರಕೊಂಡ ಟಿಪ್ಪಣಿಗಳಿದ್ದವು. ಅವನ್ನು ಮತ್ತೆ ಈಗಿನ ಒಂದಿಷ್ಟನ್ನು ಸೇರಿಸಿ ಬರೆಯುವ ಹುಮ್ಮಸ್ಸು ಬಂತು. ನಾನಿಲ್ಲಿ ಇಡೀ ಕವನದ ಬಗ್ಗೆ ಬರೆಯುತ್ತಿಲ್ಲ. ಬದಲಿಗೆ ಮೇಲಿನ ನಾಲ್ಕು ಸಾಲುಗಳನ್ನು ಓದಿದಾಗ ನನಗೆ ಅನಿಸಿದ್ದನ್ನು ಮಾತ್ರ ಬರೆಯುತ್ತಿದ್ದೇನೆ.
    ಇಲ್ಲಿ ಮೂರು ಬಿಡಿ ನೋಟಗಳಿವೆ.1)"ನರ್ಸುಗಳು.........ಸದಾ ನಾಲ್ಕು ಮಂದಿ" 2)"ತೊಟ್ಟಿಲಂಗಡಿಯಲ್ಲಿ.........ಅಗ್ಗ" 3)"ಜಾತಕರ್ಮದಿ......ಪಾರಂಗತ" ಮೊದಲನೆಯದು ಕ್ರಿಯಾತ್ಮಕವಾಗಿರುವ ಒಂದು ಸನ್ನಿವೇಶ. ಇಲ್ಲಿ "ಒಳಹೊರಗೆ" ಎಂಬ ಪದ ಡಾಕ್ಟರ್ ಮತ್ತು ನರ್ಸುಗಳ ಓಡಾಟವನ್ನು ಸೂಚಿಸುತ್ತಿದೆ. ಹೆರಿಗೆಯ ಸಂದರ್ಭದಲ್ಲಿ ಓಡಾಟ ಅಂದರೆ ಒಂದು ಜೀವ ಹುಟ್ಟುತ್ತಿರುವ ಸೂಚನೆ. ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ಎಂಬುದು ಅವರ ಸಹಾಯಕರನ್ನು ಸೂಚಿಸುತ್ತದೆ.
ಎರಡನೆಯ ಸಾಲು ಹುಟ್ಟಿನ ಅನಂತರ ಮಗುವನ್ನು ತೊಟ್ಟಿಲಲ್ಲಿ ಇಟ್ಟ ಸ್ಥಿತಿಯನ್ನು ಸೂಚಿಸುತ್ತದೆ. ಹಿಂದೆ ತೊಟ್ಟಿಲನ್ನು ಬೊಂಬಿನಿಂದ ಮಾಡುತ್ತಿದ್ದ ಕಾರಣ ಆ ಪದವನ್ನು ಬಳಸಲಾಗಿದೆ. ತೊಟ್ಟಿಲು ತಯಾರಿಸಲು ಬೊಂಬು ಬೇಕಾದ ಕಾರಣ ಅದರ ಸಂಗ್ರಹ ಸಾಕಷ್ಟು ತೊಟ್ಟಿಲಂಗಡಿಯಲ್ಲಿ ಇರುತ್ತದೆ.ಹಾಗಾಗಿ ಅಲ್ಲಿ ಅದು ಅಗ್ಗ. ಅಂದರೆ ಮಗುವಿಗೆ ಒಂದು ಗುರುತನ್ನು(identity) ಕೊಡುತ್ತಿರುವ ಸೂಚನೆ.
    ಮೂರನೆಯ ಸಾಲು ನಾಮಕರಣದ ಕ್ರಿಯೆಯನ್ನು ಸೂಚಿಸುತ್ತಿದೆ. ಸಧ್ಯಕ್ಕೆ ನಾಮಕರಣ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಜಾತಕರ್ಮದಿ ನಿರತ ಎಂಬ ಹೇಳಿಕೆ ಸೂಚಿಸುತ್ತದೆ.ಇದು ವರ್ತಮಾನಕಾಲದ ಸೂಚಕ. ಹೀಗೆ ನಿರತನಾಗಿರುವ ಭಟ್ಟ ಸಾವಿನ ಅನಂತರದ ಕ್ರಿಯೆಯಲ್ಲೂ ಪಾರಂಗತನಿದ್ದಾನೆ ಎಂಬುದು ಹೇಳಿಕೆ.ಇದು ಮುಂದೆ ಬರುವ ಕಾಲದ ಅಥವಾ ಕ್ರಿಯೆಯ ಸೂಚಕ.
    ಇದಷ್ಟೇ ಈ ಸಾಲುಗಳ ಧ್ವನಿಯಾಗಿದ್ದರೆ ತುಂಬಾ ಸರಳವಾದ ಹೇಳಿಕೆಯ ರೂಪದಲ್ಲೇ ಉಳಿದುಬಿಡುತ್ತಿತ್ತು. ಹುಟ್ಟನ್ನು ಸೂಚಿಸುವ ಹೆರಿಗೆಮನೆಯೊಳಹೊರಗಿನ ಡಾಕ್ಟರರ ಬೆನ್ನ ಹಿಂದಿನ ನಾಲ್ಕು ಮಂದಿ ಹೆಣಹೊರುವ ನಾಲ್ಕು ಮಂದಿಯ ಸಂಕೇತವಾಗುತ್ತಾರೆ. ಈ ಧ್ವನಿಯನ್ನು ಮುಂದಿನ ಸಾಲುಗಳು ಪುಷ್ಟೀಕರಿಸುತ್ತವೆ. ತೊಟ್ಟಿಲಂಗಡಿಯಲ್ಲಿ ಸಿಗುವ ಬೊಂಬು ಚಟ್ಟಕಟ್ಟಲೂ ಬಳಕೆಯಾಗುತ್ತದೆ. ನಾಮಕರಣ ಮಾಡುತ್ತಿರುವ ಭಟ್ಟ ಅಪರಕ್ರಿಯೆಯಲ್ಲೂ ಪಾರಂಗತ ಎಂದರೆ ಸಾವಿನ ಅನಂತರ ಗುರುತನ್ನು ಅಳಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಮೂರು ಸಾಲುಗಳು ಹುಟ್ಟು ಮತ್ತು ಸಾವಿನ ಸಂಬಂಧವನ್ನು ಅನಿವಾರ್ಯತೆಯನ್ನು ವಿವರಿಸುತ್ತವೆ.
    ಇನ್ನೂ ಗಮನಿಸಬೇಕಾದ ಅಂಶವೆಂದರೆ ಈ ಮೂರೂಸಾಲುಗಳು ಹುಟ್ಟುಸಾವಿನ ಅನಿವಾರ್ಯತೆಯನ್ನು ಕವನದಲ್ಲಿ ಬೆಳೆಸುವರೀತಿ. ಮೊದಲ ಸಾಲಿನಲ್ಲಿ ಮಗು ಹುಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಹುಟ್ಟಿದ ಅಥವಾ ಇನ್ನೀಗ ಹುಟ್ಟಲಿರುವ ಸೂಚನೆ ಇದೆ. ಹಾಗೆ "ನಾಲ್ಕು ಮಂದಿ" ಎಂಬ ಪದಬಳಕೆ ಈಗಾಗಲೆ ಸತ್ತಿರುವ ಅಥವಾ ಇನ್ನೀಗ ಸಾಯಲಿರುವ ವ್ಯಕ್ತಿಯ ಸೂಚನೆ ನೀಡುತ್ತದೆ. ಮುಂದಿನ ಸಾಲು ಮಗು ಹುಟ್ಟಿದೆ ಎಂಬುದನ್ನು ಸೂಚಿಸುತ್ತದೆ. ತೊಟ್ಟಿಲು ಬಂದಿದೆ. ಹಾಗೆಯೇ ಚಟ್ಟ ಕಟ್ಟಲು ಬಳಸುವ ಬೊಂಬು ವ್ಯಕ್ತಿ ಸತ್ತ ಸಂಕೇತ. "ತೊಟ್ಟಿಲ" ಪದ ಬಳಕೆಯ ಮೂಲಕ ಹುಟ್ಟಿದ್ದು ನಿಖರವಾದಂತೆ ಸತ್ತಿದ್ದು ಕೂಡ ನಿಖರವಾಗಿದೆ. ಇಲ್ಲವಾದರೆ ಬೊಂಬಿನ ಅಗತ್ಯವಿಲ್ಲ. ಮೂರನೆಯ ಸಾಲಿನಲ್ಲಿ ನಾಮಕರಣ. ಇದು ಇನ್ನೂ ತುಸು ಮುಂದಿನ ಹಂತ. ಹಾಗೆಯೇ ಸಾವಿನ ಅನಂತರದ ಮುಂದಿನ ಕ್ರಿಯೆಯಾದ ಅಪರ ಕ್ರಿಯೆಯ ಸೂಚನೆ "ಅಪರ ಕ್ರಿಯೆಯಲ್ಲೂ ಪಾರಂಗತ" ಎಂಬ ಹೇಳಿಕೆಯಲ್ಲಿದೆ. ಅಂದರೆ ಹುಟ್ಟಿನ ಅನಂತರದ ಮೂರು ಘಟನೆಗಳು ಮತ್ತು ಸಾವಿಗೆ ಸಂಬಧಿಸಿದ ಮೂರು ಘಟನೆಗಳನ್ನು ಒಟ್ಟಿಗಿಡುವ ಮೂಲಕ ಹುಟ್ಟಿನಿಂದ ಸಾವಿನತ್ತದ ಚಲನೆಯನ್ನು ಸೂಚಿಸುವ ಪರಿ ಸಮರ್ಥವಾಗಿ ಮೂಡಿಬಂದಿದೆ.
    ಅಡಿಗರ ಬಹಳಷ್ಟು ಕವನಗಳು ಒಂದು ಸ್ಥಿತಿಯ ಚಿತ್ರಣವಷ್ಟೇ ಅಲ್ಲ.ಅವು ತಮ್ಮೊಳಗೇ ಬೆಳೆಯುವ ಕುಸುರಿ ಕೆಲಸ. ಕ್ಷಣವನ್ನು ಕ್ಯಾಮರದಲ್ಲಿ ಸೆರೆಹಿಡಿವ ರೀತಿಯದಲ್ಲ. ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿಯನ್ನು ಮಾಡುವ ಅಥವಾ ಚಿತ್ರಕಾರ ಒಂದೊಂದೇ ಗೆರೆಗಳನ್ನು ಎಳೆಯುತ್ತ ಬಣ್ಣ ತುಂಬತ್ತಾ ಚಿತ್ರವಾಗಿಸುವ ರೀತಿ. ಕವನದ ಈ ಚಲನಶೀಲತೆಯನ್ನು ಗ್ರಹಿಸದಿದ್ದಲ್ಲಿ ಕವನದ ಧ್ವನಿಯನ್ನು ಗ್ರಹಿಸುವುದೂ ಕಷ್ಟವಾಗುತ್ತದೆ.

Thursday, November 1, 2012



ಮತ್ತೆ ಬರೆಯುವತ್ತ....


ಜನವರಿ ತಿಂಗಳ ಅನಂತರ ಏನನ್ನೂ ಬರೆಯಲಿಲ್ಲ. ನನ್ನ ಕಾವ್ಯಾರ್ಥ ಲೇಖನಕ್ಕೆ ಶ್ರೀಪಾದು ಬರೆದ ಪ್ರತಿಕ್ರಿಯೆಗೆ ಉತ್ತರ ಕೊಡುವುದು ಉಳಿದಿದೆ. ತುಸು ದೀರ್ಘವಾದ ಉತ್ತರವೇ ಆಗುತ್ತದೆ. ಅದಕ್ಕೂ ಮುಂಚೆ ಯಾಕೆ ಏನನ್ನೂ ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಸೂಕ್ತ.

ನಿವೃತ್ತಿಯ ಅನಂತರ ನನ್ನ ಜೀವನದ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧವಾಗಿದ್ದವು. ಬೇರೆಯವರಿಗೆ ನನ್ನ ಕಾಲವನ್ನು ನ್ಯಾಸವಾಗಿ ಇಟ್ಟಿರದ ಕಾರಣದಿಂದ ನನಗೆ ಅನಿಸಿದಂತೆ ಇರಲು ಸಾಧ್ಯವಾಗಿತ್ತು.ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟವಾದ ಚಟುವಟಿಕೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದ ಸ್ವಂತದ ಬದುಕು. ನನ್ನ ಪ್ರೀತಿಯ ಮಡದಿಯೂ ನನ್ನ ಈ ಶಿಸ್ತಿನ ಜೀವನಕ್ಕೆ ಭಂಗ ಬರದಂತೆ ಕಾಳಜಿ ವಹಿಸಿದ್ದರು.

ಆದರೆ ಇವೆಲ್ಲ ಇದ್ದಕ್ಕಿದ್ದಂತೆ ಬದಲಾಗಿಹೋಯಿತು. ಯಾವುದೋ ಹೊತ್ತಿಗೆ ಏಳಬೇಕಾದ, ನಿದ್ದಿಸಬೇಕಾದ,ಊಟ ಸ್ನಾನ ಮಾಡಬೇಕಾದ ಅನಿವಾರ್ಯತೆ ಬಂತು. ನಮ್ಮೆಲ್ಲರ ಚಟುವಟಿಕೆಗಳನ್ನು ನಿಯಂತ್ರಿಸುವ ಮೊಮ್ಮಗಳು ಬಂದಳು. ತನ್ನಿಷ್ಟದಂತೆ ತಾನು ಇದ್ದಿದ್ದಲ್ಲದೆ ತನ್ನಿಷ್ಟದಂತೆ ನಾವೂ ಇರುವಂತೆ ಮಾಡಿದಳು. ನಮಗೆ ಪ್ರೀತಿಯ ಸಿಟ್ಟು ತರಿಸಿದಳು. ಸಂಭ್ರಮ ಉಕ್ಕಿಸಿದಳು. ನಿಸ್ಸಹಾಯಕತೆಯಲ್ಲಿ ನಾವು ಗೊಂದಲಗೊಳ್ಳುವಂತೆ ಮಾಡಿದಳು. ನಮ್ಮನ್ನು ಬೆರಗಿಗಿಕ್ಕಿದಳು.ಸಾಹಿತ್ಯ, ತತ್ವ ಇವೆಲ್ಲ ಅವಳ ಶುದ್ಧ ಮುಗ್ಧತೆಯೆದುರು ಅಡಗಿ ಕೂತವು. ಇವೆಲ್ಲ ಈಗ ನೆನಪು. ಮೊನ್ನೆ ಬೆಂಗಳೂರಿಗೆ ಹೋದಳು.

ಈಗ ಮನೆಯಲ್ಲಿ ಮೌನ. ಕುತೂಹಲ, ಸಂಭ್ರಮ ತರಿಸುವ ಸ್ವಾರಸ್ಯದ ಹೊಸ ಸಂಗತಿಗಳೂ ಇಲ್ಲ. ಮತ್ತೆ ನನ್ನ ಓದಿಗೆ ಮರಳಬೇಕು. ಮೌನದಲ್ಲಿ ನನ್ನ ದನಿಗೆ ನಾನೇ ಕಿವಿಯಾಗಬೇಕು. ಆಗ ಮತ್ತೆ ಬರೆಯಲು ಏನಾದರೂ ತೋಚಬಹುದು.

Sunday, January 15, 2012

ಕಾವ್ಯಾರ್ಥ..



     ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ. ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು. ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ. ಕಾರಣ ಗೊತ್ತಿಲ್ಲ.ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ,ನವ್ಯ ಬುದ್ಧಿಜೀವಿಗಳಿಗೇ ಹಾಗೆ ಎಂದು ನನ್ನನ್ನು ಬುದ್ಧಿಜೀವಿಗಳ ಗುಂಪಿಗೆ ಸೇರಿಸಿದ. ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ.
     ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ. ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂಬ ಮಾತು ತುಂಬಾ ಹಿಂದಿನಿಂದಲೂ ಇದೆ.ನಾನು ಎಮ್... ಓದುತ್ತಿದ್ದಾಗಲೂ ನನ್ನ ಕೆಲ ಅಧ್ಯಾಪಕರು ಹಾಗೇ ಹೇಳುತ್ತಿದ್ದರು. ಆಗೆಲ್ಲ ನಾನು ಮತ್ತು ದೇವನೂರು ಮಹಾದೇವ ನವ್ಯ ಕಾವ್ಯವನ್ನು ಸಮರ್ಥಿಸುವುದೇ ನಮ್ಮ ಜೀವನದ ಪರಮ ಗುರಿ ಎಂಬ ರೀತಿಯಲ್ಲಿ ನವ್ಯಕಾವ್ಯದ ಪರ ವಕಾಲತ್ತು ವಹಿಸುತ್ತಿದ್ದೆವು.ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು. ಕಾವ್ಯಅಥವಾ ಸಾಹಿತ್ಯ ಅರ್ಥವಾಗುವುದು ಅಂದರೇನು?
     ಸಾಹಿತಿ ಬರೆದದ್ದು ನಮ್ಮ ಸಂವೇದನೆಯನ್ನು ತಾಗುವುದು ಎಂಬುದನ್ನು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ?ಸಾಹಿತಿಯ ಕಾಣ್ಕೆ,ದರ್ಶನ ಅಥವಾ ಅನುಭವ ಇವು ನಮಗೆ ಗ್ರಾಹ್ಯವಾಗುವುದು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ? ಇವೆರೆಡೂ ಹೇಳಿಕೆಗಳನ್ನು ಈ ಲೇಖನದ ಮಟ್ಟಿಗೆ ಒಪ್ಪಿ ಮುಂದುವರೆಯುತ್ತೇನೆ.
     ಸಾಹಿತ್ಯದ ಮಾಧ್ಯಮ ಭಾಷೆ. ನಮ್ಮ ದಿನಬಳಕೆಯ ಸಂವಹನದ ಮಾಧ್ಯಮವೂ ಭಾಷೆ.ದಿನಬಳಕೆಯಲ್ಲಿ ಭಾಷೆ ಹೆಚ್ಚು  ವಾಚ್ಯವಾಗಿಯೂ,ಸಾಹಿತ್ಯದ ಬಳಕೆಯಲ್ಲಿ ಹೆಚ್ಚು ಧ್ವನ್ಯಾತ್ಮಕವಾಗಿಯೂ ಕೆಲಸ ಮಾಡುತ್ತದೆ.ವಾಚ್ಯಾರ್ಥಕ್ಕೆ ಸಂಬಂಧಿಸಿದಂತೆ ಭಾಷೆಯ ಈ ಎರಡು ರೀತಿಯ ಬಳಕೆಯಲ್ಲು ವ್ಯತ್ಯಾಸವಿಲ್ಲ. ಸಹಜವಾದ ಮಾತಿಗಿರುವಂತೆ ಸಾಹಿತ್ಯದ ಭಾಷೆಗೂ ವಾಚ್ಯಾರ್ಥವಿರಲೇಬೇಕು,ಇರುತ್ತದೆ. ಹಾಗಾದರೆ ಮಾತು ಸಾಹಿತ್ಯವಾಗಲು ಈ ವಾಚ್ಯಾರ್ಥವನ್ನು ಮೀರಿದ ಮತ್ತೊಂದು ಅರ್ಥ ಸ್ಫುರಿಸಬೇಕು. ಅಂದರೆ, ಸಾಹಿತ್ಯ ಅರ್ಥವಾಗುವುದು ಅಂದರೆ ಈ ವಾಚ್ಯಾರ್ಥ ಮತ್ತು ಅದನ್ನು ಮೀರಿದ ಮತ್ತೊಂದು ಅರ್ಥ ಎರಡೂ ಅರ್ಥವಾಗುವುದು.ಒಂದೆರೆಡು ಉದಾಹರಣೆಯ ಮೂಲಕ ನನ್ನ ಹೇಳಿಕೆಯನ್ನು ವಿಸ್ತರಿಸುತ್ತೇನೆ.
     "ಗಂಗೆಯಲಿ ತೇಲಿ ಬಂದನು ಕರ್ಣ,ರಾಧೇಯ,ಸಾಯಿಸಿಲಕಲ್ಲದೇ ಬರಳು ಕುಂತಿ". ಅಡಿಗರ ಭೂಮಿಗೀತ ಕವನದ ಒಂದು ಸಾಲು ಇದು.ಕರ್ಣ ಕುಂತಿಯ ಕತೆ ಗೊತ್ತಿರುವ ನಮಗೆ ಇದರ ವಾಚ್ಯಾರ್ಥ ಸುಲಭವಾಗಿ ಹೊಳೆಯುತ್ತದೆ. ಹುಟ್ಟಿದ ಕೂಡಲೇ ಗಂಗೆಯಲ್ಲಿ ಕರ್ಣನನ್ನು ತೇಲಿಬಿಟ್ಟ ಕುಂತಿ ಮತ್ತವನನ್ನು ಭೇಟಿಯಾಗುವುದು ಅವನ ಬಳಿ ಮಾತು ಪಡೆಯಲು. ಹೀಗೆ ಕುಂತಿ ಪಡೆದ ಮಾತು ಕರ್ಣನ ಸಾವಿಗೂ ಕಾರಣವಾಗುತ್ತದೆ.
     ಕುಂತಿ ತನ್ನ ಮಗನ ಪ್ರಾಣವನ್ನೇ ತನ್ನುಳಿದ ಮಕ್ಕಳ ಉಳಿವಿಗಾಗಿ ಕೇಳುವುದು ಹೇಗೆ ಸಾಧ್ಯ? ಇದು ಸೂಕ್ಷ್ಮವಾಗಿ ತಾಯ್ತನವನ್ನು ಅಗೌರವಿಸಿದಂತಲ್ಲವೇ? ಅದ್ದರಿಂದ  ರಾಧೇಯ ಎಂಬ ಪದಪ್ರಯೋಗ ಮಾಡುವ ಮೂಲಕ ತೇಲಿಬಿಟ್ಟಾಗ ಕರ್ಣನಾಗಿದ್ದವ ಮತ್ತೆ ಕುಂತಿ ಕಂಡಾಗ  ರಾಧೆಯ ಮಗ ರಾಧೇಯನಾಗಿದ್ದ, ಆತ ಕೌಂತೇಯ ಆಗಿರಲೇ ಇಲ್ಲ,ಆದ್ದರಿಂದ ಕುಂತಿಗೆ ನೈತಿಕ ಸಂಕಟ ಎದುರಾಗಲಿಲ್ಲ ಅಥವಾ ಎದುರಾದರೂ ತನ್ನ ಮಗ ಎಂದು ಒಪ್ಪಿ ಬಿಡುವಷ್ಟು ಪ್ರಬಲವಾಗಿರಲಿಲ್ಲ ಎಂಬೆಲ್ಲ ಧ್ವನಿ ಹುಟ್ಟಿಸುತ್ತಾರೆ. ಗಂಗೆಯಲಿ ತೇಲಿ ಬಂದನು ಕರ್ಣ ಸಾಯಿಸಿಲಿಕಲ್ಲದೇ ಬರಳು ಕುಂತಿ ಎಂದು ಬರೆದಿದ್ದರೆ ವಾಚ್ಯಾರ್ಥದಲ್ಲಿ ಬಹಳ ಬದಲಾವಣೆಯೇನೂ ಆಗುತ್ತಿರಲಿಲ್ಲ. ಮಗನನ್ನೇ ಸಾಯಿಸಲು ಬರುವ ಕುಂತಿ ಎಂಬುದು ತುಸು ಕಾವ್ಯದ ಓಟಕ್ಕೆ ಧಕ್ಕೆ ತರುತ್ತಿತ್ತು. ಈಗ
ರಾಧೇಯ ಎಂಬುದರ ಮೂಲಕವಾಗಿ  ಆತ ಕುಂತಿಯ ಮಗ ಆಗಿರಲಿಲ್ಲ, ರಾಧೆಯ ಮಗನಾಗಿದ್ದ,ಆದ್ದರಿಂದ ಪ್ರಾಣ ಪಡೆವ ಮಾತು ಪಡೆಯಲು ಕುಂತಿಗೆ ಹಿಂಸೆಯಾಗಲಿಲ್ಲ ಎಂಬ ಅರ್ಥ ಧ್ವನಿಸುವಂತೆ ಮಾಡುತ್ತಾರೆ. ಇಡೀ ಭೂಮಿಗೀತ ಕವನದ ಕೇಂದ್ರವಾಗಿರುವ ಪರಕೀಯತೆಯ ಹಿನ್ನೆಲೆಯಲ್ಲಿ ಇದರ ಅರ್ಥ ಇನ್ನಷ್ಟು ವಿಸ್ತಾರ ಪಡೆಯುತ್ತದೆ. (ರಾಧೆಯ ಮಗನಾಗಿದ್ದ ಕರ್ಣನಿಗೆ ಕುಂತಿ ಪರಕೀಯಳಾಗಿದ್ದಳು. ತಾನು ಕುಂತಿಯ ಮಗ ಎಂದು ತಿಳಿದ ಕ್ಷಣದಿಂದ ಅವನು ರಾಧೆಗೂ ಪರಕೀಯನಾಗಿಬಿಡುತ್ತಾನೆ.)
ಭಾಷೆ ವಿವರಗಳನ್ನು ಚಿತ್ರಿಸುವಾಗ ಅರ್ಥವಾಗುವುದು ಸುಲಭ. ಭಾಷೆಯನ್ನು ನಾವು ದಿನನಿತ್ಯ ಹಾಗೆಯೇ ಬಳಸುತ್ತೇವೆ. ವಿವರಗಳ ಮೂಲಕ ಸನ್ನಿವೇಶವನ್ನು ಕಟ್ಟುವುದು ಗದ್ಯದ ಸಹಜತೆ,ಸ್ವರೂಪ. ವಿವರಗಳೇ ಇಲ್ಲದ ಕಥೆ ಕಾದಂಬರಿಗಳು ಇರುವುದು ಬಲು ಅಪರೂಪ.(ಇದ್ದರೂ ಅವು ಮತ್ತೆಅರ್ಥವಾಗದ ನವ್ಯಕಥೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ.)ಯಾವುದೇ ವಿವರಣೆಯ ವಾಚ್ಯಾರ್ಥ ಸುಲಭವಾಗಿ ಆಗುವುದರಿಂದ ನಮಗೆ ಅದು ಅರ್ಥವಾಯಿತು ಅನಿಸುತ್ತದೆ. ಈ ರೀತಿಯ ವಿವರಣಾತ್ಮಕ ಚಿತ್ರಣದ ಮೂಲಕವಾಗಿ ಮತ್ತೊಂದನ್ನು ಧ್ವನಿಸುತ್ತಿರುವುದು ನಮಗೆ ಅರ್ಥವಾಗದಿದ್ದರೂ ವಿವರಣಾತ್ಮಕವಾದ ಚಿತ್ರಣ ಅರ್ಥವಾಗಿರುವ ಕಾರಣ ಅದು ಅರ್ಥವಾಯಿತು ಎಂದು ಭಾವಿಸುತ್ತೇವೆ. ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ ಮೊದಲಾದ ಕಾದಂಬರಿಗಳ ಧ್ವನ್ಯಾರ್ಥ ಅರ್ಥವಾಗದವರಿಗೂ ಅವುಗಳ ವಾಚ್ಯಾರ್ಥ ಅರ್ಥವಾಗುವುದರಿಂದ ಓದಲು ತೊಂದರೆಯಾಗುವುದಿಲ್ಲ. ಬೇಂದ್ರೆಯವರ ಬೆಳಗು ಕವನದ ಧ್ವನಿಸೂಕ್ಷ್ಮತೆ ಗ್ರಹಿಕೆಯಾಗದಿದ್ದರೂ ಆ ಕವನಗ ಸೊಗಸಾದ ವಾಚ್ಯಾರ್ಥದ ಕಾರಣ ಅರ್ಥವೇ ಆಗುತ್ತಿಲ್ಲ ಎಂದು ಅನಿಸುವುದಿಲ್ಲ. 
ಆದರೆ ನವ್ಯಕಾವ್ಯ ವಿವರಣೆಯನ್ನು ಮುಖ್ಯವಾಗಿಸಿಕೊಳ್ಳದೆ ಹೆಚ್ಚು ರೂಪಕವಾಗಿ, ರೂಪಕಗಳ ನಡುವಿನ ಸಂಬಂಧದ ಮೂಲಕವಾಗಿ ಅರ್ಥ ಕಟ್ಟುವ ವಿಧಾನ ಬಳಸಿದ್ದರಿಂದ ಅರ್ಥವಾಗುವುದು ಕಷ್ಟವಾಯಿತು. ಮೊದಲಿಗೆ ರೂಪಕ ಅರ್ಥವಾಗಬೇಕು.ಅನಂತರ ಒಂದು ರೂಪಕ ಮತ್ತೊಂದು ರೂಪಕದೊಡನೆ ಪಡೆಯುವ ಸಂಬಂಧ ಅರ್ಥವಾಗಬೇಕು.ಅನಂತರ ಈ ರೀತಿಯ ಸಂಬಂಧ ಸೃಷ್ಟಿಸುವ ಧ್ವನಿ ಅರ್ಥವಾಗಬೇಕು. ಇವಿಷ್ಟು ತುಂಬಾ ಸರಳವಾಗಿ ಸಹಜವಾಗಿ ಆಗಬೇಕು. ತಾರ್ಕಿಕ ಬೆಳವಣಿಗೆ ಸಾಹಿತ್ಯ ಅರ್ಥವಾಗುವಲ್ಲಿ ಸಹಕಾರಿ. ನವ್ಯಕಾವ್ಯದಲ್ಲಿ ಈ ರೀತಿಯ ಸಹಜ ತಾರ್ಕಿಕ ಬೆಳವಣಿಗೆ ಇರದೆ ರೂಪಕಗಳ,ಅಥವಾ ವಿವರಣೆಗಳ ಅತಾರ್ಕಿಕ ಜೋಡಣೆಯ ಮೂಲಕ ತಾರ್ಕಿಕ ಅರ್ಥ ಹೊರಡಿಸುವ ಕಸಬುದಾರಿಕೆಯ ಕಾರಣದಿಂದ ಅರ್ಥವಾಗುವುದು ಕಷ್ಟ ಅನಿಸಬಹುದು. ಮೂರು ಉದಾಹರಣೆಗಳು:
೧. ಬಾನಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ
    ಹತ್ತಿಬಿಲ್ಲಿನ ಕಸದ ಕತ್ತಲೆಯಲಿ
    ಗಂಟೆ ಎಷ್ಟೆಂದು ಕೇಳಿದರೇನ ಹೇಳಲಿ
    ಎಷ್ಟೊಂದು ಗಡಿಯಾರ ಅಂಗಡಿಯಲಿ.
೨. ಕಾಡು ಮರಗಳ ಮಧ್ಯೆ ಮನೆ
    ಸಿಮೆಂಟು ಬಿರುಕಿನಲ್ಲಿ ಹುಲ್ಲು
    ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ
    ಸೊಪ್ಪು.
೩. ಡಾಕ್ಟರರು ನರ್ಸುಗಳು ಹೆರಿಗೆ ಮನೆಯೊಳಹೊರಗೆ
    ಅವರ ಬೆನ್ನಿಗೆ ಸದಾ ನಾಲ್ಕು ಮಂದಿ
    ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ
    ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಕ್ರಿಯೆಯಲ್ಲಿ       
    ಪಾರಂಗತ
(ನನ್ನ ನೆನಪನ್ನು ನಂಬಿ ಈ ಸಾಲುಗಳನ್ನು ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಮತ್ತು ಸರಿಮಾಡಿಕೊಂಡು ಓದಿ)



























Wednesday, June 29, 2011

ಕಾವ್ಯ ಧ್ವನಿ



ಒಂದು ಪದ ಅಥವಾ ಒಂದು ಪದಗುಚ್ಛ ಕಾವ್ಯದ ಧ್ವನಿಶಕ್ತಿಯನ್ನು ವಿಸ್ತರಿಸುವ ಅನೇಕ ಉದಾಹರಣೆಗಳು ಇವೆ. ಕಾವ್ಯ ಅರ್ಥವಾಗುವುದು ಅಂದರೆ ನಿರ್ದಿಷ್ಟ ಸನ್ನಿವೇಶದಲ್ಲಿ ಉಪಯೋಗಿಸಿದ ಪದಗಳ ಅರ್ಥವಾಗುವುದು ಮತ್ತು ಆ ಸನ್ನಿವೇಶದ ವಾಚ್ಯಾರ್ಥವಾಗುವುದು ಮಾತ್ರವಲ್ಲ. ಜೊತೆಗೇ  ಪದಗಳ ಬಳಕೆಯಲ್ಲಿ, ಸಂಯೋಜನೆಯಲ್ಲಿ ವಾಚ್ಯಾರ್ಥವನ್ನು ಮೀರುವ,ಸನ್ನಿವೇಶದ ಸೂಕ್ಷ್ಮತೆಯನ್ನು ವಿಸ್ತರಿಸುವ ಒಂದು ಹೊಳಹನ್ನು ಗ್ರಹಿಸುವುದು. ಈ ಹೊಳಹು ಆ ಸನ್ನಿವೇಶಕ್ಕೆ ಪೂರಕವಾಗಿದ್ದು ಕಾವ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದೆರಡು ಸನ್ನಿವೇಶಗಳನ್ನು ಕುರಿತು ನಾನು ಬರೆಯುತ್ತಿದ್ದೇನೆ.  ಪ್ರತಿ ಬಾರಿ ಓದಿದಾಗಲೂ ಕುಮಾರವ್ಯಾಸನ ಭಾರತ ಮತ್ತು ಅಡಿಗರ ಕಾವ್ಯ ನನಗೆ ಹೊಸದೆಂಬಂತೆ ಕಾಣುತ್ತವೆ.ಅಲ್ಲಿಂದ ಆರಿಸಿದ ಉದಾಹರಣೆಗಳಿವು. ನಾನು ಕಾವ್ಯವನ್ನು ಗ್ರಹಿಸಿದ ರೀತಿ ತಪ್ಪೂ ಇರಬಹುದು ಎಂಬ ಎಚ್ಚರವೂ ನನಗಿದೆ. ಇದರ ನಿರ್ಧಾರ ಓದುಗರದ್ದು.
*****
ಅಭಿಮನ್ಯು ಚಕ್ರವ್ಯೂಹ ಭೇದನಕ್ಕಾಗಿ ಹೊರಟು ನಿಂತಾಗ, ಆತನ ಸಾರಥಿಯು ಕರ್ಣ, ದ್ರೋಣ,ಕೃಪ, ಜಯದ್ರಥ ಮುಂತಾದವರ ಜೊತೆ ಸಂಗರ ಅಭಿಮನ್ಯುವಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಾನೆ.ಸಾರಥಿ ಆಡುವ ಮಾತು:"ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು" (ಬಲುಹು=ಸಾಮರ್ಥ್ಯ, ಅಂಘೈಸು=ಒಪ್ಪು,ಸಮ್ಮತಿಸು). ಇದಕ್ಕೆ ಪ್ರತಿಯಾಗಿ ಅಭಿಮನ್ಯು ಕೊಡುವ ಉತ್ತರ:
"ಬವರವಾದರೆ ಹರನ ವದನಕೆ
ಬೆವರ ತಹೆನವಗೆಡಿಸಿದರೆ ವಾ
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ
ಜವನ ಜವಗೆಡಿಸುವೆನು ಸಾಕಿ
ನ್ನಿವರವರಲೇನರ್ಜುನನು ಮಾ
ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ" (ಕು.ವ್ಯಾ.-ದ್ರೋ.ಪ.-೪-೫೬)
(ಇದರ ಸರಳ ರೂಪಾಂತರ ಹೀಗೆ: ಬವರವಾದರೆ ಹರನ ವದನಕೆ ಬೆವರ ತಹೆ, ಅವಗೆಡಿಸಿದರೆ ವಾಸವನ ಸದೆವೆ, ಹೊಕ್ಕಡೆ ಅಹುದು ಎನಿಸುವೆನು ಭಾರ್ಗವನ, ಜವನ ಜವಗೆಡಿಸುವೆನು, ಸಾಕಿನ್ನು ಅವರು ಇವರಲಿ ಏನು ಅರ್ಜುನನು ಮಾಧವನು ಮುನಿದೊಡೆ ಗೆಲುವೆನು ಅಂಜದೆ ರಥವ ಹರಿಸೆಂದ)(ಬವರ=ಯುದ್ಧ,ವಾಸವ=ಇಂದ್ರ,ಭಾರ್ಗವ= ಪರಶುರಾಮ,ಜವ=ಯಮ)
ಅಭಿಮನ್ಯುವಂತಹ ಬಿಸಿರಕ್ತದವೀರ ಆಡಬಹುದಾದ ಸಹಜವಾದ ಮಾತಿದು. ನನಗೆ ಅದ್ಭುತವೆನಿಸಿದ್ದು ಬವರವಾದರೆ ಹರನ ವದನಕೆ ಬೆವರ ತಹೆ ಎಂಬ ಹೇಳಿಕೆ.ಇದನ್ನು ವಿಶ್ಲೇಷಿಸುವಾ.

ಹರನ ವದನಕ್ಕೂ ಉಳಿದವರ ವದನಕ್ಕೂ ಒಂದು ಅಂತರವಿದೆ. ಹರನ ವದನದಲ್ಲಿ ಮೂರನೆಯ ಕಣ್ಣುಂಟು ಮತ್ತು ಈ ಕಣ್ಣಿನಲ್ಲಿ ಶಕ್ತಿ ಕಾವಿನ ರೂಪದಲ್ಲಿದೆ. ಈ ಕಾವು ಕ್ಷಣಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನು ಸುಡಬಲ್ಲದು. ಉಳಿದ ಯಾರ ವದನದಲ್ಲೂ ಇಂತಹ ವಿಶೇಷತೆ ಇಲ್ಲ. ಜವನ ವದನದಲ್ಲೂ ಇಲ್ಲ. ಇಡೀ ಜಗತ್ತನ್ನು ಕ್ಷಣದಲ್ಲಿ ದಹಿಸಬಲ್ಲ ಕಾವಿರುವ ಕಣ್ಣು ವದನದಲ್ಲಿ ಇರುವಾಗಲೂ ಶಿವನ ಮುಖ ಬೆವರುವುದಿಲ್ಲ.ಕಾವು ಅತಿಯಾದಾಗ ಮುಖ ಬೆವರುವುದು ಸಹಜ.ಅಂತಹ ಕಾವಿಗೂ ಬೆವರದ ಮುಖವನ್ನು ತನ್ನ ಯುದ್ಧದ ಕಾವಿನಲ್ಲಿ  ಬೆವರುವಂತೆ ಮಾಡುತ್ತೇನೆ ಎಂಬ ಮಾತನ್ನು ಅಭಿಮನ್ಯು ಆಡಿದಾಗ ವ್ಯಕ್ತವಾಗುವುದು ಕವಿಯ ಪ್ರತಿಭೆ.ಬವರವಾದರೆ ಜವನ ವದನಕೆ ಬೆವರ ತಹೆನು...............ಶಿವನ ಜವಗೆಡಿಸುವೆನು ಎಂದು ಹೇಳಿದ್ದರೂ ಛಂದಸ್ಸು ತಪ್ಪುತ್ತಿರಲಿಲ್ಲ,ವಾಚ್ಯಾರ್ಥ ಬದಲಾಗುತ್ತಿರಲಿಲ್ಲ,ಆದರೆ ಈ ಧ್ವನಿ ಮಾತ್ರ ಇರುತ್ತಿರಲಿಲ್ಲ.

ಈ ರೀತಿ ಪದಗಳ ಬಳಕೆಯಲ್ಲಿಯೇ ವಿಶೇಷತೆಯನ್ನು ವ್ಯಕ್ತಪಡಿಸಿದ ಕೆಲವು ಉದಾಹರಣೆಗಳನ್ನು ಗಮನಿಸಿ.

ಭೀಷ್ಮ ಶರಶಯ್ಯಾಗತನಾದ ದಿನದ ಸೂರ್ಯಾಸ್ತವನ್ನು ಕುಮಾರವ್ಯಾಸ ವರ್ಣಿಸುವುದು ಹೀಗೆ: "ಪಡುವಣ ಶೈಲ ವಿಪುಲಸ್ತಂಭದೀಪಿಕೆಯಂತೆ ರವಿ ಮೆರೆದ"(ಭೀ.ಪ-೧೦-೪೨).   ("ಪಡುವಣ ಶೈಲ ವಿಪುಲಸ್ತಂಭದೀಪಿಕೆ"ಎಂಬುದೇ  ಒಂದು ಅದ್ಭುತ ರೂಪಕ). ಇಲ್ಲಿ ಮೆರೆದ ಎಂಬ ಪ್ರಯೋಗವನ್ನು ಗಮನಿಸಿ. ಸೂರ್ಯ ಅಸ್ತಮಿಸಲಿಲ್ಲ,ಮೆರೆಯುತ್ತಾನೆ. ಭೀಷ್ಮ ಸಾಯಲಿಲ್ಲ,ಶರಮಂಚದಲ್ಲಿ ಮೆರೆಯುತ್ತಿದ್ದಾನೆ.ಭೀಷ್ಮನ ಇಡೀ ಬದುಕಿನ ವೈಭವವನ್ನು ಈ ಒಂದು ಪದದ ಮೂಲಕ ಕುಮಾರವ್ಯಾಸ ಚಿತ್ರಿಸುತ್ತಾನೆ.ಮೆರೆದ ಎಂಬ ಪದದ ಬದಲು ಬೇರೆ ಯಾವ ಪದಪ್ರಯೋಗವಾಗಿದ್ದರೂ ಇಂತಹ ಧ್ವನಿ ಹೊರಡುತ್ತಿರಲಿಲ್ಲ.

ಭೀಷ್ಮ ಶರಶಯ್ಯೆ ಸೇರಿದ ದಿನದ ರವಿಯನ್ನು ಕುಮಾರವ್ಯಾಸ ಮೆರೆಸಿದರೆ ದ್ರೋಣನ ಮರಣದ ದಿನದ ಸೂರ್ಯಾಸ್ತವನ್ನು ಚಿತ್ರಿಸಿದ ರೀತಿಯನ್ನು ಗಮನಿಸಿ."ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ"(ದ್ರೊ.ಪ.-೧೯-೫೫).ದ್ರೋಣನ ಸಾವಿನ ಚಿತ್ರಣದ ಹಿನ್ನೆಲೆಯಲ್ಲಿ (ಆಸಕ್ತರು ದ್ರೋಣಪರ್ವದ ಹದಿನೆಂಟನೆಯ ಸಂಧಿಯ ೬೬ ಮತ್ತು ೬೭ ನೆಯ ಪದ್ಯಗಳನ್ನು ಓದಬಹುದು). ಈ ವರ್ಣನೆಯನ್ನು ಗ್ರಹಿಸಿ. ಮಗ ಸತ್ತ ಸುದ್ದಿ ಕೇಳಿಯೂ ಯುದ್ಧ ಮಾಡುತ್ತಿರುವ ದ್ರೋಣ ತನ್ನ ಬಗೆಗಿನ ಭೀಮನ ವ್ಯಂಗಭರಿತ ಟೀಕೆಯಿಂದ ನೊಂದು ಸಾಕೀ ದೇಹವೆಂದು ವಿರಾಗದಲ್ಲಿ  ಯುದ್ಧವಿಮುಖನಾಗುತ್ತಾನೆ. ರವಿ ಕೂಡ ವಿರಾಗದಲ್ಲಿ ಮುಸುಡ(=ಮುಖ) ತಿರುಹುತ್ತಾನೆ. ರವಿ ಅಂಬರವನ್ನು ಬೀಳ್ಕೊಡುತ್ತಾನೆ. ಅಂಬರ ಎಂಬ ಪದಕ್ಕೆ ಆಕಾಶ ಎಂಬ ಜನಜನಿತ ಅರ್ಥವಲ್ಲದೆ ಬಟ್ಟೆ,ಅರಿವೆ ಎಂಬ ಅರ್ಥವೂ ಉಂಟು. ದೇಹವನ್ನು ಅತ್ಮದ ಬಟ್ಟೆ ಎನ್ನುತ್ತಾರೆ. ರವಿ ಆಕಾಶವನ್ನು ಬೀಳ್ಕೊಟ್ಟರೆ ದ್ರೋಣ ದೇಹವನ್ನು ಬೀಳ್ಕೊಡುತ್ತಾನೆ. ಸೂರ್ಯಾಸ್ತವನ್ನು ವಾಚ್ಯಾರ್ಥದಲ್ಲಿ ವರ್ಣಿಸುತ್ತಲೇ  ದ್ರೋಣನ ಸಾವಿನ ಸನ್ನಿವೇಶಕ್ಕೆ ಹೊಸ ಹೊಳಹನ್ನು ಕುಮಾರವ್ಯಾಸ ಕೊಡುತ್ತಾನೆ.

ಇನ್ನು ಕರ್ಣನ ಸಾವಿನ ದಿನದ ಸೂರ್ಯಾಸ್ತವನ್ನು ಗಮನಿಸಿ.
.........ಬಿಸುಟನಂಬುಜ ಮಿತ್ರನಂಬರವ|| (ಕ.ಪ-೨೭-೩೦)
ದ್ಯುಮಣಿ ಕರ್ಣದ್ಯುಮಣಿಸಹಿತ
ಸ್ತಮಿಸೆ ಕಮಲಿನಿ ಕೌರವನ ಮುಖ
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ|
ಅಮಳ ಚಕ್ರಂಗಕ್ಕೆ ಭೂಪೋ
ತ್ತಮನ ವಿಜಯಾಂಗನೆಗೆ ಅಗಲಿಕೆ
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ||(ಕ.ಪ.-೨೭-೩೧)

ಇಲ್ಲಿ ಸೂರ್ಯನನ್ನು ಅಂಬುಜ ಮಿತ್ರ ಎಂದು ಸೂಚಿಸಿರುವುದನ್ನು ಗಮನಿಸಿ. ಅಂಬುಜಮಿತ್ರನಾದ ರವಿ ಅಂಬುಜವನ್ನು ಬಿಟ್ಟು ಅಸ್ತಮಿಸುತ್ತಾನೆ. ಕರ್ಣ ಮತ್ತು ಸುಯೋಧನನ ಸ್ನೇಹದ ಹಿನ್ನೆಲೆಯಲ್ಲಿ ಈ ಹೋಲಿಕೆ ನೀಡುವ ಧ್ವನಿಯ ಬಗ್ಗೆ ಮತ್ತೆ ವಿಸ್ತಾರವಾಗಿ ಬರೆಯುವುದು ಅನಗತ್ಯ. ೩೧ನೆಯ ಪದ್ಯದಲ್ಲಿ ಒಂದರ ಜತೆ ಮತ್ತೊಂದನ್ನು ಜೋಡಿಯಾಗಿಸುವ ಮೂಲಕ ಕರ್ಣ ಸುಯೋಧನರ ಜೋಡಿತನದ ಚಿತ್ರಣವನ್ನು ಸೂಚಿಸುವ ಪರಿ ಬೆರಗು ಹುಟ್ಟಿಸುತ್ತದೆ.

ಅಡಿಗರ ಕಾವ್ಯದಲ್ಲಿ ಬರುವ ಇಂತಹ ಕೆಲವು ಚಿತ್ರಣಗಳ ಬಗೆಗೂ ಬರೆವ ಯೋಚನೆಯಿತ್ತು. ಈ ಲೇಖನವೇ ಸಾಕಷ್ಟು ಉದ್ದವಾಯಿತು. ಅಡಿಗರ ಬಗ್ಗೆ ಇನ್ನೊಮ್ಮೆ..ಎಂದಾದರೂ.