Tuesday, April 14, 2009

ಎರಡು ಪುಟ್ಟ ಕತೆಗಳು.

ಒಂದು.
***ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.ಅವಳ ಕಣ್ಣಲ್ಲಿ ಅವನ ಚಿತ್ರ,ಅವನ ಕಣ್ಣಲ್ಲಿ ಅವಳ ಚಿತ್ರ.ಅವನ ಕಡೆಯಿಂದ ಬೀಸುವ ಗಾಳಿ ಅವಳಿಗೆ, ಅವಳ ಕಡೆಯಿಂದ ಬೀಸುವ ಗಾಳಿ ಅವನಿಗೆ ಮಧುರ ಪುಳಕ ನೀಡುತ್ತಿತ್ತು.ಹಕ್ಕಿಗಳು ಅವರಿಗಾಗಿ ಹಾಡುತ್ತಿದ್ದವು. ಮರಗಳು ಅವರಿಗಾಗಿ ಚಿಗುರಿ ಹೂ ಬಿಡುತ್ತಿದ್ದವು.ಅವರ ಪ್ರೀತಿಯ ಸಲ್ಲಾಪ ಕಂಡು ಚಂದ್ರ ಮೋಡದ ಮರೆಯಲ್ಲಿ ಅಡಗುತ್ತಿದ್ದ.ಸೂರ್ಯ ಕೆಂಪಾಗುತ್ತಿದ್ದ. ತಾರೆಗಳು ಕಣ್ಣು ಮಿಟುಕಿಸುತ್ತಿದ್ದವು.ಅವರು ಸುಖದಿಂದ ಇದ್ದರು ಅನ್ನುವುದಕ್ಕಿಂತ ಸುಖವೇ ಅವರಲ್ಲಿ ಸುಖವಾಗಿತ್ತು ಅಂದರೇ ಚೆನ್ನ.
***ಎಲ್ಲ ಸುಖಕ್ಕೂ ಅಂತ್ಯ ಇದೆ; ಇರಲೇಬೇಕು.
***ಅವರು ಮದುವೆಯಾದರು.
%%%%%%%%%%%%%%%%%%%%
ಎರಡು.
ಪ್ರೀತಿಸಿ ಮದುವೆಯಾದವರು ಅವರು. ಸುಖವಾಗಿ ಹದಿನೈದು ವರ್ಷ ಕಳೆದಿದ್ದಾರೆ. ಒಂದು ಜಗಳವಿಲ್ಲ, ವಾದವಿಲ್ಲ. ಅವನ ಪ್ರಪಂಚದಲ್ಲಿ ಅವಳು ಮಾತ್ರ; ಅವಳ ಪ್ರಪಂಚದಲ್ಲಿ ಅವನು ಮಾತ್ರ. ಎಲ್ಲರಿಗೂ ಇದೊಂದು ವಿಸ್ಮಯವಾಗಿತ್ತು. ಒಂದಿನ ಹೆಂಡತಿ ಅವನ ಆಫೀಸಿಗೆ ಹೋದಳು. ಮೇಜಿನ ಮೇಲೆ ಒಂದಿಷ್ಟು ಕಾಗದಗಳನ್ನು ಹರಡಿಕೊಂಡು ಅವನು ಕೂತಿದ್ದ. ಅವನೆದುರು ೪೦-೪೫ರ ಹೆಂಗಸೊಬ್ಬಳು ಬಾಗಿ ಏನನ್ನೋ ವಿವರಿಸುತ್ತಿದ್ದಳು. ಗಂಡಸರೆದುರು ಹಾಗೆ ಬಾಗಿ ನಿಲ್ಲುವುದು ಸರಿಯಲ್ಲ.
ಆ ರಾತ್ರಿ ಆಕೆ ಕೇಳಿದಳು: ಆ ಮೋಹಿನಿ ಯಾರು? ಇವ್ನಿಗೆ ಏನೂ ಹೊಳೆಯಲಿಲ್ಲ. "ಯಾವ ಮೋಹಿನಿ?"" ಅದೇ ಇವತ್ತು ಅಫೀಸಲ್ಲಿ.ನಿಮ್ಮೆದುರು ನಿಂತು ಬಾಗಿ ವೈಯಾರ ಮಾಡ್ತಿದ್ಲಲ್ಲ..ಅವಳು." ಅವನೆದುರು ಯಾರೂ ವೈಯಾರ ಮಾಡುತ್ತಿರಲಿಲ್ಲ. ಇವನಿಗೆ ತನ್ನ ಹೆಂಡತಿಯನ್ನು ಬಿಟ್ಟು ಪ್ರಪಂಚದಲ್ಲಿ ಬೇರೆ ಹೆಂಗಸರು ಇರುತ್ತಾರೆ ಎಂಬುದೂ ಗೊತ್ತಿಲ್ಲ ಎಂದು ಅಫೀಸಿನವರು ಆಡಿಕೊಳ್ಳುತ್ತಿದ್ದರು.
"ಯಾರೂ ಇಲ್ವಲ್ಲ. ಎಲ್ಲ ಬಂದು ವಿಚಾರಿಸ್ತಾರೆ. ವೈಯಾರ ಯಾಕೆ ಮಾಡ್ತಾರೆ?"
"ನಂಗೊತ್ತು. ನಿಮ್ಗೆ ನನ್ ಕಂಡ್ರೆ ಮೊದ್ಲಿನಷ್ಟು ಪ್ರೀತಿ ಇಲ್ಲ. ಆ ಮೋಹಿನಿ ಹಿಂದೆ ಬಿದ್ದಿದೀರ."
ಅವನಿಗೆ ಗಾಬರಿಯಾಯಿತು."ಹಾಗೇನಿಲ್ಲ ಮಾರಾಯ್ತಿ.ಯಾಕನುಮಾನ?" ಹೆಂಡತಿಯ ಅನುಮಾನ ಬೆಳೆಯತೊಡಗಿತು. ಅವನ ಎಲ್ಲ ಚರ್ಯೆಗಳನ್ನೂ ಅವಳ ಜತೆ ತಳಕು ಹಾಕತೊಡಗಿದಳು.ಪದೇ ಪದೇ ನೀವು ನನ್ನ ಪ್ರೀತಿಸ್ತಾಇಲ್ಲ, ಅವಳನ್ನ ಪ್ರೀತಿಸ್ತಿದೀರಿ ಎಂದು ಹೇಳತೊಡಗಿದಳು. ಹೆಂಡತಿಯ ಮಾತು ಅವನಿಗೆ ಪರಮ ಸತ್ಯ. ಇದನ್ನೂ ನಂಬಿದ.
****ಅವಳನ್ನೇ ಮದುವೆಯಾದ.

Wednesday, April 1, 2009

ಕೊತ್ತಂಬರಿ ಕಟ್ಟು ಮತ್ತು ಮಸಾಲೆ ದೋಸೆ

***ತರಕಾರಿ ಅಂಗಡಿಯಿಂದ ಹೊರಬರುವಾಗ , ಅಲ್ಲೇ ಮರದ ಕೆಳಗೆ ಕೊತ್ತಂಬರಿ ಕಟ್ಟುಗಳ ಗುಡ್ಡೆಯ ಹಿಂದೆ ಕೂತ ಸರಿಸುಮಾರು ಎಪ್ಪತ್ತರ ವಯಸ್ಸಿನ ಆ ಮುದುಕಿಯ ಹತ್ತಿರ ಎರಡು ಕಟ್ಟು ತಗೊಳ್ತಿದ್ದೆ. ಅದು ಲಾಗಾಯ್ತಿನಿಂದ ಬಂದ ಅಭ್ಯಾಸ. ಈ ಊರಿಗೆ ನಾನು ಬಂದು ನಾಲ್ಕು ವರ್ಷಗಳಾಗಿವೆ. ಅವತ್ತಿಂದಲೂ ಅವಳು ಹೀಗೇ, ಇಲ್ಲಿ, ಕೊತ್ತಂಬರಿ ಕಟ್ಟುಗಳ ರಾಶಿಯ ಹಿಂದೆ, ಒಂದು ಚೌಕಳಿ ಸೀರೆ ಉಟ್ಟು ಕೂತಿರುತ್ತಾಳೆ. ಅವಳನ್ನು ಕಂಡು ನನಗೆ ಯಾಕೆ ಪಾಪ! ಅನ್ನಿಸ್ತು ಅಂತ ಗೊತ್ತಿಲ್ಲ. ನನ್ನ ಕಂಡಕೂಡಲೇ ಎರಡು ಕಟ್ಟು ಆರಿಸುತ್ತ, ನಾನು ಕೇಳ್ದಿದ್ರೂ, ಅವಳಾಗಿಯೇ ರೇಟು ಏರೋಗಿದೆ ಅಯ್ಯಾವ್ರೇ ಎಂದೋ, ಈಗ ಸ್ವಲ್ಪ ಸಸ್ತಾ ಆಗಿದೆ ಎಂದೋ ಗೊಣಗುಟ್ಟುತ್ತಿದ್ದಳು. ಅಲ್ಲಮ್ಮಾ, ಒಂದು ಕಟ್ಟು ಮಾರಾಟ ಆದ್ರೆ ನಿಂಗೆ ಏನು ಲಾಭ ಬರುತ್ತೆ ಎಂದು ಒಮ್ಮೆ ಕುತೂಹಲದಿಂದ ಕೇಳಿದ್ದೆ. ಇಪ್ಪತ್ತು ಪೈಸೆ ಎಂದಿದ್ದ್ಲು. ಸುಮ್ಮನೆ ಲೆಕ್ಕ ಹಾಕಿ ನೋಡಿದೆ. ಇನ್ನೂರು ಕಟ್ಟು ವ್ಯಾಪಾರವಾದ್ರೂ ಅವ್ಳಿಗೆ ಆಗೋ ಲಾಭ ಬರೀ ಇಪ್ಪತ್ತು ರೂಪಾಯಿ. ಅಷ್ಟಕ್ಕಾಗಿ ಮಳೆ, ಬಿಸ್ಲು, ಚಳಿ ಅಂತ ನೋಡ್ದೆ, ದಿನವಿಡಿ ಕೂರೋದು ಊಹಿಸಿಯೇ ನಂಗೆ ಮರುಕ ಬಂದಿತ್ತು. ಹಾಗಾಗಿ ತರಕಾರಿ ಜತೆ ಎರಡು ಕಟ್ಟು ನಾನು ಯಾವಾಗ್ಲೂ ತಗೊಳ್ಳೋದಾಗಿತ್ತು. ನಂಗೆ ಕೊತ್ತಂಬರಿ ಸೊಪ್ಪು ಬೇಕಿತ್ತೋ ಇಲ್ವೋ ಎಂಬುದನ್ನ ನಾನು ಎಂದೂ ಯೋಚ್ನೇನೆ ಮಾಡ್ತಿರ್ಲಿಲ್ಲ. ನನ್ನ ಹೆಂಡತಿಗೆ ಈ ಕಟ್ಟು ಬಾಡದಂತೆ ಇಡುವ ಚಿರಿಪಿರಿ. ಒಂದೇ ತನ್ನಿ, ಸಾಕು ಎಂದು ಪ್ರತಿ ಬಾರಿಯೂ ಅವಳು ಹೇಳ್ತಿದ್ಲು. ಸರಿ ಅಂತಿದ್ದೆ.
****ಇವತ್ತು ಅವ್ಳ ಗುಡ್ದೆ ಹತ್ರ ಹೋದೆ. ಅಲ್ಲಿ ಒಬ್ಬಾಕೆ, ಭರ್ಜರಿ ಸೀರೆ ಉಟ್ಟು ಕೊತ್ತಂಬರಿ ಸೊಪ್ಪು ಆರಿಸ್ತಾ ಇದ್ಲು. ಅವ್ರ ವ್ಯಾಪಾರ ಮುಗೀಲಿ ಅಂತ ನಾನು ಸುಮ್ಮನೆ ನಿಂತೆ. ಅವರ ಮಾತುಕತೆ ಕಿವಿಗೆ ಬೀಳತೊಡಗಿತು.
“ಹ್ಯಾಗಮ್ಮ ಕಟ್ಟಿಗೆ?” “ಐದ್ರೂಪಾಯ್ಗೆ ಮೂರ್ ಕಟ್ಟು.” “ಏನೇ ಇದು..ಈ ರೇಟು. ಮನಸ್ಸಿಗೆ ಬಂದ ರೇಟ್ ಹೇಳ್ತಿದೀಯಾ.” “ಅಯ್ಯಯ್ಯೋ..ನಂಗೇ ನೂರ್ ಕಟ್ಟಿಗೆ ನೂರೈವತ್ ರೂಪಾಯ್ ಬಿದ್ದಿದೆ, ನೀವೇ ಹೇಳಿ.ಯಾವ ರೇಟಿಗೆ ಕೊಡ್ಳಿ ಅಂತ.” “ಅಯ್ಯೋ.. ನಂಗೆಲ್ಲ ಗೊತ್ತಿದೆ..ಸುಮ್ನೆ ಐದ್ರೂಪಾಯ್ಗೆ ನಾಕ್ ಕಟ್ಟು ಕೊಡು.” “ಬರಲ್ಲವ್ವ.. ಹೊಟ್ಟೆ ಮ್ಯಾಲೆ ಹೊಡೀಬೇಡಿ” “ಏನೂ ಆಗಲ್ಲ..ತಗೋ..ನಾವು ದಿನಾ ತಗೋಳರಲ್ವಾ..” ಭರ್ಜರಿ ಸೀರೆಯ ಹೆಂಗಸು ನಾಲ್ಕು ಕಟ್ಟು ಚೀಲಕ್ಕೆ ತುಂಬಿಸುತ್ತ ಐದು ರೂಪಾಯಿ ಹಾಕಿ, ಬರಲ್ಲವ್ವ…ಬರಲ್ಲವ್ವ..ಎಂಬ ಮುದುಕಿಯ ಮಾತು ಅವ್ಳಿಗೇ ಬಿಟ್ಟು ಹೊರಟೇ ಹೋದ್ಲು. ಅವಳ ಕೈಯಲ್ಲಿರುವ ಕಟ್ಟನ್ನು ಈ ಮುದುಕಿಗೆ ಕಸಿಯಲು ಸಾಧ್ಯವೇ? “ನೋಡೀ ಅಯ್ಯಾ..ಈ ಥರಾ ಮಾಡಿದ್ರೆ ನಾವು ಹ್ಯಾಗೆ ಬದುಕೋದು..ನಿಮಗೂ ಮೂರ್ ಕಟ್ಟು ಕೊಡ್ಲಾ?” “ಬೇಡಮ್ಮ..ಎರಡೇ ಸಾಕು” “ಎರ್ಡ್ ಕಟ್ಟಾದ್ರೆ ನಾಕ್ರುಪಾಯ್ ಅಗ್ತದೆಯಲ್ಲಾ ಸಾಮಿ…” “ಆಗ್ಲಿ ಬಿಡು..ತಗೊಂಡು ಹೋದ್ರೆ ಮನೇಲಿ ಸುಮ್ನೆ ದಂಡ ಆಗುತ್ತೆ.” ಮುದುಕೀ ಹತ್ರ ಚೌಕಾಶಿ ಮಾಡ್ತಿದ್ದ ಸುಮಾರು ಜನ್ರನ್ನ ನಾನು ನೋಡಿದ್ರೂ, ಈ ಹೆಂಗ್ಸಿನ ನೆನಪು ಯಾಕೋ ಉಳೀತು. ಹಾಗೆ ಉಳೀಲಿಕ್ಕೆ ಅವ್ರುಟ್ಟಿದ್ದ ಭರ್ಜರಿ ಸೀರೇನೇ ಕಾರಣ ಇರ್ಬಹುದು. ಇದಾದ ಅನಂತರ, ಪ್ರತಿಬಾರಿ ಕಟ್ಟು ಕೊಳ್ಳುವಾಗಲೂ ಭರ್ಜರಿ ಸೀರೆಯ ನೆನಪೂ, ಮುದುಕಿಯ ದೀನ ದನಿಯೂ ನೆನಪಾಗುತ್ತಿತ್ತು. ಕೆಲವೊಮ್ಮೆ ಸಣ್ಣ ಘಟನೆ ಕೂಡ ಯಾಕೆ ನೆನಪಲ್ಲಿ ಉಳೀತದೆ ಅನ್ನೋದಕ್ಕೆ ತಾರ್ಕಿಕವಾದ ಯಾವ ಕಾರಣವೂ ಇರಲ್ಲವೇನೋ.
****
ಆ ದಿನ ಪೇಟೆ ಕೆಲಸ ಮುಗಿಸಿ ಮನೆಗೆ ಹೊರಡಲೆಂದು ನನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವಾಗ, ನನ್ನ ಬೆನ್ನಿಗೆ ಒಂದು ಗುದ್ದು ಬಿತ್ತು. ಅದರ ಜೊತೆ “ಏನೋ..ನೀನಿಲ್ಲಿ?” ಎಂಬ ಅಶ್ಚರ್ಯಮಿಶ್ರಿತ ಪ್ರಶ್ನೆ. ಯಾರಪ್ಪಾ ಎಂದು ತಿರುಗಿ ನೋಡಿದರೆ ವಿಮಲ ತನ್ನ ದಂತಪಂಕ್ತಿಯನ್ನು ಪೂರ್ಣ ಪ್ರದರ್ಶಿಸುತ್ತ ನಿಂತಿದ್ದಳು. “ಏನೇ..ನೀನಿಲ್ಲಿ” ಎಂದು ನಾನೂ ಚಕಿತನಾಗಿ ಕೇಳಿದೆ. ವಿಮಲ ನನ್ಗೆ ದೂರದ ಸಂಬಂಧಿ. ಹ್ಯಾಗೆ ಅನ್ನೋದು ನಂಗೂ ಗೊತ್ತಿಲ್ಲ. ಒಟ್ಟಿಗೇ ಓದುತ್ತ ಇದ್ದ ಕಾರಣ ನೆಂಟಸ್ತನಕ್ಕಿಂತ ಬಳಕೆಯ ಸಲಿಗೆ ಜಾಸ್ತಿ ಇತ್ತು. ಅವಳನ್ನು ಕಾಣದೆ ಆರೆಂಟು ವರ್ಷಗಳೆ ಆಗಿದ್ದವು. “ಆ ಸಂಘ ಈ ಸಂಘ ಅಂತ ಓಡಾಡ್ತಾ, ಏನೇನೋ ಚಟುವಟಿಕೆ ಮಾಡ್ತಾಳಪ್ಪಾ” ಅಂತ ಕೆಲವರು ಮೆಚ್ಚುಗೆಯಲ್ಲಿ,ಕೆಲವರು ವ್ಯಂಗದಲ್ಲಿ ಹೇಳೋದು ಕೇಳಿದ್ದೆ. ನೀನು ಜಯ ತಾನೇ? ಅಂತ ಅವಳು, ನೀನು ವಿಮ್ಲ ತಾನೇ ಅಂತ ನಾನೂ ಕೇಳಿ ಪರಸ್ಪರರ ಪರಿಚಯ ಪಕ್ಕಾ ಮಾಡಿಕೊಂಡೆವು. ಧಿಡೀರಂತ ಹೀಗೆ ರಸ್ತೆಯಲ್ಲಿ ಕಂಡವಳ ಜತೆ ಏನು ಮಾತಾಡುವುದು ಎಂಬುದೇ ತೋಚಲಿಲ್ಲ. ಏಳು ಮನೆಗೆ ಹೋಗೋಣ ಅಂದೆ. ಇವತ್ತಿಲ್ಲ ಮಾರಾಯಾ..ಈಗ ನಾನು ಅರ್ಜೆಂಟಾಗಿ ಶಿಮೊಗ್ಗ ಹೊರಟೀದೀನಿ…ಏಳು..ಜ್ಯೂಸ್ ಕುಡೀಯೂವಾ..ಇಬ್ಬರೂ ಹೋಟೆಲ್ ಹೊಕ್ಕು ಮಹಡಿಯೇರಿ ಕೂತೆವು. ಆಗ ಮತ್ತೆ ಆಕೆ ಕಂಡಳು.
ಅದೇ ಭರ್ಜರಿ ಸೀರೆಯುಟ್ಟ, ಮುದುಕಿಯ ಜತೆ ಚೌಕಾಶಿ ಮಾಡಿದ್ದ ಹೆಂಗಸು. ಇವತ್ತು ಅವಳೆದುರು ಬಿಗಿ ಉಡುಪು ತೊಟ್ಟ ತರುಣಿಯೂ ಕೂತಿದ್ಲು. ಮಗಳಿರಬಹುದೇ? ಅವರ ಎದುರಲ್ಲಿ ಮಸಾಲೆ ದೋಸೆ. ತರುಣಿ “ಅಯ್ಯೋ..ಏನೇನೂ ಚೆನಾಗಿಲ್ಲ..ನಂಗ್ಬೇಡಮ್ಮ” ಅಂತ ಅರ್ಧಕ್ಕಿಂತ ಜಾಸ್ತಿ ದೋಸೆಯಿದ್ದ ಪ್ಲೇಟನ್ನು ಬದಿಗೆ ಸರಿಸುತ್ತ ಹೇಳಿದಳು. “ಅಯ್ಯೋ..ಬೇಡಾಂದ್ರೆ ಬಿಡು..ಹೋಗ್ಲಿ..ಐಸ್ ಕ್ರೀಂ ಅದ್ರೂ ತಗೋ..” ಐಸ್ ಕ್ರೀಂ ಬಂತು. ಅದ್ರಲ್ಲಿ ಅರ್ಧ ಉಳೀತು. “ಯಾಕೇ?” “ಅಯ್ಯೋ..ಚೆನಾಗಿಲ್ಲ..ಬೇಡಮ್ಮ” “ಸರಿ ಬಿಡು..ಇಷ್ಟ ಇಲ್ದಿದ್ರೆ ತಿನ್ಬಾರ್ದು.” ನಾನು ಅವರ ಮಾತು ಕೇಳುತ್ತ ಕೂತೆ. ನಾವು ಜ್ಯೂಸ್ ಕುಡಿಯುತ್ತಿರುವಾಗ ಅವರಿಬ್ಬರೂ ಎದ್ದು ಹೋದರು. “ಏನೋ..ಗುರ್ತ್ನೋರಾ?” ನಾನು ಅವರನ್ನೇ ನೋಡ್ತಾ ಕೂತಿದ್ದು ಕಂಡು ವಿಮ್ಲ ಕೇಳಿದ್ಲು. “ಅಲ್ಲ..” ನಾನು ಸಂಕ್ಷಿಪ್ತವಾಗಿ ಕೊತ್ತಂಬರಿ ಕಟ್ಟಿನ ವ್ಯಾಪಾರದ ಸುದ್ದಿ ಹೇಳಿದೆ. ವಿಮಲ ಅವರತ್ತ ನೋಡಿ ಹಣ ಜಾಸ್ತಿ..ವಿವೇಕ ಕಡಿಮೆ.. ಅಂತದ್ಲು.
** ಐಸ್ ಕ್ರೀಂ ಕರಗತೊಡಗಿತ್ತು. ಅರ್ಧ ಉಳಿದಿದ್ದ ದೋಸೆ ನನಗೆ ಮುದುಕಿಯ ಸುಕ್ಕುಗಟ್ಟಿದ ಮುಖದಂತೆ ಕಂಡಿತು. ಪ್ಲೇಟಲ್ಲುಳಿದಿದ್ದ ಪಲ್ಯದಲ್ಲಿ ಕೊತ್ತಂಬರಿ ಸೊಪ್ಪಿನ ಚೂರೂ ಕಂಡಿತು. ವಿಮಲಳಿಗೆ ಹೇಗೆ ಕಂಡೀತೋ..ತಿಳೀಲಿಲ್ಲ.