Sunday, November 1, 2009

ನಾಯಿ ಮತ್ತು ನರ.

ನನಗೆ ನಾಯಿಗಳೆಂದರೆ ತುಸು ಭಯ. ನಾಯಿಮರಿಗಳೆಂದರೂ ಭಯ. ಇಲ್ಲಿಯವರೆಗೂ ನಾಯಿಗಳಿಂದ ನಾನೇನೂ ಕಚ್ಚಿಸಿಕೊಂಡಿಲ್ಲ. ನನ್ನ ಮಗಳು ಸ್ವಾತಿ ಚಿಕ್ಕವಳಿದ್ದಾಗ ಒಮ್ಮೆ ನಾಯಿಮರಿ ಕಚ್ಚಿತ್ತು. ಅದಕ್ಕೇ ನನಗೂ ಹೆದರಿಕೆ ಉಳಿದಿರಬಹುದು. ಅವಳಿಗೇ ಅದು ಮರೆತಿದೆ,ನನಗ್ಯಾಕೆ ನೆನಪಲ್ಲುಳಿದಿದೆಯೋ ಗೊತ್ತಾಗ್ತಿಲ್ಲ. ಯಾವುದೇ ಸಾಕು ಪ್ರಾಣಿಗಳನ್ನು ಅನುಮಾನದಿಂದಲೇ ನೋಡುವ ನನ್ನ ಪತ್ನಿಯ ಸ್ವಭಾವ ನನ್ನ ಮೇಲೂ ತುಸು ಪರಿಣಾಮ ಬೀರಿರಬಹುದು.
ನಾಯಿಗಳ ಗುಣದ ಬಗ್ಗೆ ಅಪಾರ ಸಂಶೋಧನೆಗಳು ನಡೆದಿವೆ. ಅವುಗಳ ಅವಗುಣಗಳ ಬಗ್ಗೆ ಏನೂ ವಿವರಗಳಿಲ್ಲ. ನನಗೆ ಅವುಗಳ ಬಗ್ಗೆ ಇರುವ ಒಂದು ಮುಖ್ಯ ತಕರಾರೆಂದರೆ ಹಗಲಿಡೀ ಎಲ್ಲಾದರೂ ಮಲಗಿ ಹೊತ್ತು ಕಳೆವ ಅವು ರಾತ್ರಿ ಯಾಕೆ ಕೂಗುತ್ತ ,ಊಳಿಡುತ್ತ ತ್ರಾಸು ಕೊಡುತ್ತವೆ ಎಂಬುದು. ನಮ್ಮ ಬೀದಿಯಲ್ಲಿರುವ ಎರಡು ನಾಯಿಗಳ ಸ್ವಭಾವ ಅದು. ಎಲ್ಲ ನಾಯಿಗಳೂ ಹಾಗೇ ಮಾಡುತ್ತವಾ?ಗೊತ್ತಿಲ್ಲ. ಎರಡು ಅಗುಳು ಹಿಚುಕಿ ಅಕ್ಕಿ ಬೆಂದಿದೆಯಾ ಇಲ್ಲವಾ ಎಂಬುದನ್ನು ನೋಡಬಹುದಂತೆ. ಅದೇ ತರ್ಕ ಇಲ್ಲೂ ಅಳವಡಿಸಿ ಎಲ್ಲಾ ನಾಯಿಗಳೂ ಹಾಗೇ ಎಂದು ನಾನು ಅಭಿಪ್ರಾಯಪಡುತ್ತೇನೆ. ಹಾಗಾಗಿ ನಾಯಿಗಳೆಂದರೆ ನಾನು ತುಸು ದೂರ.ಯಾರದ್ದಾದರೂ ಮನೆಗೆ ಹೋದಾಗಲೂ, ಅವರ ಮನೆಯಲ್ಲಿ ಒಂದು ಬಡಕಲು ನಾಯಿ ಕಂಡರೂ ಗೇಟಿನ ಬಳಿಯೇ ನಿಂತು ಬೊಬ್ಬೆ ಹೊಡೆದು ಮನೆಯವರಿಂದ ರಕ್ಷಣೆಯ ಸಂಪೂರ್ಣ ಆಶ್ವಾಸನೆ ದೊರೆತ ಅನಂತರವೇ ಒಳಗೆ ಹೋಗುತ್ತಿದ್ದೆ.
ಇವತ್ತು ಮಾಡಲೇನಾದರೂ ಘನಂದಾರಿ ಕೆಲಸ ಉಂಟಾ ಎಂದು ಯೋಚಿಸುತ್ತ ಮನೆಯ ಚಿಟ್ಟೆಯ ಮೇಲೆ ಕೂತಿದ್ದೆ. ಕುಂಯ್ ಕುಂಯ್ ಎಂಬ ಸದ್ದು ನನ್ನ ಯೋಚನಾಕ್ರಮವನ್ನು ಭಂಗಿಸಿತು. ನೋಡುತ್ತೇನೆ-ಏನು ನೋಡುವುದು-ಒಂದು ನಾಯಿಮರಿ ಗೇಟಿನ ಸರಳುಗಳ ನಡುವೆ ತಲೆತೂರಿಸಿ ಒಳಬರಲು ಹವಣಿಸುತ್ತಿದೆ."ಅಪ್ಪ,ಅದಕ್ಕೆ ಒಂದು ಬಿಸ್ಕತ್ ಕೊಟ್ಟೆ" ಎಂದು ಮಗಳು ಹೇಳಿದಳು. ಭೂಕಂಪವೇ ಆದಂತಾಯಿತು! ಈ ಬಿಸ್ಕತ್ತನ್ನು ಈ ಮನೆಯ ಸದಸ್ಯನಾಗಲು ಆಹ್ವಾನ ಎಂದು ಅದು ಭಾವಿಸಿದಂತೆ ನನಗೆ ಕಂಡಿತು.ಮರಿ ಒಳ ಬಂದು ನಮ್ಮನೆ ಖಾಯಂ ಸದಸ್ಯನಾಗುವ ಎಲ್ಲ ಅಪಾಯಗಳು ಕಂಡವು. ಹಚ ಹಚ ಎಂದೆ. ಅದಕ್ಕೆ ಹಚ್ ಹಚ್ ಎಂದಂತೆ ಕೇಳಿತೋ ಏನೊ! ಹಚ್ ಕಂಪನಿಗೆ ಮುಂಚೆ ನಾಯಿಯೇ ಮಾಡೆಲ್ ಆಗಿತ್ತಲ್ಲ! ಅದು ಉತ್ಸಾಹದಿಂದ ಜೋರಾಗಿ ಬಾಲ ಅಲ್ಲಾಡಿಸುತ್ತಾ ತನ್ನ ಪ್ರಯತ್ನ ತೀವ್ರಗೊಳಿಸಿತು. ಎದ್ದು ಬಂದು ಸಣ್ಣ ಕೋಲು ತೆಗೆದುಕೊಂಡು ಅದನ್ನು ಓಡಿಸಿ ಭಯಂಕರ ಅಪಾಯದಿಂದ ಪಾರಾದ್ದಕ್ಕೆ ನೆಮ್ಮದಿಪಟ್ಟೆ.
ಮಾರನೆಯ ದಿನ ಅದೇ ಹೊತ್ತಿಗೆ ಮತ್ತೆ ಬಂದು ಮತ್ತೆ ಕುಂಯ್ಗುಟ್ಟುತ್ತಾ ಒಳಬರಲು ಪ್ರಯತ್ನ ಮಾಡತೊಡಗಿತು. ಮತ್ತೆ ಸಣ್ಣಕೋಲು. ನಾಲ್ಕಾರು ದಿನ ಇದು ನಡೆಯಿತು.ಇದೆಷ್ಟು ಅಭ್ಯಾಸವಾಯಿತೆಂದರೆ ಆ ಹೊತ್ತಿಗೆ ಸರಿಯಾಗಿ ನಾನು ಹೊರಗಡೆ ಬಂದು ನಿಲ್ಲುತ್ತಿದ್ದೆ.ನಾಯಿಮರಿ ಬಂದು ಬಾಲ ಅಲ್ಲಾಡಿಸುತ್ತಾ ನಾನು ಕೋಲು ತೆಗೆದುಕೊಂಡಕೂಡಲೇ ಓಡುತ್ತಿತ್ತು. ಇದನ್ನು ದಿನಾ ನೋಡುತ್ತಿದ್ದ ನನ್ನ ಪುಟ್ಟ ಮಗಳು ಒಂದಿನ "ಅಯ್ಯೋ ಅದು ಬಂದ್ರೆ ಏನಾಗುತ್ತಪ್ಪ ಬಿಡು"ಎಂದಳು. ಏನಾಗುತ್ತೆ ಎಂದು ನಂಗೂ ಗೊತ್ತಿರಲಿಲ್ಲ. ಆದರೆ ಅದನ್ನು ಹೇಗೆ ಒಪ್ಪಿಕೊಳ್ಳುವುದು? ನಿನಗೆ ಗೊತ್ತಾಗಲ್ಲ,ಸುಮ್ನಿರು ಅಂದೆ. "ನೀನು ಹೊಡೀತಿ ಅಂತ ಗೊತ್ತಿದ್ರು ದಿನಾ ಬರುತ್ತಲ್ಲ..ಬುದ್ಧಿ ಇಲ್ಲ.ಸ್ಟುಪಿಡ್ ಪಪ್ಪಿ"ಅಂತ ಅಂದಳು.
ಹತ್ತನೇ ದಿನವೋ ಹನ್ನೊಂದನೆಯ ದಿನವೋ ನಾಯಿಮರಿ ಬರಲಿಲ್ಲ. ಸ್ವಲ್ಪ ತಡವಾಗಿ ಬರಬಹುದು ಎಂದು ನಾನು ಭಾವಿಸಿದೆ.ಅರ್ಧ ಗಂಟೆ ಕಳೆದರೂ ಬರಲಿಲ್ಲ. ಗೇಟಿಗೊರಗಿ ನಿಂತು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದೆ. ಸುಳಿವಿಲ್ಲ."ನಾಯಿಮರಿ ನೋಡ್ತಿದೀಯಾ? ಎಂದು ಮಗಳು ಕೇಳಿದಳು." ಇಲ್ಲ ಅಂತ ನಾನು ಅಂದದ್ದು ಸುಳ್ಳು ಅಂತ ಅವಳಿಗೂ ಗೊತ್ತಾಗಿರಬಹುದು."ಮರಿಗೆ ಅಂತೂ ಬುದ್ಧಿ ಬಂದಿರಬೇಕು" ಅಂತ ಮಗಳು ಖುಷಿಪಟ್ಟು ಹೇಳಿ ಸ್ಕೂಲಿಗೆ ಹೋಗಿದ್ದಳು.ನಾನು ನಾಯಿಮರಿಯನ್ನು ಹೆದರಿಸಿ ಓಡಿಸುವುದು ಅವಳಿಗೆ ತುಸು ಬೇಸರದ ಸಂಗತಿಯಾಗಿತ್ತು ಅಂತ ಕಾಣಿಸುತ್ತೆ. ಎಲಾ!ಯಾಕೆ ಬರಲಿಲ್ಲ? ನನಗೆ ವಿಚಿತ್ರ ಚಡಪಡಿಕೆ ಶುರುವಾಯಿತು. ಯಾವುದಾದರೂ ಬೈಕಿಗೋ, ಕಾರಿಗೋ ಸಿಕ್ಕು ಫಡ್ಚ ಅಯ್ತಾ ಎಂಬ ಯೋಚನೆ ಬಂದು ದಿಗಿಲಾಯಿತು.ಗೇಟಿನ ಹತ್ತಿರ ನಿಂತು ಹಾಗೇ ನೋಡುತ್ತಿದ್ದಾಗ ಏನು ನೋಡುತ್ತಿದ್ದೀರಿ? ಎಂದು ನನ್ನಾಕೆ ಕೇಳಿದಾಗ ಏನಿಲ್ಲ ನಾಯಿಮರಿ ಎಂದೆ. "ಎಲ್ಲಿದೆ ನಾಯಿಮರಿ?" ಪ್ರಶ್ನೆ. "ಎಲ್ಲೂ ಇಲ್ಲ" ಉತ್ತರ. ಇಲ್ಲದ, ಬರದಿದ್ದ ನಾಯಿಮರಿಯನ್ನು ನಾನು ನೋಡುತ್ತಿರುವುದು ಹೇಗೆ ಎಂದು ನನ್ನಾಕೆಗೆ ತಿಳಿಯದೆ "ಏನೋ.." ಎಂದು ಒಳಗೆ ಹೋದಳು.ಅವತ್ತಿಡೀ ಮನಸ್ಸು ತುಸು ಮಂಕಾಗಿತ್ತು.ಕಾರಿನ ಚಕ್ರಕ್ಕೆ ಸಿಕ್ಕು ಅಪ್ಪಚ್ಚಿಯಾದ ಅದರ ಪುಟ್ಟ ದೇಹದ ಬಗ್ಗೆ ಕಲ್ಪನೆ ಬಂದಾಗ ಮನಸ್ಸಿಗೆ ಸಣ್ಣ ಕಂಪನ.ಸತ್ತಿರಲಿಕ್ಕಿಲ್ಲ ಎಂದು ನನ್ನ ನಾನೇ ನಂಬಿಸಿಕೊಳ್ಳುತ್ತಿದ್ದೆ. ದಿನವಿಡೀ ಕುಂಯ್..ಕುಂಯ್..ಸದ್ದು ಕೇಳೀತೇ ಎಂದು ಗೇಟಿನತ್ತಲೇ ಗಮನ. ಸದ್ದಿಲ್ಲ. ನಾಯಿಮರಿ ಬಂದಿತ್ತಾ ಅಪ್ಪಾ ಎಂದು ಮಗಳು ಶಾಲೆಯಿಂದ ಬಂದವಳು ಕೇಳಿದಳು. 'ಇಲ್ಲ. ನಿನಗ್ಯಾಕೆ ಬೇಸ್ರ ಅದು ಬರದಿದ್ರೆ?"ಅವಳನ್ನು ಸಮಧಾನಪಡಿಸುವಂತೆ ಹೇಳಿದೆ.ನನ್ಗೆ ಅದು ಒಂದು ವಿಷಯವೇ ಅಲ್ಲ ಎಂದು ನನಗೂ ನಂಬಿಸಿಕೊಳ್ಳಬೇಕಾಗಿತ್ತು. ಮಗಳು ಮುಂದೇನೂ ಮಾತಾಡಲಿಲ್ಲ. ಅವತ್ತು ಅವಳ ಚಟುವಟಿಕೆಯಲ್ಲಿ ಎಂದಿನ ಲವಲವಿಕೆ ಕಾಣಲಿಲ್ಲ.
ಇನ್ನೂ ಎರಡು ದಿನ ಕಳೆದರೂ ಮರಿ ಪತ್ತೆಯಿಲ್ಲ. ನನ್ನ ಮಗಳು ಕಾಯುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ತುಸು ಸಪ್ಪೆ ಮುಖದಲ್ಲಿ ಸ್ಕೂಲಿಗೆ ಹೋಗುತ್ತಿದ್ದಳು. "ನಿನ್ನ ಕೋಲಿಗೆ ಹೆದರಿ ಬಂದಿಲ್ಲ."ಎಂದು ಹೇಳಿದಳು. ನನಗೆ ಏನುತ್ತರ ಕೊಡಬೇಕು ತಿಳಿಯದೆ ಅವಳನ್ನೇ ಸುಮ್ಮನೇ ನೋಡಿದೆ."ನೀನು ತಪ್ಪು ಮಾಡಿದೆ"ಎಂಬ ಭಾವನೆ ಅವಳ ನೋಟದಲ್ಲಿತ್ತೇ?
ನಾಲ್ಕನೆದಿನ "ಬಂತು" ಎಂಬ ಕೂಗು ಕೇಳಿ ಛಕ್ಕಂತ ಎದ್ದು ಹೊರಗೆ ಬಂದೆ. ನಾಯಿಮರಿ ಯಥಾಪ್ರಕಾರ ಬಾಲ ಅಲ್ಲಾಡಿಸುತ್ತ ನಿಂತಿತ್ತು. ಮಗಳ ಮುಖದಲ್ಲಿ ಮಂದಹಾಸ. ನಾನು ಒಳಗೆ ಹೋಗಿ ಎರಡು ಬಿಸ್ಕತ್ ತಂದೆ.ನಾನೊಂದು ಕೊಡ್ತೀನಿ ಎಂದು ಮಗಳು ಕೊಟ್ಟಳು. ಬಾಲ ಉದುರಿಹೋಗಬಹುದು ಎಂದು ನಮಗನಿಸುವಷ್ಟು ರಭಸದಲ್ಲಿ ಬಾಲ ಅಲ್ಲಾಡಿತು.
"ಅಪ್ಪ, ಅದಕ್ಕೆ ನೀನು ಹೊಡೀತೀಯ ಅನ್ನೋದು ನೆನಪಿಲ್ಲ. ಬಿಸ್ಕತ್ ಕೊಟ್ಟಿದ್ದು ನೆನಪಿದೆ.ಅದಕ್ಕೇ ಬಂತು"ಅಂದಳು.
ಬೆಚ್ಚಿದೆ.ಯಾವುದೋ ಊರಲ್ಲಿ ಯಾವಾಗಲೋ ಮಗಳಿಗೆ ನಾಯಿ ಕಚ್ಚಿದ ನೆನಪಲ್ಲಿ ಇದನ್ನು ನಾನು ಹೆದರಿಸುತ್ತಿದ್ದೆ. ತನ್ನನ್ನೇ ಹೆದರಿಸಿದರೂ ಇದು ಕೋಲನ್ನು ಮರೆತು ಮಗಳು ಕೊಟ್ಟ ಬಿಸ್ಕತ್ತನ್ನು ಮಾತ್ರ ನೆನಪಲ್ಲಿಟ್ಟುಕೊಂಡಿತ್ತು. ತಪ್ಪನ್ನು ಕ್ಷಮಿಸುವ ಮಾನವೀಯ ಗುಣ[?] ನನಗಿಂತ ಈ ನಾಯಿಮರಿಗೆ ಜಾಸ್ತಿ ಇದ್ದಂತಿತ್ತು! ಆ ಕ್ಷಣದಲ್ಲಿ ಆ ಮರಿ ಸಂತನ ಗುಣವುಳ್ಳ ನರನಂತೆಯೂ ನಾನು ಕ್ರೂರ ಪ್ರಾಣಿಯಂತೆಯೂ ನನಗೆ ಭಾಸವಾಯಿತು.

Wednesday, September 30, 2009

ಒಂದು ಅನೀತಿ ಕತೆ.

ಪ್ರತಿನಿತ್ಯ ಸಾಯಂಕಾಲ,ಸೂರ್ಯ ಮುಳುಗುವುದು ತಪ್ಪಿದರೂ ತಪ್ಪಬಹುದು, ಆದರೆ ಆ ಹತ್ತು ಜನ ಊರ ಹೊರಗಿನ ಗಾಳಿ ಮರದ ಕೆಳಗಡೆ ಸೇರುವುದು ತಪ್ಪುವುದಿಲ್ಲ. ಅಲ್ಲಿ ಕೂತು ಇಡೀ ಪ್ರಪಂಚ ಸುತ್ತಾಡುತ್ತಾರೆ. ಹತ್ತು ಜನರೂ ಏಕಕಾಲಕ್ಕೆ ಹತ್ತು ವಿಷಯಗಳನ್ನು ಕುರಿತು ಮಾತಾಡುತ್ತಿರುತ್ತಾರೆ. ಯಾರಿಗೂ ತಮ್ಮ ಮಾತುಗಳನ್ನು ಬೇರೆಯವರು ಕೇಳಲೇಬೇಕು ಎಂಬ ಜರೂರತ್ತಿಲ್ಲ. ಒಂಬತ್ತು ಗಂಟೆ ಆಯಿತೆಂದರೆ ಎಲ್ಲ ಬಡ ಬಡ ಎದ್ದು ಹೊರಡುತ್ತಾರೆ.ಅವರವರ ತಾಪತ್ರಯಗಳು ಮತ್ತೆ ಬೆನ್ನೇರುತ್ತವೆ.
ಆ ದಿನವೂ ಹೀಗೇ ಸೇರಿದವರು ಮಾತಾಡುತ್ತಿದ್ದರು. ಇದ್ದಕ್ಕಿದ್ದಂತೆ ಒಬ್ಬ ಅಂದ.”ಅಲ್ಲ..ನಾವು ಯಾರಿಗೂ ಏನೂ ಕೆಟ್ಟದು ಮಾಡಿಲ್ಲ. ನಮ್ ಪಾಡಿಗೆ ನಾವಿದೀವಿ. ಅದ್ರೂ ನಮ್ಮನ್ನ ಪೋಲಿಹುಡುಗ್ರು ಅಂತಾರಲ್ಲ..” ಸಮಾಜದ ಬಗ್ಗೆಯೋ,ಪ್ರಪಂಚದ ಯಾವುದೋ ಸಮಸ್ಯೆಯ ಬಗ್ಗೆಯೋ ಆಗಿದ್ದರೆ ಉಳಿದ ಯಾರಿಗೂ ಇವನ ಮಾತು ಕೇಳುತ್ತಲೇ ಇರಲಿಲ್ಲವೇನೋ! ಅದ್ರೆ ಪೋಲಿಹುಡುಗ್ರು..ಬಹುವಚನ ಪ್ರಯೋಗ..”ಯಾರಯ್ಯ ಹಾಗಂದೋರು?” “ಒದೀಬೇಕು ಹಾಗಂದೋರಿಗೆ” “ಅರೆ! ಒದ್ರೆ ಪೋಲಿ ಹುಡುಗ್ರು ಅಂತ ನಾವೇ ಸಾಕ್ಷಿ ಕೊಟ್ಠಾಗೆ ಆಗಲ್ಲ್ವೇನೋ?” “ಒದಿಯೋದು ಅಂದ್ರೆ ಒದಿಯೋದು ಅಲ್ಲಪ್ಪಾ…” ಏನೋ ವಿವರಣೆ ನೀಡತೊಡಗಿದ. ಇಷ್ಟು ದಿನಗಳಲ್ಲಿ ಎಂದೂ ಕಾಣದಿದ್ದ ಏಕತೆ ಇಂದು ಕಂಡಿತು. “ಅವ್ರು ಹೇಳೋದೆ ಸತ್ಯ ಇರ್ಬಹುದು. ನಾವು ಒಳ್ಳೇರು ಅನ್ನೋದಕ್ಕೆ ಏನ್ರಯ್ಯ ಸಾಕ್ಷಿ ಇದೆ?” ಯಾರೋ ಒಬ್ಬ ಗಂಭೀರವಾದ ಸಂದೇಹ ಎತ್ತಿದ. “ಆದ್ರೆ ನಾವು ಕೆಟ್ಟೋರು ಅನ್ನೊದಕ್ಕೆ ಏನಿದೆ ಸಾಕ್ಷಿ?” ಇನ್ಯಾರದೋ ತಕರಾರು. ಎಲ್ಲರೂ ತಾವು ಒಳ್ಳೆಯವರೋ ಕೆಟ್ಟವರೋ ಎಂಬುದನ್ನು ಚಿಂತಿಸುತ್ತಾ ಮೌನವಾದರು.ಅವರಿಗೂ ನಿಜವಾಗಿ ಗೊತ್ತಾಗಲಿಲ್ಲ. ಯಾರನ್ನಾದರೂ ಕೇಳುವ ಅಂದರೆ, ಅವರು ನೀವು ಒಳ್ಳೇರಲ್ಲ ಕಣ್ರೋ ಎಂದರೆ?
ಅವರಲ್ಲೇ ಹಿರಿಯವನಾದವನು ಹೇಳಿದ. “ಒಂದ್ಕೆಲ್ಸ ಮಾಡುವಾ. ನಾವೀಗ ಹತ್ ಜನ ಇದೀವಿ. ನಮ್ ಗುಂಪಲ್ಲೇ ನಮ್ ನಮ್ಗೆ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ಸುತ್ತೆ ಅಂತ ಪರೀಕ್ಷೆ ಮಾಡೋಣ. ಒಂದ್ ಚೀಟೀಲಿ ಎಲ್ರೂ ಅವ್ರಿಗೆ ಈ ಗುಂಪಲ್ಲಿ ಯಾರು ಒಳ್ಳೇರು ಯಾರು ಒಳ್ಳೇರಲ್ಲ ಅನ್ನೊದನ್ನು ಬರೀಬೇಕು. ಗುಂಪಲ್ಲಿ ಅವ್ನೂ ಸೇರೋದ್ರಿಂದ ಅವ್ನಿಗೆ ಅವ್ನು ತಾನು ಒಳ್ಳೇನೋ ಒಳ್ಳೇನಲ್ವಾ ಅನ್ನೋದನ್ನೂ ಬರೀಬೇಕು.ಆಯ್ತಾ?” ಎಲ್ಲರೂ ಜೈ ಎಂದು ಒಂದೊಂದು ದಿಕ್ಕಿಗೆ ಮುಖ ಮಾಡಿ ಪಟ್ಟಿ ಮಾಡತೊಡಗಿದರು.
ಒಬ್ಬ ಯೋಚಿಸಿದ: “ತಾನು ನಿಜವಾಗಿ ಅಷ್ಟು ಒಳ್ಳೇನಲ್ಲ. ಕೆಲವು ಕೆಟ್ಟ ಗುಣಗಳು ತನ್ನಲ್ಲಿವೆ. ಸರಿ..ಹಾಗಂತ ನನ್ನ ನಾನೇ ಕೆಟ್ಟವ ಅಂತ ಬರೆದ್ರೆ ಸರಿಯಾಗಲ್ಲ. ಆದ್ರಿಂದ ತಾನು ಒಳ್ಳೇನಂತಲೇ ಬರೀಬೇಕು. ಉಳಿದೋರಲ್ಲಿ ಕೆಟ್ ಗುಣಾನೂ ಇದೆ,ಒಳ್ಳೇ ಗುಣಾನೂ ಇದೆ. ಅದ್ರೆ ಅವ್ರನ್ನ ಒಳ್ಳೇರು ಅಂತ ನಾನು ಬರೆದ್ರೆ, ಅವ್ರು ನನ್ನ ಒಳ್ಳೇನು ಅಂತ ಬರೀದಿದ್ರೆ ನಂಗೆ ನನ್ ಓಟು ಮಾತ್ರ.ಒಟ್ಟಲ್ಲಿ ನಾನು ಕೆಟ್ಟೋನು ಅಂತ ಆಗ್ತೀನಲ್ಲ. ಆದ್ರಿಂದ ಅವ್ರೆಲ್ಲ ಕೆಟ್ಟೋರು ಅಂತ ಬರೀತೀನಿ” ಹಾಗೇ ಬರೆದ.
ಎಲ್ಲರೂ ಹಾಗೇ ಯೋಚ್ನೆ ಮಾಡಿದ್ರು.
ಗುಂಪಿಗೆ ಬಂದ ನೂರು ಓಟಲ್ಲಿ ಹತ್ರಲ್ಲಿ ಮಾತ್ರ ಒಳ್ಳೇರು ಅಂತ, ಉಳಿದ ತೊಂಬತ್ರಲ್ಲಿ ಕೆಟ್ಟೋರು ಅಂತ ಇತ್ತು.
ಎಲ್ರೂ ಬೆಪ್ಪಾಗಿ ಕೂತ್ರು.
(ಈ ಕತೆ ನೀತಿ ಏನು ಅಂತ ನಂಗೊತ್ತಿಲ್ಲ. ಆದ್ರೆ ಗುಂಪಲ್ಲಿ ಸುಮ್ನೆ ನಿಂತು ಮಾತು ಆಲ್ಸಿ. ಏನ್ ನೀತಿ ಅಂತ ನಿಮ್ಗಾದ್ರೂ ಹೊಳೀಬಹುದು.)

Thursday, September 10, 2009

ನಿಜ..ನಿಜ..ನಿಜ..

****ಎಲ್ಲೋ ಕೇಳಿದ ಮಾತು. ನಿಜಕ್ಕೆ ಮೂರು ಮುಖಗಳಂತೆ. ಮೊದಲನೆಯದು ನಾನು ಕಾಣುವ ಮುಖ. ಎರಡನೆಯದು ಉಳಿದವರೆಲ್ಲ ಕಾಣುವ ಮುಖ. ಸಧ್ಯಕ್ಕೆ ಈ ಎರಡು ಮುಖಗಳು ಸಾಕು;ಮೂರನೆಯ ಮುಖ ಆ ಮೇಲೆ ನೋಡೋಣ. ಯಾವುದೇ ಘಟನೆ ಆರಿಸಿಕೊಳ್ಳಿ. ಏನು ನಡೆದಿದೆ ಎಂಬುದರ ಬಗ್ಗೆ ನಿಮ್ಮ ಯೋಚನೆ ಖಚಿತಪಡಿಸಿಕೊಳ್ಳಿ. ಅದೇ ಘಟನೆಯ ಬಗ್ಗೆ ಬೇರೆ ಯಾರದಾದರೂ ಅಭಿಪ್ರಾಯ ಕೇಳಿ. ಒಂದು ಸಣ್ಣ ವ್ಯತ್ಯಾಸವಾದರೂ ಇರುತ್ತದೆ. ಅದು ಹಾಗಲ್ಲ ಮಾರಾಯಾ...ಎಂದು ನೀವು ನಿಜವನ್ನು ಅವನಿಗೆ ತಿಳಿಸಲು ಹೊರಡುತ್ತೀರಿ. ನೀವು ಹೇಳುವುದನ್ನು-ತಾಳ್ಮೆಯಿದ್ದರೆ-ಅವನು ಕೇಳಿ, ಅದು ಹಾಗಲ್ಲ ಮಾರಾಯಾ..ಎಂದು ತನ್ನ ನಿಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾನೆ.
****ಉದಾಹರಣೆಗೆ ದೇವರ ಬಗೆಗಿನ ಚರ್ಚೆಯನ್ನೇ ಗಮನಿಸಿ.[ದೇವರನ್ನು ನಾನು ಆರಿಸಿದ ಕಾರಣ ದೇವರು ನನ್ನ ಬಳಿ ಬಂದು ನಿಮ್ಮ ತಕರಾರಿನ ಮಧ್ಯೆ ನನ್ನ ತೂರಿಸಿದ್ದು ಯಾಕೆ ಎಂದು ಕೇಳುವುದಿಲ್ಲ. ಅಕಸ್ಮಾತ್ತಾಗಿ ಹಾಗೆ ಬಂದರೆ ಅನಾಯಾಸವಾಗಿ ದೇವರನ್ನು ಕಂಡಂತಾಯಿತಲ್ಲ!] ಜಗತ್ತಿಗೆಲ್ಲ ದೇವರು ಒಬ್ಬನೇ ಎಂದು ಎಲ್ಲ ಧರ್ಮಗಳೂ ಘೋಷಿಸುತ್ತವೆ. ನಿಜ. ಆದರೆ ಈ ದೇವರು ಯಾರು? ಶೈವರಿಗೆ ಶಿವ, ವೈಷ್ಣವರಿಗೆ ವಿಷ್ಣು, ಕ್ರಿಶ್ಚಿಯನ್ನರಿಗೆ ಕ್ರಿಸ್ತ/ಶಿಲುಬೆ.ನಮ್ಮ ನಿಮ್ಮಂತವರಿಗೆ ಮನೆಯ ಮೂಲೆಯಲ್ಲಿರುವ ತಲೆತಲಾಂತರದಿಂದ ಪೂಜಿಸುತ್ತ ಬಂದಿರುವ ಒಂದಿಷ್ಟು ಮೂರ್ತಿಗಳು. ದೇವರು ಒಂದೇ ಎಂದು ಹೇಳುತ್ತಲೇ ಅವರವರ ದೇವರ ನಿಜದ ಬಗ್ಗೆ ಚರ್ಚೆ, ಯುದ್ಧ, ಹಿಂಸೆ ನಡೆಯುತ್ತೆ. ಹೌದಾ ಅಲ್ಲವಾ ನೀವೇ ಹೇಳಿ.
****ಮತ್ತೆ ನಿಜದ ಮೂರನೆಯ ಮುಖ : ನಾನು ನೋಡಿರದ, ನೀವೂ ನೋಡಿರದ, ಪ್ರಾಯಶಃ ನೋಡಲು ಹಂಬಲಿಸದ ನಿಜವಾದ "ನಿಜ"

Saturday, August 29, 2009

ಹೊತ್ತು ಹೋಗದೆ ಮಾತು.

. ಸಲಹೆಗಳಿರುವುದು ಬೇರೆಯವರಿಗೆ ಕೊಡಲೇ ಹೊರತು ಸ್ವಂತದ ಉಪಯೋಗಕ್ಕಲ್ಲ.

. ನೀವು ಕಡ ಕೇಳುವ ಹಿಂದಿನದಿನದವರೆಗೂ ನಿಮ್ಮ ಸ್ನೇಹಿತನ ಬಳಿ ಸಾಕಷ್ಟು ಹಣವಿರುತ್ತದೆ.

. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಮಾನವೀಯಧರ್ಮ ಎಂದು ಯಾರಾದರೂ ಹೇಳಿದರೆ, ಅವರು ಕಷ್ಟದಲ್ಲಿದ್ದಾರೆ ಎಂದರ್ಥ.

. ದೇವರಿಗೆ ಭಕ್ತ ಏನು ಕೊಟ್ಟರೂ ಸಾಕು;ಕೊಡದಿದ್ದರೂ ಅಡ್ಡಿಲ್ಲ.ಅರ್ಚಕರಿಗೆ ಮಾತ್ರ ಭಕ್ತರು ಕೊಡಲೇಬೇಕು. ಭಕ್ತರು ಕೊಡುವಷ್ಟೂ ಅವರಿಗೆ ಬೇಕು.

. ಅಪ್ರಾಮಾಣಿಕರಾಗುವ ಅವಕಾಶ ಸಿಗುವವರೆಗೂ ಎಲ್ಲರೂ ಪ್ರಾಮಾಣಿಕರೇ. ಹಾಗೆ ಅವಕಾಶವಿದ್ದಾಗಲೂ

ಪ್ರಾಮಾಣಿಕನಾಗಿದ್ದವನನ್ನು ಹಿಂದೆಲ್ಲ ಯೋಗ್ಯ, ಮಹಾನುಭಾವ ಇತ್ಯಾದಿ ಗುರುತಿಸುತ್ತಿದ್ದರು. ಈಗ ದಡ್ಡ, ವ್ಯಾವಹಾರಿಕ ತಿಳುವಳಿಕೆ ಇಲ್ಲದವನು ಎನ್ನುತ್ತಾರೆ.

. ಒಗ್ಗಟ್ಟಿಂದ ಕೆಲಸ ಮಾಡಿದರೆ ಎಲ್ಲರ ಕೆಲಸವೂ ಸುಲಭ ಎಂದು ಗುಂಪಿನಲ್ಲಿರುವ ಎಲ್ಲರಿಗೂ ಗೊತ್ತು. ಒಗ್ಗಟ್ಟಾಗಲು ಒಬ್ಬ ನಾಯಕ ಬೇಕು ಎಂಬುದರ ಬಗ್ಗೆಯೂ ಯಾರ ತಕರಾರೂ ಇಲ್ಲ. ತಕರಾರಿರುವುದು ನಾಯಕ ಯಾರಾಗಬೇಕು ಎಂಬುದರ ಬಗ್ಗೆ.

Tuesday, June 30, 2009

ನಾಲ್ಕು ಸುದ್ದಿಗಳು.

*****ಸುದ್ದಿ ಒಂದು: ಜಾರ್ಖಂಡ್ ನ ಪಲಾಮೌ ಜಿಲ್ಲೆಯ ಚತ್ರಾಪುರ ಬ್ಲಾಕ್ ನ ಸಾವಿರಕ್ಕೂ ಹೆಚ್ಚು ರೈತರು ಸತತ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ರಾಷ್ರಪತಿಗಳ ಅನುಮತಿ ಕೋರಿದ್ದಾರೆ.
*****ಸುದ್ದಿ ಎರಡು: ನಮ್ಮ ಸಂಸತ್ ಭವನ, ಪ್ರಧಾನಿ ನಿವಾಸ ಮತ್ತು ರಾಷ್ರಪತಿಗಳ ನಿವಾಸದ ಒಟ್ಟು ವಿದ್ಯುತ್ ಖರ್ಚು ವರ್ಷಕ್ಕೆ ಸುಮಾರು ೧೪ ಕೋಟಿ ರೂಪಾಯಿಗಳು.
*****ಸುದ್ದಿ ಮೂರು: ಗುಜರಾತಿನ ಮುಖ್ಯಮಂತ್ರಿ ಮೋದಿಯವರ ಪ್ರತಿತಿಂಗಳ ವಿಮಾನಯಾನದ ಖರ್ಚು ಸುಮಾರು ೨೭ ಲಕ್ಷ ರೂಪಾಯಿಗಳು.
*****ಸುದ್ದಿ ನಾಲ್ಕು: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ತಮ್ಮ ಹಾಗೂ ತಮ್ಮ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶದ ಎಲ್ಲಡೆ ಸ್ಥಾಪಿಸಲು ನಿರ್ಧರಿಸಿ, ಇದಕ್ಕಾಗಿ ಸರಕಾರೀ ಬಾಬತ್ತಿನಲ್ಲಿ ಎರಡು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ.
*****ಇವನ್ನು ಓದಿದೆ.ಯಾವ ರೀತಿಯ ಪ್ರತಿಕ್ರಿಯೆ ತೋರಿಸಬೇಕು ತಿಳೀತಿಲ್ಲ.

Tuesday, April 14, 2009

ಎರಡು ಪುಟ್ಟ ಕತೆಗಳು.

ಒಂದು.
***ಅವರು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು.ಅವಳ ಕಣ್ಣಲ್ಲಿ ಅವನ ಚಿತ್ರ,ಅವನ ಕಣ್ಣಲ್ಲಿ ಅವಳ ಚಿತ್ರ.ಅವನ ಕಡೆಯಿಂದ ಬೀಸುವ ಗಾಳಿ ಅವಳಿಗೆ, ಅವಳ ಕಡೆಯಿಂದ ಬೀಸುವ ಗಾಳಿ ಅವನಿಗೆ ಮಧುರ ಪುಳಕ ನೀಡುತ್ತಿತ್ತು.ಹಕ್ಕಿಗಳು ಅವರಿಗಾಗಿ ಹಾಡುತ್ತಿದ್ದವು. ಮರಗಳು ಅವರಿಗಾಗಿ ಚಿಗುರಿ ಹೂ ಬಿಡುತ್ತಿದ್ದವು.ಅವರ ಪ್ರೀತಿಯ ಸಲ್ಲಾಪ ಕಂಡು ಚಂದ್ರ ಮೋಡದ ಮರೆಯಲ್ಲಿ ಅಡಗುತ್ತಿದ್ದ.ಸೂರ್ಯ ಕೆಂಪಾಗುತ್ತಿದ್ದ. ತಾರೆಗಳು ಕಣ್ಣು ಮಿಟುಕಿಸುತ್ತಿದ್ದವು.ಅವರು ಸುಖದಿಂದ ಇದ್ದರು ಅನ್ನುವುದಕ್ಕಿಂತ ಸುಖವೇ ಅವರಲ್ಲಿ ಸುಖವಾಗಿತ್ತು ಅಂದರೇ ಚೆನ್ನ.
***ಎಲ್ಲ ಸುಖಕ್ಕೂ ಅಂತ್ಯ ಇದೆ; ಇರಲೇಬೇಕು.
***ಅವರು ಮದುವೆಯಾದರು.
%%%%%%%%%%%%%%%%%%%%
ಎರಡು.
ಪ್ರೀತಿಸಿ ಮದುವೆಯಾದವರು ಅವರು. ಸುಖವಾಗಿ ಹದಿನೈದು ವರ್ಷ ಕಳೆದಿದ್ದಾರೆ. ಒಂದು ಜಗಳವಿಲ್ಲ, ವಾದವಿಲ್ಲ. ಅವನ ಪ್ರಪಂಚದಲ್ಲಿ ಅವಳು ಮಾತ್ರ; ಅವಳ ಪ್ರಪಂಚದಲ್ಲಿ ಅವನು ಮಾತ್ರ. ಎಲ್ಲರಿಗೂ ಇದೊಂದು ವಿಸ್ಮಯವಾಗಿತ್ತು. ಒಂದಿನ ಹೆಂಡತಿ ಅವನ ಆಫೀಸಿಗೆ ಹೋದಳು. ಮೇಜಿನ ಮೇಲೆ ಒಂದಿಷ್ಟು ಕಾಗದಗಳನ್ನು ಹರಡಿಕೊಂಡು ಅವನು ಕೂತಿದ್ದ. ಅವನೆದುರು ೪೦-೪೫ರ ಹೆಂಗಸೊಬ್ಬಳು ಬಾಗಿ ಏನನ್ನೋ ವಿವರಿಸುತ್ತಿದ್ದಳು. ಗಂಡಸರೆದುರು ಹಾಗೆ ಬಾಗಿ ನಿಲ್ಲುವುದು ಸರಿಯಲ್ಲ.
ಆ ರಾತ್ರಿ ಆಕೆ ಕೇಳಿದಳು: ಆ ಮೋಹಿನಿ ಯಾರು? ಇವ್ನಿಗೆ ಏನೂ ಹೊಳೆಯಲಿಲ್ಲ. "ಯಾವ ಮೋಹಿನಿ?"" ಅದೇ ಇವತ್ತು ಅಫೀಸಲ್ಲಿ.ನಿಮ್ಮೆದುರು ನಿಂತು ಬಾಗಿ ವೈಯಾರ ಮಾಡ್ತಿದ್ಲಲ್ಲ..ಅವಳು." ಅವನೆದುರು ಯಾರೂ ವೈಯಾರ ಮಾಡುತ್ತಿರಲಿಲ್ಲ. ಇವನಿಗೆ ತನ್ನ ಹೆಂಡತಿಯನ್ನು ಬಿಟ್ಟು ಪ್ರಪಂಚದಲ್ಲಿ ಬೇರೆ ಹೆಂಗಸರು ಇರುತ್ತಾರೆ ಎಂಬುದೂ ಗೊತ್ತಿಲ್ಲ ಎಂದು ಅಫೀಸಿನವರು ಆಡಿಕೊಳ್ಳುತ್ತಿದ್ದರು.
"ಯಾರೂ ಇಲ್ವಲ್ಲ. ಎಲ್ಲ ಬಂದು ವಿಚಾರಿಸ್ತಾರೆ. ವೈಯಾರ ಯಾಕೆ ಮಾಡ್ತಾರೆ?"
"ನಂಗೊತ್ತು. ನಿಮ್ಗೆ ನನ್ ಕಂಡ್ರೆ ಮೊದ್ಲಿನಷ್ಟು ಪ್ರೀತಿ ಇಲ್ಲ. ಆ ಮೋಹಿನಿ ಹಿಂದೆ ಬಿದ್ದಿದೀರ."
ಅವನಿಗೆ ಗಾಬರಿಯಾಯಿತು."ಹಾಗೇನಿಲ್ಲ ಮಾರಾಯ್ತಿ.ಯಾಕನುಮಾನ?" ಹೆಂಡತಿಯ ಅನುಮಾನ ಬೆಳೆಯತೊಡಗಿತು. ಅವನ ಎಲ್ಲ ಚರ್ಯೆಗಳನ್ನೂ ಅವಳ ಜತೆ ತಳಕು ಹಾಕತೊಡಗಿದಳು.ಪದೇ ಪದೇ ನೀವು ನನ್ನ ಪ್ರೀತಿಸ್ತಾಇಲ್ಲ, ಅವಳನ್ನ ಪ್ರೀತಿಸ್ತಿದೀರಿ ಎಂದು ಹೇಳತೊಡಗಿದಳು. ಹೆಂಡತಿಯ ಮಾತು ಅವನಿಗೆ ಪರಮ ಸತ್ಯ. ಇದನ್ನೂ ನಂಬಿದ.
****ಅವಳನ್ನೇ ಮದುವೆಯಾದ.

Wednesday, April 1, 2009

ಕೊತ್ತಂಬರಿ ಕಟ್ಟು ಮತ್ತು ಮಸಾಲೆ ದೋಸೆ

***ತರಕಾರಿ ಅಂಗಡಿಯಿಂದ ಹೊರಬರುವಾಗ , ಅಲ್ಲೇ ಮರದ ಕೆಳಗೆ ಕೊತ್ತಂಬರಿ ಕಟ್ಟುಗಳ ಗುಡ್ಡೆಯ ಹಿಂದೆ ಕೂತ ಸರಿಸುಮಾರು ಎಪ್ಪತ್ತರ ವಯಸ್ಸಿನ ಆ ಮುದುಕಿಯ ಹತ್ತಿರ ಎರಡು ಕಟ್ಟು ತಗೊಳ್ತಿದ್ದೆ. ಅದು ಲಾಗಾಯ್ತಿನಿಂದ ಬಂದ ಅಭ್ಯಾಸ. ಈ ಊರಿಗೆ ನಾನು ಬಂದು ನಾಲ್ಕು ವರ್ಷಗಳಾಗಿವೆ. ಅವತ್ತಿಂದಲೂ ಅವಳು ಹೀಗೇ, ಇಲ್ಲಿ, ಕೊತ್ತಂಬರಿ ಕಟ್ಟುಗಳ ರಾಶಿಯ ಹಿಂದೆ, ಒಂದು ಚೌಕಳಿ ಸೀರೆ ಉಟ್ಟು ಕೂತಿರುತ್ತಾಳೆ. ಅವಳನ್ನು ಕಂಡು ನನಗೆ ಯಾಕೆ ಪಾಪ! ಅನ್ನಿಸ್ತು ಅಂತ ಗೊತ್ತಿಲ್ಲ. ನನ್ನ ಕಂಡಕೂಡಲೇ ಎರಡು ಕಟ್ಟು ಆರಿಸುತ್ತ, ನಾನು ಕೇಳ್ದಿದ್ರೂ, ಅವಳಾಗಿಯೇ ರೇಟು ಏರೋಗಿದೆ ಅಯ್ಯಾವ್ರೇ ಎಂದೋ, ಈಗ ಸ್ವಲ್ಪ ಸಸ್ತಾ ಆಗಿದೆ ಎಂದೋ ಗೊಣಗುಟ್ಟುತ್ತಿದ್ದಳು. ಅಲ್ಲಮ್ಮಾ, ಒಂದು ಕಟ್ಟು ಮಾರಾಟ ಆದ್ರೆ ನಿಂಗೆ ಏನು ಲಾಭ ಬರುತ್ತೆ ಎಂದು ಒಮ್ಮೆ ಕುತೂಹಲದಿಂದ ಕೇಳಿದ್ದೆ. ಇಪ್ಪತ್ತು ಪೈಸೆ ಎಂದಿದ್ದ್ಲು. ಸುಮ್ಮನೆ ಲೆಕ್ಕ ಹಾಕಿ ನೋಡಿದೆ. ಇನ್ನೂರು ಕಟ್ಟು ವ್ಯಾಪಾರವಾದ್ರೂ ಅವ್ಳಿಗೆ ಆಗೋ ಲಾಭ ಬರೀ ಇಪ್ಪತ್ತು ರೂಪಾಯಿ. ಅಷ್ಟಕ್ಕಾಗಿ ಮಳೆ, ಬಿಸ್ಲು, ಚಳಿ ಅಂತ ನೋಡ್ದೆ, ದಿನವಿಡಿ ಕೂರೋದು ಊಹಿಸಿಯೇ ನಂಗೆ ಮರುಕ ಬಂದಿತ್ತು. ಹಾಗಾಗಿ ತರಕಾರಿ ಜತೆ ಎರಡು ಕಟ್ಟು ನಾನು ಯಾವಾಗ್ಲೂ ತಗೊಳ್ಳೋದಾಗಿತ್ತು. ನಂಗೆ ಕೊತ್ತಂಬರಿ ಸೊಪ್ಪು ಬೇಕಿತ್ತೋ ಇಲ್ವೋ ಎಂಬುದನ್ನ ನಾನು ಎಂದೂ ಯೋಚ್ನೇನೆ ಮಾಡ್ತಿರ್ಲಿಲ್ಲ. ನನ್ನ ಹೆಂಡತಿಗೆ ಈ ಕಟ್ಟು ಬಾಡದಂತೆ ಇಡುವ ಚಿರಿಪಿರಿ. ಒಂದೇ ತನ್ನಿ, ಸಾಕು ಎಂದು ಪ್ರತಿ ಬಾರಿಯೂ ಅವಳು ಹೇಳ್ತಿದ್ಲು. ಸರಿ ಅಂತಿದ್ದೆ.
****ಇವತ್ತು ಅವ್ಳ ಗುಡ್ದೆ ಹತ್ರ ಹೋದೆ. ಅಲ್ಲಿ ಒಬ್ಬಾಕೆ, ಭರ್ಜರಿ ಸೀರೆ ಉಟ್ಟು ಕೊತ್ತಂಬರಿ ಸೊಪ್ಪು ಆರಿಸ್ತಾ ಇದ್ಲು. ಅವ್ರ ವ್ಯಾಪಾರ ಮುಗೀಲಿ ಅಂತ ನಾನು ಸುಮ್ಮನೆ ನಿಂತೆ. ಅವರ ಮಾತುಕತೆ ಕಿವಿಗೆ ಬೀಳತೊಡಗಿತು.
“ಹ್ಯಾಗಮ್ಮ ಕಟ್ಟಿಗೆ?” “ಐದ್ರೂಪಾಯ್ಗೆ ಮೂರ್ ಕಟ್ಟು.” “ಏನೇ ಇದು..ಈ ರೇಟು. ಮನಸ್ಸಿಗೆ ಬಂದ ರೇಟ್ ಹೇಳ್ತಿದೀಯಾ.” “ಅಯ್ಯಯ್ಯೋ..ನಂಗೇ ನೂರ್ ಕಟ್ಟಿಗೆ ನೂರೈವತ್ ರೂಪಾಯ್ ಬಿದ್ದಿದೆ, ನೀವೇ ಹೇಳಿ.ಯಾವ ರೇಟಿಗೆ ಕೊಡ್ಳಿ ಅಂತ.” “ಅಯ್ಯೋ.. ನಂಗೆಲ್ಲ ಗೊತ್ತಿದೆ..ಸುಮ್ನೆ ಐದ್ರೂಪಾಯ್ಗೆ ನಾಕ್ ಕಟ್ಟು ಕೊಡು.” “ಬರಲ್ಲವ್ವ.. ಹೊಟ್ಟೆ ಮ್ಯಾಲೆ ಹೊಡೀಬೇಡಿ” “ಏನೂ ಆಗಲ್ಲ..ತಗೋ..ನಾವು ದಿನಾ ತಗೋಳರಲ್ವಾ..” ಭರ್ಜರಿ ಸೀರೆಯ ಹೆಂಗಸು ನಾಲ್ಕು ಕಟ್ಟು ಚೀಲಕ್ಕೆ ತುಂಬಿಸುತ್ತ ಐದು ರೂಪಾಯಿ ಹಾಕಿ, ಬರಲ್ಲವ್ವ…ಬರಲ್ಲವ್ವ..ಎಂಬ ಮುದುಕಿಯ ಮಾತು ಅವ್ಳಿಗೇ ಬಿಟ್ಟು ಹೊರಟೇ ಹೋದ್ಲು. ಅವಳ ಕೈಯಲ್ಲಿರುವ ಕಟ್ಟನ್ನು ಈ ಮುದುಕಿಗೆ ಕಸಿಯಲು ಸಾಧ್ಯವೇ? “ನೋಡೀ ಅಯ್ಯಾ..ಈ ಥರಾ ಮಾಡಿದ್ರೆ ನಾವು ಹ್ಯಾಗೆ ಬದುಕೋದು..ನಿಮಗೂ ಮೂರ್ ಕಟ್ಟು ಕೊಡ್ಲಾ?” “ಬೇಡಮ್ಮ..ಎರಡೇ ಸಾಕು” “ಎರ್ಡ್ ಕಟ್ಟಾದ್ರೆ ನಾಕ್ರುಪಾಯ್ ಅಗ್ತದೆಯಲ್ಲಾ ಸಾಮಿ…” “ಆಗ್ಲಿ ಬಿಡು..ತಗೊಂಡು ಹೋದ್ರೆ ಮನೇಲಿ ಸುಮ್ನೆ ದಂಡ ಆಗುತ್ತೆ.” ಮುದುಕೀ ಹತ್ರ ಚೌಕಾಶಿ ಮಾಡ್ತಿದ್ದ ಸುಮಾರು ಜನ್ರನ್ನ ನಾನು ನೋಡಿದ್ರೂ, ಈ ಹೆಂಗ್ಸಿನ ನೆನಪು ಯಾಕೋ ಉಳೀತು. ಹಾಗೆ ಉಳೀಲಿಕ್ಕೆ ಅವ್ರುಟ್ಟಿದ್ದ ಭರ್ಜರಿ ಸೀರೇನೇ ಕಾರಣ ಇರ್ಬಹುದು. ಇದಾದ ಅನಂತರ, ಪ್ರತಿಬಾರಿ ಕಟ್ಟು ಕೊಳ್ಳುವಾಗಲೂ ಭರ್ಜರಿ ಸೀರೆಯ ನೆನಪೂ, ಮುದುಕಿಯ ದೀನ ದನಿಯೂ ನೆನಪಾಗುತ್ತಿತ್ತು. ಕೆಲವೊಮ್ಮೆ ಸಣ್ಣ ಘಟನೆ ಕೂಡ ಯಾಕೆ ನೆನಪಲ್ಲಿ ಉಳೀತದೆ ಅನ್ನೋದಕ್ಕೆ ತಾರ್ಕಿಕವಾದ ಯಾವ ಕಾರಣವೂ ಇರಲ್ಲವೇನೋ.
****
ಆ ದಿನ ಪೇಟೆ ಕೆಲಸ ಮುಗಿಸಿ ಮನೆಗೆ ಹೊರಡಲೆಂದು ನನ್ನ ಸ್ಕೂಟಿ ಸ್ಟಾರ್ಟ್ ಮಾಡುತ್ತಿರುವಾಗ, ನನ್ನ ಬೆನ್ನಿಗೆ ಒಂದು ಗುದ್ದು ಬಿತ್ತು. ಅದರ ಜೊತೆ “ಏನೋ..ನೀನಿಲ್ಲಿ?” ಎಂಬ ಅಶ್ಚರ್ಯಮಿಶ್ರಿತ ಪ್ರಶ್ನೆ. ಯಾರಪ್ಪಾ ಎಂದು ತಿರುಗಿ ನೋಡಿದರೆ ವಿಮಲ ತನ್ನ ದಂತಪಂಕ್ತಿಯನ್ನು ಪೂರ್ಣ ಪ್ರದರ್ಶಿಸುತ್ತ ನಿಂತಿದ್ದಳು. “ಏನೇ..ನೀನಿಲ್ಲಿ” ಎಂದು ನಾನೂ ಚಕಿತನಾಗಿ ಕೇಳಿದೆ. ವಿಮಲ ನನ್ಗೆ ದೂರದ ಸಂಬಂಧಿ. ಹ್ಯಾಗೆ ಅನ್ನೋದು ನಂಗೂ ಗೊತ್ತಿಲ್ಲ. ಒಟ್ಟಿಗೇ ಓದುತ್ತ ಇದ್ದ ಕಾರಣ ನೆಂಟಸ್ತನಕ್ಕಿಂತ ಬಳಕೆಯ ಸಲಿಗೆ ಜಾಸ್ತಿ ಇತ್ತು. ಅವಳನ್ನು ಕಾಣದೆ ಆರೆಂಟು ವರ್ಷಗಳೆ ಆಗಿದ್ದವು. “ಆ ಸಂಘ ಈ ಸಂಘ ಅಂತ ಓಡಾಡ್ತಾ, ಏನೇನೋ ಚಟುವಟಿಕೆ ಮಾಡ್ತಾಳಪ್ಪಾ” ಅಂತ ಕೆಲವರು ಮೆಚ್ಚುಗೆಯಲ್ಲಿ,ಕೆಲವರು ವ್ಯಂಗದಲ್ಲಿ ಹೇಳೋದು ಕೇಳಿದ್ದೆ. ನೀನು ಜಯ ತಾನೇ? ಅಂತ ಅವಳು, ನೀನು ವಿಮ್ಲ ತಾನೇ ಅಂತ ನಾನೂ ಕೇಳಿ ಪರಸ್ಪರರ ಪರಿಚಯ ಪಕ್ಕಾ ಮಾಡಿಕೊಂಡೆವು. ಧಿಡೀರಂತ ಹೀಗೆ ರಸ್ತೆಯಲ್ಲಿ ಕಂಡವಳ ಜತೆ ಏನು ಮಾತಾಡುವುದು ಎಂಬುದೇ ತೋಚಲಿಲ್ಲ. ಏಳು ಮನೆಗೆ ಹೋಗೋಣ ಅಂದೆ. ಇವತ್ತಿಲ್ಲ ಮಾರಾಯಾ..ಈಗ ನಾನು ಅರ್ಜೆಂಟಾಗಿ ಶಿಮೊಗ್ಗ ಹೊರಟೀದೀನಿ…ಏಳು..ಜ್ಯೂಸ್ ಕುಡೀಯೂವಾ..ಇಬ್ಬರೂ ಹೋಟೆಲ್ ಹೊಕ್ಕು ಮಹಡಿಯೇರಿ ಕೂತೆವು. ಆಗ ಮತ್ತೆ ಆಕೆ ಕಂಡಳು.
ಅದೇ ಭರ್ಜರಿ ಸೀರೆಯುಟ್ಟ, ಮುದುಕಿಯ ಜತೆ ಚೌಕಾಶಿ ಮಾಡಿದ್ದ ಹೆಂಗಸು. ಇವತ್ತು ಅವಳೆದುರು ಬಿಗಿ ಉಡುಪು ತೊಟ್ಟ ತರುಣಿಯೂ ಕೂತಿದ್ಲು. ಮಗಳಿರಬಹುದೇ? ಅವರ ಎದುರಲ್ಲಿ ಮಸಾಲೆ ದೋಸೆ. ತರುಣಿ “ಅಯ್ಯೋ..ಏನೇನೂ ಚೆನಾಗಿಲ್ಲ..ನಂಗ್ಬೇಡಮ್ಮ” ಅಂತ ಅರ್ಧಕ್ಕಿಂತ ಜಾಸ್ತಿ ದೋಸೆಯಿದ್ದ ಪ್ಲೇಟನ್ನು ಬದಿಗೆ ಸರಿಸುತ್ತ ಹೇಳಿದಳು. “ಅಯ್ಯೋ..ಬೇಡಾಂದ್ರೆ ಬಿಡು..ಹೋಗ್ಲಿ..ಐಸ್ ಕ್ರೀಂ ಅದ್ರೂ ತಗೋ..” ಐಸ್ ಕ್ರೀಂ ಬಂತು. ಅದ್ರಲ್ಲಿ ಅರ್ಧ ಉಳೀತು. “ಯಾಕೇ?” “ಅಯ್ಯೋ..ಚೆನಾಗಿಲ್ಲ..ಬೇಡಮ್ಮ” “ಸರಿ ಬಿಡು..ಇಷ್ಟ ಇಲ್ದಿದ್ರೆ ತಿನ್ಬಾರ್ದು.” ನಾನು ಅವರ ಮಾತು ಕೇಳುತ್ತ ಕೂತೆ. ನಾವು ಜ್ಯೂಸ್ ಕುಡಿಯುತ್ತಿರುವಾಗ ಅವರಿಬ್ಬರೂ ಎದ್ದು ಹೋದರು. “ಏನೋ..ಗುರ್ತ್ನೋರಾ?” ನಾನು ಅವರನ್ನೇ ನೋಡ್ತಾ ಕೂತಿದ್ದು ಕಂಡು ವಿಮ್ಲ ಕೇಳಿದ್ಲು. “ಅಲ್ಲ..” ನಾನು ಸಂಕ್ಷಿಪ್ತವಾಗಿ ಕೊತ್ತಂಬರಿ ಕಟ್ಟಿನ ವ್ಯಾಪಾರದ ಸುದ್ದಿ ಹೇಳಿದೆ. ವಿಮಲ ಅವರತ್ತ ನೋಡಿ ಹಣ ಜಾಸ್ತಿ..ವಿವೇಕ ಕಡಿಮೆ.. ಅಂತದ್ಲು.
** ಐಸ್ ಕ್ರೀಂ ಕರಗತೊಡಗಿತ್ತು. ಅರ್ಧ ಉಳಿದಿದ್ದ ದೋಸೆ ನನಗೆ ಮುದುಕಿಯ ಸುಕ್ಕುಗಟ್ಟಿದ ಮುಖದಂತೆ ಕಂಡಿತು. ಪ್ಲೇಟಲ್ಲುಳಿದಿದ್ದ ಪಲ್ಯದಲ್ಲಿ ಕೊತ್ತಂಬರಿ ಸೊಪ್ಪಿನ ಚೂರೂ ಕಂಡಿತು. ವಿಮಲಳಿಗೆ ಹೇಗೆ ಕಂಡೀತೋ..ತಿಳೀಲಿಲ್ಲ.

Sunday, March 8, 2009

ಜಗದೊಳಗೆ ನಾವೋ..ನಮ್ಮೊಳಗೆ ಜಗವೋ..

ಒಂದು ಕತೆ ಹೇಳುತ್ತೇನೆ. ಕೇಳಿ. ಒಬ್ಬ ರಾಜ. ಈ ರಾಜ ಒಂದಿನ ಒಡ್ಡೋಲಗ ಮುಗಿಸಿ, ಅಷ್ಟಕ್ಕೇ ಸುಸ್ತಾಗಿ ಅರಮನೆ ಸೇರಿ, ಪುಷ್ಕಳವಾಗಿ ಉಂಡು ಮಲಗಿದ. ಆಗ ಅವನಿಗೊಂದು ಕನಸು ಬಿತ್ತು. ಕನಸಲ್ಲಿ ಅವನೊಬ್ಬ ಭಿಕಾರಿಯಾಗಿದ್ದ. ಊಟಕ್ಕಿಲ್ಲ. ಪಾಪ. ಆದಿನ ಯಾರದೋ ಮದುವೆಯಲ್ಲಿ ಅವನಿಗೂ ಹೊಟ್ಟೆತುಂಬ ಊಟ ಸಿಕ್ಕಿತು. ಉಂಡು ಮಲಗಿದ. ಹಾಗೆ ಮಲಗಿದವನಿಗೆ ಕನಸು. ಈ ಕನಸಲ್ಲಿ ಅವನು ರಾಜನಾಗಿಬಿಟ್ಟಿದ್ದಾನೆ!
ಅಷ್ಟರಲ್ಲಿ ರಾಜನಿಗೆ ಎಚ್ಚರವಾಯಿತು. ಎಂಥ ಕನಸಪ್ಪ ಎನ್ನುತ್ತಾ ಎದ್ದು ಕೂತ.
*********
ನಾವು ಕಾಣುತ್ತಿರುವ, ಅನುಭವಿಸುತ್ತಿರುವ ಜಗತ್ತು ‘ನಿಜ’ವಾಗಿಯೂ ಇದೆಯೇ ? ಅಥವಾ ಅದನ್ನು, ನಾವು ಅನುಭವಿಸುವ ಕಾರಣದಿಂದಾಗಿ ‘ಇದೆ’ ಎಂದು ನಾವು ನಂಬಿದ್ದೇವೆಯೇ ? ಇನ್ನೂ ಸರಳವಾಗಿ ಹೇಳುವುದಾದರೆ, ಪ್ರಜ್ನೆ ಮತ್ತು ಜಗತ್ತು ಎಂಬ ಎರಡು ಅಸ್ತಿತ್ವಗಳು ಇವೆಯೇ? ನಾವು ಬದುಕಿದ್ದೇವೆ ಎಂಬುದಕ್ಕೆ ಹೇಗೆ ಯಾವ ಸಾಕ್ಷಿಗಳೂ ನಮಗೆ ಬೇಕಿಲ್ಲವೋ, ಹಾಗೆ ನಮಗೆ ಪ್ರಜ್ನೆ ಇದೆ ಎಂಬುದಕ್ಕೆ ಬೇರೆ ಯಾವ ಸಾಕ್ಷಿಯೂ ಬೇಕಿಲ್ಲ.ಪ್ರಜ್ನೆಗೆ ಪ್ರಜ್ನೆಯೇ ಸಾಕ್ಷಿ.ಆದರೆ ಬೇರೆಯವರಿಗೂ ನನ್ನಂತೆ ಪ್ರಜ್ನೆ ಇದೆ ಎಂದು ನಾನು ನಂಬಬಹುದೇ ಹೊರತು, ಅವರ ಪ್ರಜ್ನೆಯನ್ನು ನಾನು ‘ಅನುಭವಿಸಲು’ ಸಾಧ್ಯವಿಲ್ಲ. ಗಮನಿಸಿ. ನೀವು, ನಿಮ್ಮ ಗೆಳೆಯ ಜತೆಯಾಗಿ ಕೂತು, ಒಂದು ಕೆಂಪು ಗುಲಾಬಿಯನ್ನು ನೋಡುತ್ತಿದ್ದೀರಿ. ಅದರ ಸೌಂದರ್ಯವನ್ನು ಇಬ್ಬರೂ ಗ್ರಹಿಸುತ್ತಿದ್ದೀರಿ. ಇದು ಸಹಜ, ಸಾಧ್ಯ. ಆದರೆ ಇದೇ ಸಂದರ್ಭದಲ್ಲಿ ನಿಮಗೆ, ನಿಮ್ಮ ಗೆಳೆಯನ ಗುಲಾಬಿ ಹೂವನ್ನು ಗ್ರಹಿಸುತ್ತಿರುವ ‘ಪ್ರಜ್ನೆ’ ‘ಗ್ರಹಿಕೆ’ಯಾಗಲಾರದು. ನಿಮ್ಮ ಗೆಳೆಯನಿಗೂ ಅಷ್ಟೆ. ಯಾಕೆ? ಹೂ ಇಬ್ಬರ ಗ್ರಹಿಕೆಗೂ ‘ವಸ್ತು’ವಾದಂತೆ ಪ್ರಜ್ನೆ ಯಾಕೆ ಆಗುವುದಿಲ್ಲ ?

ಅನುಭವ ಅಂದರೆ ಏನು? ನಮಗೆ ಅನುಭವ ಹೇಗೆ ಆಗುತ್ತದೆ? ಮೇಲಿನ ಉದಾಹರಣೆಯನ್ನೇ ನೋಡೋಣ. ನೀವು ಕೂತಿರುವಾಗ, ಗುಲಾಬಿಯ ಮೇಲೆ ಬೆಳಕು ಬಿದ್ದು, ಪ್ರತಿಫಲಿಸಿ, ನಿಮ್ಮ ಕಣ್ಣನ್ನು ತಲುಪಿ, ಅಲ್ಲಿಂದ ನರಗಳ ಸಂವೇದನೆಯ ಮೂಲಕ ಮಿದುಳನ್ನು ತಲುಪುವುದು. ಹೀಗೆ ಬಂದ ಮಾಹಿತಿಗಳನ್ನು ಮಿದುಳು ಸಂಯೋಜಿಸಿ,ಅದಕ್ಕನುಗುಣವಾಗಿ ಒಳಗೆ , ಹೊರಗೆ ಇರುವುದರ ಬಿಂಬಕಲ್ಪನೆ ಮಾಡಿಕೊಳ್ಳುತ್ತದೆ. ಅನಂತರ ಪ್ರಜ್ನೆ ತನ್ನ ಹಳೆಯ ಕೋಶಗಳನ್ನೆಲ್ಲ ಜಾಲಾಡಿ,--ಚುನಾವಣೆ ಬಂದಾಗ ನೀವು ಗುರುತು ಪತ್ರಕ್ಕಾಗಿ ಕಪಾಟನ್ನೆಲ್ಲ ಜಾಲಾಡುವಂತೆ-- ಈಗ ಕಾಣುತ್ತಿರುವುದಕ್ಕೆ ಸಾಮ್ಯತೆ ಇರುವ, ನೆನಪಲ್ಲಿ ದಾಖಲಾಗಿರುವ ಗುಲಾಬಿಯ ಬಿಂಬದ ಜತೆ ತುಲನೆ ಮಾಡಿ, ಇದು ಗುಲಾಬಿ ಹೂ ಎಂದು ತಿಳಿಯುತ್ತದೆ. ಮಿದುಳು ತಿಳಿಯುವುದೆಂದರೆ ನೀವು ತಿಳಿಯುವುದು ಎಂದರ್ಥ. [ಈ ರೀತಿಯ ಮಾಹಿತಿಗಳನ್ನು ಮಿದುಳಿಗೆ ನಿರಂತರವಾಗಿ ಸರಬರಾಜು ಮಾಡುವ ಐದು ಅಂಗಗಳಿವೆ. ಇವೇ ಪಂಚ ಜ್ನಾನೇಂದ್ರಿಯಗಳು:ಕಿವಿ, ಚರ್ಮ. ಕಣ್ಣು,ಮೂಗು ಮತ್ತು ನಾಲಗೆ. ಶಬ್ದ, ಸ್ಪರ್ಷ, ನೋಟ, ಗಂಧ ಮತ್ತು ರುಚಿ ಇವು ಕ್ರಮವಾಗಿ ಇವುಗಳ ಗುಣಗಳು. ಆಕಾಶ, ವಾಯು, ಅಗ್ನಿ, ನೀರು, ಮತ್ತು ಪೃಥ್ವಿ ಇವು ತತ್ವಗಳು. ಈ ಐದು ತತ್ವಗಳಿಂದ ಆಗಿರುವುದೇ ಪ್ರ-ಪಂಚ.] ದಾಖಲೆಯಲ್ಲಿ ಏನೂ ಇರದಿದ್ದರೆ ಹೊಸದೊಂದು ಕಡತ ದಾಖಲಾಗುತ್ತದೆ. ಹೊಸ ಸ್ಕೀಮ್ ಬಂದಾಗ ಸರಕಾರಿ ಕಚೇರಿಯಲ್ಲಿ ಹೊಸ ಕಡತ ಇಡುವಂತೆ ! ಇವಿಷ್ಟೂ ಅಪಾರ ವೇಗದಲ್ಲಿ ನಡೆವ ಕ್ರಿಯೆ. ಇಷ್ಟು ಕೆಲಸ ನಡೆವಾಗ, ನಮ್ಮ ಮಿದುಳು ಸರಿಯಿದ್ದರೆ ಯಾವುದೇ ಅವ್ಯವಸ್ಥೆ ಆಗುವುದಿಲ್ಲ; ಗುರುತುಪತ್ರ ಹುಡುಕುವಾಗ ನಿಮ್ಮ ಕಪಾಟು ಆಗುವಂತೆ ! ಇನ್ನು ಮುಂದೆ ಗುಲಾಬಿಯ ಬಗ್ಗೆ ಬರುವ ಮಾಹಿತಿಗಳೆಲ್ಲ ಈ ಕಡತಕ್ಕೆ ರವಾನೆಯಾಗುತ್ತವೆ. ಹೀಗೆ ರವಾನೆಯಾದ ಮಾಹಿತಿಗಳ ಮುಖಾಂತರ ಗುಲಾಬಿಗೆ ಸಂಬಂಧಪಟ್ಟ ಎಲ್ಲ ಅನುಭವಗಳು ನಮಗೆ ಆಗುತ್ತವೆ. ಸೇಬು ತಿನ್ನುವಾಗ ಸೇಬು ನಮ್ಮ ಕೈಗೆ ಭೌತಿಕವಾಗಿ ಬರುವಂತೆ , ಮಿದುಳಿಗೆ ಭೌತಿಕವಾಗಿ ಏನೂ ಬಂದಿಲ್ಲ ಎಂಬುದನ್ನು ಗಮನಿಸಿ.ನರಗಳ ಮೂಲಕ ಒಂದಿಷ್ಟು ‘ಸಂವೇದನೆ’ಗಳು ಮಾತ್ರ ಮಿದುಳನ್ನು ತಲುಪಿವೆ.ಅಷ್ಟೆ.
ಇಲ್ಲಿಯವರೆಗೆ ಹೇಳಿದ್ದನ್ನೆಲ್ಲ ಸೂತ್ರ ರೂಪದಲ್ಲಿ ಸಂಗ್ರಹಿಸುವಾ.
೧.ವಸ್ತುವಿನ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಮ್ಮ ಕಣ್ಣನ್ನು ತಲುಪುತ್ತದೆ.
೨.ಪ್ರಚೋದಿತಗೊಂಡ ನರಗಳು ಮಿದುಳಿಗೆ ಮಾಹಿತಿಗಳನ್ನು ರವಾನಿಸುತ್ತವೆ. ಈ ಮಾಹಿತಿಗೂ ಹೊರಗಿನ ವಸ್ತುವಿಗೂ ಭೌತಿಕವಾದ ಸಂಬಂಧವಿಲ್ಲ.
೩.ಮಿದುಳು ಈ ಮಾಹಿತಿಗಳನ್ನು ಸಂಗ್ರಹಿಸಿ , ಸಂಯೋಜಿಸಿದಾಗ ಹೊರಗಿನ ವಸ್ತುವಿನ ‘ಗ್ರಹಿಕೆ’ ನಮಗಾಗುತ್ತದೆ.
ಬೆಳಕೆಂದರೆ ‘ಫೋಟಾನ್’ ಎಂದು ಕರೆಯಲ್ಪಡುವ , ಅಲೆಯ ರೂಪದ ಕಣಗಳು. ಮಾಹಿತಿಗಳು ವಿದ್ಯುತ್ ತರಂಗಗಳ/ರಾಸಾಯನಿಕ ಸಂವಾಹಕಗಳ ಮೂಲಕ ಮಿದುಳಿಗೆ ತಲುಪುತ್ತವೆ. ಆದ್ದರಿಂದ ಇವೆರಡು ಪ್ರಕ್ರಿಯೆಗಳನ್ನು ವೈಜ್ನಾನಿಕವಾಗಿ ವಿವರಿಸಲು ಸಾಧ್ಯ.
ಆದರೆ ಮಿದುಳು ಈ ಮಾಹಿತಿಗಳನ್ನು ಸಂಗ್ರಹಿಸುವ/ಸಂಯೋಜಿಸುವ ವಿಧಾನ ತಿಳಿದಿಲ್ಲ. ನಮಗೆ ಎರಡು ಮಿದುಳು ಇದ್ದಿದ್ದರೆ, ಒಂದು ಮಿದುಳು ಮಾಡುವ ಕೆಲಸವನ್ನು ಮತ್ತೊಂದು ಮಿದುಳಿನ ಮೂಲಕ ನೋಡಿ ತಿಳಿಯಬಹುದಿತ್ತು! ಅಂಥ ಎರಡನೆಯ ಮಿದುಳು ತಯಾರಾಗುವವರೆಗೂ ಈ ಬಗ್ಗೆ ನಮಗೇನೂ ತಿಳಿಯುವುದಿಲ್ಲ.
ಪಂಚ ಜ್ನಾನೇಂದ್ರಿಯಗಳ ಮೂಲಕ ಈ ವಿಧಾನದ ಮೂಲಕವೇ ನಮಗೆ ‘ಗ್ರಹಿಕೆ’ ಅಗುತ್ತದೆ. ಈ ಹಂತಗಳಲ್ಲಿ ಯಾವುದೇ ಒಂದು ಕೊಂಡಿ ಕಳಚಿದರೂ ನಮಗೆ ವಸ್ತುವಿನ ‘ಗ್ರಹಿಕೆ’ ಆಗುವುದಿಲ್ಲ. ಬೆಂಕಿಯ ಬಿಸಿ ನಮಗೆ ಸ್ಪರ್ಷದ ಮೂಲಕ ತಿಳಿಯುತ್ತದೆ. ಬೆಂಕಿ ಸುಡುತ್ತದೆ ಎಂಬ ಮಾಹಿತಿ ನೆನಪಿನ ರೂಪದಲ್ಲಿ ಮಿದುಳಿನಲ್ಲಿ ಇರದಿದ್ದರೆ, ಬೆಂಕಿ ಬಿಸಿಯಿರುವುದು ಪ್ರತಿ ಬಾರಿಯೂ ಸುಟ್ಟುಕೊಂಡ ಅನಂತರವೇ ನಮಗೆ ತಿಳಿಯುತ್ತಿತ್ತು !
********
ಜಗತ್ತು ಹೇಗೆ ನಮ್ಮ ,ಗ್ರಹಿಕೆಗೆ ಬರುತ್ತದೆ ಎಂಬುದರ ಸ್ಥೂಲ ಅರಿವು ನಮಗೆ ಈಗ ಅಗಿದೆ. ಈಗ ಇನ್ನೊಂದು ಕತೆ ಹೇಳುವ ಸಮಯ ಬಂದಿದೆ.
(ಮುಂದುವರಿಯುವುದು)

Saturday, February 7, 2009

ವರ್ಗವಾಗುವ ಸಮಯ.

ಈಗ ವರ್ಗವಾಗುವ ಸಮಯ.
ನಿಮಗೀ ಬಾರಿ ವರ್ಗವುಂಟಂತಲ್ಲ..ಯಾವ ಊರು ?
ಎಲ್ಲ ಕೇಳುವರು.
ನನಗೂ ಬಂದಿತ್ತು ಸುದ್ದಿ ಚೂರು.
ಬಲ್ಲವರು ಯಾರು ?

ಮಡದಿಗೆ ತುಂಬ ಚಿಂತೆ. ಆಕೆಯೋ....ತುಸು ಭೀರು.
ಯಾವ ಊರು? ಯಾವಭಾಷೆ? ಅತ್ತ ಇತ್ತೆಲ್ಲ ಯಾರು ಯಾರು?
ಸಿಕ್ಕೀತೇ ಸರಿಯಾದ ಸೂರು?

ಮಗಳ ಚಿಂತೆಯೇ ಬೇರೆ. ಶಾಲೆಯಿರಬಹುದೇ ಅಲ್ಲಿ?
ಪಾಠ ನಡೆಯುವುದೇ? ಚೆನ್ನಾಗಿತ್ತು ಇಲ್ಲಿ.
ಇದೇ ಚರ್ಚೆ ಅವಳ ಗುಂಪಲ್ಲಿ.
***
ವರ್ಗವಾಯಿತು ನೋಡಿ ಎಷ್ಟೊಂದು ಸಂಮಾನ!
ನಾವು ತೆರಳುವೆವೆಂದು ಎಲ್ಲರಿಗೂ ದುಃಖ ದುಮ್ಮಾನ.
ಬನ್ನಿ ನಮ್ಮ ಮನೆಗೆ..ಎಲ್ಲರದೂ ಆಹ್ವಾನ.
(ಕರೆದೇ ಇರಲಿಲ್ಲ ಇಷ್ಟುದಿನ!)
ಎಷ್ಟೊಂದು ಪರಿಚಿತರ ಜೊತೆಗೆ ಈಗ ಮಿಲನ !
ಹೊರಡುವೀ ವೇಳೆ ಸ್ನೇಹದನುಸಂಧಾನ.

ಹೊರಟ ದಿನ. ಖಾಲಿಮನೆ . ಮನದ ತುಂಬೆಲ್ಲ ನೆನಪು ಬುತ್ತಿ.
ತೀರಿತು ಈ ಊರಿನ ಋಣ. ಮುಂದಿನೂರಿಗೆ ಪಯಣ.
***
ಹೊಸ ಊರು. ಹೊಸ ಭಾಷೆ. ಹೊಸ ಜನ.
ಬೇರೂರುವುದು ನಿಧಾನ.ಮೊದಲಷ್ಟು ದಿನ ಆತಂಕ, ಬಿಗಿತ
ಆಮೇಲೆ ಹಿಂದಿನಂತೆಯೇ ಚಲನೆ ಸುರಳೀತ.
ಹಕ್ಕಿ ಕಟ್ಟುವುದು ಹೊಸ ಗೂಡು.ಬದುಕಿಗದು ಸಹಜ ನೋಡು.

ಅತ್ತಿತ್ತಲವರ ಕಂಡು ಮೊದಲು ಮುಗುಳು ನಗೆ.
ಆಮೇಲೆ ತಿಳಿ ಮಾತು. ಕೇಳುವರು ನಮ್ಮ ಮನವನಿಟ್ಟು.
ಹೊಸ ಕನಸುಗಳ ಮೊಟ್ಟೆ. ಇದು ಜೀವನದ ಬಗೆ.
ಚಿಗುರುವುದು ಗಿಡ ರಾಶಿ ಹೂವ ಬಿಟ್ಟು.
ಕಳೆಯುವುದು ವರ್ಷ. ಮತ್ತಷ್ಟು ವರ್ಷ.
ಒಂದಿಷ್ಟು ಕಷ್ಟ...ಒಂದಿಷ್ಟು ಹರ್ಷ.
ಇನ್ನೆಲ್ಲ ಪರಿಚಿತ ಎಂಬ ಹೊತ್ತಿಗೆ ಮತ್ತೆ ವರ್ಗವಾಗುವ ಸುದ್ದಿ.
ಹೊಸ ಜಾಗ ಹೊಸ ಬಗೆ
ಬದುಕಿರುವುದೇ ಹಾಗೆ.
***
ಇನ್ನುಳಿದಿದ್ದು ಒಂದೇ ವರ್ಗ. ಇದು ಕೊನೆಯ ಸರ್ಗ.
ಮಡದಿ ಮಕ್ಕಳು ಇಲ್ಲ. ಆಸ್ತಿಪಾಸ್ತಿಗಳಿಲ್ಲ.
ಭಾಷೆ ಭಾವಗಳಿಲ್ಲ.ಊರು ಕೇರಿಗಳಿಲ್ಲ.
ಎಲ್ಲವೂ ವರ್ಜ್ಯ.
***
ಇದು ಸಹಜ ಪಯಣ.ಸ್ವರ್ಗ ಸೇರುವ ಚರಣ.

Sunday, January 25, 2009

ಹುಟ್ಟು ಸಾವಿನ ಚಕ್ರ ೨

ಜೀವನ ವೃತ್ತವಾಗಿರದಿದ್ದರೆ ತುಂಬ ಸರಳವಾಗಿರುತ್ತಿತ್ತು. ಕಾಲ, ದೇಶದ ಒಂದು ಬಿಂದು: ಹುಟ್ಟು. ಈ ಬಿಂದುವಿನಿಂದ ಹೊರಟ ರೇಖೆ ಯಾವ ದಿಕ್ಕಿಗಾದರೂ ಚಲಿಸಲಿ. ಹೇಗಾದರೂ ಹೋಗಲಿ. ಕೊನೆಗೊಂದು ಕಡೆ ನಿಲ್ಲಬೇಕು. ಹುಟ್ಟಿನಿಂದ ಹೊರಟ ರೇಖೆಯ ಕೊನೆಯ ಬಿಂದು ಅದು: ಸಾವು.ಮೊದಲ ಬಿಂದುವಿನ ಹಿಂದೆ ಏನೂ ಇಲ್ಲ; ಕೊನೆಯ ಬಿಂದುವಿನ ಮುಂದೆ ಏನೂ ಇಲ್ಲ. ಈ ಎರಡು ಬಿಂದುಗಳ ನಡುವೆ ಮಾತ್ರ ನಮ್ಮ ಬದುಕು. ನಾವು ಬದುಕುತ್ತಿರುವ ಮೂಲ ಕಾರಣ ನಾವು ಹುಟ್ಟಿರುವುದು; ನಾವು ಸಾಯುವ ಮೂಲ ಕಾರಣವೂ ಅದೇ. ಹುಟ್ಟಿಲ್ಲದೆ ಜೀವನವಿಲ್ಲ, ಸಾವೂ ಇಲ್ಲ. ನಾವು ಹುಟ್ಟಿರದಿದ್ದರೆ ಬದುಕುವ ಅಗತ್ಯವಿರಲಿಲ್ಲ, ಸಾಯುತ್ತಲೂ ಇರಲಿಲ್ಲ ಎಂಬುದನ್ನು ಹೇಳಲು ವಿಶೇಷವಾದ ಪಾಂಡಿತ್ಯ ಬೇಕಾಗಿಲ್ಲ. ಲ್ಯಾಪ್-ಟ್ಯಾಪ್ ಮೇಲೆ ಹರಿದಾಡುವ ಇರುವೆಗೆ ಅದು ಗೊತ್ತಿರದಿದ್ದರೂ ನಮಗೆ, ನರಮನುಷ್ಯರಿಗೆಲ್ಲ ಗೊತ್ತು.
ಬದುಕು ಎಂದರೆ ಏನು? ಸರಳವಾಗಿ, ಬದುಕೆಂದರೆ ನಿರಂತರ ನಡೆಯುವ ಚಟುವಟಿಕೆಗಳ ಒಟ್ಟು ಮೊತ್ತ ಅನ್ನಬಹುದು. ಈ ನಿರಂತರತೆಯಲ್ಲಿ ಒಂದು ಚಟುವಟಿಕೆ ಕಾರಣ; ಮತ್ತೊಂದು ಕಾರ್ಯ. ಹಿಂದಿನ ಕಾರ್ಯ ಮುಂದಿನದರ ಕಾರಣ. ಈಗಿನ ಕಾರ್ಯ ಮುಂದಿನದರ ಕಾರಣ. ಏಕಕಾಲಕ್ಕೆ ಒಂದು ಘಟನೆ ಕಾರ್ಯವೂ ಆಗಿ, ಕಾರಣವೂ ಆಗಿರುತ್ತದೆ. ಬದುಕು ಕಾರಣ ಕಾರ್ಯಗಳ ನಿರಂತರ ಸರಪಳಿ. ಕಾರ್ಯವೆಂದು ನೋಡಿದರೆ ಕಾರ್ಯ; ಕಾರಣವೆಂದು ನೋಡಿದರೆ ಕಾರಣ. (ಇದು ಬೆಳಕಿನ ಗುಣದ ತರಹ. ಅಲೆಯೇ ಎಂದು ನೋಡಿದರೆ ಅಲೆ; ಕಣವೇ ಎಂದು ನೋಡಿದರೆ ಕಣ.) ಹುಟ್ಟಿನಿಂದ ಸಾವವರೆಗಿನ ಬದುಕಲ್ಲಿ ನಡೆವ ಎಲ್ಲ ಘಟನೆಗಳಿಗೆ ಕಾರಣಗಳುಂಟೇ? ಇದು ತೊಡಕಿನ ಪ್ರಶ್ನೆ. ಕಾರಣಗಳಿಲ್ಲ ಅನ್ನುವ ಹಾಗಿಲ್ಲ. ಯಾಕೆಂದರೆ ಕಾರಣವಿಲ್ಲದೆ ಯಾವ ಕಾರ್ಯವೂ ಇಲ್ಲ ಎಂಬುದನ್ನು ವಿಜ್ನಾನ ಕೂಡ ಹೇಳುತ್ತೆ. ನಮ್ಮ ವೇದಗಳನ್ನು, ಉಪನಿಷತ್ ಗಳನ್ನು ಮೂಢನಂಬಿಕೆ ಎಂದು ಹೀಗೆಳೆಯಬಹುದು, ವಿಜ್ನಾನದ ಬಗ್ಗೆ ಹಾಗೆ ಹೇಳಬಹುದೇ? ಹಾಗಾಗಿಯಾದರೂ ಕಾರಣಗಳಿವೆ ಎಂದು ನಂಬಬೇಕಾಗಿದೆ. ಇದನ್ನು ಒಪ್ಪಿದರೆ ಮತ್ತೊಂದು ತೊಡಕು ಎದುರಾಗುತ್ತದೆ. ಒಬ್ಬನ ಬದುಕಲ್ಲಿ ಸಂಭವಿಸುವ ಎಲ್ಲ ಕಾರ್ಯಗಳಿಗೂ ಕಾರಣವನ್ನು ಎಲ್ಲಿ ಹುಡುಕುವುದು? ಉದಾಹರಣೆಗೆ, ನಿನ್ನೆ ರಾತ್ರಿ ನನಗೆ ನಿದ್ದೆ ಬರದಿರುವ ಕಾರಣ ಏನು? ಇಂದು ಹಗಲು ನಿದ್ದೆ ಬಂದ ಕಾರಣ ಏನು? ಬೆಳಗ್ಗೆ ಎಂದಿನಂತೆ ಟೀ ಕುಡಿವ ಬದಲು ಕಾಫಿ ಕುಡಿದಿದ್ದರ ಕಾರಣ ಏನು? ಇವೆಲ್ಲ ಹಾಳಾಗಲಿ ಈ ಕಾರಣಗಳನ್ನು ಹುಡುಕುತ್ತಾ ಕೂತಿದ್ದೇನಲ್ಲ ಇದರ ಕಾರಣ ಏನು? (ಮುಂದುವರಿಯುವುದು)

Friday, January 23, 2009

ಸಿಗುರೆದ್ದ ಬದುಕು

ದ್ವಂದ್ವ ನಮ್ಮ ತಲೆಮಾರಿನ ಟ್ರೇಡ್ ಮಾರ್ಕ್!
***** ವ್ಯವಸ್ಥೆ, ಸಂಪ್ರದಾಯ ರೂಪಿಸಿದ ನಿಯಮಗಳನ್ನು ಮೀರಿ ಬದುಕುವ ಧೈರ್ಯವಿಲ್ಲ. ಅವುಗಳನ್ನು ಶ್ರದ್ಧೆಯಿಂದ ಪಾಲಿಸುವ ಉತ್ಸಾಹವೂ ಇಲ್ಲ. ವಿಜ್ನಾನ ಕೊಟ್ಟ ಅಪಾರ ತಿಳಿವಳಿಕೆಯ ಕಾರಣದಿಂದಾಗಿ ನಮ್ಮ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಲ್ಲ. ಯಾಕೆ ದೇವರಿಗೆ ಪೂಜೆ ಮಾಡಬೇಕು? ಯಾಕೆ ಗಾಯತ್ರಿ ಮಂತ್ರ ಜಪಿಸಬೇಕು? ಗೋಪೂಜೆ ಮಾಡಿದರೆ ಏನುಪಯೋಗ? ಶ್ರಾದ್ಧ ಮಾದುವುದರಿಂದ ನಿಜವಾಗಿಯೂ ಪಿತೃಗಳ ಆತ್ಮಕ್ಕೆ ಶಾಂತಿ ಸಿಗುತ್ತಾ? ಅಂತಹ ಒಂದು ಆತ್ಮ ಉಂಟಾ? ಒಟ್ಟಲ್ಲಿ ನಮ್ಮ ಹಿಂದಿನ ತಲೆಮಾರು ಶ್ರದ್ಧೆಯಿಂದ ಆಚರಿಸುತ್ತಿದ್ದ ಎಲ್ಲವೂ ನಿರರ್ಥಕ ಎಂಬುದು ನಮ್ಮ ಅಭಿಪ್ರಾಯ. ಬೆಳಗ್ಗೆ ಏಳುವುದರಿಂದ ಹಿಡಿದು, ರಾತ್ರಿ ಮಲಗುವವರೆಗಿನ ನಮ್ಮೆಲ್ಲ ಕ್ರಿಯೆಗಳಲ್ಲೂ ಈ ಭಾವನೆ ತುಂಬಿಕೊಂಡಿದೆ. ಹಾಗಂತ ವಿಜ್ನಾನ ಹೇಳುವುದನ್ನು ಪೂರ್ಣ ನಂಬಿ, ಅವುಗಳನ್ನು ಬಿಟ್ಟುಬಿಡುವ ಧೈರ್‍ಯವೂ ಇಲ್ಲ. ಹಾಗಾಗಿ ವೈಚಾರಿಕವಾಗಿ ವಿರೋಧಿಸುತ್ತಾ, ಆದರೆ ಪಾಲಿಸುತ್ತಾ ಬದುಕುವ ದ್ವಂದ್ವ. ನನಗವುಗಳ ಬಗ್ಗೆ ಶ್ರದ್ಧೆಯಿಲ್ಲವಾದರೂ, ನನಗೆ ಶ್ರದ್ಧೆಯಿಲ್ಲ ಎಂಬುದು ನಂಬುವವರಿಗೆ ಗೊತ್ತಾಗಬಾರದು. ಹಾಗೆ ಗೊತ್ತಾದರೆ ಅವರ ಲೆಕ್ಕದಲ್ಲಿ ನನ್ನ ಬೆಲೆ ತುಸು ಇಳಿದುಬಿಟ್ಟರೆ? ಆತಂಕ. ನನಗೆ ಶ್ರದ್ಧೆಯಿಲ್ಲ ಎಂಬುದು ನಂಬದವರಿಗೆ ಗೊತ್ತಾಗಬೇಕು. ಇಲ್ಲವಾದರೆ ಅವರೆದುರು ನನ್ನ ಗೌರವ ಕಡಿಮೆಯಾದರೆ? ಆತಂಕ.ಹಾಗಾಗಿ ನನ್ನ ತೃಪ್ತಿಗಾಗಿ ನನ್ನೊಳಗೇ ವಿರೋಧಿಸುತ್ತಾ, ಬೇರೆಯವರ ತೃಪ್ತಿಯ ನೆವದಲ್ಲಿ ಆಚರಿಸುತ್ತಾ.... , ಬದುಕು ಸಿಗುರೆದ್ದಿದೆ.
*****ಇವಿಷ್ಟೇ ಅಲ್ಲ. ನಮ್ಮ ದೈನಂದಿನ ವ್ಯವಹಾರದಲ್ಲೂ ಈ ದ್ವಂದ್ವ ಹುಟ್ಟಿಸಿದ ಗೊಂದಲವಿದೆ. ಸರಕಾರೀ ಆಫೀಸಿನ ಲಂಚಗುಳಿಗಳ ಬಗ್ಗೆ ಎಲ್ಲರೆದುರೂ ಕೂಗಾಡುತ್ತೇನೆ. ಕ್ರಾಂತಿಯಾಗಬೇಕು ಎಂದು ಬೊಬ್ಬಿರಿಯುತ್ತೇನೆ. ನನ್ನ ಮಗಳ ಲೈಸೆನ್ಸ್ ಪಡೆಯಲು ಮಧ್ಯವರ್ತಿಯ ಮೂಲಕ ಲಂಚಕೊಡುತ್ತೇನೆ. ಮುನ್ಸಿಪಾಲಿಟಿಯವರು ಊರನ್ನು ಚೊಕ್ಕಟವಾಗಿಡುತ್ತಿಲ್ಲ ಎಂದು ಟೀಕೆ ಮಾಡುತ್ತೇನೆ. ನನ್ನ ಮನೆಯ ಕಸ ಗುಟ್ಟಾಗಿ ಬೀದಿಯಲ್ಲಿ ಸುರಿದು ಬರುತ್ತೇನೆ. ಒಂದು ಭರ್ಜರಿ ಯುದ್ಧ ಮಾಡಿ ಪಾಕೀಸ್ತಾನವನ್ನು ಇಲ್ಲ ಅನಿಸಿಬಿಡಬೇಕು ಎಂದು ಕ್ಯಾಂಟೀನಲ್ಲಿ ಕುಳಿತು ಗಂಭೀರವಾಗಿ ಹೇಳುತ್ತೇನೆ. ಆದರೆ ಸೈನ್ಯಕ್ಕೆ ನಾನಾಗಲೀ, ನನ್ನ ಮಕ್ಕಳಾಗಲೀ ಸೇರುತ್ತಾರೆ ಎಂದರೆ ಕಂಗಾಲಾಗುತ್ತೇನೆ. ನನಗೆ ಯಾರೂ ಕೋಟಿ ರೂಪಾಯಿ ಲಂಚ ಕೊಡಲ್ಲ ಅಂತ ಗೊತ್ತಿರುವದರಿಂದ ಕೋಟಿ ಲಂಚ ಕೊಟ್ಟರೂ ಮುಟ್ಟುವುದಿಲ್ಲ ಎಂದು ನನ್ನ ಪ್ರಾಮಾಣಿಕತೆಯಯನ್ನು ಜಾಹೀರು ಮಾಡುತ್ತೇನೆ. ನನ್ನ ಖಾಸ ಮುಖಕ್ಕೂ, ಎಲ್ಲರೆದುರು ತೆರೆದಿಡುವ ನನ್ನ ಮುಖಕ್ಕೂ ಸಂಬಂಧವೇ ಇಲ್ಲ.ನನ್ನನ್ನು ನಾನೇ ವಿರೋಧಿಸುತ್ತಾ..... ಬದುಕು ಸಿಗುರೆದ್ದಿದೆ.
*****ನಮಗೆ, ಮಧ್ಯಮವರ್ಗದ ನಮಗೆ, ಸದಾ ಪರರ ಕಣ್ಣಲ್ಲಿ ಹೊಳೆವ ಬಯಕೆ. ಹಾಗೆ ಮಾಡಿದರೆ ಅವರು ಏನಾದರೂ ಅಂದರೆ? ಹೀಗೆ ಮಾಡಿದರೆ ಇವರು ಏನಾದರೂ ಅಂದರೆ? ಈ ಲೆಕ್ಕಾಚಾರದಲ್ಲಿ ನಾವೇನು ಮಾಡಬೇಕೆಂದು ತಿಳಿಯದ ಗೊಂದಲ. ಸದಾ ಮುಖವಾಡದ ಭಾರ. ಬೇರೆ ಯಾರಿಗೂ ತ್ರಾಸು ಕೊಡದ ನಮ್ಮ ನಿಜವನ್ನು ನಾವು ಬದುಕಲು ಏನಡ್ಡಿ? ನಾವು ಹಾಗೆ ಬದುಕುತ್ತಿಲ್ಲ...... ಬದುಕು ಸಿಗುರೆದ್ದಿದೆ.

Saturday, January 17, 2009

ಕುಮಾರವ್ಯಾಸ ಭಾರತದ ಒಂದು ಪ್ರಸಂಗ

***ಮನಸ್ಸು ಖಿನ್ನವಾದ ಹೊತ್ತಲ್ಲಿ ಕುಮಾರವ್ಯಾಸ ಭಾರತವನ್ನು ಅಥವಾ ಅಡಿಗರ ಕವನಗಳನ್ನು ಓದುವುದು ನನ್ನ ಹವ್ಯಾಸ. ಆ
ಓದು ಮನಸ್ಸಿಗೆ ವಿಚಿತ್ರವಾದ ನೆಮ್ಮದಿ ನೀಡುತ್ತೆ. ನನಗಾದ ಖುಷಿಯನ್ನು ಯಾರಿಗಾದರೂ ಹೇಳುವಾ ಅನ್ಸುತ್ತೆ. ಯಾರಿಗೆ?
***ದುಶ್ಯಾಸನನನ್ನು ಭೀಮ ಕೊಂದಿದ್ದಾನೆ ಅಂತ ನಮಗೆಲ್ಲ ಗೊತ್ತು. ಕೊಂದು ತನ್ನ ಪ್ರತಿಜ್ನೆಯನ್ನು ನೆರವೇರಿಸಿದ ಎಂಬುದೂ ಗೊತ್ತು. ಕರ್ಣ ಸೇನಾಪತಿಯಾಗಿರುವಾಗ ಇದು ನಡೆಯಿತು ಎಂಬುದು ಕೆಲವರಿಗಾದರೂ ಗೊತ್ತಿರಬಹುದು. ಈ ಸನ್ನಿವೇಶದ ಬಗ್ಗೆ ಈ ಬರೆಹ. ( ಈ ಸೂಚನೆ ನೀಡಿದ ಕಾರಣ: ಈ ತರಹದ ಲೇಖನ ಓದಲು ಬಯಸದವರು ಕೂಡಲೇ ಬೇರೆ ಕಡೆ ತಿರುಗಬಹುದು. )
***ಯುದ್ಧದ ಸಂದರ್ಭ. ಭೀಮ ದುಶ್ಯಾಸನನ್ನು ಕಂಡು ಯುದ್ಧಕ್ಕೆ ಆಹ್ವಾನಿಸುತ್ತಾನೆ. “ನೀ ಕಳೆದುಕೊಳು ಧನುವ ನಮ್ಮ ವಿವೇಕವನು ದಳ ನೋಡುತಿರಲಿ ನಿರಾಕುಳಲೆಚ್ಚಾಡುವೆವು ನಿಲ್ಲೆಂದನಾ ಭೀಮ” “ ನೋಡುತಿರಲೀ ಬಲವೆರಡು ಹೋಗಾಡು ನಮ್ಮನು ಮೇಣು ನಿನ್ನನು ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ” ಈ ಕರೆಯನ್ನು ಮನ್ನಿಸಿದ ದುಶ್ಯಾಸನ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಮೊದಲು ಬಿಲ್ಲು ಬಾಣಗಳನ್ನು, ಅನಂತರ ಖಡ್ಗವನ್ನು, ಅನಂತರ ಗದೆಯನ್ನು ಬಳಸಿ ಸರಿಸಮವಾಗಿ ಕಾದಾಡುತ್ತಾರೆ. “ಸಾಕಿದೇತಕೆ ಮಲ್ಲಶ್ರಮದಲಿ ನೂಕಿ ನೋಡುವೆವಿನ್ನು ಕೈದುಗಳೇಕೆ ದೃಢಮುಷ್ಟೀ ಪ್ರಹಾರ ಪ್ರಕಟ ಸತ್ವರಿಗೆ” ಎಂದು ಭೀಮ ಮಲ್ಲಯುದ್ಧಕ್ಕೆ ಕರೆಯುತ್ತಾನೆ. ಮಲ್ಲಯುದ್ಧದಲ್ಲಿ ದುಶ್ಯಾಸನನ ಶಕ್ತಿ ಕುಂದತೊಡಗುತ್ತದೆ. ಈ ವರ್ಣನೆಯನ್ನು ಓದಿ.
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡು ಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಯಾಸನನು ಬಳಿಕ.
ಈಗ ದುಶ್ಯಾಸನನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಭೀಮ , ಅವನಿಗೆ ಹಿಂದಿನ ಘಟನೆಗಳನ್ನು ನೆನಪಿಸುತ್ತಾ ಮೂದಲಿಸುತ್ತಾನೆ. “ಹಿಂದೆ ಜೂಜಿನಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು” “ ಹಿಂದೆ ಕಿಚ್ಚಿನ ತುತ್ತು ವಿಷದುಬ್ಬಟೆಗಳನು ನೆನೆ” ಇತ್ಯಾದಿ. ಅನಂತರ ಭೀಮ ಕೌರವ ಸೇನೆಯಲ್ಲಿದ್ದ ಒಬ್ಬೊಬ್ಬರನ್ನೇ ಕರೆದು ಇವನನ್ನು ಬಿಡಿಸಿಕೊಳ್ಳಿ ಎಂದು ಮೂದಲಿಸುತ್ತಾನೆ. ದುಶ್ಯಾಸನನ ರಕ್ತ ಕುಡಿದು, ಇದರ ರುಚಿ ನೋಡಬನ್ನಿ ಎಂದು ಕರೆಯುತ್ತಾನೆ.
“ಆಡಿದುದು ಹುಸಿಯಲ್ಲ ನೀ ಸವಿ ನೋಡು ಕರ್ಣನರೇಂದ್ರ ಕೌರವ ನೋಡು ಸವಿಯನು ಶಕುನಿ ಕೃತವರ್ಮ ಗುರುಸುತರು ನೋಡಿರೈ ಹೇವರಿಸುವರೆ ಕೈ ಮಾಡಿರೈ ನಿಮ್ಮಾತನಳಿವನು ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ.”
ಭೀಮನ ರೌದ್ರಕ್ಕೆ ಹೆದರಿ ಎಲ್ಲರೂ ಸುಮ್ಮನೆ ನಿಲ್ಲುತ್ತಾರೆ. “ಮೋನದಲಿ ಮನವಳುಕಿ ಯೋಗಧ್ಯಾನಪರರಾದಂತೆ ಚಿತ್ತಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ” ಕೌರವರ ಪೈಕಿ ಯಾರೂ ಬರದಿದ್ದಾಗ ಭೀಮನ ರೌದ್ರಕ್ಕೆ ತನ್ನವರೇ ಗುರಿಯಾಗುತ್ತಾರೆ. “ ಮರಣ ನೆರೆಹೊರೆಯಾಯ್ತು ನಿನ್ನಯ ಹರಣವೆನ್ನಂಗೈಯಲಿದೆ ನಿಮ್ಮರಸನನು ಕರೆಸೆಲೆವೋ ಕಾದಿಸು ನಿನ್ನ ರಕ್ಷಿಸಲಿ ಅರಿಬಲದೊಳಿದಿರಿಲ್ಲ ನಿಜಮೋಹರದೊಳಗೆ ಮಿಡುಕುಳ್ಳ ವೀರರು ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ”
ಧೃಷ್ಟದ್ಯುಮ್ನ, ಸಾತ್ಯಕಿ ಅವರಿವರಿರಲಿ, ಕೊನೆಗೆ ಕೃಷ್ಣನನ್ನೂ ಕರೆದು ಬಿಡಿಸಿಕೋ ಎನ್ನುತ್ತಾನೆ. ಯಾರಿಗೂ ಧೈರ್ಯವಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುತ್ತಾರೆ. ಮದವೇರಿದ ಭೀಮನ ಮುಂದಿನ ವರ್ತನೆಯನ್ನು ನೋಡಿ.
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ
ಅವರಿವರಿರಲಿ, ಅರ್ಜುನನನ್ನೇ ಕೆಣಕಿ, ದುಶ್ಯಾಸನ ಅಹಿತನಾದರೂ ಬಿಡಿಸಿಕೋ ಎಂದು ಕರೆಯುತ್ತಾನೆ. ತನ್ನ ಶೌರ್ಯದ ಬಗ್ಗೆ ಅಪಾರ ಅಭಿಮಾನವಿರುವ ಅರ್ಜುನನಿಗೆ ಈ ಅಹ್ವಾನವನ್ನು ನಿರಾಕರಿಸುವುದು ಅವಮಾನ ಅನಿಸುತ್ತದೆ. ಅವನ ಸೂಕ್ಷ್ಮ ಅಹಂಕಾರ ಜಾಗೃತವಾಗುತ್ತದೆ. “ಅಹುದಹುದು ತಪ್ಪೇನು ತಪ್ಪೇನಹಿತ ದುಶ್ಯಾಸನನ ಸಲಹುವೆನಹಿತಬಲವೆನಗನಿಲಸುತನೆನುತ” ರಥವಿಳಿದು ಬೀಮನ ಜತೆ ಯುದ್ಧಕ್ಕೆ ಹೊರಡುತ್ತಾನೆ. ಕೃಷ್ಣ ಕಂಗಾಲಾಗಿ, ಅರ್ಜುನನ ಬಿಲ್ಲನ್ನು ಹಿಡಿದು “ಸಾಕು ಸಾಕು. ನೀನು ಸಾಹಸಿ ಹೌದು. ಭೀಮನನ್ನು ಎದುರಿಸುವ ಶಕ್ತಿ ನಿನಗಿದೆ. ಆದರೆ “ನಿರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ ಸಹಜವಿದು ಸಾಕ್ಷಾದುಮಾಪತಿಯಹ ಕಣಾ ಪವನಜನ ನೋಡಲು ಬಹಡೆ ನೋಡು” ಎಂದು ಎಚ್ಚರಿಸುತ್ತಾನೆ. ಅರ್ಜುನ ಕೃಷ್ಣನ ಸಲಹೆ ಮನ್ನಿಸಿ ಸುಮ್ಮನುಳಿಯುತ್ತಾನೆ. ಮುಂದೆ ದುಶ್ಯಾಸನನನ್ನು ಕೊಂದು ತನ್ನ ಪ್ರತಿಜ್ನೆಯನ್ನು ಈಡೇರಿಸುವ ಚಿತ್ರಣವಿದೆ. (ಕುತೂಹಲಿಗರು ಕುಮಾರವ್ಯಾಸ ಭಾರತದ ಕರ್ಣಪರ್ವದ ೧೯ನೆಯ ಸಂಧಿಯನ್ನು ಓದಬಹುದು. )
*****
ಭಾಷೆಯ ಬಳಕೆಯಲ್ಲಿ, ಭಾವಾಭಿವ್ಯಕ್ತಿಯಲ್ಲಿ, ಪಾತ್ರಗಳ ಚಿತ್ರಣದಲ್ಲಿ,ರೂಪಕ ಸೃಷ್ಟಿಯಲ್ಲಿ ಕುಮಾರವ್ಯಾಸನ ಸಮಸಾಟಿ ಪ್ರಾಯಶಃ ಯಾರೂ ಇಲ್ಲ. ಗದ್ಯದ ವಿವರಣೆಗೆ ಸಿಗದ ಕಾವ್ಯ ಅವನದು. ಇಲ್ಲಿ ಒಂದು ಮಾತು ಸೇರಿಸುವುದು ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ. ನನಗೆ ತಿಳಿದಂತೆ ಕುಮಾರವ್ಯಾಸನ ಅನಂತರ ಮಹಾಭಾರತದ ಕತೆಯನ್ನು ಆಧರಿಸಿ ಕೃತಿರಚನೆ ಮಾಡಿರುವುದು ಶ್ರೀ. ಎಸ್.ಎಲ್.ಭೈರಪ್ಪನವರು. (ಪರ್ವ ಕಾದಂಬರಿ). ಭೈರಪ್ಪನವರ ಪ್ರಯತ್ನ ಎಷ್ಟು ಪೇಲವ ಎಂಬುದು ಕುಮಾರವ್ಯಾಸನ ಜೊತೆ ಹೋಲಿಸಿದಾಗ ತಿಳಿಯುತ್ತದೆ .



Sunday, January 4, 2009

ಹುಟ್ಟು ಸಾವಿನ ಚಕ್ರ

ಕನಸು ಕಾಣುವ ಮನಸ್ಸು ಇರುವವರೆಗೂ, ಇರುವವರಿಗೂ ಸಾವಿನ ಭಯವಿಲ್ಲ. ಸಾವೆಂದರೆ ನಮ್ಮದೆಂದು ನಾವು ನಂಬಿದ ಎಲ್ಲವನ್ನೂ ನಿಸ್ಸಹಾಯಕತೆಯ ಒಂದು ಕ್ಷಣದಲ್ಲಿ, ಅರ್ಘ್ಯ ಬಿಡುವಂತೆ ಬಿಡುವ ಕ್ರಿಯೆ. ಇಷ್ಟು ದಿನ ನನ್ನದಾಗಿದೆ ಎಂದು ನಂಬಿದ್ದೆಲ್ಲವನ್ನು ಮೊಗೆದಲ್ಲಿಗೇ ಬಿಡುವ ಪ್ರಕ್ರಿಯೆ.
*********************
ಹುಟ್ಟಿನಿಂದ ಆರಂಭವಾಗುವ ನಮ್ಮ ಜೀವನ ಸಾವಿನಲ್ಲಿ ಮುಕ್ತಾಯ ಕಾಣುತ್ತದೆ. ಈ ನಡುವಿನ ಕಾಲದಲ್ಲಿ ಅನೇಕ ಘಟನೆಗಳು ಸಂಭವಿಸುತ್ತವೆ: ಬೇಕಾದ್ದು; ಬೇಡವಾದ್ದು. ನಮ್ಮ ನಿಯಂತ್ರಣಕ್ಕೊಳಪಟ್ಟಿದ್ದು: ನಿಯಂತ್ರಣಕ್ಕತೀತವಾದದ್ದು. ಇವೆಲ್ಲವನ್ನೂ ಖುಷಿಯಿಂದಲೋ, ಸಂಕಟದಿಂದಲೋ ಅನುಭವಿಸಬೇಕು. ಅನಿವಾರ್ಯ. ಇವನ್ನೆಲ್ಲ ಅನುಭವಿಸುವವರು ಸಂಸಾರಿಗಳಂತೆ. ಅನುಭವಗಳಿಗೆ ನಿರ್ಲಿಪ್ತತೆಯಲ್ಲಿ ಒಡ್ಡಿಕೊಳ್ಳುವವರು ಸಂತರಂತೆ; ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳುವವರು ಸಿದ್ಧಪುರುಷರಂತೆ. ನಾವು ಇನ್ನೂ ಸಂಸಾರಿಗಳೇ. ನಮ್ಮ ನಿಮ್ಮ ಸಂಕಟಪರಿಹಾರಕ್ಕೆ ಹೋಮ ಹವನಾದಿಗಳಿವೆ, ಪೂಜೆ ಪುನಸ್ಕಾರಗಳಿವೆ. ಇವೆಲ್ಲ ಬೇಡ ಅಂದರೆ ಮನಸ್ಸನ್ನು ಹದಗೊಳಿಸಲು ಆಧುನಿಕ ಗುರುಗಳಿದ್ದಾರೆ. ವಾರವೋ, ತಿಂಗಳೋ ಅಲ್ಲಿದ್ದು, ಎರಡು ಮೂರು ಸಾವಿರ ಹುಡಿ ಹಾರಿಸಿ ಬಂದರೆ ನಮ್ಮ ಮನಸ್ಸಿಗೆ ಶಾಂತಿ ಸಿಗುವಂತೆ ಮಾಡುವವರವರು. ಹಾಗಂತ ಅವರು ಹೇಳಿಕೊಳ್ಳುತ್ತಾರೆ. ಸರಿ, ಶಾಂತಿಯೇನೋ ಸಿಕ್ಕೇಬಿಟ್ಟಿತು ಎಂದು ಕೊಳ್ಳುವಾ. ಅದರೆ ಸಾವು? ಸಾವನ್ನೂ ಪರಿಹರಿಸಲು ಸಾಧ್ಯವೇ? ಹೋಗಲಿ ಸಾವಿನ ಭಯವನ್ನು ಪರಿಹರಿಸಲು ಸಾಧ್ಯವೇ? ಸಾವೆಂದರೆ ಏನು? ಅದರ ಭಯದಿಂದ ಬಿಡುಗಡೆ ಹೇಗೆ?
********
ಜೀವನವನ್ನು ಸರಳ ರೇಖೆಗೆ ಹೋಲಿಸಿದರೆ, ಅರಂಭದ ಬಿಂದು ಹುಟ್ಟು. ಕೊನೆಯ ಬಿಂದು ಸಾವು. ಹುಟ್ಟಿನ ಹಿಂದೆ ಏನು? ಸಾವಿನ ಮುಂದೆ ಏನು? ಗೊತ್ತಿಲ್ಲ. ಗೊತ್ತಿರುವವರು ಇರಬಹುದು. ಅದೂ ಗೊತ್ತಿಲ್ಲ. ನಾವು ಊಹಿಸಬಹುದು. ಇದನ್ನು ಊಹಿಸಲು ಸರಳ ಉಪಾಯ ಒಂದಿದೆ. ಜೀವನವನ್ನು ಸರಳರೇಖೆಯಲ್ಲ, ವೃತ್ತ ಎಂದು ಕಲ್ಪಿಸಿಕೊಳ್ಳೋಣ. ಹುಟ್ಟಿನ ಬಿಂದುವಿನಿಂದ ಹೊರಟು ರೇಖೆಯನ್ನು ವಕ್ರವಾಗಿಸುತ್ತಾ, ವೃತ್ತವಾಗಿಸುತ್ತ ಬರೋಣ. ವೃತ್ತ ಪೂರ್ಣವಾಗಲು ರೇಖೆ ಹೊರಟ ಬಿಂದುವಿಗೇ ಬಂದು ಸೇರಬೇಕು. ವೃತ್ತ ಪೂರ್‍ಣವಾದರೆ ಬದುಕು ಪೂರ್ಣವಾದಂತೆ ತಾನೇ? ಅಂದರೆ ಹುಟ್ಟು ಮತ್ತು ಸಾವು ಒಂದೇ ಬಿಂದುವಿನಲ್ಲಿದೆ; ಹುಟ್ಟೇ ಸಾವಾಗಿದೆ ಅನ್ನಿ ಅಥವಾ ಸಾವೇ ಹುಟ್ಟಾಗಿದೆ ಅನ್ನಿ. ಈ ವೃತ್ತದ ಪರಿಧಿರೇಖೆಯ ಮೇಲೆ ನಾವು ಎಲ್ಲಿ ನಿಂತು ನೋಡಿದರೂ ನಮ್ಮ ಮುಂದೆ ಹಿಂದೆ ಸಾವಿದೆ; ಹುಟ್ಟಿದೆ. ಹಾಗೇ ನಿರಂತರ ಜೀವನವಿದೆ. ನೋಡಿದರೆ ಹುಟ್ಟು ಮತ್ತು ಸಾವಿನ ನಡುವೆ ಸಂಭವಿಸುವ ಘಟನೆಗಳು ಜೀವನವಾಗುವ ಬದಲು, ಕಾಲದ ನಿರಂತರೆತೆಯಲ್ಲಿ ಹುಟ್ಟು ಮತ್ತು ಸಾವು ಕೂಡ ಜೀವನದ ಘಟನೆಗಳಾಗಿವೆ. ಅಂದರೆ ಯಾವುದೋ ಮೂಲಸತ್ ನಿರಂತರ ಹುಟ್ಟುತ್ತ, ಸಾಯುತ್ತ ಚಕ್ರವಾಗಿದೆ. ಹುಟ್ಟಿ ಸಾಯುವುದು ಯಾವುದು? ಈ ಮೂಲ ಸತ್ ಏನು? ಹುಟ್ಟಿ ಸಾಯುವ ನಮ್ಮ ದೇಹದ ಮೂಲಕವಾಗಿಯೇ ಹೇಗೆ ಹುಟ್ಟದ ಸಾಯದ ಮೂಲ ಸತ್ ಅನ್ನು ಪಡೆಯುವುದು?.........(ಮುಂದುವರಿಯುವುದು)