Monday, February 21, 2011

ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ. (ಕಂತು-೨)



ಈಗ ಕರ್ಣಭೇದನದ ಪ್ರಸಂಗವನ್ನು ವಿಶ್ಲೇಷಿಸುವಾ. ತನ್ನ ತಾಯಿ ಎಂದು ತಿಳಿದ ಅನಂತರ ಕರ್ಣ ಕುಂತಿಯನ್ನು ಮೊದಲ ಬಾರಿಗೆ ಭೇಟಿಯಾಗುವುದು, ತಾಯಿ ಮೊದಲ ಬಾರಿಗೆ ಮಗನ ಬಳಿ ಮಾತನಾಡುವುದು, ಹಾಗೆ ಮಾತನಾಡುವ ಉದ್ದೇಶ ಮಗನ ಸಾವನ್ನು ನಿಶ್ಚಯಿಸುವ ಸಂಗತಿಯೇ ಆಗಿರುವುದು ಈ ಸನ್ನಿವೇಶದ ಸಾರಾಂಶ. ಇಡಿಯ ಸನ್ನಿವೇಶವನ್ನು ಹೇಗೆ ಚಿತ್ರಿಸಲಾಗಿದೆ ಎಂಬುದಕ್ಕಿಂತ ಮುಖ್ಯವಾಗಿ ಕುಂತಿಯ ವರ್ತನೆಯನ್ನು ವಿಶ್ಲೇಷಿಸುವಷ್ಟರ ಮಟ್ಟಿಗೆ ಈ ಲೇಖನದ ಆಶಯ ಸೀಮಿತವಾಗಿದೆ.
****
ಸಂಧಿಯ ಪ್ರಯತ್ನ ವಿಫಲವಾದ ಅನಂತರ, ಕೃಷ್ಣ ವಿದುರನ ಮನೆಯಲ್ಲಿದ್ದ ಕುಂತಿಗೆ ಕರ್ಣನನ್ನು ಬೇಡಿಕೋ ಎಂಬ ಸಲಹೆಯನ್ನೀಯುತ್ತಾನೆ.
“ಬಂದು ವಿದುರನ ಮನೆಗೆ ದೇವ ಮು
ಕುಂದ ಕುಂತಿಯ ಕರೆದು ನಿನ್ನಯ
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು|
ಇಂದು ಮುರಿದುದು ಸಂಧಿ ನಿನ್ನಯ
ಕಂದ ಕರ್ಣನ ಬೇಡಿಕೊಳು ನೀ
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ||” (ಉ.ಪ.-೯-೨೭)
ಕೃಷ್ಣನ ಮಾತಿನಲ್ಲಿ ಗಮನಿಸಬೇಕಾದ ಮೂರು ಅಂಶಗಳು:-೧. ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿದೆ,೨. ಕರ್ಣನನ್ನು ಬೇಡು,೩. ಮುರವೈರಿ ಹರುಷದಲಿ ಮರಳಿದನು.ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿರುವುದರಿಂದ,ಅವರ ಸಾವನ್ನು ಕೌರವ ಬಯಸುತ್ತಾನೆ ಮತ್ತು ಅದಕ್ಕೆ ಕರ್ಣನ ಸಹಾಯವನ್ನು ನಿರೀಕ್ಷಿಸುತ್ತಾನೆ.ಹಾಗಾಗಿ ಕೃಷ್ಣ ಏನನ್ನು ಬೇಡಲು ಹೇಳಿರಬಹುದು ಎಂಬುದರ ಬಗ್ಗೆ ಅನುಮಾನವೇ ಇಲ್ಲ.ಕೃಷ್ಣ ಹರುಷದಿಂದ ಮರಳಿದ ಎಂದಾದರೆ ಕುಂತಿ ಕೃಷ್ಣ ಹೇಳಿದ್ದಕ್ಕೆಲ್ಲ ಒಪ್ಪಿರಲೇ ಬೇಕು. ಸುಲಭವಾಗಿ ಊಹಿಸಬಹುದಾದ ವಿಷಯ. ಆದರೆ ಕುಂತಿ ಏನನ್ನೂ ಹೇಳದೆ ಕೃಷ್ಣ ಹೇಳಿದ್ದನ್ನು ಒಪ್ಪಿದ್ದು ಹೇಗೆ? ಕೃಷ್ಣ,ಅವನೂ ನನ್ನ ಮಗ ಎಂಬ ಮಾತು ಬರಲಿಲ್ಲವೇ?  ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಯ ಮನಸ್ಸಿನಲ್ಲಿ ಹುಟ್ಟಿರಬಹುದಾದ ತಳಮಳವನ್ನು ಕುಮಾರವ್ಯಾಸ ಯಾಕೆ ಚಿತ್ರಿಸಲಿಲ್ಲ? ಈ ಭಾವಾತ್ಮಕ ಬಿಕ್ಕಟ್ಟನ್ನು ನಿರ್ವಹಿಸುವ ಶಕ್ತಿ ಇಲ್ಲದೆ ಬಿಟ್ಟನೇ? ಅಥವಾ ಭಾವಾತ್ಮಕ ಬಿಕ್ಕಟ್ಟನ್ನು ಗ್ರಹಿಸುವಷ್ಟು ಸೂಕ್ಷ್ಮಸಂವೇದಿ ಆತನಾಗಿರಲಿಲ್ಲವೇ? ಆದರೆ ಇತರ ಸಂದರ್ಭಗಳಲ್ಲಿ ವ್ಯಕ್ತವಾದ ಆತನ ಕಾವ್ಯಚಿತ್ರಣ ಸಾಮರ್ಥ್ಯ ನನ್ನ ಈ ಯೋಚನೆಯಲ್ಲಿ ಏನೋ ತಪ್ಪಿದೆ ಎಂದು ನನಗೆ ಅನಿಸುವಂತೆ ಮಾಡುತ್ತಿತ್ತು. ಮತ್ತೆ ಮತ್ತೆ ಓದುತ್ತಿದ್ದೆ,ಯೋಚಿಸುತ್ತಿದ್ದೆ. ಒಮ್ಮೆ ಅನಿಸಿತು: ಕವಿ ಉದ್ದೇಶಪೂರ್ವಕವಾಗಿ ಕುಂತಿಯ ಭಾವನೆಗಳನ್ನು ಚಿತ್ರಿಸಲಿಲ್ಲ. ಯಾಕೆಂದರೆ ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಗೆ ಕೃಷ್ಣನ ಸೂಚನೆಯನ್ನು ಪಾಲಿಸಬೇಕು ಎಂಬುದನ್ನು ಬಿಟ್ಟರೆ ಬೇರೆ ಭಾವನೆಗಳೇ ಇರಲಿಲ್ಲ. ಅವಳಲ್ಲಿ ಭಾವನಾತ್ಮಕ ಬಿಕ್ಕಟ್ಟು ಹುಟ್ಟಿರಲೇ ಇಲ್ಲ. ಅವಳಿಗೆ ಕರ್ಣನ ಬಗೆಗೆ ತಾಯ್ತನದ ಭಾವನೆ ಉದ್ದೀಪನಗೊಳ್ಳಲಿಲ್ಲ. ಹುಟ್ಟಿದಕೂಡಲೇ ತ್ಯಜಿಸಿದ್ದವನ ಬಳಿ ಈಗ ನಿಂತು ನಾನು ನಿನ್ನ ತಾಯಿ ಎಂದು ತಿಳಿಸಿ ಹೇಗೆ ಬೇಡಲಿ ಎಂಬ ಭಾವನೆ ಬರಲಿಲ್ಲ. ಬಂದಿದ್ದರೆ ಭಾವಾತ್ಮಕ ಬಿಕ್ಕಟ್ಟು ಎದುರಾಗುತ್ತಿತ್ತು. ಯಾಕೆ ಬರಲಿಲ್ಲ? ಕರ್ಣನನ್ನು ತ್ಯಜಿಸುವಾಗ ಆಕೆ ಗಂಗೆಗೆ ಹೇಳಿದ್ದೇನು?“ಕಂದನ ಕಾಯಿ ಮೇಣ್ ಕೊಲ್ಲೆನುತ” (ನನ್ನ ಹಿಂದಿನ ಲೇಖನದಲ್ಲಿ ಈ ಬಗ್ಗೆ ವಿವರಣೆಯಿದೆ.) ಗಂಗೆ ಕಾದು ಕೊಟ್ಟಳು. ಕುಂತಿಗುಳಿದದ್ದು ಕೊಲ್ಲುವುದು. ಕರ್ಣ ಮಗ ಎಂಬ ಭಾವನೆಯೇ ಇಲ್ಲದಿರುವಾಗ ಭಾವನಾತ್ಮಕ ಬಿಕ್ಕಟ್ಟು ಹೇಗೆ ಬಂದೀತು?  ಇದನ್ನು ಧ್ವನಿಸುವ ಉದ್ದೇಶದಿಂದಲೇ ಕವಿ ಹೀಗೆ ಚಿತ್ರಿಸಿದ್ದಾನೆ. ಕವಿ ಬರೆದಿದ್ದರ ಮೂಲಕ ನಾವು ಗ್ರಹಿಸುವಷ್ಟೇ ಸೂಕ್ಷ್ಮವಾಗಿ, ಬರೆಯದೇ ಬಿಟ್ಟಿದ್ದರ ಮೂಲಕವೂ ಗ್ರಹಿಸಬೇಕಾಗುತ್ತದೆ!
**
ಹಾಗಾಗಿ ಭಾವಾತ್ಮಕವಾದ ದ್ವಂದ್ವ ಇಲ್ಲದೆ ಕುಂತಿ ಕರ್ಣನನ್ನು ಭೇಟಿಯಾಗುತ್ತಾಳೆ. ಕರ್ಣನನ್ನು ಕಂಡ ಕೂಡಲೇ ಕುಂತಿಗೆ ದುಃಖ ಉಕ್ಕುತ್ತದೆ. ಇದು ಯಾತಕ್ಕೆ ಎಂಬ ಚಿತ್ರಣ ಇಲ್ಲ. ಮೊದಲಬಾರಿ ತನ್ನ ಮಗನನ್ನು ಕಂಡ ಕಾರಣದಿಂದ ಇರಬಹುದು ಅಥವಾ ಮಗನಾಗಿದ್ದರೂ ಮಗ ಎಂದು ತಾನು ಭಾವಿಸದವನ ಬಳಿ ಬೇಡುವ ಸ್ಥಿತಿ ಬಂದಿದ್ದಕ್ಕೂ ಇರಬಹುದು. ನಾನು ನಿನ್ನ ತಾಯಿ ಎಂದು ಕುಂತಿ ಕರ್ಣನಿಗೆ ಇಲ್ಲೂ ಹೇಳುವುದಿಲ್ಲ. ಇಲ್ಲೂ ಕೂಡ ಅವಳಲ್ಲಿ ತಾಯ್ತನದ ಭಾವನೆ, ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಬರಲಿಲ್ಲ. ಅಳುವ ಕುಂತಿಗೆ “ಬಿಜಯಂಗೈದ ಹದನನು ವುಸುರಬೇಹುದು ತಾಯೆ” ಎಂದು ಕರ್ಣ ಹೇಳಿದಾಗ ಆಕೆ ಹೇಳುವ ಮೊದಲ ಮಾತು: “ಮಗನೆ ತಮ್ಮಂದಿರನು ಪಾಲಿಸು”. ಪಾಲಿಸು ಎಂಬುದಕ್ಕೆ ಎರಡು ಅರ್ಥವಿದೆ.೧.ರಕ್ಷಿಸು,ಕಾಪಾಡು,೨. ಆಳ್ವಿಕೆ ಮಾಡು. ಕುಂತಿ ಈ ಎರಡೂ ಅರ್ಥದಲ್ಲಿ ಮಾತನ್ನಾಡಿದ್ದಾಳೆ.“ನೀನೋಲಗಿಸುವರೆ ಕುರುಪತಿಯ ನಿನಗವರಿದಿರೆ ಇತ್ತಂಡ ಸೊಗಸು” ಎಂಬ ಮಾತು ನೀನು ಆಳು ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ. ಕರ್ಣ ಇದಕ್ಕೊಪ್ಪುವುದಿಲ್ಲ. ನಯವಾಗಿ ಕುಂತಿಯ ಸಲಹೆಯನ್ನು ತಿರಸ್ಕರಿಸುತ್ತಾನೆ.“ರಾಯನೆನ್ನನು ನೆಚ್ಚಿ ಹೊರೆದನು” ಎಂಬ ಅವನ ಮಾತಿನಲ್ಲಿ ನೀನು ನನ್ನನ್ನು ಹೊರೆಯಲಿಲ್ಲ ಎಂಬ ಸೂಕ್ಷ್ಮಧ್ವನಿಯೂ ಇದೆ. ಕುಂತಿ ನಿಜವಾಗಿ ಬಂದ ಉದ್ದೇಶ ಇದಲ್ಲ ಎಂಬುದು ಅವನಿಗೂ ಗೊತ್ತು.“ಇಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ” ಎನ್ನುತ್ತಾನೆ. ತಾಯ್ತನದ ಭಾವನೆ ಇದ್ದಿದ್ದರೆ ಕುಂತಿ ಇದಲ್ಲದೆ ಬೇರೆ ಕಾರ್ಯವೇನೂ ಇಲ್ಲ ಅನ್ನಬೇಕಿತ್ತು. ಆದರೆ ಆಕೆ ಮೂರು ಭರವಸೆಯನ್ನು ಅಪೇಕ್ಷಿಸುತ್ತಾಳೆ.(ತಮ್ಮಂದಿರನ್ನು ಪಾಲಿಸಬೇಕಾದ  ರೀತಿ.ಪಾಲಿಸು ಪದದ ಮತ್ತೊಂದು ಅರ್ಥ.)
೧.ಆದೊಡೈವರ ಮಕ್ಕಳನು ತಲೆಗಾಯ್ದು ತೋರೈ ೨.ಹೋದ ಬಾಣವ ಮರಳಿ ತೊಡದಿರು.೩.ಮಾದು ಕಳೆ ವೈರವ.
ಈ ಮೂರೂ ಬೇಡಿಕೆಗಳು ಪಾಂಡವರೈವರ ಪಕ್ಷಪಾತಿಯಾಗಿರುವುವೇ ಹೊರತು ಕರ್ಣಪಕ್ಷಿಪಾತಿಯಲ್ಲ. ಕರ್ಣನನ್ನು ಕುಂತಿ ಮತ್ತೆ ತ್ಯಜಿಸುತ್ತಾಳೆ.
***
ಈ ಮೂರೂ ಸನ್ನಿವೇಶಗಳಲ್ಲಿ ಕುಂತಿಯ ವರ್ತನೆಯನ್ನು ಗಮನಿಸಿದ ಅನಂತರದ ನನ್ನ ಅನಿಸಿಕೆ: ಕುಂತಿಗೆ ಕರ್ಣನನ್ನು ತ್ಯಜಿಸಿದ್ದರ ಬಗ್ಗೆ ಅಪರಾಧೀ ಭಾವ ಇರಲಿಲ್ಲ.ತ್ಯಜಿಸಿದ್ದು ಅಪರಾಧ,ಆದರೆ ಅನಿವಾರ್ಯವಾಗಿತ್ತು ಎಂದು ನಮಗೆ ಅನಿಸಿದರೂ ಕುಂತಿಗೆ ಹಾಗೆ ಅನಿಸಿತ್ತು ಎಂಬುದನ್ನು ಒಪ್ಪುವುದು ಕಷ್ಟ. ಕುಂತಿಯ ಅವಿವೇಕಜನ್ಯ ಕುತೂಹಲ ಮತ್ತು ಭಯಜನ್ಯ ನಿರಾಕರಣೆ ಕರ್ಣನ ದುರಂತ ಬದುಕಿನ ಕಾರಣವಾಯಿತು ಎಂಬುದಂತೂ ಸತ್ಯ.
***
ಅಡಿಟಿಪ್ಪಣಿ.
೧)ಮುನಿಯ ಶಾಪಕ್ಕೆ ಪಕ್ಕಾದ ಪಾಂಡು ಕುಂತಿ,ಮಾದ್ರಿಯರ ಜೊತೆ ಕಾಡಲ್ಲಿರುವಾಗ ಕುಂತಿ ಮಕ್ಕಳನ್ನು ಪಡೆವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕುಂತಿ ಪಾಂಡುವಿನಿಂದ ಮಕ್ಕಳನ್ನು ಪಡೆವ ಹಾಗಿಲ್ಲ. ಆಗ ಪಾಂಡು ಮುನಿಗಳಿಂದ ಮಂತ್ರೋಪದೇಶ ಪಡೆಯಲು ಕುಂತಿಗೆ ಸೂಚಿಸುತ್ತಾನೆ.
ಈ ಸಂದರ್ಭದಲ್ಲಿ ಕುಂತಿ ತನಗೆ ದೂರ್ವಾಸಮುನಿ ಕೊಟ್ಟ ಐದು ಮಂತ್ರಗಳಿವೆ ಅನ್ನುತ್ತಾಳೆಯೇ ಹೊರತು ಮೊದಲ ಮಂತ್ರದಿಂದ ಮಗನನ್ನು ಪಡೆದ ಸುದ್ದಿ ಹೇಳುವುದಿಲ್ಲ. ನಾಲ್ಕು ಮಂತ್ರಗಳ ಪ್ರಯೋಗದಿಂದ ಐವರು ಮಕ್ಕಳು ಜನಿಸುತ್ತಾರೆ. ಇನ್ನೊಂದು ಮಂತ್ರ ಏನಾಯಿತು ಎಂದು ಪಾಂಡುವೂ ಕೇಳುವುದಿಲ್ಲ!
೨)ಯುದ್ಧದ ಅನಂತರ ಕುರುಕ್ಷೇತ್ರದರ್ಶನದ ವೇಳೆಯಲ್ಲಿ ಕುಂತಿ ಕರ್ಣನ ಶವದ ಮೇಲೆ ಬಿದ್ದು ಹೊರಳಾಡುತ್ತಾಳೆ.“ಮಾಯಾವಿ ಮಧುಸೂದನನೆ ಮರೆಯಿಸಿ ಕೊಂದನ್” ಎನ್ನುತ್ತಾಳೆ. ತನ್ನ ತಪ್ಪನ್ನು ಕೃಷ್ಣನ ಮೇಲೆ ಹೊರಿಸುತ್ತಾಳೆ.
    

  

3 comments:

Anonymous said...

nimma I lEkhana eshTu chennaagide aMdare....
nimma iDI blog 21/2 hours niMda pUrti Odide adbhutavaagi bareyuttIri idE rIti DAYAVITTU kumara vyaasana bagge hecchu lEKhana bareyiri aMtha praarthane....

~mala

Manjunatha Kollegala said...

ಕೆಲಸದ ಗಡಿಬಿಡಿಯಲ್ಲಿ ನಿಮ್ಮ ಈ ಹಿಂದಿನ ಲೇಖನವನ್ನು ತುಸು ತಡವಾಗಿ ಗಮನಿಸಿದೆ; ಇಂದು ಅದನ್ನೂ ಈ ಲೇಖನದೊಂದಿಗೆ ಓದಿದೆ. ಸೊಗಸಾದ ವಿವರಣೆ. ಇಂಥ ವಿಶ್ಲೇಷಣೆಗಳಿಂದ ಕಾವ್ಯ ಗ್ರಹಿಕೆ ಹೆಚ್ಚು ಸೂಕ್ಷ್ಮವಾಗುವುದರಲ್ಲಿ ಸಂಶಯವೇ ಇಲ್ಲ. ಲೇಖನಕ್ಕಾಗಿ ಧನ್ಯವಾದಗಳು.

Manjunatha Kollegala said...

ಇಂದು ಅದೇಕೋ ಈ ಬರಹವನ್ನು ಮತ್ತೆ ಓದುತ್ತಿದ್ದಾಗ ಮನದಲ್ಲಿ ಮೂಡಿದ ಕೆಲವು ಅನಿಸಿಕೆಗಳು:

ಕರ್ಣ-ಕುಂತಿಯ ಭೇಟಿಯ ಪ್ರಸಂಗ ಸಂಪೂರ್ಣ ಪಾಂಡವ ಪಕ್ಷಪಾತಿಯೆಂದು ನಮಗನ್ನಿಸುವುದಾದರೂ ಇದರಲ್ಲಿ ಮತ್ತೆ ಕೆಲವು ಸೂಕ್ಷ್ಮ ದನಿಯಿದೆಯೆನಿಸುತ್ತದೆ. ಅದು ಹೀಗೆ:

ಕುಂತಿಗೆ ಪಾಂಡವರ ಕ್ಷೇಮದ ಬಗ್ಗೆ ಕಳಕಳಿಯಿತ್ತೆಂಬುದೇನೋ ನಿಜ, ಅದರಿಂದ ಪ್ರೇರಿತವಾದ ಭೇಟಿ ಕರ್ಣನಿಗೆ ಅನ್ಯಾಯವಾಗಿಯೂ ಪರಿಣಮಿಸಿರಬಹುದು. ಓದುಗನಿಗಿರುವ ಪೂರ್ಣದೃಷ್ಟಿ ಕತೆಯ ಬಿಡಿಬಿಡಿ ಪಾತ್ರಗಳಿಗಿರುವುದಿಲ್ಲ. ಕತೆಯುದ್ದಕ್ಕೂ ಕರ್ಣನ ಏಳುಬೀಳುಗಳನ್ನು ಗಮನಸುತ್ತಲೇ ಬರುವ ಓದುಗನಿಗೆ ಕರ್ಣನಿಗೆ ಅನ್ಯಾಯಗಳಾಗಿರುವುದು ಗೊತ್ತಿರುವುದರಿಂದ ಪ್ರತಿಯೊಂದು ಅನ್ಯಾಯದಲ್ಲೂ ಕರ್ಣನ ಬಗ್ಗೆ ನಮ್ಮ ಮರುಕ ಇಮ್ಮಡಿಸುವುದು ಸಹಜ. ಆದರೆ ನಮ್ಮ ಪೂರ್ಣದೃಷ್ಟಿಯಿಲ್ಲದ ಕುಂತಿ, ಕರ್ಣನಿಗೆ ಇದು ತೀರ ಅನ್ಯಾಯವಾಗಬಹುದೆಂದು ಗೊತ್ತಿದ್ದರೂ ಇದನ್ನು ಮಾಡುತ್ತಿದ್ದಳೇ? ಗೊತ್ತಿಲ್ಲ. ಆದರೂ ಇಷ್ಟು ಅನ್ಯಾಯವನ್ನಾದರೂ ಮಾಡಬೇಕೇಕೆ ಎಂಬ ಪ್ರಶ್ನೆ ಉಳಿಯುತ್ತದೆ. ಆಗ ಕುಂತಿಗೆ ಇದೂ ಅನ್ಯಾಯವೆನಿಸಲಿಲ್ಲವೆಂಬ ಉತ್ತರ ಹೊರಡುತ್ತದೆ. ಹೇಗೆ?

ಇಡೀ ಭಾರತಯುದ್ಧದ ಸಂದರ್ಭದಲ್ಲಿ ಕರ್ಣಭೇದನವು ತುಂಬಾ ಮುಖ್ಯವಾದುದು (crucial). ಇರುವ ನಾಲ್ವರು ಕೌರವ ವೀರರಲ್ಲಿ (ಭೀಷ್ಮ, ದ್ರೋಣ, ಕರ್ಣ ಮತ್ತು ದುರ್ಯೋಧನ), ಮೊದಲಿಬ್ಬರು ಈಗಾಗಲೇ ಧರ್ಮದೃಷ್ಟಿಯಿಂದ, ವಾತ್ಸಲ್ಯದಿಂದ ಪಾಂಡವರ ಬಗ್ಗೆ ಒಲವು ಹೊಂದಿರುವವರೇ. ಮಹಾವೀರರಾದರೂ ಅವರನ್ನು ನಿವಾರಿಸುವುದು ಕಷ್ಟವೇನಲ್ಲ. ಇನ್ನು ದುರ್ಯೋಧನನ ಶೌರ್ಯವೆಷ್ಟೇ ಇದ್ದರೂ ದ್ವೇಷದಿಂದ ದುರ್ಬಲನಾದ ಅವನನ್ನು ಮುರಿಯುವುದೂ ಕಷ್ಟವಲ್ಲ, ಕರ್ಣನ ಬೆಂಬಲವೊಂದನ್ನು ನಿವಾರಿಸಿದರೆ. ಆದರೆ ಕರ್ಣನಿದ್ದಾನಲ್ಲ, ಅವನ ಸ್ವಾಮಿನಿಷ್ಠೆ ಅಚಲ. ಅದು ಮೊದಲೇ ಅತಿಶಯವಾದ ಅವನ ಶೌರ್ಯವನ್ನು ಇಮ್ಮಡಿಸಿದೆ. ಪರಾಕ್ರಮಿಯಾದ ಅರ್ಜುನನಿರಲಿ, ಐದುಜನ ಪಾಂಡವರೂ ಕರ್ಣನಿಗೆ ಸರಿದೊರೆಯಲ್ಲವೆಂಬುದು ಕೃಷ್ಣನನ್ನೊಳಗೊಂಡು ಎಲ್ಲರಿಗೂ ತಿಳಿದಿದೆ, ಕುಂತಿಗೂ! ಆದ್ದರಿಂದ ಅವಳು ಕರ್ಣನಬಳಿ ಅವನ ತಮ್ಮಂದಿರ ಜೀವಭಿಕ್ಷೆ ಬೇಡಬೇಕಾದ್ದು. ಹಾಗೊಂದುವೇಳೆ ಕರ್ಣ ಅವರನ್ನು ಉಳಿಸಿದರೂ ಅವರು ಅವನನ್ನು ಕೊಲ್ಲಲು ಸಮರ್ಥರಲ್ಲವೆಂಬ ಸ್ಪಷ್ಟವಾದ ಅರಿವು ಕುಂತಿಗಿದೆ. ಆದ್ದರಿಂದಲೇ ಅವಳಿಗೆ ಕರ್ಣನ ಜೀವದಮೇಲೆ ಕಾಳಜಿಯಿಲ್ಲ.

ಜೊತೆಗೆ ಕೃಷ್ಣನ ಮಾತು ನೋಡಿ "ನಿನ್ನಯ ಕಂದ ಕರ್ಣನ ಬೇಡಿಕೊಳು" ಇಲ್ಲಿಯೂ ಮುಗ್ಧವಾದ ತಾಯಿ-ಮಗುವಿನ ಸಂಬಂಧವನ್ನು ತನ್ನ ಕಾರ್ಯತಂತ್ರಕ್ಕೆ ಉಪಯೋಗಿಸುತ್ತಾನೆ ಕೃಷ್ಣ. "ನಿನ್ನ ಕಂದನನ್ನು ನಮ್ಮೆಡೆ ಸೆಳೆಯಲು ಪ್ರಯತ್ನಿಸು" ಎನ್ನುವುದಿಲ್ಲ, ಏಕೆಂದರೆ ಅವನು ಬರುವುದಿಲ್ಲವೆಂಬುದು ಅವನಿಗೂ ಗೊತ್ತು, ಮತ್ತು ಈಗಾಗಲೇ ಅವನ ಸಾಮಾನ್ಯಪರಿಚಯವಿರುವ ಕುಂತಿಗೂ ಗೊತ್ತು. ಮತ್ತೆ ಈ ಪದ್ಯದಲ್ಲಿನ ಕೃಷ್ಣನ ಮಾತನ್ನು ಗಮನಿಸಿದರೆ, ಅವ ಕುಂತಿಗೆ ಹೇಳುವುದು ಇಷ್ಟು. "ಕೌರವನಿಗೆ ನಿನ್ನ ಮಕ್ಕಳಮೇಲೆ ಅತೀವ ದ್ವೇಷವಿದೆ (ಅದು ಯಾವುದಕ್ಕೂ ಹೇಸದ ದ್ವೇಷವೆಂದು ಈಗಾಗಲೇ ತಿಳಿದಿದೆ). ಯುದ್ಧವನ್ನು ತಪ್ಪಿಸಲು ನಡೆಸಿದ ಪ್ರಯತ್ನಗಳೆಲ್ಲಾ ನಿಷ್ಫಲವಾಗಿದೆ, ಸಂಧಿ ಮುರಿದಿದೆ. ಇನ್ನು ಅಸಮಬಲನಾದ ಕರ್ಣನಂಥ ಸ್ವಾಮಿನಿಷ್ಠನನ್ನು ಪಡೆದ ದುರ್ಯೋಧನನಿಂದ ನಿನ್ನ ಮಕ್ಕಳಿಗೆ ಅಪಾಯ ತಪ್ಪಿದ್ದಲ್ಲ (ಯುದ್ಧ ಜಯಿಸುವ ಮಾತಿರಲಿ). ಆದ್ದರಿಂದ ಯುದ್ದವೇನಾದರೂ ನಡೆದರೆ, ಮತ್ತೇನಿಲ್ಲದಿದ್ದರೂ ನಿನ್ನ ಮಕ್ಕಳನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನಾದರೂ ನೀನು ಮಾಡಬೇಕು. ಇಷ್ಟಕ್ಕೂ ಕರ್ಣನಾರು, ನಿನ್ನ ಕಂದನೇ ತಾನೆ? ಅವನನ್ನು ಬೇಡಿಕೋ, ನಿನ್ನ ಮಕ್ಕಳನ್ನು ಅವ ಉಳಿಸುವನು.

ಕೇವಲ ಇಷ್ಟರಿಂದ ಪ್ರೇರಿತಳಾಗಿ ಬರುವ ಕುಂತಿಯಲ್ಲಿ ಕೃತ್ರಿಮವಿದೆಯೆಂದು ಅನಿಸುವುದಿಲ್ಲ (ಅದೇ ಕರ್ಣ-ಕೃಷ್ಣರ ಭೇಟಿಯನ್ನು ಹೋಲಿಸಿ). ಕರ್ಣ ಒಪ್ಪುವ ನಂಬಿಕೆಯಿಲ್ಲದಿದ್ದರೂ ಅವನನ್ನು "ಇತ್ತಂಡವನ್ನೂ ಆಳಲು" ಸೂಚಿಸುತ್ತಾಳೆ. ಇದಾಗದಿದ್ದಾಗ ಯುದ್ಧವೇ ಅನಿವಾರ್ಯವಾದರೆ ತಮ್ಮಂದಿರನ್ನು ಕಾಯ್ದುಕೊಳ್ಳಲು ಬೇಡುತ್ತಾಳೆ ""ಆದೊಡೆ"ಐವರ ತಲೆಗಾಯ್ದು ತೋರೈ" ಹೀಗೆನ್ನುವಾಗ ಅದು ಕರ್ಣನನ್ನು ಸಂಪೂರ್ಣ ಕಟ್ಟಿಹಾಕಿ ಅವನ ಜೀವಕ್ಕೇ ಮುಳುವಾಗಬಹುದೆನ್ನುವ ಅರಿವು ಕುಂತಿಗಿತ್ತೇ? ಇಲ್ಲವೆನಿಸುತ್ತದೆ. ಕೌರವಬಲದ ಒಂದೊಂದು ಅಂಶವನ್ನೂ ಸಂಪೂರ್ಣ ನಿರ್ವೀರ್ಯಗೊಳಿಸುವ ಕೃಷ್ಣನ ಲೆಕ್ಕಾಚಾರಗಳ ಪೂರ್ಣ ಅರಿವು ಯಾರಿಗೂ ಇಲ್ಲ! ಈ ದೃಷ್ಟಿಯಿಂದ ಕುಂತಿ ಕೇವಲ ಆಟದ ಕಾಯಿಯಂತೆ ಕಾಣುತ್ತಾಳೆ. ವೈರವ ಮಾದುಕಳೆ ಎನ್ನುವಲ್ಲಿ ನಾವು ಕಾಣುವುದು, ಇದೆಲ್ಲವನ್ನೂ ಮರೆತು ಎಲ್ಲರೂ ಒಟ್ಟಾಗಿದ್ದರೆ ಎಷ್ಟು ಸೊಗಸು ಎನ್ನುವ ತಾಯಿಹೃದಯವನ್ನೇ.