Saturday, January 17, 2009

ಕುಮಾರವ್ಯಾಸ ಭಾರತದ ಒಂದು ಪ್ರಸಂಗ

***ಮನಸ್ಸು ಖಿನ್ನವಾದ ಹೊತ್ತಲ್ಲಿ ಕುಮಾರವ್ಯಾಸ ಭಾರತವನ್ನು ಅಥವಾ ಅಡಿಗರ ಕವನಗಳನ್ನು ಓದುವುದು ನನ್ನ ಹವ್ಯಾಸ. ಆ
ಓದು ಮನಸ್ಸಿಗೆ ವಿಚಿತ್ರವಾದ ನೆಮ್ಮದಿ ನೀಡುತ್ತೆ. ನನಗಾದ ಖುಷಿಯನ್ನು ಯಾರಿಗಾದರೂ ಹೇಳುವಾ ಅನ್ಸುತ್ತೆ. ಯಾರಿಗೆ?
***ದುಶ್ಯಾಸನನನ್ನು ಭೀಮ ಕೊಂದಿದ್ದಾನೆ ಅಂತ ನಮಗೆಲ್ಲ ಗೊತ್ತು. ಕೊಂದು ತನ್ನ ಪ್ರತಿಜ್ನೆಯನ್ನು ನೆರವೇರಿಸಿದ ಎಂಬುದೂ ಗೊತ್ತು. ಕರ್ಣ ಸೇನಾಪತಿಯಾಗಿರುವಾಗ ಇದು ನಡೆಯಿತು ಎಂಬುದು ಕೆಲವರಿಗಾದರೂ ಗೊತ್ತಿರಬಹುದು. ಈ ಸನ್ನಿವೇಶದ ಬಗ್ಗೆ ಈ ಬರೆಹ. ( ಈ ಸೂಚನೆ ನೀಡಿದ ಕಾರಣ: ಈ ತರಹದ ಲೇಖನ ಓದಲು ಬಯಸದವರು ಕೂಡಲೇ ಬೇರೆ ಕಡೆ ತಿರುಗಬಹುದು. )
***ಯುದ್ಧದ ಸಂದರ್ಭ. ಭೀಮ ದುಶ್ಯಾಸನನ್ನು ಕಂಡು ಯುದ್ಧಕ್ಕೆ ಆಹ್ವಾನಿಸುತ್ತಾನೆ. “ನೀ ಕಳೆದುಕೊಳು ಧನುವ ನಮ್ಮ ವಿವೇಕವನು ದಳ ನೋಡುತಿರಲಿ ನಿರಾಕುಳಲೆಚ್ಚಾಡುವೆವು ನಿಲ್ಲೆಂದನಾ ಭೀಮ” “ ನೋಡುತಿರಲೀ ಬಲವೆರಡು ಹೋಗಾಡು ನಮ್ಮನು ಮೇಣು ನಿನ್ನನು ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ” ಈ ಕರೆಯನ್ನು ಮನ್ನಿಸಿದ ದುಶ್ಯಾಸನ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಮೊದಲು ಬಿಲ್ಲು ಬಾಣಗಳನ್ನು, ಅನಂತರ ಖಡ್ಗವನ್ನು, ಅನಂತರ ಗದೆಯನ್ನು ಬಳಸಿ ಸರಿಸಮವಾಗಿ ಕಾದಾಡುತ್ತಾರೆ. “ಸಾಕಿದೇತಕೆ ಮಲ್ಲಶ್ರಮದಲಿ ನೂಕಿ ನೋಡುವೆವಿನ್ನು ಕೈದುಗಳೇಕೆ ದೃಢಮುಷ್ಟೀ ಪ್ರಹಾರ ಪ್ರಕಟ ಸತ್ವರಿಗೆ” ಎಂದು ಭೀಮ ಮಲ್ಲಯುದ್ಧಕ್ಕೆ ಕರೆಯುತ್ತಾನೆ. ಮಲ್ಲಯುದ್ಧದಲ್ಲಿ ದುಶ್ಯಾಸನನ ಶಕ್ತಿ ಕುಂದತೊಡಗುತ್ತದೆ. ಈ ವರ್ಣನೆಯನ್ನು ಓದಿ.
ತ್ರಾಣವೆಳದಾಯ್ತಖಿಳಶೌರ್ಯದ
ಚೂಣಿ ಮುರಿದುದು ಘರ್ಮಜಲವು
ಗ್ರಾಣಿಸಿತು ಭುಜಬಲವನಂಕುರಿಸಿತ್ತು ರಣಭೀತಿ
ಪ್ರಾಣಪವನನ ಬೀಡು ಬಿಟ್ಟುದು
ಗೋಣಿನಲಿ ಗರುವಾಯಿಗೆಡೆ ರಣ
ಹೂಣಿಗನು ಜವಗುಂದಿದನು ದುಶ್ಯಾಸನನು ಬಳಿಕ.
ಈಗ ದುಶ್ಯಾಸನನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಭೀಮ , ಅವನಿಗೆ ಹಿಂದಿನ ಘಟನೆಗಳನ್ನು ನೆನಪಿಸುತ್ತಾ ಮೂದಲಿಸುತ್ತಾನೆ. “ಹಿಂದೆ ಜೂಜಿನಲಕ್ಕಜವ ಮಾಡಿದೆಯಲಾ ಮಾನಿನಿಯ ಮುಡಿವಿಡಿದು” “ ಹಿಂದೆ ಕಿಚ್ಚಿನ ತುತ್ತು ವಿಷದುಬ್ಬಟೆಗಳನು ನೆನೆ” ಇತ್ಯಾದಿ. ಅನಂತರ ಭೀಮ ಕೌರವ ಸೇನೆಯಲ್ಲಿದ್ದ ಒಬ್ಬೊಬ್ಬರನ್ನೇ ಕರೆದು ಇವನನ್ನು ಬಿಡಿಸಿಕೊಳ್ಳಿ ಎಂದು ಮೂದಲಿಸುತ್ತಾನೆ. ದುಶ್ಯಾಸನನ ರಕ್ತ ಕುಡಿದು, ಇದರ ರುಚಿ ನೋಡಬನ್ನಿ ಎಂದು ಕರೆಯುತ್ತಾನೆ.
“ಆಡಿದುದು ಹುಸಿಯಲ್ಲ ನೀ ಸವಿ ನೋಡು ಕರ್ಣನರೇಂದ್ರ ಕೌರವ ನೋಡು ಸವಿಯನು ಶಕುನಿ ಕೃತವರ್ಮ ಗುರುಸುತರು ನೋಡಿರೈ ಹೇವರಿಸುವರೆ ಕೈ ಮಾಡಿರೈ ನಿಮ್ಮಾತನಳಿವನು ನೋಡುತಿಹುದೇ ನಿಮಗೆ ನೀತಿಯೆ ಎಂದನಾ ಭೀಮ.”
ಭೀಮನ ರೌದ್ರಕ್ಕೆ ಹೆದರಿ ಎಲ್ಲರೂ ಸುಮ್ಮನೆ ನಿಲ್ಲುತ್ತಾರೆ. “ಮೋನದಲಿ ಮನವಳುಕಿ ಯೋಗಧ್ಯಾನಪರರಾದಂತೆ ಚಿತ್ತಗ್ಲಾನಿಯೊಳಗೆಲೆಮಿಡುಕದಿದ್ದುದು ನಿನ್ನ ಪರಿವಾರ” ಕೌರವರ ಪೈಕಿ ಯಾರೂ ಬರದಿದ್ದಾಗ ಭೀಮನ ರೌದ್ರಕ್ಕೆ ತನ್ನವರೇ ಗುರಿಯಾಗುತ್ತಾರೆ. “ ಮರಣ ನೆರೆಹೊರೆಯಾಯ್ತು ನಿನ್ನಯ ಹರಣವೆನ್ನಂಗೈಯಲಿದೆ ನಿಮ್ಮರಸನನು ಕರೆಸೆಲೆವೋ ಕಾದಿಸು ನಿನ್ನ ರಕ್ಷಿಸಲಿ ಅರಿಬಲದೊಳಿದಿರಿಲ್ಲ ನಿಜಮೋಹರದೊಳಗೆ ಮಿಡುಕುಳ್ಳ ವೀರರು ಮರಳಿಚಲಿ ನಿನ್ನುವನೆನುತ ನೋಡಿದನು ತನ್ನವರ ”
ಧೃಷ್ಟದ್ಯುಮ್ನ, ಸಾತ್ಯಕಿ ಅವರಿವರಿರಲಿ, ಕೊನೆಗೆ ಕೃಷ್ಣನನ್ನೂ ಕರೆದು ಬಿಡಿಸಿಕೋ ಎನ್ನುತ್ತಾನೆ. ಯಾರಿಗೂ ಧೈರ್ಯವಿಲ್ಲ. ಎಲ್ಲರೂ ಸುಮ್ಮನೆ ನೋಡುತ್ತಾ ನಿಲ್ಲುತ್ತಾರೆ. ಮದವೇರಿದ ಭೀಮನ ಮುಂದಿನ ವರ್ತನೆಯನ್ನು ನೋಡಿ.
ಕೇಳು ಫಲುಗುಣ ಲೋಕಮೂರರೊ
ಳಾಳು ನೀನೆಂದೆಂಬ ಗರ್ವವ
ಪಾಲಿಸುವೊಡಿದಿರಾಗು ತೊಡು ಗಾಂಡಿವದಲಂಬುಗಳ
ಆಳುತನ ನಿಗುಳ್ಳೊಡಹಿತನ
ಪಾಲಿಸುವೊಡೇಳೆಂದೆನಲು ಜಯ
ಲೋಲ ಸುಗತಿಯೊಳಿಳಿದನರ್ಜುನನಮಳಮಣಿರಥವ
ಅವರಿವರಿರಲಿ, ಅರ್ಜುನನನ್ನೇ ಕೆಣಕಿ, ದುಶ್ಯಾಸನ ಅಹಿತನಾದರೂ ಬಿಡಿಸಿಕೋ ಎಂದು ಕರೆಯುತ್ತಾನೆ. ತನ್ನ ಶೌರ್ಯದ ಬಗ್ಗೆ ಅಪಾರ ಅಭಿಮಾನವಿರುವ ಅರ್ಜುನನಿಗೆ ಈ ಅಹ್ವಾನವನ್ನು ನಿರಾಕರಿಸುವುದು ಅವಮಾನ ಅನಿಸುತ್ತದೆ. ಅವನ ಸೂಕ್ಷ್ಮ ಅಹಂಕಾರ ಜಾಗೃತವಾಗುತ್ತದೆ. “ಅಹುದಹುದು ತಪ್ಪೇನು ತಪ್ಪೇನಹಿತ ದುಶ್ಯಾಸನನ ಸಲಹುವೆನಹಿತಬಲವೆನಗನಿಲಸುತನೆನುತ” ರಥವಿಳಿದು ಬೀಮನ ಜತೆ ಯುದ್ಧಕ್ಕೆ ಹೊರಡುತ್ತಾನೆ. ಕೃಷ್ಣ ಕಂಗಾಲಾಗಿ, ಅರ್ಜುನನ ಬಿಲ್ಲನ್ನು ಹಿಡಿದು “ಸಾಕು ಸಾಕು. ನೀನು ಸಾಹಸಿ ಹೌದು. ಭೀಮನನ್ನು ಎದುರಿಸುವ ಶಕ್ತಿ ನಿನಗಿದೆ. ಆದರೆ “ನಿರ್ವಹಿಸಬಹುದೇ ಕಾಲರುದ್ರನ ಕೆಣಕಿ ಕದನದಲಿ ಸಹಜವಿದು ಸಾಕ್ಷಾದುಮಾಪತಿಯಹ ಕಣಾ ಪವನಜನ ನೋಡಲು ಬಹಡೆ ನೋಡು” ಎಂದು ಎಚ್ಚರಿಸುತ್ತಾನೆ. ಅರ್ಜುನ ಕೃಷ್ಣನ ಸಲಹೆ ಮನ್ನಿಸಿ ಸುಮ್ಮನುಳಿಯುತ್ತಾನೆ. ಮುಂದೆ ದುಶ್ಯಾಸನನನ್ನು ಕೊಂದು ತನ್ನ ಪ್ರತಿಜ್ನೆಯನ್ನು ಈಡೇರಿಸುವ ಚಿತ್ರಣವಿದೆ. (ಕುತೂಹಲಿಗರು ಕುಮಾರವ್ಯಾಸ ಭಾರತದ ಕರ್ಣಪರ್ವದ ೧೯ನೆಯ ಸಂಧಿಯನ್ನು ಓದಬಹುದು. )
*****
ಭಾಷೆಯ ಬಳಕೆಯಲ್ಲಿ, ಭಾವಾಭಿವ್ಯಕ್ತಿಯಲ್ಲಿ, ಪಾತ್ರಗಳ ಚಿತ್ರಣದಲ್ಲಿ,ರೂಪಕ ಸೃಷ್ಟಿಯಲ್ಲಿ ಕುಮಾರವ್ಯಾಸನ ಸಮಸಾಟಿ ಪ್ರಾಯಶಃ ಯಾರೂ ಇಲ್ಲ. ಗದ್ಯದ ವಿವರಣೆಗೆ ಸಿಗದ ಕಾವ್ಯ ಅವನದು. ಇಲ್ಲಿ ಒಂದು ಮಾತು ಸೇರಿಸುವುದು ಅಪ್ರಸ್ತುತವಾಗಲಾರದು ಎಂದು ಭಾವಿಸುತ್ತೇನೆ. ನನಗೆ ತಿಳಿದಂತೆ ಕುಮಾರವ್ಯಾಸನ ಅನಂತರ ಮಹಾಭಾರತದ ಕತೆಯನ್ನು ಆಧರಿಸಿ ಕೃತಿರಚನೆ ಮಾಡಿರುವುದು ಶ್ರೀ. ಎಸ್.ಎಲ್.ಭೈರಪ್ಪನವರು. (ಪರ್ವ ಕಾದಂಬರಿ). ಭೈರಪ್ಪನವರ ಪ್ರಯತ್ನ ಎಷ್ಟು ಪೇಲವ ಎಂಬುದು ಕುಮಾರವ್ಯಾಸನ ಜೊತೆ ಹೋಲಿಸಿದಾಗ ತಿಳಿಯುತ್ತದೆ .



4 comments:

Unknown said...

hmm
adre nanage halegannadavendra kabbinada. ..............

Anonymous said...

raghu,kumaaravyaasanadu haLegannada alla.

Gowtham said...
This comment has been removed by the author.
Gowtham said...

ಹಳೆಗನ್ನಡವಲ್ಲದಿದ್ದರೂ ಸಲೀಸಾಗಿ ಓದುವ ಹೊಸಗನ್ನಡವಲ್ಲವಲ್ಲ. ನಿಧಾನ ಬಿಡಿಸಿ ಓದಬೇಕಲ್ಲವೇ? :-)